Homeಮುಖಪುಟಜಿಎಸ್‌ಟಿಗೆ 5 ವರ್ಷ: ಬಡವರ ರಕ್ತ ಹೀರುವ ತೆರಿಗೆ!

ಜಿಎಸ್‌ಟಿಗೆ 5 ವರ್ಷ: ಬಡವರ ರಕ್ತ ಹೀರುವ ತೆರಿಗೆ!

- Advertisement -
- Advertisement -

ಜಿಎಸ್‌ಟಿ ತೆರಿಗೆ ಅಸ್ತಿತ್ವಕ್ಕೆ ಬಂದು ಜುಲೈ 01, 2022ಕ್ಕೆ ಐದು ವರ್ಷಗಳಾದವು. ರಾಜ್ಯಗಳಿಗೆ ಸದರಿ ತೆರಿಗೆಯಿಂದ ಉಂಟಾಗುವ ನಷ್ಟಕ್ಕೆ ಪರಿಹಾರ ನೀಡುವ ಐದು ವರ್ಷಗಳ ಗಡುವು ಈಗ ಮುಗಿದಿದೆ. ಇದನ್ನು ಮುಂದುರಿಸುವುದರ ಬಗ್ಗೆ ಜಿಎಸ್‌ಟಿ ಮಂಡಳಿಯು ತನ್ನ ಜುಲೈ ಸಭೆಯಲ್ಲಿ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ರಾಜ್ಯಗಳಿಗೆ ಪರಿಹಾರ ನೀಡುವ ಕ್ರಮವನ್ನು ಮುಂದುರಿಸುವ ಇರಾದೆ ಒಕ್ಕೂಟ ಸರ್ಕಾರಕ್ಕೆ ಇದ್ದಂತಿಲ್ಲ. ಬಹುಪಾಲು ರಾಜ್ಯಗಳು ಇದನ್ನು ಒತ್ತಾಯಿಸುತ್ತಿವೆ. ಆದರೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳನ್ನು ತನ್ನ ತೀರ್ಮಾನಕ್ಕೆ ಒಪ್ಪುವಂತೆ ಒಕ್ಕೂಟ ಸರ್ಕಾರವು ಮಾಡಬಹುದು. ಬಿಜೆಪಿಯೇತರ ರಾಜ್ಯಗಳು ಗಟ್ಟಿಯಾಗಿ ಪರಿಹಾರಕ್ಕೆ ಒತ್ತಾಯಿಸುತ್ತಿವೆ. ಆದರೆ ಇದು ಅರಣ್ಯರೋದನವಾಗಿದೆ. ಅವುಗಳ ಬೇಡಿಕೆಗೆ ರವಷ್ಟು ಮನ್ನಣೆಯನ್ನು ಒಕ್ಕೂಟ ಸರ್ಕಾರ ನೀಡುತ್ತಿಲ್ಲ ಅಥವಾ ನೀಡಬೇಕಾದ ಅಗತ್ಯ ಅದಕ್ಕೆ ಕಾಣುತ್ತಿಲ್ಲ. ಒಕ್ಕೂಟ ತತ್ವದ ಬಗ್ಗೆಯೇ ಅದಕ್ಕೆ ವಿಶ್ವಾಸವಿಲ್ಲ. ಈ ಮಂಡಳಿಯಲ್ಲಿ ಒಕ್ಕೂಟ ಸರ್ಕಾರಕ್ಕೆ ಹೆಚ್ಚಿನ ಮತಗಳ ಹಕ್ಕಿದೆ. ಒಕ್ಕೂಟದ ನೆರವಿಲ್ಲದೆ ಯಾವ ರಾಜ್ಯವು ಅಲ್ಲಿ ನಾಲ್ಕನೆಯ ಮೂರರಷ್ಟು ಮತಗಳನ್ನು ಪಡೆಯುವುದು ಅಸಾಧ್ಯ.

ಪ್ರತಿಗಾಮಿ ತೆರಿಗೆ

ಇದನ್ನು ಬಡವರ ರಕ್ತ ಹೀರುವ ತೆರಿಗೆ ಎಂದು ಕರೆದಿದ್ದೇನೆ. ಏಕೆಂದರೆ ಇದು ದೇಶದ 140 ಕೋಟಿ ಜನರ ಮೇಲೆ ಬೀಳುವ ತೆರಿಗೆ. ಬಡವರು ಮತ್ತು ಶ್ರೀಮಂತರು – ಇಬ್ಬರ ಮೇಲೂ ಸಮಾನವಾಗಿ ವಿಧಿಸಲಾಗುವ ತೆರಿಗೆ ಇದಾಗಿದೆ. ಇದು ಹೆಚ್ಚು ರೆವಿನ್ಯೂ ತಂದುಕೊಡುವ ತೆರಿಗೆಯಾಗಿದೆ. ಉದಾ: ಒಬ್ಬ ನಾಗರಿಕ ಒಂದು ವರ್ಷಗಳಲ್ಲಿ ಸರಾಸರಿ 500 ಬೇರೆಬೇರೆ ರೀತಿಯ ಸರಕು ಅಥವಾ ಸೇವೆಯನ್ನು ಖರೀದಿಸಿದರೆ ದೇಶದಲ್ಲಿನ 140 ಕೋಟಿ ಜನರ ಖರೀದಿ 70,000 ಕೋಟಿಯಾಯಿತು. ಪ್ರತಿ ವ್ಯವಹಾರದಲ್ಲಿ 140 ಕೋಟಿ ಜನರು ಸರಾಸರಿ ಜಿಎಸ್‌ಟಿ ರೂ. 10 ಕಟ್ಟಿದರೆ ಬರುವ ತೆರಿಗೆ ಮೊತ್ತ ರೂ. 9.80 ಲಕ್ಷ ಕೋಟಿಯಾಗುತ್ತದೆ. ಈ ತೆರಿಗೆಯ ಮತ್ತೊಂದು ಅನುಕೂಲವೆಂದರೆ ಇದರ ಆಡಳಿತಾತ್ಮಕ ವೆಚ್ಚ ಕಡಿಮೆ. ಏಕೆಂದರೆ ಇದು ಡಿಜಿಟಲ್ ವ್ಯವಹಾರವಾಗಿದೆ (ಆನ್‌ಲೈನ್) ಮತ್ತು ಸರಕು-ಸೇವೆಗಳ ಬೆಲೆಗಳಲ್ಲಿ ಜಿಎಸ್‌ಟಿ ಅಂತರ್ಗತವಾಗಿರುತ್ತದೆ.

