ಇತ್ತೀಚೆಗೆ ಭಾರತೀಯ ರಿಜ಼ರ್ವ್ ಬ್ಯಾಂಕ್ ಮಾಹಿತಿ ಹಕ್ಕು ಕಾಯಿದೆಯಡಿ ಪತ್ರಕರ್ತ ಸಾಕೇತ್ ಗೋಖಲೆಯವರಿಗೆ ನೀಡಿರುವ ಮಾಹಿತಿ ಪ್ರಕಾರ ಸರಕಾರಿ ಬ್ಯಾಂಕುಗಳು 50 ದೊಡ್ಡ ಉದ್ಯಮಿಗಳಿಗೆ ನೀಡಿರುವ ರೂ. 68,000 ಕೋಟಿ ಸಾಲ ಹೊಡೆದು ಹಾಕಿದೆ ಎಂಬ ಸುದ್ದಿ ಬಹಳ ಚರ್ಚೆಯಲ್ಲಿದೆ.
ಸರಕಾರಿ ಬ್ಯಾಂಕುಗಳು ಕಳೆದ ಮೂರು ವರ್ಷಗಳಲ್ಲಿ ರೂ.1,14,000 ಕೋಟಿ ಸಾಲವನ್ನು ತನ್ನ ಪುಸ್ತಕದಿಂದ ಹೊಡೆದು ಹಾಕಿದೆ ಮತ್ತು ಈ ವರ್ಷದಲ್ಲಿ ಇನ್ನೂ ಸುಮಾರು ರೂ.50,000 ಕೋಟಿ ಸಾಲವನ್ನು ಹೊಡೆದು ಹಾಕಲಿದೆ. ಈ ಹೊಡೆದು ಹಾಕುವ (ರೈಟ್ ಆಫ್) ವಿಧಿಯನ್ನು ಭಾರತೀಯ ರಿಜ಼ರ್ವ್ ಬ್ಯಾಂಕಿನ ಮಾಜಿ ಡೆಪ್ಯೂಟಿ ಗವರ್ನರ್ ಶ್ರೀ ಕೆ.ಸಿ.ಚಕ್ರಬರ್ತಿಯವರು “ದೊಡ್ಡ ಹಗರಣ” ಎಂದು ಕರೆಯುತ್ತಾರೆ.
“ಸಾಲ ಮನ್ನಾ” ಎಂದ ಕೂಡಲೇ ಅದು ಏನೆಂದು ಎಲ್ಲರಿಗೂ ತಿಳಿಯುತ್ತದೆ ಆದರೆ ಈ “ರೈಟ್-ಆಫ್” ಅಂದರೆ “ಸಾಲ ಮನ್ನಾ” ಅಲ್ಲ ಎಂಬುದು ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ. ಯಾವುದೇ ಬ್ಯಾಂಕ್ ತನ್ನ ಸಾಲವನ್ನು ಮನ್ನಾ ಮಾಡಲು ಇಷ್ಟ ಪಡುವುದಿಲ್ಲ, ಏಕೆಂದರೆ ಜನರಿಗೆ/ಉದ್ದಿಮೆಗಳಿಗೆ ನೀಡಿರುವ ಸಾಲ ಬ್ಯಾಂಕಿನ “ಆಸ್ತಿ” ಯಾಗಿರುತ್ತದೆ.
