ಪ್ರದೀಪ್ ಎಂಬ ಉದ್ಯಮಿಯೊಬ್ಬರು ಹಣಕಾಸಿನ ವಂಚನೆಯಾಗಿದೆ ಎಂದು ಆರೋಪಿಸಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಕಗ್ಗಲೀಪುರ ಪೊಲೀಸರು ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ವಿರುದ್ಧ FIR ದಾಖಲಿಸಿದ್ದಾರೆ.
ಮೃತ ಪ್ರದೀಪ್ ಪತ್ನಿ ನೀಡಿದ ದೂರಿನ ಅನ್ವಯ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 306ರ ಅಡಿಯಲ್ಲಿ ಅರವಿಂದ ಲಿಂಬಾವಳಿ ಸೇರಿದಂತೆ ಡೆತ್ನೋಟ್ನಲ್ಲಿ ಹೆಸರಿದ್ದ ಗೋಪಿ, ಸೋಮಯ್ಯ, ರಮೇಶ್ ರೆಡ್ಡಿ, ಡಾ.ಜಯರಾಮ್ ರೆಡ್ಡಿ, ರಾಘವ ಭಟ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ರೆಸಾರ್ಟ್ ನಿರ್ಮಾಣಕ್ಕೆ ಹೂಡಿಕೆ ಮಾಡಿದ್ದ ಹಣವನ್ನು ವಾಪಸ್ ನೀಡದೆ ವಂಚಿಸಿದ್ದಾರೆ ಎಂದು ಆರೋಪಿಸಿ, ಇವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸಹಿತ 6 ಜನರ ಹೆಸರು ಬರೆದಿಟ್ಟು ಉದ್ಯಮಿಯೊಬ್ಬರು ಕಗ್ಗಲಿಪುರ ಬಳಿಯ ನೆಟ್ಟಿಗೆರೆ ಗ್ರಾಮದ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಮೈಸೂರು ನಿವಾಸಿ ಪ್ರದೀಪ್ (47) ಎಂಬ ಉದ್ಯಮಿಯೊಬ್ಬರು ಜನವರಿ 1 ರ ಭಾನುವಾರದಂದು ಕಾರಿನಲ್ಲಿ ಕುಳಿತು ತಮ್ಮ ತಲೆಗೆ ಗುಂಡು ಹಾರಿಸಿಕೊಂಡು ಪ್ರಾಣ ಬಿಟ್ಟಿದ್ದಾರೆ. ಕಾರಿನಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು ಅದರಲ್ಲಿ ಶಾಸಕ ಅರವಿಂದ ಲಿಂಬಾವಳಿ ಸಹಿತ ಗೋಪಿ, ಸೋಮಯ್ಯ, ರಮೇಶ್ ರೆಡ್ಡಿ, ಡಾ.ಜಯರಾಮ್ ರೆಡ್ಡಿ, ರಾಘವ ಭಟ್ ಎಂಬವರ ಹೆಸರಿನ ಜೊತೆಗೆ ಅವರ ಮೊಬೈಲ್ ಸಂಖ್ಯೆಯನ್ನು ಸಹ ನಮೂದಿಸಲಾಗಿದೆ.
“ಈ ಕೆಳಕಂಡ ವ್ಯಕ್ತಿಗಳ ಕಾರಣದಿಂದಾಗಿ ನಾನು ಈ ಅತಿಯಾದ ನಿರ್ಧಾರಕ್ಕೆ ಬರುತ್ತಿದ್ದೇನೆ. ನನ್ನ ಸಾವಿನ ನಂತರ ಈ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ನನ್ನ ಸಾವಿಗೆ ನ್ಯಾಯ ದೊರಕಿಸಿಕೊಡಿ. ಕೊನೆಯದಾಗಿ ನನ್ನ ಕುಟುಂಬದ ವ್ಯಕ್ತಿಗಳಿಗೆ ಕ್ಷಮೆ ಕೇಳುತ್ತೇನೆ ಎಂದು ಡೆತ್ನೋಟ್ನಲ್ಲಿ ಬರೆಯಲಾಗಿದೆ.
ಐವರು ಸ್ನೇಹಿತರ ಜೊತೆ ಸೇರಿ ರೆಸಾರ್ಟ್ ನಿರ್ಮಾಣಕ್ಕೆ ಪ್ರದೀಪ್ ಹಣ ಹೂಡಿಕೆ ಮಾಡಿದ್ದರು ಎನ್ನಲಾಗಿದೆ. ಆದರೆ ಹಣವನ್ನು ವಾಪಸ್ ಮಾಡದೆ ಆ ಸ್ನೇಹಿತರು ಮೋಸ ಮಾಡಿದ್ದರು ಎಂದು ಪ್ರದೀಪ್ ಆರೋಪಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ ಮಧ್ಯಸ್ಥಿಕೆ ವಹಿಸಿದ್ದ ಬೆಂಗಳೂರಿನ ಮಹದೇವಪುರದ ಶಾಸಕ ಅರವಿಂದ ಲಿಂಬಾವಳಿ ಅವರು ಸಹ ನನಗೆ ಮೋಸ ಮಾಡಿದ್ದಾರೆ. ಅವರಿಗೆ ಅರವಿಂದ್ ಲಿಂಬಾವಳಿ ಸಹಕರಿಸಿದ್ದಾರೆ ಎಂದು ಪ್ರದೀಪ್ ದೂರಿದ್ದಾರೆ.