ಈ ತೆರಿಗೆಯು ಕಡಿಮೆ ವರಮಾನವಿರುವ ಬಡವರ ಮೇಲೆ ಹೆಚ್ಚು ಹೊರೆಯನ್ನು ಹೇರುತ್ತದೆ. ಅಪಾರ ವರಮಾನದಿಂದಾಗಿ ಉಳ್ಳವರು ಇದರ ಭಾರವನ್ನು ತಡೆದುಕೊಳ್ಳಬಹುದಾಗಿದೆ. ಆದ್ದರಿಂದ ಜಿಎಸ್‌ಟಿಯನ್ನು ಬಡವರ ರಕ್ತ ಹೀರುವ ತೆರಿಗೆ ಎಂದು ಕರೆಯಬಹುದು. ಈ ತೆರಿಗೆ ಮೂಲಕ ಒಕ್ಕೂಟ ಸರ್ಕಾರವು ರಾಜಸ್ವಕ್ಕಾಗಿ ಅಪ್ರತ್ಯಕ್ಷ ತೆರಿಗೆಗಳನ್ನು ಅವಲಂಬಿಸುವ ಪ್ರಣಾಳಿಕೆಯನ್ನು ಅಳವಡಿಸಿಕೊಂಡಿದೆ. ಪ್ರತ್ಯಕ್ಷ ತೆರಿಗೆಯ ದರಗಳನ್ನು ಏರಿಸುವುದರಿಂದ ತೆರಿಗೆದಾರರ ಆಕ್ರೋಶವನ್ನು ಎದುರಿಸುವ ಪ್ರಮೇಯ ಸರ್ಕಾರಕ್ಕೆ ಎದುರಾಗುತ್ತದೆ. ಆದರೆ ಜಿಎಸ್‌ಟಿಯಲ್ಲಿ ತೆರಿಗೆದಾರರಿಗೆ ತಾವು ತೆರಿಗೆ ನೀಡುತ್ತಿರುವುದರ ಅರಿವೇ ಇರುವುದಿಲ್ಲ. ಈ ತೆರಿಗೆಯು ಸರಕು-ಸೇವೆಗಳ ಬೆಲೆಯಲ್ಲಿ ಅಂತರ್ಗತವಾಗಿರುತ್ತದೆ ಮತ್ತು ಪ್ರತಿಯೊಬ್ಬರೂ ನೀಡುವ ತೆರಿಗೆಯು ಅವರ ವರಮಾನದ ಅತ್ಯಲ್ಪ ಭಾಗದಂತೆ ’ಕಾಣುತ್ತದೆ’. ಪ್ರತಿಯೊಂದು ವ್ಯವಹಾರದಲ್ಲಿ ನೀಡುವ ತೆರಿಗೆ ಅತ್ಯಂತ ಕಡಿಮೆಯಿರುತ್ತದೆ. ಆದರೆ ಮೇಲಿನ ಉದಾಹರಣೆಯಲ್ಲಿ ತೋರಿಸಿರುವಂತೆ ವರ್ಷದಲ್ಲಿ ಪೇಸ್ಟು, ಸೋಪು, ಬಟ್ಟೆ, ಚಪ್ಪಲಿ, ಔಷಧಿ, ರೇಷನ್ನು, ಬಸ್ಸು-ರೈಲು ಚಾರ್ಚು, ಸೆಲ್ಲುಗಳು ಮುಂತಾದ 500 ವ್ಯವಹಾರಗಳನ್ನು ಮಾಡಿದರೆ ರೂ.10 ಜಿಎಸ್‌ಟಿ ದರದಲ್ಲಿ ಅವನು/ಳು ನೀಡುವ ವಾರ್ಷಿಕ ತೆರಿಗೆ ರೂ. 5000. ಇದರಿಂದಾಗಿ ತೆರಿಗೆಯ ಭಾರದ ಅನುಭವವೇ ನಾಗರಿಕರಿಗೆ ಆಗುವುದಿಲ್ಲ. ಆದರೆ ವಾಸ್ತವವಾಗಿ ಇದು ಸರಕು-ಸೇವೆಗಳ ಬೆಲೆಗಳನ್ನು ಹೆಚ್ಚಿಸಿ ಬಡವರ ಬದುಕನ್ನು ದುಸ್ಥಿತಿಗೆ ತಳ್ಳುತ್ತದೆ. ಅವರ ಬೊಕ್ಕಣಕ್ಕೆ ಇದು ಕನ್ನ ಹಾಕುತ್ತಿರುತ್ತದೆ. ಪ್ರತ್ಯಕ್ಷ ತೆರಿಗೆಗಳಲ್ಲಿ ತೆರಿಗೆದಾರರು ತೆರಿಗೆಯೆಂದೇ ವಾರ್ಷಿಕ ಶುಲ್ಕ ಕಟ್ಟುತ್ತಾರೆ. ಆದ್ದರಿಂದ ಎಷ್ಟು ತೆರಿಗೆ ನೀಡಿದ್ದೇವೆ, ಇದರಿಂದ ತಮ್ಮ ವರಮಾನದಲ್ಲಿ ಎಷ್ಟು ಕಡಿತ ಉಂಟಾಯಿತು ಎಂಬ ಮಾಹಿತಿ ಅವರಿಗೆ ಇರುತ್ತದೆ. ಆದರೆ ಅಪ್ರತ್ಯಕ್ಷ ತೆರಿಗೆಗಳಲ್ಲಿ ನಾಗರಿಕರು ವಾರ್ಷಿಕವಾಗಿ ಎಷ್ಟು ತೆರಿಗೆ ನೀಡಿದ್ದಾರೆ ಎಂಬುದರ ಲೆಕ್ಕವೇ ಸಿಗುವುದಿಲ್ಲ. ಅದೊಂದು ಅಮೂರ್ತ ತೆರಿಗೆ.

