ನೆರೆ ವಿಚಾರವಾಗಿ ವಿರೋಧ ಪಕ್ಷಗಳು ಬೊಬ್ಬೆ ಹೊಡೆಯುವುದನ್ನು ನಿಲ್ಲಿಸಬೇಕು. ಕ್ಯಾಬಿನೆಟ್ ಮೀಟಿಂಗ್ ಆದ ಮೇಲೆ ಬೆಳಗಾವಿ ಭಾಗಕ್ಕೆ ಹೋಗಿ ಅಲ್ಲಿ ಆಗಿರುವ ಅತಿವೃಷ್ಟಿ ಸ್ಥಿತಿಗತಿಯನ್ನು ಅವಲೋಕಿಸುತ್ತೇವೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ರಸ್ತೆ, ಸೇತುವೆಗಳು ಕೊಚ್ಚಿ ಹೋಗಿದ್ದು, ದೊಡ್ಡ ಪ್ರಮಾಣ ಹಾನಿ ಆಗಿದೆ. ಇದೆಲ್ಲದರ ಮರು ನಿರ್ಮಾಣಕ್ಕೆ ಬೃಹತ್ ಅನುದಾನ ಬೇಕು. ಮತ್ತೊಂದು ಬಾರಿ ದೆಹಲಿಗೆ ಹೋಗಿ ಪರಿಹಾರ ಕೇಳುತ್ತೇನೆ. ಕೇಂದ್ರದವರು ಯಾವ ರಾಜ್ಯಕ್ಕೂ ಪರಿಹಾರ ಹಣ ಬಿಡುಗಡೆ ಮಾಡಿಲ್ಲ. ಹಾಗಂತ ನಾವು ಕಾಯುತ್ತಾ ಕುಳಿತಿಲ್ಲ. ರಾಜ್ಯ ಸರ್ಕಾರದಿಂದ ಹಣ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದರು.
ಈ ಮಧ್ಯೆ ಜೆಡಿಎಸ್, ಕಾಂಗ್ರೆಸ್ ಅತಿಯಾಗಿ ಟೀಕೆ ಮಾಡುತ್ತಿವೆ. ಕೇಂದ್ರ ಸರ್ಕಾರದಿಂದ ಇನ್ನು ನಾಲ್ಕಾರು ದಿನದಲ್ಲಿ ಹಣ ಬಿಡುಗಡೆಯಾಗಲಿದೆ. ಪ್ರಧಾನಿ ಮೋದಿ ವಿದೇಶ ಪ್ರವಾಸದಲ್ಲಿದ್ದು, ಸ್ವಲ್ಪ ಕಾಲಾವಕಾಶ ಬೇಕಿದೆ. ವಿರೋಧ ಪಕ್ಷಗಳು ಇದನ್ನೇ ಗುರಿಯಾಗಿಸಿ, ಬೊಬ್ಬೆ ಹೊಡೆಯುವುದನ್ನು ನಿಲ್ಲಿಸಬೇಕು ಎಂದರು.
ಇನ್ನು ನಳಿನ್ ಕುಮಾರ್ ಕಟೀಲ್ ಮತ್ತೆ ಯಡಿಯೂರಪ್ಪ ಮಧ್ಯೆ ಭಿನ್ನಾಭಿಪ್ರಾಯವಿದೆ, ಒಳಮುನಿಸಿದೆ ಎಂಬ ಮಾತುಗಳು ಹರಿದಾಡುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ನನ್ನ ಹಾಗೂ ನಳಿನ್ ಕುಮಾರ್ ಕಟೀಲ್ ನಡುವೆ ಗುಲಗಂಜಿಯಷ್ಟು ಭಿನಾಭಿಪ್ರಾಯ ಇಲ್ಲ. ಇಬ್ಬರು ಪರಸ್ಪರ ಸಮಾಲೋಚನೆ ಮಾಡಿ ತೀರ್ಮಾನ ಕೈಗೊಳ್ಳುತ್ತಿದ್ದೇವೆ. ಕೆಲ ಮಾಧ್ಯಮಗಳಲ್ಲಿ ಎಲ್ಲವೂ ಸರಿ ಇಲ್ಲ ಎಂಬ ವರದಿ ಮಾಡುತ್ತಿರುವುದು ಸರಿ ಅಲ್ಲ. ನಾವು ಇಬ್ಬರೂ ಸರಿಯಾಗಿಯೇ ಇದ್ದೇವೆ. ಬಿಬಿಎಂಪಿ ಚುನಾವಣೆ ವಿಚಾರದಲ್ಲಿ ಇಬ್ಬರೂ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.