ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪಿನಂತೆ ಅಯೋಧ್ಯೆಯಲ್ಲಿ ಬಾಬರಿ ಮಸೀದಿಗೆ ಪರ್ಯಾಯವಾಗಿ ಮಸೀದಿಯ ನಿರ್ಮಾಣಕ್ಕೆ ಗಣರಾಜ್ಯೋತ್ಸವದಂದು ಕೇಂದ್ರ ಸರ್ಕಾರ ನೀಡಿರುವ ಐದು ಎಕರೆ ಭೂಮಿಯಲ್ಲಿ ಮಸೀದಿಗೆ ಅಡಿಗಲ್ಲು ಹಾಕಲಾಗುವುದು ಎಂದು ಐಐಸಿಎಫ್ ಟ್ರಸ್ಟ್ನ ಸದಸ್ಯರು ತಿಳಿಸಿದ್ದಾರೆ.
ಮಸೀದಿಯ ನೀಲನಕ್ಷೆಯನ್ನು ಈ ಶನಿವಾರ (ಡಿ.19) ಅನಾವರಣಗೊಳಿಸಲಾಗುವುದು ಎಂದು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಮಾಹಿತಿ ನೀಡಿದೆ.
“ಏಳು ದಶಕಗಳ ಹಿಂದೆ ನಮ್ಮ ಸಂವಿಧಾನವು ಜಾರಿಗೆ ಬಂದಿದ್ದು ಅಯೋಧ್ಯೆ ಮಸೀದಿಗೆ ಅಡಿಪಾಯ ಹಾಕಲು ಟ್ರಸ್ಟ್ ಜನವರಿ 26 ರನ್ನು ಆಯ್ಕೆ ಮಾಡಿದೆ. ನಮ್ಮ ಸಂವಿಧಾನವು ಬಹುತ್ವವನ್ನು ಆಧರಿಸಿದೆ, ಇದು ನಮ್ಮ ಮಸೀದಿ ಯೋಜನೆಯ ಪ್ರಮುಖ ಅಂಶವಾಗಿದೆ ”ಎಂದು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಕಾರ್ಯದರ್ಶಿ ಅಥರ್ ಹುಸೇನ್ ಹೇಳಿದ್ದಾರೆ.
ಇದನ್ನೂ ಓದಿ: ಡಿಸೆಂಬರ್ ಚಳಿಯ ಒಂದು ದಿನ ಬಾಬರಿ ಮಸೀದಿ ಸ್ವಯಂ ಸ್ಫೋಟಗೊಂಡಿತು: ತೀರ್ಪು ವಿರುದ್ದ ಟ್ವಿಟ್ಟರ್ನಲ್ಲಿ ಆಕ್ರೋಶ
ಮಸೀದಿ ನಿರ್ಮಿಸಲು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಅನ್ನು ಆರು ತಿಂಗಳ ಹಿಂದೆ ಸುನ್ನಿ ವಕ್ಫ್ ಬೋರ್ಡ್ ಸ್ಥಾಪಿಸಿತ್ತು.
ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ, ಸಮುದಾಯ ಅಡಿಗೆಮನೆ ಮತ್ತು ಗ್ರಂಥಾಲಯವನ್ನು ಒಳಗೊಂಡಿರುವ ಮಸೀದಿ ಸಂಕೀರ್ಣದ ನೀಲನಕ್ಷೆಯನ್ನು ಐಐಸಿಎಫ್ ಡಿಸೆಂಬರ್ 19 ರಂದು ಅನಾವರಣಗೊಳಿಸಲಿದೆ. ಈ ಮಸೀದಿ ನಿರ್ಮಾಣದ ಯೋಜನೆಯನ್ನು ಅದರ ಮುಖ್ಯ ವಾಸ್ತುಶಿಲ್ಪಿ ಪ್ರೊಫೆಸರ್ ಎಸ್.ಎಂ.ಅಖ್ತರ್ ಈಗಾಗಲೇ ಅಂತಿಮಗೊಳಿಸಿದ್ದಾರೆ.
“ಹೊಸ ಮಸೀದಿಯಲ್ಲಿ ಒಂದು ಬಾರಿಗೆ 2,000 ಜನರು ನಮಾಜ್ ಮಾಡಬಹುದು. ಮಸೀದಿಯ ರಚನೆಯು ವೃತ್ತಾಕಾರದಲ್ಲಿರುತ್ತದೆ” ಎಂದು ಅಖ್ತರ್ ಪಿಟಿಐಗೆ ತಿಳಿಸಿದ್ದಾರೆ.
ಕಳೆದ ವರ್ಷ ನವೆಂಬರ್ 9 ರಂದು ಸುಪ್ರೀಂಕೋರ್ಟ್ ಅಯೋಧ್ಯೆಯ ವಿವಾದಿತ ರಾಮ ಜನ್ಮಭೂಮಿ-ಬಾಬರಿ ಮಸೀದಿ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನಾಂದಿ ಹಾಡಿತ್ತು. ಬಾಬರಿ ಮಸೀದಿ ಪರವಿದ್ದ ಸುನ್ನಿ ವಕ್ಫ್ ಬೋರ್ಡ್ಗೆ ಕಟ್ಟಡ ನಿರ್ಮಿಸಲು ಪರ್ಯಾಯವಾಗಿ ಐದು ಎಕರೆ ಜಾಗವನ್ನು ನೀಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿತು.
ಸದ್ಯ ಅಯೋಧ್ಯೆಯ ಸೊಹವಾಲ್ ತಹಸಿಲ್ನ ಧನ್ನಿಪುರ ಗ್ರಾಮದಲ್ಲಿ ರಾಜ್ಯ ಸರ್ಕಾರವು ಐದು ಎಕರೆ ಭೂಮಿಯನ್ನು ಮಸೀದಿಗಾಗಿ ಮಂಜೂರು ಮಾಡಿದೆ.
“ಹೊಸ ಮಸೀದಿ ಬಾಬರಿ ಮಸೀದಿಗಿಂತ ದೊಡ್ಡದಾಗಿರುತ್ತದೆ. ಕಟ್ಟಡದಲ್ಲಿ ಆಸ್ಪತ್ರೆಯು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. 1,400 ವರ್ಷಗಳ ಹಿಂದೆ ಪ್ರವಾದಿ ತನ್ನ ಕೊನೆಯ ಧರ್ಮೋಪದೇಶದಲ್ಲಿ ಬೋಧಿಸಿದಂತೆ ಇಸ್ಲಾಂ ಧರ್ಮದ ನಿಜವಾದ ಮಾನವೀಯತೆಯ ಸೇವೆ ಸಲ್ಲಿಸುತ್ತದೆ ”ಎಂದು ಅಖ್ತರ್ ಹೇಳಿದ್ದಾರೆ.
ಇದನ್ನೂ ಓದಿ: ರಾಮ ಸಮಾಜವಾದಿ ಪಕ್ಷಕ್ಕೆ ಸೇರಿದವ, ನಾವು ರಾಮ ಭಕ್ತರು: ಅಖಿಲೇಶ್ ಯಾದವ್