ಅಪ್ರತ್ಯಕ್ಷ ತೆರಿಗೆಯೇ ರಾಜಸ್ವದ ಮೂಲ

ಜಿಎಸ್‌ಟಿ ಬಂದ ಮೇಲೆ ಸರ್ಕಾರವು ಹೆಚ್ಚುಹೆಚ್ಚು ಅಪ್ರತ್ಯಕ್ಷ ತೆರಿಗೆಗಳ ಮೇಲೆ ಅವಲಂಬಿಸುತ್ತಿರುವುದು ಕಂಡುಬರುತ್ತದೆ. ಉದಾ: 2014-15ರಲ್ಲಿನ ಒಟ್ಟು ರಾಜಸ್ವ ರೂ.12.45 ಲಕ್ಷ ಕೋಟಿಯಲ್ಲಿ ಪ್ರತ್ಯಕ್ಷ ತೆರಿಗೆಯಾದ ಕಾರ್ಪೊರೆಟ್ ತೆರಿಗೆ ಪ್ರಮಾಣ ಶೇ.34.45ರಷ್ಟಿದ್ದರೆ ಅಪ್ರತ್ಯಕ್ಷ ತೆರಿಗೆಗಳ ಪ್ರಮಾಣ ಶೇ.43.85ರಷ್ಟಿತ್ತು. ಉಳಿದ ಶೇ.21.70 ವರಮಾನ ತೆರಿಗೆ. ಒಕ್ಕೂಟ ಸರ್ಕಾರದ ರಾಜಸ್ವ 2021-22ರಲ್ಲಿ ರೂ.25.16 ಲಕ್ಷ ಕೋಟಿ. ಇದರಲ್ಲಿ ಕಾರ್ಪೊರೆಟ್ ತೆರಿಗೆ ಪಾಲು ಶೇ.25.23 ಕ್ಕಿಳಿದಿದ್ದರೆ ವರಮಾನ ತೆರಿಗೆಯ ಪಾಲು ಶೇ.24.74ಕ್ಕಿಳಿದಿದೆ. ಅಪ್ರತ್ಯಕ್ಷ ತೆರಿಗೆಗಳ ಪಾಲು ಶೇ.50.03ರಷ್ಟಕ್ಕೆ ಏರಿಕೆಯಾಗಿದೆ. ಇದು ಏನನ್ನು ಸೂಚಿಸುತ್ತದೆ? ವಿತ್ತ ಮಂತ್ರಿಗಳು ಜಿಎಸ್‌ಟಿ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಿದ್ದಾರೋ (ಹಗಲು-ರಾತ್ರಿ ಅದರದೇ ಚಿಂತೆ) ಅಷ್ಟು ಮುತುವರ್ಜಿಯನ್ನು ಕಾರ್ಪೊರೆಟ್ ತೆರಿಗೆ ಬಗ್ಗೆ ಅಥವಾ ವರಮಾನ ತೆರಿಗೆ ಬಗ್ಗೆ ವಹಿಸುತ್ತಿಲ್ಲ. ಜಿಎಸ್‌ಟಿ ಜಾರಿಗೆ ಬಂದ ಮೇಲೆ ಒಕ್ಕೂಟದ ಒಟ್ಟು ರಾಜಸ್ವದಲ್ಲಿ ಕಾರ್ಪೊರೆಟ್ ಮತ್ತು ವೈಯುಕ್ತಿಕ ವರಮಾನ ತೆರಿಗೆ ಪಾಲು ಕಡಿಮೆಯಾಗುತ್ತಾ ನಡೆದಿದೆ.

