ಲಖಿಂಪುರ್ ಖೇರಿ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದಾರೆ ಎಂದು ವಿವಾದಗಳಲ್ಲಿ ಸಿಲುಕಿರುವ ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಅಜಯ್ ಮಿಶ್ರಾ ಇಂದು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದು, ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಕಾರಾಗೃಹಗಳ ಕುರಿತಾದ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿಯ 7 ನೇ ರಾಷ್ಟ್ರೀಯ ಸಮ್ಮೇಳನವನ್ನು ಗುರುವಾರ ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಅಜಯ್ ಮಿಶ್ರಾ ಉದ್ಘಾಟಿಸಲಿದ್ದಾರೆ.
ಈ ಮೊದಲು ಮಾಧ್ಯಮಗಳಿಗೆ ಕಾರ್ಯಕ್ರಮವನ್ನು ವರದಿ ಮಾಡಲು ಆಹ್ವಾನ ನೀಡಲಾಗಿದ್ದು, ವಿವಾದದ ಬಳಿಕ ಆಹ್ವಾನಗಳನ್ನು ವಾಪಸ್ ಪಡೆಯಲಾಗಿದೆ. ಸದ್ಯ ಮಾಧ್ಯಮಗಳಿಗೆ ಪ್ರವೇಶ ನಿರಾಕರಿಸಲಾಗಿದೆ. ಪ್ರವೇಶದ್ವಾರದ ಬಳಿಯೇ ಸುದ್ದಿಗಾರರನ್ನು ತಡೆಹಿಡಿಯಲಾಗಿದೆ.
ಇದನ್ನೂ ಓದಿ: ರೈತರ ಮೇಲೆ ಹರಿದ ಕಾರನ್ನು ಅಜಯ್ ಮಿಶ್ರಾ ಪುತ್ರ ಆಶೀಶ್ ಚಲಾಯಿಸುತ್ತಿದ್ದರು: ಗಾಯಾಳು ರೈತ ಮುಖಂಡ
ಕಾರ್ಯಕ್ರಮ ಉದ್ಘಾಟನೆಗೆ ಆಕ್ಷೇಪ ವ್ಯಕ್ತಪಡಿಸಿರುವ ಸಾಮಾಜಿಕ ಹೋರಾಟಗಾರರಾದ ಯೋಗೇಂದ್ರ ಯಾದವ್, ಇದು ಹೊಸ ಇಂಡಿಯಾ ಎಂದು ವ್ಯಂಗ್ಯವಾಡಿದ್ದಾರೆ.
The man who should be in prison is inaugurating an official conference on prison!
New India! https://t.co/vf7bgHpKln— Yogendra Yadav (@_YogendraYadav) October 7, 2021
“ಜೈಲಿನಲ್ಲಿ ಇರಬೇಕಾದ ವ್ಯಕ್ತಿ ಜೈಲಿನಲ್ಲಿಯೇ ಅಧಿಕೃತ ಸಮ್ಮೇಳನವನ್ನು ಉದ್ಘಾಟಿಸುತ್ತಿದ್ದಾರೆ!
ಹೊಸ ಇಂಡಿಯಾ !” ಎಂದು ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿದು ಟ್ವೀಟ್ ಮಾಡಿ, “ರಾಜಕೀಯವು ರಕ್ತ ಕುಡಿಯುವ ಚಟವಾಗಿ ಬದಲಾಗಿದೆ, ಇಲ್ಲದಿದ್ದರೆ ದೇಶದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ” ಎಂದಿದ್ದಾರೆ.
सियासत को लहू पीने की लत है , वर्ना मुल्क में सब ख़ैरियत है ।।#KisanMazdoorEktaZindabad
— Navjot Singh Sidhu (@sherryontopp) October 7, 2021
ಕೊಲೆಗಾರ ಮತ್ತು ಮಂತ್ರಿಗೆ ಮುಕ್ತವಾಗಿ ತಿರುಗಾಡಲು ಅವಕಾಶ ನೀಡಲಾಗಿದೆ. ಸಾಂತ್ವನ ನೀಡಿದವರನ್ನು ಬಂಧನದಲ್ಲಿಡಲಾಯಿತು ಎಂದು ಆಪ್ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಕಿಡಿಕಾರಿದ್ದಾರೆ.
ಘಟನೆ ನಡೆದು ನಾಲ್ಕು ದಿನಗಳಾದರೂ ಆರೋಪಿಗಳ ಬಂಧನವಾಗದಕ್ಕೆ ರೈತ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ. “ಲಖಿಂಪುರ್ ಖೇರಿ ಘಟನೆ ನಡೆದು 100 ಗಂಟೆಗೂ ಹೆಚ್ಚು ಸಮಯ ಕಳೆದಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅಥವಾ ಗೃಹ ಸಚಿವ ಅಮಿತ್ ಶಾ ಒಂದು ಮಾತನ್ನಾದರೂ ಆಡಿದ್ದಾರೆಯೇ? ರೈತರ ವಿರುದ್ಧ ಅಪರಾಧ ಮಾಡುವವರಿಗೆ ಅಧಿಕಾರದ ಸಂಪೂರ್ಣ ರಕ್ಷಣೆ ಇದೆ ಎಂಬುದು ಇದರಿಂದ ಸ್ಪಷ್ಟಪಡಿಸುತ್ತದೆ” ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಮುಖವಾಣಿ ಕಿಸಾನ್ ಏಕ್ತಾ ಮೋರ್ಚಾ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಲಖಿಂಪುರ್ ಖೇರಿ ಹತ್ಯಾಕಾಂಡ: 100 ಗಂಟೆಯಾದರೂ ಆರೋಪಿಗಳ ಬಂಧನವಿಲ್ಲ – ರೈತರ ಆಕ್ರೋಶ