ಉದಾಹರಣೆಗೆ ನೀವು ಬ್ಯಾಂಕಿನಿಂದ ಒಂದು ಲಕ್ಷ ರೂ. ಸಾಲ ಪಡೆದಿದ್ದೀರಿ ಎಂದುಕೊಳ್ಳೋಣ. ಬ್ಯಾಂಕಿನ ದೃಷ್ಟಿಯಲ್ಲಿ ನೀವು ತೆಗೆದುಕೊಂಡಿರುವ ಸಾಲ ಬ್ಯಾಂಕಿಗೆ “ಆಸ್ತಿ” ಮತ್ತು ಅದಕ್ಕೆ ನೀವು ಕಟ್ಟುವ ಬಡ್ಡಿ ಹಣ ಬ್ಯಾಂಕಿಗೆ “ಆದಾಯ” ಆಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಖಾತೆ “ಸಾಮಾನ್ಯ” ಮತ್ತು ನಿಮಗೆ ನೀಡಿರುವ ಹಣ ಬ್ಯಾಂಕಿನ “ಆಸ್ತಿ” ಎಂದು ಪರಿಗಣಿಸಲಾಗುತ್ತದೆ. ಆದರೆ ನೀವು ಬಡ್ಡಿ ಕಟ್ಟುವುದನ್ನು ನಿಲ್ಲಿಸಿದ ನಂತರ ಅಂದರೆ ಬ್ಯಾಂಕಿಗೆ “ಆದಾಯ” ನಿಂತ ದಿನದಿಂದ ನಿಮ್ಮ ಸಾಲವನ್ನು ನಿಷ್ಕ್ರಿಯ ಆಸ್ತಿ (ನಾನ್-ಪರ್ಫಾರ್ಮಿಂಗ್ ಅಸೆಟ್) ಎಂದು ಮತ್ತು ನಿಮ್ಮಿಂದ ಬರಬೇಕಾಗಿದ್ದ ಬಡ್ಡಿ ಹಣವನ್ನು “ಖರ್ಚು” ಎಂದು ಪರಿಗಣಿಸಲಾಗುತ್ತದೆ.
ಆರ್.ಬಿ.ಐ. ನಿಯಮಾವಳಿ ಅನುಸಾರ ಒಂದು ಸಮಯ/ಹಂತದ ನಂತರ ಇದನ್ನು “ಆಸ್ತಿ” ಎಂದು ಪರಿಗಣಿಸಲು ಆಗುವುದಿಲ್ಲ, ಅದಕ್ಕಾಗಿ ಅದನ್ನು ಬ್ಯಾಂಕಿನ ಲೆಕ್ಕ-ಪತ್ರದಲ್ಲಿ ಆಸ್ತಿ ಪಟ್ಟಿಯಿಂದ ಹೊಡೆದು ಹಾಕಲಾಗುತ್ತದೆ. ಇದನ್ನು ರೈಟ್-ಆಫ್ ಎಂದು ಕರೆಯುತ್ತಾರೆ. ರೈಟ್-ಆಫ್ ಎಂದ ಕೂಡಲೇ ಬ್ಯಾಂಕು ಈ ಸಾಲವನ್ನು ಕೈ ಬಿಟ್ಟಿದೆ ಎಂಬ ಅರ್ಥವಲ್ಲ. ಕಾನೂನಿನ ಪ್ರಕಾರ ಸಾಲಗಾರರ ವಿರುದ್ಧ ಸಾಲ ಮತ್ತು ಬಡ್ದಿಯ ವಸೂಲಿಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರವಿರುತ್ತದೆ. ಕೆಲವು ಬ್ಯಾಂಕುಗಳು ಈ “ಹೊಡೆದು ಹಾಕಿದ ಸಾಲ” ವನ್ನು ವಸೂಲಿಗಾಗಿ ವಸೂಲಿ ಕಂಪನಿಗಳಿಗೆ ಮಾರಲೂಬಹುದು. ಅಂತಹ ಸಂದರ್ಭದಲ್ಲಿ ವಸೂಲಿ ಕಂಪನಿಯ ದಾಂಢಿಗರು ನಿಮ್ಮ ಮನೆ ಬಾಗಿಲಿಗೆ ಬಂದು ಕದ ತಟ್ಟಬಹುದು. ನೀವು ಸಾಲದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇವಷ್ಟು ಪುಸ್ತಕದ ಬದನೇಕಾಯಿ.
