Homeಮುಖಪುಟ’ಮಿಶನರೀಸ್ ಆಫ್ ಚಾರಿಟಿ’ಗೆ FCRA ಲೈಸೆನ್ಸ್ ರದ್ದು ಮಾಡಿದ್ದು, ಮರುಸ್ಥಾಪಿಸಿದ್ದು…

’ಮಿಶನರೀಸ್ ಆಫ್ ಚಾರಿಟಿ’ಗೆ FCRA ಲೈಸೆನ್ಸ್ ರದ್ದು ಮಾಡಿದ್ದು, ಮರುಸ್ಥಾಪಿಸಿದ್ದು…

- Advertisement -
- Advertisement -

ಕೇಂದ್ರದ ಗೃಹ ಸಚಿವಾಲಯವು ದೇಶದ 5968 ಸರ್ಕಾರೇತರ ಸಂಸ್ಥೆ(ಎನ್‌ಜಿಓ)ಗಳ, ಅದರಲ್ಲೂ ವಿಶೇಷವಾಗಿ ಮದರ್ ತೆರೇಸಾ ಅವರ ’ಮಿಶನರೀಸ್ ಆಫ್ ಚಾರಿಟಿ’ ಸಂಸ್ಥೆಯ ವಿದೇಶಿ ದೇಣಿಗೆ ಲೈಸೆನ್ಸನ್ನು ರದ್ದು ಮಾಡಿದ ಸುದ್ದಿಯೊಂದಿಗೆ 2022ನೇ ವರ್ಷ ಆರಂಭವಾಯಿತು.

ಇವುಗಳಲ್ಲಿ ಅನೇಕವು ದಾನಧರ್ಮ (ಸೇವಾ ಕಾರ್ಯ – ಚಾರಿಟಿ), ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಸಂಸ್ಥೆಗಳು. ಐಐಟಿ ದೆಹಲಿ, ಜಾಮಿಯಾ ಮಿಲಿಯ ಇಸ್ಲಾಮಿಯಾ, ನೆಹರೂ ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರರಿ, ಆಕ್ಸ್‌ಫ್ಯಾಮ್ ಇಂಡಿಯ, ಇಂಡಿಯ ಇಸ್ಲಾಮಿಕ್ ಕಲ್ಚರಲ್ ಸೆಂಟರ್, ಇಂಡಿಯ ಹ್ಯಾಬಿಟೆಟ್ ಸೆಂಟರ್ ಹಾಗೂ ಲೇಡಿ ಶ್ರೀರಾಮ್ ಮಹಿಳಾ ಕಾಲೇಜು… ಹೀಗೆ ಸಾವಿರಾರು ಇತರ ಸಂಘಟನೆಗಳು ಇದರಲ್ಲಿ ಸೇರಿವೆ.

ವಿದೇಶಿ ದೇಣಿಗೆ ಸ್ವೀಕರಿಸುವ ಪರವಾನಗಿಯನ್ನು ರದ್ದು ಮಾಡಿರುವುದರಲ್ಲಿ ಸಾಂವಿಧಾನಿಕ ಪರಿಣಾಮಗಳಿವೆ. ಸಂಘಸಂಸ್ಥೆಗಳನ್ನು ಸ್ಥಾಪಿಸುವ ಹಕ್ಕನ್ನು ನಮ್ಮ ಸಂವಿಧಾನ ಮಾನ್ಯ ಮಾಡಿದೆ. ಒಂದು ಸಂಸ್ಥೆ ಮಾಡಬಯಸುವ ಕೆಲಸಗಳಿಗಾಗಿ ಹಣಕಾಸಿನ ಸಂಪನ್ಮೂಲಗಳನ್ನು ದೊರಕಿಸಿಕೊಳ್ಳುವುದೂ ಈ ಹಕ್ಕಿನ ಒಂದು ಮುಖ್ಯ ಭಾಗವಾಗಿದೆ. ಸಂಘಟನೆಯ ಹಣಕಾಸಿನ ಸಂಪನ್ಮೂಲಗಳನ್ನು ನಿರ್ಬಂಧಿಸಿದರೆ ಸಂಘಟನೆ ಕಟ್ಟಿಕೊಳ್ಳುವ ಹಕ್ಕಿಗೆ ಅರ್ಥವೇ ಇಲ್ಲವಾಗುತ್ತದೆ.