ಸಣ್ಣ ವ್ಯಾಪಾರಗಾರರಿಗೆ ಜಿಎಸ್‌ಟಿ ಹೊರೆ

ಜಿಎಸ್‌ಟಿ ಪಾವತಿಸುವುದು ಅತ್ಯಂತ ಜಟಿಲವಾದ ಕಾರ್ಯವಾಗಿದೆ. ಇದರಲ್ಲಿ ಹತ್ತಾರು ರೀತಿಯ ನಮೂನೆಗಳನ್ನು ತುಂಬಬೇಕು, ರಶೀದಿಗಳನ್ನು ಲಗತ್ತಿಸಬೇಕು, ಪ್ರಮಾಣ ಪತ್ರಗಳನ್ನು ಜೋಡಿಸಬೇಕು. ಜಿಎಸ್‌ಟಿ ನಮೂನೆ ತುಂಬಿದಾಗಿನ ಲೆಕ್ಕಕ್ಕೂ ವರ್ಷದ ಕೊನೆಯಲ್ಲಿ ರಿಟರ್ನ್ಸ್ ಸಲ್ಲಿಸುವ ಸಮಯದಲ್ಲಿನ ಲೆಕ್ಕಕ್ಕೂ ತಾಳೆಯಾಗಬೇಕು. ಇವೆಲ್ಲವೂ ಆನ್‌ಲೈನ್‌ನಲ್ಲಿ ನಡೆಯಬೇಕು. ಇವನ್ನೆಲ್ಲ ಖಾತೆ ಪುಸ್ತಕಗಳಲ್ಲಿ ಮಾಡಲು ಸಾಧ್ಯವಿಲ್ಲ. ಇದಕ್ಕೆ ಕಂಪ್ಯೂಟರ್ ಮತ್ತು ಕಂಪ್ಯೂಟರ್ ಆಪರೇಟರ್ ಬೇಕು. ಇದಕ್ಕೆ ’ಎಮ್‌ಎಸ್‌ಎಮ್‌ಈ’ ಘಟಕಗಳು ಹಣ ಖರ್ಚು ಮಾಡಬೇಕು; ಇದು ಹೆಚ್ಚಿನ ಹಣ, ಶ್ರಮ ಮತ್ತು ಸಮಯವನ್ನು ಬೇಡುತ್ತವೆ. ಏಕ ವ್ಯಕ್ತಿ ವ್ಯಾಪಾರಿ ಘಟಕಗಳಿಗೆ (ಓನ್ ಅಕೌಂಟ್ ಘಟಕಗಳು) ಇದು ಹೆಚ್ಚಿನ ಹೊರೆಯಾಗುತ್ತಿದೆ.

ಒಂದು ದೇಶ: ಒಂದು ಮಾರುಕಟ್ಟೆ

ಪ್ರಸ್ತುತ ಸರ್ಕರವು 2014ರಿಂದ ಇಂತಹ ’ಒಂದು ದೇಶ’ ಎಂಬ ಘೊಷಣೆಗಳನ್ನು ರೂಪಿಸುತ್ತಾ ಬಂದಿದೆ. ನಿಜ, ಮಾರುಕಟ್ಟೆ ದೊಡ್ಡದಾದಷ್ಟು ವ್ಯಾಪಾರ-ವಹಿವಾಟು ದೊಡ್ಡ ಪ್ರಮಾಣದಲ್ಲಿ ನಡೆಸಲು ಸಾಧ್ಯವಾಗುತ್ತದೆ. ಆದರೆ ಅದು ಎಷ್ಟು ದೊಡ್ಡದಿರಬೇಕು? ನಮ್ಮ ದೇಶದಲ್ಲಿ ಪ್ರತಿ ರಾಜ್ಯದ ಮಾರುಕಟ್ಟೆಯು ದೊಡ್ಡದಿದೆ. ಉದಾ: ಕರ್ನಾಟಕ ರಾಜ್ಯದ ಮಾರುಕಟ್ಟೆಯು ಯುನೈಟೆಡ್ ಕಿಂಗ್‌ಡಮ್‌ನ (ಯುಕೆ) ಮಾರುಕಟ್ಟೆಗೆ ಸಮನಾಗಿದೆ. ಆದ್ದ ರಿಂದ ದೇಶದ ಮಾರುಕಟ್ಟೆಯನ್ನು ’ಒಂದು ಮಾಡುವ’ ಅಗತ್ಯವಿಲ್ಲ. ಹೀಗೆ ಮಾರುಕಟ್ಟೆಯನ್ನು ವಿಸ್ತರಿಸುವ ಯೂರೋಪಿನ ’ಸಾಮಾನ್ಯ ಮಾರುಕಟ್ಟೆ’ಯು ಇಂದು ಅನೇಕ ಕಷ್ಟಗಳನ್ನು ಎದುರಿಸುತ್ತಿದೆ. ಬ್ರಿಟನ್ ಯೂರೋಪಿಯನ್ ಸಾಮಾನ್ಯ ಮಾರುಕಟ್ಟೆಯಿಂದ ಹೊರಬಂದಿದೆ (ಬ್ರಿಕ್ಸಿಟ್). ನಮ್ಮ ದೇಶದಲ್ಲಿ ಪ್ರತಿಯೊಂದು ರಾಜ್ಯದ ಮಾರುಕಟ್ಟೆಯನ್ನು ಬೆಳೆಸುವುದು ಅಗತ್ಯ. ಇದನ್ನು ಒಟ್ಟುಗೂಡಿಸುವುದು, ಮಾರುಕಟ್ಟೆಯನ್ನು ಬೃಹತ್ತಾಗಿ ಬೆಳೆಸುವುದು, ಎಲ್ಲ ರಾಜ್ಯಗಳಿಗೂ ’ಸಾಮಾನ್ಯ’ವಾದ ಒಂದೇ ರೂಪದ ತೆರಿಗೆಯನ್ನು (ಜಿಎಸ್‌ಟಿ) ವಿಧಿಸುವುದು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಜಿಎಸ್‌ಟಿ ಮತ್ತು ಒಕ್ಕೂಟ ತತ್ವ