ಇದರಲ್ಲಿ ಬ್ಯಾಂಕಿಗೆ ಆಗುವ ನಷ್ಟ-ಲಾಭವೇನು ನೋಡೋಣ. ಸಾಲರೂಪದಲ್ಲಿ ನೀಡಿರುವ ಹಣ ಸಂಪೂರ್ಣವಾಗಿ ಹಿಂದಕ್ಕೆ ಬಂದೇ ಬರುವುದೆಂಬ ನಂಬಿಕೆ ಯಾವ ಬ್ಯಾಂಕಿಗೂ ಇರುವುದಿಲ್ಲ ಹಾಗಾಗಿ ಸಾಲದ ಮೊತ್ತದ ಒಂದು ಅಂಶವನ್ನು ಅದು ತನ್ನ ಖರ್ಚೆಂದು ಲೆಕ್ಕದ ಪುಸ್ತಕದಲ್ಲಿ ಮೊದಲೇ ತೋರಿಸುತ್ತದೆ. ಇದು ಒಟ್ಟು ಸಾಲದ 5% ಆಗಿರಬಹುದು ಅಥವಾ ಸಾಲದ ಗುಣಮಟ್ಟದ ಆಧಾರದ ಮೇಲೆ ಇನ್ನೂ ಹೆಚ್ಚಾಗಿರಬಹುದು. ನಿಷ್ಕ್ರಿಯ ಸಾಲವನ್ನು ಆಸ್ತಿ ಪಟ್ಟಿಯಿಂದ ಹೊಡೆದು ಹಾಕಿದ ನಂತರ ಬ್ಯಾಂಕಿಗೆ ಖರ್ಚು ಹೆಚ್ಚಾಗಿ ಅದರ ವಾರ್ಷಿಕ ಲಾಭ ಕಡಿಮೆ ಆಗುತ್ತದೆ ಅಂದರೆ ಆದಾಯ ತೆರಿಗೆಯಲ್ಲಿ ವಿನಾಯಿತಿ ದೊರೆಯುತ್ತದೆ. ಇದರಿಂದ ಬ್ಯಾಂಕಿನ ಲೆಕ್ಕ-ಪತ್ರ ಸ್ವಲ್ಪ ಮಟ್ಟಿಗೆ ಸ್ವಚ್ಛವಾಗುತ್ತದೆ. ಇದರಿಂದ ಸರಕಾರಕ್ಕೆ ಆದಾಯ ಕಡಿಮೆ (ತೆರಿಗೆ ಖೋತಾ) ಆಗುತ್ತದೆ. ಈ ನಿಷ್ಪ್ರಯೋಜಕ ಆಸ್ತಿಗಳನ್ನು ಕೈ ಬಿಟ್ಟ ನಂತರ ಬ್ಯಾಂಕ್ ಮತ್ತೆ ಬೇರೆಯವರಿಗೆ ಸಾಲ ನೀಡಲು ಸಾಧ್ಯವಾಗುತ್ತದೆ. ಸಾಲ ನೀಡಲು ಬ್ಯಾಂಕಿನ ಬಳಿ ಹಣ ಇಲ್ಲದೆ ಇದ್ದಾಗ ಸರಕಾರ ಅವಕ್ಕೆ “ರಿ-ಫೈನಾನ್ಸಿಂಗ್” ಮಾಡುತ್ತದೆ. ಸರಕಾರವೂ ಸಹ ಇಂತಹ “ರೈಟ್-ಆಫ್” ಗೆ ಬೆಂಬಲ ನೀಡುತ್ತವೆ.