’ಮಾನವ ಹಕ್ಕುಗಳನ್ನು ಮತ್ತು ಮೂಲಭೂತ ಸ್ವಾತಂತ್ರ್ಯಗಳನ್ನು ಶಾಂತಿಯುತ ವಿಧಾನಗಳ ಮೂಲಕ ಪ್ರೋತ್ಸಾಹಿಸುವ, ರಕ್ಷಣೆ ಮಾಡುವ ಸ್ಪಷ್ಟ ಉದ್ದೇಶಕೊಸ್ಕರ ಸಂಪನ್ಮೂಲಗಳನ್ನು ಕೋರುವ, ಪಡೆಯುವ ಹಾಗೂ ಬಳಕೆ ಮಾಡುವ’ ಹಕ್ಕು ವ್ಯಕ್ತಿಗಳಿಗೂ ಸಂಘಟನೆಗಳಿಗೂ ಇದೆ ಎಂಬುದಾಗಿ ವಿಶ್ವಸಂಸ್ಥೆಯ ’ಮಾನವ ಹಕ್ಕುಗಳ ಸಂರಕ್ಷಕರ ಘೋಷಣೆ’ಯ ಆರ್ಟಿಕಲ್ 13 ಘೋಷಿಸುತ್ತದೆ. ವಿದೇಶಗಳಿಂದ ಹಣಕಾಸು ಪಡೆಯುವ ಹಕ್ಕನ್ನು ’ರಾಷ್ಟ್ರೀಯ ಸಾರ್ವಭೌಮತೆ’ ಮುಂತಾದ ಸಾಂವಿಧಾನಿಕವಾಗಿ ಮಾನ್ಯ ಮಾಡಲ್ಪಟ್ಟ ಕಾರಣಗಳಿಗಾಗಿ ನ್ಯಾಯಸಮ್ಮತವಾದ ನಿಯಂತ್ರಣಗಳಿಗೆ ಒಳಪಡಿಸುವುದು ತಪ್ಪಲ್ಲವಾದರೂ, ಅದು ಈ ಹಕ್ಕಿನ ಬೇಕಾಬಿಟ್ಟಿ ನಿರ್ಬಂಧವಾಗಕೂಡದು.

ಅಂತರರಾಷ್ಟ್ರೀಯವಾಗಿ ಗೌರವಿಸಲ್ಪಡುವ ’ಮಿಶನರೀಸ್ ಆಫ್ ಚಾರಿಟಿ’ಯ ಲೈಸೆನ್ಸನ್ನು ರದ್ದುಪಡಿಸಲು ಅದರ ’ಒಂದು ಕೇಂದ್ರದ ನಿರ್ದೇಶಕರು ಮತಾಂತರ ಕೆಲಸದಲ್ಲಿ ನಿರತರಾಗಿದ್ದಾರೆ’ ಎಂಬ ’ಪ್ರತಿಕೂಲ ಮಾಹಿತಿ’ ಸರ್ಕಾರಕ್ಕೆ ಬಂದಿದ್ದು ಕಾರಣ ಎಂದು ಮಾಧ್ಯಮ ವರದಿಗಳು ತಿಳಿಸುತ್ತವೆ. ಈ ಆರೋಪದ ಸತ್ಯಾಸತ್ಯತೆ ಒತ್ತಟ್ಟಿಗಿರಲಿ; ದೇಶಾದ್ಯಂತ 60ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿರುವ ಈ ಸಂಸ್ಥೆಯ ಪರವಾನಗಿಯನ್ನು ರದ್ದುಪಡಿಸಿದ್ದನ್ನು ಸಂವಿಧಾನದ ಪ್ರಕಾರ ಸಂಘ ಸ್ಥಾಪಿಸುವ ಅದರ ಹಕ್ಕಿನ ಮೇಲಿನ ’ನ್ಯಾಯಸಮ್ಮತವಾದ ನಿರ್ಬಂಧ’ ಎಂಬುದಾಗಿ ಸಮರ್ಥಿಸಲು ಸಾಧ್ಯವಿಲ್ಲ.