ಜಿಎಸ್‌ಟಿಯ ತಾಂತ್ರಿಕ ಸಮಸ್ಯೆಗಳು, ಅನುಷ್ಠಾನದ ತೊಡಕುಗಳು, ಕಾನೂನಿನ ಅಡೆತಡೆಗಳು ಬೇರೆ. ಇವುಗಳನ್ನು
ನಿವಾರಿಸಿಕೊಳ್ಳಬಹುದು ಅಥವಾ ಇವುಗಳೊಂದಿಗೆ ಬದುಕುತ್ತಾ-ಏಗುತ್ತಾ ಸಾಗಬಹುದು. ಆದರೆ ಜಿಎಸ್‌ಟಿಯಲ್ಲಿ ಒಕ್ಕೂಟ ಗುಣವಿಲ್ಲ. ಇದೊಂದು ಕೇಂದ್ರೀಕೃತ ತೆರಿಗೆಯಾಗಿದೆ. ’ಒಂದು ದೇಶ-ಒಂದು ತೆರಿಗೆ’ ಎಂಬ ಘೋಷಣೆಯೊಂದಿಗೆ ಅಸ್ತಿತ್ವಕ್ಕೆ ಬಂದ ಜಿಎಸ್‌ಟಿ ಸುಧಾರಣೆಯು ನಮ್ಮ ಒಕ್ಕೂಟ ವ್ಯವಸ್ಥೆಗೆ ದೊಡ್ಡ ಅಪಾಯಕಾರಿಯಾಗಿ ಪರಿಣಮಿಸಿದೆ. ಈ ಅಪಾಯ ಒಕ್ಕೂಟ-ರಾಜ್ಯಗಳ ನಡುವಿನ ವಿತ್ತೀಯ ಸಂಬಂಧಕ್ಕೆ ಮಾತ್ರ ಸೀಮಿತವಾದುದಲ್ಲ. ಇಲ್ಲಿ ಸಾಂವಿಧಾನಿಕ, ರಾಜಕೀಯ, ಸಾಂಸ್ಥಿಕ, ಆಡಳಿತಾತ್ಮಕ ಮುಂತಾದ ಸಂಬಂಧಗಳ ಸಮಸ್ಯೆಗಳಿವೆ. ನಿಜ, ಒಕ್ಕೂಟ ಸರ್ಕಾರವು ಹೇಳುತ್ತಿರುವಂತೆ ಇದೊಂದು ಸ್ವಾತಂತ್ರ್ಯಾನಂತರದ ಬೃಹತ್ ತೆರಿಗೆ
ಸುಧಾರಣೆಯಾಗಿದೆ (ಗೇಮ್ ಚೇಂಜರ್). ಅದೇ ರೀತಿಯಲ್ಲಿ ಇದು ಸ್ವಾತಂತ್ರ್ಯಾನಂತರ ನಮ್ಮ ಸಂವಿಧಾನಾತ್ಮಕ ಒಕ್ಕೂಟ ತತ್ವಕ್ಕೆ ಉಂಟು ಮಾಡುತ್ತಿರುವ ಕೇಡು ಕೂಡ ಬೃಹತ್ತಾಗಿದೆ. ರಾಜ್ಯಗಳ ತೆರಿಗೆ ವಿಧಿಸುವ ಸಂವಿಧಾನಾತ್ಮಕ ಹಕ್ಕನ್ನು ಇದು ಕಿತ್ತುಕೊಂಡಿದೆ. ಈಗ ರಾಜ್ಯಗಳು ಹಣಕಾಸು ಸಂಪನ್ಮೂಲಕ್ಕಾಗಿ ಒಕ್ಕೂಟದ ಮರ್ಜಿಯಲ್ಲಿ ಬದುಕುವಂತಾಗಿದೆ. ಇದು ಸಂವಿಧಾನದ 122ನೆಯ ತಿದ್ದುಪಡಿಯ ಮೂಲಕ ಪೂರ್ವ ಸಿದ್ಧತೆಯಿಲ್ಲದೆ, ರಾಜ್ಯಗಳ ಜೊತೆಗೆ ಚರ್ಚಿಸದೆ ಜುಲೈ 01, 2017ರಲ್ಲಿ ತರಾತುರಿಯಲ್ಲಿ ಹಾಗೂ ಹಿಂದಿನ ವರ್ಷ 2016ರಲ್ಲಿ ಡಿಮಾನಿಟೈಸೇಶನ್ ಉಂಟು ಮಾಡಿದ್ದ ಹಾನಿಕಾರಕ ಪರಿಣಾಮಗಳನ್ನು ಮುಚ್ಚಿ ಹಾಕಲು ಮತ್ತು ಜನತೆಯ ಗಮನವನ್ನು ಬೇರೆಡೆಗೆ ಸೆಳೆಯಲು ಬಲವಂತದಿಂದ ಜಾರಿ ಮಾಡಿದ ಸುಧಾರಣೆಯಾಗಿದೆ. ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಇತ್ತೀಚಿಗೆ ಜಿಎಸ್‌ಟಿ ಬಗ್ಗೆ ನೀಡಿರುವ ತೀರ್ಪು ಒಂದು ಆಶಾಕಿರಣವಾಗಿದೆ. ಅದರ ಪ್ರಕಾರ ಜಿಎಸ್‌ಟಿ ಮಂಡಳಿಯ ಶಿಫಾರಸ್ಸುಗಳನ್ನು ರಾಜ್ಯಗಳು ಮತ್ತು ಒಕ್ಕೂಟ ಸರ್ಕಾರ ಕಡ್ಡಾಯವಾಗಿ ಒಪ್ಪಿಕೊಳ್ಳಬೇಕಾಗಿಲ್ಲ. ಒಂದು ವೇಳೆ ಇದು ಕಡ್ಡಾಯವಾಗಿದ್ದರೆ ನಮ್ಮ ಸಂವಿಧಾನಾತ್ಮಕ ಒಕ್ಕೂಟ ವ್ಯವಸ್ಥೆಗೆ ಇದು ಮರಣ ಶಾಸನವಾಗಿಬಿಡುತ್ತಿತ್ತು.