A man named Pradeep shot himself & has named six people including #BJP MLA @ArvindLBJP responsible for his death in an alleged suicide note."I had invested 1.5 cr in a scheme & i did not get my returns.I sold my house & properties to repay loan" says note. FIR regd #Karnataka pic.twitter.com/tPlbWBeDMQ
— Imran Khan (@KeypadGuerilla) January 1, 2023
ಮಧ್ಯಸ್ಥಿಕೆ ವಹಿಸಿದ್ದ ಲಿಂಬಾವಳಿಯವರು ಕೆಲವು ತಿಂಗಳು ಕಾಲವಕಾಶ ಪಡೆದು ಪ್ರತಿ ತಿಂಗಳು 10 ಲಕ್ಷ ರೂ ನೀಡಲು ಸೂಚಿಸಿದ್ದರು. ಒಟ್ಟು ಎರಡೂವರೆ ಕೋಟಿ ಹಣ ನನಗೆ ಬರಬೇಕು. ಸಾಲ ತೀರಿಸಲು ಮನೆ ಮಾರಿದ್ದೆ. ಮತ್ತೆ ಸಾಕಷ್ಟು ಸಾಲ ಮಾಡಿಕೊಂಡಿದ್ದೆ. ಆದರೆ ಸ್ನೇಹಿತರು ಕೇವಲ ಒಂದು ತಿಂಗಳು ಮಾತ್ರ ಪಾವತಿಸಿ, ಬಳಿಕ ಹಣ ನೀಡದೇ ಮತ್ತೆ ಮೋಸ ಮಾಡಿದ್ದಾರೆ. ಅರವಿಂದ ನಿಂಬಾವಳಿಯವರು ಅವರ ಪರ ವಹಿಸಿದ್ದಾರೆ ಎಂದು ಡೆತ್ನೋಟ್ನಲ್ಲಿ ಆರೋಪಿಸಲಾಗಿದೆ.
ಉದ್ಯಮಿಯ ಆತ್ಮಹತ್ಯೆ ವಿಷಯ ಬಹಿರಂಗವಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷವು ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಮುಗಿಬಿದ್ದಿದೆ. “ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪನವರ ರಕ್ಷಣೆ ಮಾಡಲಾಯಿತು. ಮತ್ತೊಬ್ಬ ಗುತ್ತಿಗೆದಾರ ಪ್ರಸಾದ್ ಆತ್ಮಹತ್ಯೆ ಪ್ರಕರಣದಲ್ಲೂ ಅಧಿಕಾರಿಗಳ ರಕ್ಷಣೆ ಮಾಡಲಾಗಿದೆ. ಈಗ ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣದಲ್ಲಿ ಶಾಸಕ ಅರವಿಂದ್ ಲಿಂಬಾವಳಿ ರಕ್ಷಣೆ ಮಾಡಲು ಸಿಎಂ ಬೊಮ್ಮಾಯಿ ಮುಂದಾಗಿದ್ದಾರೆ. ಅವರು CCM (“ಕ್ರಿಮಿನಲ್ಸ್ ಕೇರ್ಟೇಕರ್ ಮಿನಿಸ್ಟರ್”) ಆಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
◆ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪನವರ ರಕ್ಷಣೆ
◆ಮತ್ತೊಬ್ಬ ಗುತ್ತಿಗೆದಾರ ಪ್ರಸಾದ್ ಆತ್ಮಹತ್ಯೆ ಪ್ರಕರಣದಲ್ಲೂ ಅಧಿಕಾರಿಗಳ ರಕ್ಷಣೆ
◆ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣದಲ್ಲಿ ಶಾಸಕ ಅರವಿಂದ್ ಲಿಂಬಾವಳಿ ರಕ್ಷಣೆ
CM @BSBommai ಅವರು CCM ಆಗಿದ್ದಾರೆ –
"ಕ್ರಿಮಿನಲ್ಸ್ ಕೇರ್ಟೇಕರ್ ಮಿನಿಸ್ಟರ್"— Karnataka Congress (@INCKarnataka) January 2, 2023
ಇದನ್ನೂ ಓದಿ: ಮತ್ತೊಬ್ಬ ಗುತ್ತಿಗೆದಾರ ಸಾವಿಗೆ ಶರಣು: ಸರ್ಕಾರದ ವಿರುದ್ಧ ಕಾಂಗ್ರೆಸ್ ಟೀಕಾಪ್ರಹಾರ
ಜೀವ ಅಮೂಲ್ಯವಾಗಿದೆ ಮತ್ತು ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ. ಮಾನಸಿಕ ಖಿನ್ನತೆ ಎನಿಸಿದರೆ ದಯವಿಟ್ಟು ಈ ಕೆಳಗಿನ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ ಮತ್ತು ಭಾವನಾತ್ಮಕ ಬೆಂಬಲ ಪಡೆಯಿರಿ.
ಸಹಾಯ (24-ಗಂಟೆ): 080 65000111, 080 65000222
24×7 ಸಹಾಯವಾಣಿ: 98204667260
ಭಾರತದಾದ್ಯಂತ ಸಹಾಯವಾಣಿಗಾಗಿ ಇಲ್ಲಿ ಕ್ಲಿಕ್ ಮಾಡಿ.