ಭಾರತ ಸರ್ಕಾರದ ಈ ಕ್ರಮದ ವಿರುದ್ಧ ಅಂತಾರಾಷ್ಟ್ರೀಯವಾಗಿ ಅನೇಕ ಪ್ರತಿಕೂಲ ಪ್ರತಿಕ್ರಿಯೆಗಳು ಬಂದವು; ಆ ಪೈಕಿ ಬ್ರಿಟಿಷ್ ಸಂಸತ್ತಿನಲ್ಲಿ ಬಂದ ತೀಕ್ಷ್ಣ ವಿಮರ್ಶೆಯೂ ಒಂದು. ಬಹುಶಃ ಗೃಹ ಸಚಿವಾಲಯವು ತನ್ನ ಕ್ರಮವನ್ನು ತಣ್ಣಗೆ ಹಿಂತೆಗೆದುಕೊಂಡು, ಮಿಶನರೀಸ್ ಆಫ್ ಚಾರಿಟಿಯ ಪರವಾನಗಿಯನ್ನು ಮರುಸ್ಥಾಪಿಸಲು ಇದೂ ಕಾರಣವಿರಬೇಕು. ಇತರ ಸಂಸ್ಥೆಗಳ ಲೈಸೆನ್ಸನ್ನು ಹಿಂದಿರುಗಿಸದಿರುವ ತನ್ನ ನಿಲುವನ್ನು ಕೂಡ ಸಚಿವಾಲಯವು ಮರುವಿಮರ್ಶಿಸಲೆಂದು ಆಶಿಸೋಣ.

ಗೃಹ ಸಚಿವಾಲಯವು ಸೇವಾ ಕಾರ್ಯ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಗುರಿ ಮಾಡಿರುವುದು ಬಹಳ ಕಳವಳದ ವಿಷಯವಾಗಿದೆ. ಮಿಶನರೀಸ್ ಆಫ್ ಚಾರಿಟೀಸ್ ಸಂಸ್ಥೆಯ ಲೈಸೆನ್ಸನ್ನು ರದ್ದು ಮಾಡುವ ಮೂಲಕ ಗೃಹ ಸಚಿವಾಲಯವು ವಸತಿರಹಿತರು, ವಯೋವೃದ್ಧರು, ಕುಷ್ಠ ರೋಗಿಗಳು ಹಾಗೂ ಮರಣಾಸನ್ನ ವ್ಯಕ್ತಿಗಳಂತಹ ’ಬಡವರಲ್ಲಿ ಬಡವ’ರಾದ ನಿರ್ಗತಿಕರ ಸೇವೆಯ ವಿರುದ್ಧ ಖಡ್ಗ ಝಳಪಿಸಿದಂತಾಗಿದೆ. ಇಂಡಿಯ ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನ ಉದ್ದೇಶ ’ಇಸ್ಲಾಂ ಧರ್ಮದ ಸಹಿಷ್ಣುತೆ, ಉದಾರತೆ, ಪ್ರಗತಿಪರತೆ ಮತ್ತು ವೈಚಾರಿಕತೆಯ ಧೋರಣೆಯನ್ನು ಪ್ರೋತ್ಸಾಹಿಸುವುದು’, ’ಈ ದೇಶದ ಜನರ ನಡುವೆ ಪರಸ್ಪರ ಸದ್ಭಾವನೆ ಮತ್ತು ಸೌಹಾರ್ದತೆಯನ್ನು ಉತ್ತೇಜಿಸುವುದು’. ನೆಹರೂ ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರರಿಯು ವಸಾಹತು ಮತ್ತು ಆಧುನಿಕ ಭಾರತ ಕುರಿತ ಸಂಶೋಧಕರ ಪಾಲಿಗೆ ಶ್ರೇಷ್ಠ ಆಕರ ಸಂಸ್ಥೆಯಾಗಿದೆ.

ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸೇವಾಕ್ಷೇತ್ರಗಳಲ್ಲಿ ಕಾರ್ಯನಿರತವಾಗಿರುವ ಈ ಸಂಸ್ಥೆಗಳನ್ನು ಗುರಿ ಮಾಡುವ ಮೂಲಕ ಗೃಹ ಸಚಿವಾಲಯವು ಭಾರತವನ್ನು ಅಕ್ಷರಶಃ ಬಡವಾಗಿಸುತ್ತಿದೆ; ಈ ಮಾತು ಒಂದು ರೂಪಕವಾಗಿಯೂ ನಿಜ. ಭಾರತದ ಪ್ರಭುತ್ವವು ಯಾವತ್ತೂ ಒಂದು ನಿಜವಾದ ಕಲ್ಯಾಣ ರಾಜ್ಯವಾಗದೆ ಇದ್ದ ಕಾರಣ ಅತ್ಯಂತ ಸಂಕಷ್ಟಕ್ಕೆ ಒಳಗಾಗಿರುವವರಿಗೆ ನೆರವಿನ ಹಸ್ತ ಚಾಚುವ ಕೆಲಸವನ್ನು ಸೇವಾ ಸಂಸ್ಥೆಗಳೇ ಚರಿತ್ರೆಯುದ್ದಕ್ಕೂ ಮಾಡುತ್ತ ಬಂದಿವೆ. ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಬಿಕ್ಕಟ್ಟು ನಿರ್ವಹಣೆಯ ಮುಂಚೂಣಿಯಲ್ಲಿದ್ದುದು ಮುಸ್ಲಿಂ ಮತ್ತು ಕ್ರೈಸ್ತ ಸೇವಾ ಸಂಸ್ಥೆಗಳೇ. ಇಂತಹ ಸೇವಾ ಕಾರ್ಯಗಳಿಗೆ ಮತ್ತಷ್ಟು ಸಂಪನ್ಮೂಲಗಳನ್ನು ಒದಗಿಸಬೇಕೇ ಹೊರತು ಅವರ ಬಳಿ ಇದ್ದುದನ್ನೂ ಇಲ್ಲದಂತೆ ಮಾಡಬಾರದು. ವಾಸ್ತವವಾಗಿ ಮೊದಲ ಕೊರೊನಾ ಅಲೆಯಲ್ಲಿ ಪೂರ್ವಸಿದ್ಧತೆ ಇಲ್ಲದೆ ಅವೈಜ್ಞಾನಿಕವಾಗಿ ಲಾಕ್‌ಡೌನ್ ಮಾಡಿದಾಗ ಬಡಜನರು ದೊಡ್ಡ ಸಂಖ್ಯೆಯಲ್ಲಿ ಹಸಿವಿನಿಂದ ಸಾಯದಂತೆ ತಡೆದಿದ್ದು ಜನಸಾಮಾನ್ಯರ ಮತ್ತು ಸಂಘಟನೆಗಳ ಸೇವಾಕಾರ್ಯಗಳೇ. ಸಾವಿರಾರು ಮಂದಿ ಸಾಮಾನ್ಯ ವ್ಯಕ್ತಿಗಳು ಹಾಗೂ ಸಂಘಟನೆಗಳು ತೋರ್ಪಡಿಸಿದ ಅಮೋಘವಾದ ಸೇವಾ ಸ್ಫೂರ್ತಿಯಿಂದಾಗಿಯೇ ಭಾರತವು ಪೂರ್ಣ ಪ್ರಮಾಣದ ಬಿಕ್ಕಟ್ಟನ್ನು ಎದುರಿಸದೆ ಉಳಿದುಕೊಂಡಿತು ಎಂಬುದನ್ನು ಭಾರತ ಸರ್ಕಾರ ಅರ್ಥಮಾಡಿಕೊಳ್ಳಬೇಕಿದೆ.