’ಒಂದು ದೇಶ-ಒಂದು ತೆರಿಗೆ’, ’ಒಂದು ದೇಶ-ಒಂದು ಮಾರುಕಟ್ಟೆ’ ಮುಂತಾದವು ಅತಿಯೆನ್ನುವಂತೆ ಇಂದು ಘೋಷಣೆಗಳು ಕೇಳಿಬರುತ್ತಿವೆ. ಮಾರುಕಟ್ಟೆಯು ಹೆಚ್ಚು ವಿಸ್ತರಿಸಿದಂತೆ ಉದ್ಯೋಗ, ವರಮಾನ, ಉತ್ಪಾದನೆ ಹೆಚ್ಚುತ್ತದೆ. ಆದರೆ ನಮ್ಮಂತಹ 140 ಕೋಟಿ ಜನಸಂಖ್ಯೆಯ ಒಕ್ಕೂಟ ವ್ಯವಸ್ಥೆಯಲ್ಲಿ ಪ್ರತಿ ರಾಜ್ಯದ ಮಾರುಕಟ್ಟೆಯು ವಿಶಾಲವಾದುದಾಗಿದೆ. ಇಡೀ ದೇಶದಲ್ಲಿ ಮಾರುಕಟ್ಟೆಯ ಏಕರೂಪದಲ್ಲಿದ್ದರೆ, ಏಕರೂಪಿ ತೆರಿಗೆಯಿದ್ದರೆ ವ್ಯವಹಾರ ನಡೆಸುವುದು ಸುಲಭವಾಗುತ್ತದೆ. ಆದರೆ ಇದು ನಮ್ಮ ಆರ್ಥಿಕತೆಯಲ್ಲಿನ ’ಬಹುತ್ವವನ್ನು ನಾಶ ಮಾಡುತ್ತದೆ.

ಜಿಎಸ್‌ಟಿಯನ್ನು ಇಂದು ರದ್ದುಪಡಿಸುವುದಕ್ಕೆ ಸಾಧ್ಯವಿಲ್ಲ. ಆದರೆ ಅದು ಒಕ್ಕೂಟ ತತ್ವಕ್ಕೆ ಉಂಟು ಮಾಡುತ್ತಿರುವ ಅಪಾಯವನ್ನು ಸರಿಪಡಿಸಬಹುದು. ಒಕ್ಕೂಟ ಸರ್ಕಾರವು ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು. ಜಿಎಸ್‌ಟಿ ಸಂಬಂಧಿ ಪರಿಹಾರವನ್ನು ರಾಜ್ಯಗಳಿಗೆ ನೀಡುವ ಕ್ರಮವನ್ನು ಮೀನಮೇಷ ಏಣಿಸದೆ ಮುಂದುವರಿಸಬೇಕು. ಈ ತೆರಿಗೆಯಿಂದಾಗಿ ರಾಜ್ಯಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಒಕ್ಕೂಟ ಸರ್ಕಾರದ್ದಾಗಿದೆ. ಆದರೆ ಒಕ್ಕೂಟ ತತ್ವದ ಬಗ್ಗೆ ನಂಬಿಕೆಯಿಲ್ಲದ ಬಿಜೆಪಿ ಸರ್ಕಾರದಿಂದ ಇದು ಸಾಧ್ಯವೆ?

ಡಾ. ಟಿ. ಆರ್. ಚಂದ್ರಶೇಖರ

ಡಾ. ಟಿ. ಆರ್. ಚಂದ್ರಶೇಖರ
ಅಭಿವೃದ್ಧಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹಂಪಿ ವಿ.ವಿಯಲ್ಲಿ ಸೇವೆ ಸಲ್ಲಿಸಿರುವ ಚಂದ್ರಶೇಖರ್ ಅವರು ಅರ್ಥಶಾಸ್ತ್ರದ ವಿಷಯದಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇತಿಹಾಸ-ಸಂಸ್ಕೃತಿಗಳ ಬಗ್ಗೆಯೂ ತಮ್ಮ ವಿಶಿಷ್ಟ ಚಿಂತನೆಗಳನ್ನು ಪ್ರಸ್ತುತಪಡಿಸುತ್ತಿರುವ ಮುಂಚೂಣಿ ಚಿಂತಕರು


