ದಲಿತ ಯುವಕರಿಗೆ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ ವಿಶಾಖಪಟ್ಟಣಂನ ಪದ್ಮನಾಭಂ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮತ್ತು ಇಬ್ಬರು ಕಾನ್ಸ್ಟೆಬಲ್ಗಳನ್ನು ಅಮಾನತುಗೊಳಿಸಲಾಗಿದೆ.
ಪದ್ಮನಾಭಂ ಮಂಡಲದ ಬಂಡೆವರಪು ಗ್ರಾಮದ ಬಂಡೆವರಪು ಪಾಪು (24) ಮತ್ತು ಆತನ ಸ್ನೇಹಿತ ಗಾಲಿ ಯೆರ್ನಿಬಾಬು (24) ಎಂಬ ಇಬ್ಬರು ದಲಿತ ಸಮುದಾಯದ ಯುವಕರನ್ನು ಪೊಲೀಸರು ಕಳ್ಳತನದ ದೂರಿನ ಮೇರೆಗೆ ಠಾಣೆಗೆ ಕರೆಸಿ ಪೊಲೀಸ್ ಕಸ್ಟಡಿಯಲ್ಲಿ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದಲ್ಲದೆ ಪೊಲೀಸರು ಹಲ್ಲೆ ನಡೆಸಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿತ್ತು. ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಪೊಲೀಸ್ ಸಿಬ್ಬಂದಿ ವಿಚಾರಣೆಯ ಹೆಸರಿನಲ್ಲಿ ಸಂತ್ರಸ್ತನ ಕಾಲನ್ನು ಮುರಿದಿರುವುದು ಕಂಡುಬಂದಿದೆ ಎಂದು ವಿಶಾಖಪಟ್ಟಣಂ ನಗರ ಪೊಲೀಸರು ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಸೆ.29 ರಂದು ಇಬ್ಬರು ಯುವಕರು ತಮ್ಮ ಗ್ರಾಮದ ಹಿರಿಯರ ಮುಂದೆ ಪ್ರಬಲ ಜಾತಿಗೆ ಸೇರಿದ ಇಂದುಕುರಿ ರಾಜಬಾಬು ಎಂಬುವರ ಹುಂಜವನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಕುರಿತು ರಾಜಬಾಬು ಪದ್ಮನಾಭಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರು ಕೊಟ್ಟ ಬಗ್ಗೆ ಯಾವುದೇ ಎಫ್ಐಆರ್ ದಾಖಲಾಗಿರಲಿಲ್ಲ. ಆದರೂ ಸಬ್ ಇನ್ಸ್ಪೆಕ್ಟರ್ ಆರ್ ಮಲ್ಲೇಶ್ವರ ರಾವ್ ಅವರು ಅ.1ರ ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಪಾಪು ಮತ್ತು ಯೆರ್ನಿಬಾಬು ಅವರನ್ನು ವಿಚಾರಣೆಗೆ ಕರೆದಿದ್ದಾರೆ.
ಕೇಸ್ ದಾಖಲಿಸಿಕೊಳ್ಳದೆ ಪ್ರಕರಣ ಇತ್ಯರ್ಥಪಡಿಸಲು ಕಾನ್ಸ್ಟೆಬಲ್ಗಳಾದ ಶ್ರೀನಿವಾಸ ರಾವ್ ಮತ್ತು ಕೆ.ಸತೀಶ್ ಮೊದಲು 5 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಪಾಪು ಆರೋಪಿಸಿದ್ದಾರೆ. ಇದಲ್ಲದೆ ಶ್ರೀನಿವಾಸ್ ರಾವ್ ತಮ್ಮ ಬಲಗಾಲಿಗೆ ಒದೆ ಕೊಟ್ಟ ಕಾರಣ ಕಾಲಿನ ಎಲುಬು ಮುರಿತವಾಗಿದೆ ಎಂದು ಆರೋಪಿಸಿದ್ದಾರೆ.
ಆರೋಪಿ ಪೊಲೀಸರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ವಿಶಾಖಪಟ್ಟಣಂ ಪೊಲೀಸ್ ಆಯುಕ್ತ ಎ ರವಿಶಂಕರ್ ತಿಳಿಸಿದ್ದಾರೆ. ಕಸ್ಟಡಿ ಚಿತ್ರಹಿಂಸೆಯ ಪ್ರಾಥಮಿಕ ತನಿಖೆಯ ವೇಳೆ ಪೊಲೀಸ್ ಸಿಬ್ಬಂದಿ ಯುವಕನಿಗೆ ವಿಚಾರಣೆ ನೆಪದಲ್ಲಿ ಕಾಲು ಮುರಿದಿರುವುದು ಕಂಡು ಬಂದಿದೆ ಎಂದು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಎಸ್ಐ ಆರ್.ಮಲ್ಲೇಶ್ವರ ರಾವ್ ಮತ್ತು ಕಾನ್ಸ್ಟೆಬಲ್ಗಳಾದ ಶ್ರೀನಿವಾಸ ರಾವ್ ಮತ್ತು ಕೆ.ಸತೀಶ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಕಮಿಷನರ್ ರವಿಶಂಕರ್ ತಿಳಿಸಿದ್ದಾರೆ.
ಇದಲ್ಲದೆ ಪೊಲೀಸ್ ಸಿಬ್ಬಂದಿ ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ, ಅಧಿಕಾರ ದುರುಪಯೋಗಪಡಿಸಿಕೊಂಡರೆ ಅಥವಾ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಇದನ್ನು ಓದಿ: 2010ರಿಂದ 16 ಪತ್ರಕರ್ತರ ಮೇಲೆ ಕಠೋರ UAPA ಕಾಯ್ದೆಯಡಿ ಕೇಸ್ ದಾಖಲು: ಹೆಚ್ಚಿನವರು ಮುಸ್ಲಿಂ ಸಮುದಾಯದವರು