ಇಂಡಿಯಾ ಇಸ್ಲಾಮಿಕ್ ಸೆಂಟರ್‌ಅನ್ನು ಗುರಿ ಮಾಡಿರುವುದೂ ಸಹ ಇಂಥದ್ದೇ ದೂರದೃಷ್ಟಿ ರಹಿತ ನಡೆಯಾಗಿದೆ. ಇಸ್ಲಾಮನ್ನು ಪ್ರಗತಿಪರವಾಗಿ ವ್ಯಾಖ್ಯಾನಿಸುವ ಗುರಿ ಹೊಂದಿರುವ ಈ ಪ್ರಗತಿಪರ ಗುಂಪಿಗೆ ತನ್ನ ಚಟುವಟಿಕೆಗಳನ್ನು ನಡೆಸಲು ಅಗತ್ಯವಿರುವ ಹಣಕಾಸನ್ನು ಒಗ್ಗೂಡಿಸಿಕೊಳ್ಳುವ ಹಕ್ಕನ್ನು ನಿರಾಕರಿಸಲಾಗಿದೆ. ಇಸ್ಲಾಮಿನ ಒಳಗಿನಿಂದಲೇ ಪ್ರಗತಿಪರ ಅಭಿಪ್ರಾಯ ರೂಪಿಸುವ ಒಂದು ಗುಂಪನ್ನು ಬಾಯಿ ಮುಚ್ಚಿಸುವ ಪ್ರಯತ್ನ ಇದಾಗಿದೆ. ನೆಹರೂ ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರರಿಯನ್ನು ಗುರಿ ಮಾಡಿರುವುದು ಒಂದು ಜನಸಮುದಾಯದ ಬದುಕಿನಲ್ಲಿ ಚರಿತ್ರೆಯ ಪಾತ್ರವನ್ನು ಹಾಗೂ ಚರಿತ್ರೆಯ ಬಗೆಗಿನ ಸಂಶೋಧನೆಗೆ ಉತ್ತೇಜನ ನೀಡುವುದರ ಮಹತ್ವವನ್ನು ಅರ್ಥ ಮಾಡಿಕೊಳ್ಳಲಾರದ ಸಂಕುಚಿತತೆಯಾಗಿದೆ.

ಯಾವುದೇ ರೂಪದ ವಿದೇಶಿ ನೆರವು ಆ ದೇಶದ ಅಜೆಂಡಾವನ್ನು ಈಡೇರಿಸುವುದರಿಂದ ಅದು ಒಳ್ಳೆಯದಲ್ಲ ಎಂದು ರ್‍ಯಾಡಿಕಲ್ ಬದಿಯ ಹಲವು ಗುಂಪುಗಳು ವಾದಿಸಬಹುದು. ಇದಕ್ಕೆ ಎರಡು ರೀತಿಯ ಪ್ರತಿಕ್ರಿಯೆಗಳನ್ನು ನೀಡಬಹುದು.

ಮೊದಲನೆಯದಾಗಿ, ವಿದೇಶಿ ನೆರವನ್ನು ನಿರ್ಬಂಧಿಸುವುದು ಸಾಂವಿಧಾನಿಕ ನೆಲೆಯಲ್ಲಿರಬೇಕೇ ಹೊರತು ’ಅಜೆಂಡಾವನ್ನು ನಿಯಂತ್ರಿಸುವುದು’ ಮುಂತಾದ ಬರಿಯ ಊಹೆ-ಆತಂಕಗಳ ನೆಲೆಯಲ್ಲಲ್ಲ. ಆಧಾರರಹಿತ ಪೂರ್ವಗ್ರಹಗಳು ಮತ್ತು ಪಕ್ಷಪಾತಿ ಧೋರಣೆಗಳ ಕಾರಣಕ್ಕೆ (ಒಂದು ಕೇಂದ್ರದಲ್ಲಿ ಮತಾಂತರ ನಡೆಯುತ್ತಿದೆಯೆಂಬ ಆರೋಪದ ಮೇಲೆ ಮಿಶನರೀಸ್ ಆಫ್ ಚಾರಿಟೀಸ್‌ನ ಸಂಸ್ಥೆಯ ವಿರುದ್ಧ ಮಾಡಿದಂತೆ) ಹಣಕಾಸನ್ನು ನಿರಾಕರಿಸಿದರೆ ಅದು ಅಸಾಂವಿಧಾನಿಕವಾಗುತ್ತದೆ. ಇಂಥ ಯಾವುದೇ ನಿಷೇಧದ ಕಾರಣವು ಆರ್ಟಿಕಲ್ 19(4)ರಲ್ಲಿ ಹೇಳಿರುವ ’ನ್ಯಾಯಸಮ್ಮತವಾದ ನಿರ್ಬಂಧ’ದ ವ್ಯಾಪ್ತಿಯೊಳಗಿರಬೇಕು.