ಇದನ್ನೂ ಓದಿ: ಹೊಸ GST ದರ ಜಾರಿ: ಯಾವುದು ದುಬಾರಿಯಾಗಲಿವೆ? | ಸಂಕ್ಷಿಪ್ತ ವಿವರಣೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಟಿ. ಆರ್. ಚಂದ್ರಶೇಖರ್ ಅವರ ಜಿಎಸ್ಟಿ ವಿಷಯ ಕುರಿತ ಲೇಖನ ಪರಿಪೂರ್ಣ ಎನ್ನಿಸುವುದಿಲ್ಲ. ಜಿಎಸ್ಟಿ ಬರುವ ಮೋದಲು, ರಾಜ್ಯ ಸರ್ಕಾರಗಳ ತೆರಿಗೆ ವರಮಾನ ಎಷ್ಟು ಇತ್ತು? ಈಗ ಅವುಗಳಿಗೆ ಸಿಗುತ್ತಿರುವ ಜಿಎಸ್ಟಿ ವರಮಾನ ಎಷ್ಟು? ಮತ್ತು, ಈಗ ರಾಜ್ಯಗಳ ಪಾಲನ್ನು ಕೇಂದ್ರ ಸರಿಯಾಗಿ ಕೊಡುತ್ತಿದೆಯೆ(50% ಪಾಲು)? ರಾಜ್ಯಗಳ ಜಿಎಸ್ಟಿ ಪಾಲನ್ನು ಕೇಂದ್ರ, ನೇರವಾಗಿ ಗ್ರಾಮ ಪಂಚಾಯಿತಿಗಳಿಗೆ ಕೊಡುತ್ತಿದೆ ಎಂಬುದು ನಿಜವೆ? ಹಾಗೇನಾದರೂ ಇದ್ದರೆ, ರಾಜ್ಯಗಳ ನಿರ್ವಹಣೆಗೆ ಹಣ ಎಲ್ಲಿಂದ ಬರುತ್ತದೆ? ಈ ಮೂಲಭೂತ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಬೇಕಿತ್ತು.

LEAVE A REPLY

Please enter your comment!
Please enter your name here

- Advertisment -

ಬಿಹಾರ| ಹಿಜಾಬ್ ತೆಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಮುಸ್ಲಿಂ ಮಹಿಳೆಗೆ ಒತ್ತಾಯಿಸಿದ ಗುಂಪು

ಪುರುಷರ ಗುಂಪೊಂದು ದಾರಿಯಲ್ಲಿ ಹೋಗುತ್ತಿದ್ದ ಮುಸ್ಲಿಂ ಮಹಿಳೆಯನ್ನು ತಡೆದು ದೌರ್ಜನ್ಯ ಎಸಗಿದ್ದು, ಆಕೆ ಧರಿಸಿದ್ದ ಹಿಜಾಬ್ ತಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಹಿಂದುತ್ವ ಕಿಡಿಗೇಡಿಗಳು ಒತ್ತಾಯಿಸಿರುವ ವಿಡಿಯೊ ವೈರಲ್ ಆಗಿದೆ. ಜುಲೈ 8 ರ...

ಕೃಷಿ ಭೂಮಿ ಉಳಿಸಲು ರೈತ ಸಂಘಟನೆಗಳಿಂದ ಜುಲೈ 11ಕ್ಕೆ ‘ಬಿಡದಿ ಚಲೋ’

ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಗಾಗಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ಜನವಿರೋಧಿ ಧೋರಣೆಯನ್ನು ಖಂಡಿಸಿ, ಜುಲೈ 11 ರಂದು ಬೃಹತ್ ‘ಬಿಡದಿ ಚಲೋ’ ಹಸಿರು ಹೆದ್ದಾರಿ ಪ್ರತಿಭಟನೆಯನ್ನು...

ಅಮೆರಿಕ-ಇರಾನ್ ನಡುವೆ ಮತ್ತೆ ಕಾಳಗ : ಕದನ ವಿರಾಮ ಮುಕ್ತಾಯಗೊಂಡಿದೆ ಎಂದ ಟ್ರಂಪ್

ಮಂಗಳವಾರ ರಾತ್ರಿಯಿಂದ (ಭಾರತೀಯ ಕಾಲಮಾನ) ಅಮೆರಿಕ-ಇರಾನ್ ನಡುವೆ ಮತ್ತೆ ಕಾಳಗ ಶುರುವಾಗಿದ್ದು, ಕದನ ವಿರಾಮ ಮುಕ್ತಾಯಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಟರ್ಕಿಯಲ್ಲಿ ನಡೆದ ನ್ಯಾಟೋ ಶೃಂಗಸಭೆಯಲ್ಲಿ ಮಾತನಾಡಿದ ಟ್ರಂಪ್...

ಅಯೋಧ್ಯೆ ದೇಣಿಗೆ ಹಗರಣ: ಕೇವಲ 45 ದಿನಗಳಲ್ಲಿ 70 ಬಾರಿ ಕಳ್ಳತನ, SIT ವರದಿ

ಅಯೋಧ್ಯೆಯ ರಾಮಮಂದಿರಕ್ಕೆ ಬಂದ ಸಾರ್ವಜನಿಕರ ದೇಣಿಗೆ ದುರುಪಯೋಗದ ಆರೋಪದ ಕುರಿತು ವಿಶೇಷ ತನಿಖಾ ತಂಡ (SIT) ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಕೇವಲ 45 ದಿನಗಳಲ್ಲಿ ಸುಮಾರು 70 ಸಂಶಯಾಸ್ಪದ ಕಳ್ಳತನಗಳು ನಡೆದಿರುವುದಕ್ಕೆ ಪ್ರಾಥಮಿಕ...