ಇತ್ತೀಚೆಗೆ ಬ್ಯಾಂಕಿನವರು ಹೊಸ “ಟೆಕ್ನಿಕಲ್ ರೈಟ್-ಆಫ್” ಎಂಬ ಪದ ಉಪಯೋಗಿಸಿ ಜನ ಸಾಮಾನ್ಯರನ್ನು ದಾರಿ ತಪ್ಪಿಸುತ್ತಿವೆ. ಇದನ್ನು ಮಾಜಿ ಡೆಪ್ಯೂಟಿ ಗವರ್ನರ್ ಶ್ರೀ ಕೆ.ಸಿ.ಚಕ್ರಬರ್ತಿಯವರು “ದೊಡ್ಡ ಹಗರಣ” ಎಂದು ಕರೆಯುತ್ತಾರೆ. ಇದರಲ್ಲಿ ಯಾವುದೇ “ಟೆಕ್ನಿಕಲ್” ಪ್ರಶ್ನೆ ಇಲ್ಲ, ಸಾಲ ತೆಗೆದುಕೊಂಡಿರುವ ಉದ್ದಿಮೆಗಳ ನಿವ್ವಳ ಆದಾಯ ಬ್ಯಾಂಕಿಗೆ ಬರಬೇಕಾಗಿರುವ ಬಡ್ಡಿಯಷ್ಟೂ ಇಲ್ಲದಿರುವುದು ಅವರ ಲೆಕ್ಕ-ಪತ್ರದಲ್ಲಿ ಸ್ಪಷ್ಟವಾಗಿರುವಾಗ ಸಾಲ ತೆಗೆದುಕೊಂಡಿರುವುದು ಮೋಸದ ಉದ್ದೇಶ. ರೈಟ್-ಆಫ್ ಎನ್ನುವುದು ಬ್ಯಾಂಕಿಂಗ್ ಕ್ಷೇತ್ರದ ಸರ್ವೇ ಸಾಮಾನ್ಯ ಪ್ರಕ್ರಿಯೆ ಅದನ್ನು ಮೀರಿ ನಡೆದಿರುವ ಎಲ್ಲಾ “ಟೆಕ್ನಿಕಲ್ ರೈಟ್-ಆಫ್”ಗಳೂ ಕೇವಲ ಹಗರಣ ಎಂಬುದು ಅವರ ಅನಿಸಿಕೆ.
ಹಾಗಾದರೆ ಈ ಹೊಡೆದು ಹಾಕಿದ ಮೊತ್ತ ಬ್ಯಾಂಕಿಗೆ ಮತ್ತೆ ಬರುತ್ತದೆಯೇ? ವಿಷಯ ಪರಿಣಿತರಲ್ಲಿ ಇದರ ಬಗ್ಗೆ ಏಕಾಭಿಪ್ರಾಯ ಇಲ್ಲ. ಕೆಲವರು ಕೇವಲ 20% ಮಾತ್ರ ಬರುತ್ತದೆ. ಅದೂ ಸಹ ಹತ್ತಾರು ವರ್ಷಗಳ ನ್ಯಾಯಾಲಯದ ಹೋರಾಟದ ನಂತರ, ಎಂದರೆ ಕೆಲವರು ಸುಮಾರು ಅರ್ಧದಷ್ಟು ಬರುತ್ತದೆ ಎನ್ನುತ್ತಾರೆ.
ಏನೇ ಆಗಲಿ ದೊಡ್ಡವರ ದೊಡ್ಡ ಮೊತ್ತದ ಸಾಲ ದೊಡ್ಡ ಹಗರಣವೇ ಸರಿ. ಇದರಲ್ಲಿ ಎಲ್ಲರೂ ಸಹಭಾಗಿ. ಕೊನೆಗೆ ಸರಕಾರಿ ಬ್ಯಾಂಕಿನ ಹಣ ನಮ್ಮ ನಿಮ್ಮ ತೆರಿಗೆಯಿಂದಲೇ ಬರಬೇಕು. ಆದ್ದರಿಂದ ಈಗ ಸರಕಾರ ಹೊಡೆದು ಹಾಕಿರುವ ರೂ.68,000 ಕೋಟಿ ಸರಿಯೋ ತಪ್ಪೋ ನೀವೇ ಮತ್ತೊಮ್ಮೆ ಯೋಚಿಸಿ.
- ಜಿ. ಆರ್. ವಿದ್ಯಾರಣ್ಯ
(ಡಿಸ್ಕ್ಲೇಮರ್: ಲೇಖಕರು ಬ್ಯಾಂಕಿಂಗ್/ಫೈನಾನ್ಸ್ ಪರಿಣಿತರಲ್ಲ. ಬಲ್ಲವರೊಂದಿಗೆ ಚರ್ಚಿಸಿ ಲೇಖನ ತಯಾರಿಸಿದ್ದಾರೆ. ನಿಮ್ಮ ಅನಿಸಿಕೆಗೆ ಸ್ವಾಗತ.)