ಎರಡನೆಯದಾಗಿ, ಭಾರತದಲ್ಲಿ ಒಂದು ಜಾತ್ಯತೀತ/ಧರ್ಮನಿರಪೇಕ್ಷ ಸೇವಾ ಪರಂಪರೆ ಉತ್ತಮವಾಗಿ ಬೆಳೆದೇ ಇಲ್ಲ. ಇಲ್ಲಿ ಚಾರಿಟಿ ಎನ್ನುವುದು ಧರ್ಮ ಮತ್ತು ಜಾತಿಯನ್ನು ಅವಲಂಬಿಸಿದೆ. ಈಗಲೂ ಅತಿ ಹೆಚ್ಚಿನ ದೇಣಿಗೆಗಳು ದೇವಸ್ಥಾನಗಳಿಗೆ ಹರಿದುಬರುತ್ತವೆ; ’ಸಾಂಸ್ಕೃತಿಕ’, ’ಶೈಕ್ಷಣಿಕ’ ಅಥವಾ ’ಸೇವಾಸಂಸ್ಥೆ’ಯಲ್ಲದೆ, ಕೇವಲ ಧಾರ್ಮಿಕ ಕಾರಣಕ್ಕೆ ದೇಣಿಗೆ ಪಡೆಯುವುದರಲ್ಲಿ ತಿರುಪತಿ ದೇವಸ್ಥಾನವು ಮೊದಲನೆಯದಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ಭಾರತದಲ್ಲಿ ’ಸಾರ್ವಜನಿಕ ಸಾಕ್ಷಿಪ್ರಜ್ಞೆ’ ಇಲ್ಲದಿರುವುದರ ಬಗ್ಗೆ ವ್ಯಥೆಪಟ್ಟಿದ್ದರು; ’ಯಾವುದೇ ತಪ್ಪಿನಿಂದ ಸಂಕಷ್ಟಕ್ಕೆ ಒಳಗಾಗುವವರು ಯಾರು ಬೇಕಾದರೂ ಆಗಿರಲಿ, ಪ್ರತಿಯೊಂದು ತಪ್ಪಿನ ಕುರಿತೂ ತಳಮಳಗೊಳ್ಳುವ ಸಾಕ್ಷಿಪ್ರಜ್ಞೆ’ಯನ್ನು ಅವರು ’ಸಾರ್ವಜನಿಕ ಸಾಕ್ಷಿಪ್ರಜ್ಞೆ’ ಎಂದು ಹೆಸರಿಸಿದ್ದರು. ಭಾರತದಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸೇವಾ ಚಟುವಟಿಕೆಗಳಿಗೆ ಧಾರ್ಮಿಕ ಅಥವಾ ಜಾತಿಯ ಪರಿಗಣನೆಯನ್ನು ಬದಿಗಿಟ್ಟು ಹಣಕಾಸಿನ ನೆರವು ನೀಡುವಂತಹ ’ಸಾರ್ವಜನಿಕ ಸಾಕ್ಷಿಪ್ರಜ್ಞೆ’ ಮೂಡುವವರೆಗೂ ಜಾತ್ಯತೀತ/ಧರ್ಮನಿರಪೇಕ್ಷ ಸಂಘಟನೆಗಳು ವಿದೇಶಿ ದೇಣಿಗೆಗಳತ್ತ ನೋಡದೆ ಬೇರೆ ದಾರಿಯಿರುವುದಿಲ್ಲ.

ಅನುವಾದ: ಸಿರಿಮನೆ ನಾಗರಾಜ್

ಅರವಿಂದ್ ನಾರಾಯಣ್

ಅರವಿಂದ್ ನಾರಾಯಣ್
ಸಂವಿಧಾನ ತಜ್ಞರು, ಆಲ್ಟರ್‌ನೇಟಿವ್ ಲಾ ಫೋರಂನ ಸ್ಥಾಪಕ ಸದಸ್ಯರು. ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಕಾನೂನು ಹೋರಾಟಗಳ ಹಿಂದಿರುವ ವ್ಯಕ್ತಿ. ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಕೋಮು ಸಂಘರ್ಷಗಳ ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನು ನೆರವು ಒದಗಿಸುತ್ತಾ ಬಂದಿದ್ದಾರೆ.