ಬರುಯಿಪುರ ಅತ್ಯಾಚಾರ-ಕೊಲೆ ಪ್ರಕರಣ: ಪ್ರಮುಖ ಆರೋಪಿಯ ಎನ್‌ಕೌಂಟರ್; ‘ನನ್ನ ಮಗನ ಶವ ನನಗೆ ಬೇಡ’ ಎಂದ ಹೆತ್ತ ತಾಯಿ!

ಬರುಯಿಪುರ/ಕೋಲ್ಕತ್ತಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬರುಯಿಪುರದಲ್ಲಿ 12 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕ್ರೂರ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪ್ರಭಾಸ್ ಮೊಂಡೋಲ್ ಬುಧವಾರ...

ವಯನಾಡ್ ಭೂಕುಸಿತ: ಕಾಣೆಯಾದ ಐವರಿಗಾಗಿ ಮುಂದುವರೆದ ಹುಡುಕಾಟ

ಬೆಟ್ಟದ ಜಿಲ್ಲೆಯ ವಯನಾಡ್‌ನಲ್ಲಿ ನಡೆಯುತ್ತಿರುವ ಸುರಂಗ ರಸ್ತೆ ನಿರ್ಮಾಣ ಸ್ಥಳದಲ್ಲಿ ಭೂಕುಸಿತ ಸಂಭವಿಸಿ ಮೂರು ಜೀವಗಳು ಬಲಿಯಾದ ಒಂದು ದಿನದ ನಂತರ, ಕಾಣೆಯಾಗಿರುವ ಐವರಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ವಯನಾಡ್...

ನನ್ನನ್ನು ಕೊಂಡುಕೊಳ್ಳಲು ಯಾರ ಕೈಲೂ ಸಾಧ್ಯವಿಲ್ಲ: ಮಹುವಾ ಮೋಯಿತ್ರಾ ವಿಶೇಷ ಸಂದರ್ಶನ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಜಯಭೇರಿ ಬಾರಿಸಿದ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಭದ್ರಕೋಟೆ ಧೂಳೀಪಟವಾಗಿದೆ. ಚುನಾವಣಾ ಸೋಲಿನ ನಂತರ ಸಾಲು...

ಕೋರ್ಟ್ ರಾಜಕೀಯ ಅಖಾಡ ಅಲ್ಲ: ಸಿಎಂ ವಿಜಯ್ ವಿರುದ್ಧ ಅರ್ಜಿ ಸಲ್ಲಿಸಿದ್ದ ಡಿಎಂಕೆಗೆ ಸುಪ್ರೀಂ ತರಾಟೆ

ತಮಿಳುನಾಡಿನ ಕರೂರ್ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಭೇಟಿ ಮಾಡದಂತೆ ಮುಖ್ಯಮಂತ್ರಿ ವಿಜಯ್ ಅವರಿಗೆ ನಿರ್ಬಂಧ ಹೇರಬೇಕೆಂದು ಕೋರಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಜನರಿಂದ...

ಸುರಂಗ ರಸ್ತೆ ಕಾಮಗಾರಿ ವೇಳೆ ವಯನಾಡಿನಲ್ಲಿ ಭೂಕುಸಿತ: ಜನರು ಜೀವ ಉಳಿಸಿಕೊಳ್ಳಲು ಓಡಿದ ಭಯಾನಕ ದೃಶ್ಯ ಸೆರೆ

ಕೇರಳದ ವಯನಾಡ್ ಜಿಲ್ಲೆಯ ಮೇಪ್ಪಾಡಿಯಲ್ಲಿ ಮಂಗಳವಾರ (ಇಂದು) ಭೀಕರ ಭೂಕುಸಿತ ಸಂಭವಿಸಿದ್ದು, ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಏಳು ಜನರು ಗಾಯಗೊಂಡಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಕಾರ್ಯಾಚರಣೆ ಮುಂದುವರಿದಿದ್ದು, ಈ...

ಒಟಿಟಿಗೆ ಬಂದ ಎರಡೇ ದಿನಕ್ಕೆ ದಿಲ್ಜಿತ್ ದೋಸಾಂಜ್ ನಟನೆಯ ‘ಸಟ್ಲಜ್’ ಸಿನಿಮಾ ಔಟ್! ಜೀ5 ವಿರುದ್ಧ ಆಕ್ರೋಶ, ಕಾನೂನು ಹೋರಾಟದ ಭರವಸೆ

ತೀವ್ರ ವಿವಾದ ಹಾಗೂ ಸೆನ್ಸಾರ್ ಮಂಡಳಿಯ ಕತ್ತರಿ ಪ್ರಯೋಗದ ನಡುವೆಯೂ ಕೊನೆಗೂ ಒಟಿಟಿ ಪರದೆಯ ಮೇಲೆ ಬಿಡುಗಡೆಯಾಗಿದ್ದ ಖ್ಯಾತ ನಟ ದಿಲ್ಜಿತ್ ದೋಸಾಂಜ್ ಅಭಿನಯದ 'ಸಟ್ಲಜ್' (ಮೂಲ ಶೀರ್ಷಿಕೆ: ಪಂಜಾಬ್ 95) ಚಿತ್ರವನ್ನು...