ಇದನ್ನೂ ಓದಿ: ದ್ವೇಷ ಭಾಷಣ ಕೇಸ್: ’ನೀವೆಲ್ಲರೂ ಸಾಯುತ್ತೀರಿ’ ಎಂದು ಪೊಲೀಸರಿಗೆ ಯತಿ ನರಸಿಂಗಾನಂದ ಬೆದರಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಂತರ್ ಮಂತರ್ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕೇಜ್ರಿವಾಲ್ ಭೇಟಿ

ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ...

E20 ಪೆಟ್ರೋಲ್ ಪ್ರಕರಣ : ‘ಗ್ರ್ಯಾಂಡ್ ವಿಟಾರಾ’ ಕಾರು ಬದಲಾಯಿಸಿ ಕೊಡಲು ಮಾರುತಿ ಸುಝುಕಿಗೆ ಗ್ರಾಹಕ ನ್ಯಾಯಾಲಯ ಆದೇಶ

ಛತ್ತೀಸ್‌ಗಢದ ರಾಯ್‌ಪುರದ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು (ಡಿಸಿಡಿಆರ್‌ಸಿ), E20 ಇಂಧನ (ಪೆಟ್ರೋಲ್) ಬಳಕೆಯಿಂದಾಗಿ ಕಾರು ಕೆಟ್ಟುಹೋಗಿದೆ ಎಂದು ಆರೋಪಿಸಿದ ವ್ಯಕ್ತಿಗೆ ಹೊಸ 'ಗ್ರಾಂಡ್ ವಿಟಾರಾ' ಕಾರನ್ನು ನೀಡುವಂತೆ ಕಾರು ತಯಾರಿಕಾ...

ಸಿಜೆಪಿ ಶಾಂತಿಯುತ ಪ್ರತಿಭಟನೆಗೆ ನಿರಂತರ ಪೊಲೀಸ್ ಕಣ್ಗಾವಲು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಜಿರಳೆ ಜನತಾ ಪಕ್ಷ (ಸಿಜೆಪಿ) ಆಯೋಜಿಸಿರುವ ಶಾಂತಿಯುತ ಧರಣಿ ಮತ್ತು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವ ನಾಗರಿಕರ ಮೇಲೆ ದೆಹಲಿ ಪೊಲೀಸರು ನಿರಂತರ ಮತ್ತು ವ್ಯಾಪಕ ಕಣ್ಗಾವಲು...

IAS ಆಗುವ ಮುನ್ನ ‘ಪರಿಪೂರ್ಣ ತಾಯಿ’ಯಾಗಿ ಎಂದ ರಾಜ್ಯಪಾಲರ ಸಲಹೆ ಪುರುಷ ಪ್ರಾಧ್ಯಾನ್ಯತೆಯ ಮುಂದುವರೆದ ಆಚರಣೆ ಅಲ್ಲವೆ?

ಇತ್ತೀಚೆಗೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು, "ಮಹಿಳೆಯರು IAS ಅಧಿಕಾರಿ ಅಥವಾ ಶಿಕ್ಷಕಿಯಾಗುವ ಕನಸು ಕಾಣುವ ಮೊದಲು 'ಪರಿಣಿತ ತಾಯಿ' ಆಗುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದರು. ಕಾನ್ಪುರದ ಛತ್ರಪತಿ...

ಹಿಂದಿನ ಮದುವೆ, ಮಗು ವಿಚಾರ ಮುಚ್ಚಿಟ್ಟಿದ್ದಕ್ಕೆ ಸಹೋದರನೊಂದಿಗಿನ ಸಂಬಂಧ ಮುರಿದುಕೊಂಡಿದ್ದ ಕಾನೂನು ವಿದ್ಯಾರ್ಥಿನಿಯನ್ನು ಇರಿದು ಕೊಂದ ತಮ್ಮ

ಬೆಂಗಳೂರು: ಮೊದಲ ಮದುವೆ ಹಾಗೂ ಮಗುವಿದ್ದ ವಿಷಯವನ್ನು ಮುಚ್ಚಿಟ್ಟು ವಂಚಿಸಿದ್ದ ಪ್ರಿಯಕರನೊಂದಿಗಿನ ಸಂಬಂಧವನ್ನು ಮುರಿದುಕೊಂಡ ಕಾರಣಕ್ಕೆ, ಆತನ ಸಹೋದರನಿಂದಲೇ ಚಾಕು ಇರಿತಕ್ಕೊಳಗಾಗಿದ್ದ ಕಾನೂನು ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ...

ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ಅಮೆರಿಕ ದಾಳಿಗೆ ಇರಾನ್‌ನಿಂದ ಪ್ರತೀಕಾರ

ಕಳೆದ ಗುರುವಾರ (ಜು.16) ಖುಜೆಸ್ತಾನ್ ಪ್ರಾಂತ್ಯದಲ್ಲಿರುವ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ವಾಯು ನೆಲೆಗಳ ಮೇಲೆ ಇರಾನ್ ಪ್ರತಿದಾಳಿ...

Lazarus To World Leaks : ಆತಂಕ ಸೃಷ್ಟಿಸಿದ ಕೂಡಂಕುಳಂ ಸೈಬರ್ ದಾಳಿಗಳು

ಭಾರತದ ಅತಿ ದೊಡ್ಡ ಪರಮಾಣು ವಿದ್ಯುತ್ ಕೇಂದ್ರವಾದ ತಮಿಳುನಾಡಿನ  ತಿರುನೆಲ್ವೇಲಿಯ ಕೂಡಂಕುಳಂ, ಕಳೆದ ಏಳು ವರ್ಷಗಳ ಅವಧಿಯಲ್ಲಿ ಎರಡು ಬಾರಿ ಪ್ರಮುಖ ಸೈಬರ್ ಭದ್ರತಾ ಆತಂಕಗಳಿಗೆ ಕೇಂದ್ರ ಬಿಂದುವಾಗಿದೆ. 2019ರ ಮೊದಲ ಘಟನೆಯು...

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ಪ್ರಶ್ನೆಗಳನ್ನು ಖರೀದಿಸಲು 5 ಲಕ್ಷ ರೂ. ಪಾವತಿಸಿದ್ದ ಲಾತೂರ್ ಕೋಚಿಂಗ್ ಮಾಲೀಕ: ನ್ಯಾಯಾಲಯಕ್ಕೆ ಸಿಬಿಐ ಮಾಹಿತಿ

ದೇಶಾದ್ಯಂತ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲಿಗೆ ತಳ್ಳಿದ ನೀಟ್ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ದಿನಕ್ಕೊಂದು ಆಘಾತಕಾರಿ ಸತ್ಯಗಳು ಹೊರಬರುತ್ತಿದ್ದು, ಇಡೀ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಈ ದಂಧೆಯ ಆಳ ಎಷ್ಟು...

ನಾನು ಸತ್ತರೂ ಪರ್ವಾಗಿಲ್ಲ, ಉಪವಾಸ ಹಿಂಪಡೆಯಲ್ಲ: ಜುಲೈ 20ರ ಸಂಸತ್ ಚಲೋಗೆ ವಾಂಗ್‌ಚುಕ್ ಕರೆ

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿನ ಸರಣಿ ಪರೀಕ್ಷಾ ಅಕ್ರಮ ಹಾಗೂ ನೀಟ್ (NEET) ಹಗರಣದ ವಿರುದ್ಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ತಕ್ಷಣವೇ...

ಉತ್ತರ ಪ್ರದೇಶ : ಮೊಹಮ್ಮದ್ ಅಲಿ ಜೌಹರ್ ವಿವಿಯ 38 ಕಟ್ಟಡಗಳನ್ನು ಕೆಡವಲು ಮುಂದಾದ ಸರ್ಕಾರ!

ಸಮಾಜವಾದಿ ಪಕ್ಷದ (ಎಸ್‌ಪಿ) ಮುಖಂಡ ಆಝಂ ಖಾನ್ ಅವರಿಗೆ ಸೇರಿದ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ 38 ಕಟ್ಟಡಗಳನ್ನು ಕೆಡವಲು ಉತ್ತರ ಪ್ರದೇಶದ ರಾಂಪುರ ನಗರಾಭಿವೃದ್ಧಿ ಪ್ರಾಧಿಕಾರ (ಆರ್‌ಡಿಎ) ಆದೇಶಿಸಿದೆ ಎಂದು ಬುಧವಾರ...