ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಬೆಂಗಾವಲು ವಾಹನದ ಮೇಲೆ ನಡೆದ ದಾಳಿಯ ಹಿನ್ನಲೆಯಲ್ಲಿ, ಪಶ್ಚಿಮ ಬಂಗಾಳ ಮತ್ತು ಕೇಂದ್ರ ಸರ್ಕಾರದ ನಡುವಿನ ಮುಸುಕಿನ ಗುದ್ದಾಟ ಮತ್ತಷ್ಟು ತೀವ್ರವಾಗಿದೆ. ಪೊಲೀಸ್ ಮಹಾ ನಿರ್ದೇಶಕ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವಾಲಯ ವಿಚಾರಣೆಗೆ ಹಾಜರಾಗಬೇಕು ಎಂದು 2 ಬಾರಿ ನೋಟಿಸ್ ನೀಡಿತ್ತು. ಈಗ ಮೂವರು ಐಪಿಎಸ್ ಅಧಿಕಾರಿಗಳಿಗೆ ವರ್ಗಾವಣೆ ಮಾಡಿ ಆದೇಶಿಸಿದೆ.
ಆದರೆ, ಪಶ್ಚಿಮ ಬಂಗಳ ಸರ್ಕಾರ ಯಾವುದೇ ಅಧಿಕಾರಿ ದೆಹಲಿಗೆ ತೆರಳಿ ಗೃಹ ಸಚಿವಾಲಯದ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಈಗ ಮತ್ತೆ ಗೃಹ ಸಚಿವಾಲಯ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಡಿಜಿಪಿಗೆ ಹೊಸ ಪತ್ರವನ್ನು ಕಳುಹಿಸಿದ್ದು, ಅವರು ನಿಯಮಗಳನ್ನು ಪಾಲಿಸುವಲ್ಲಿ ವಿಫಲರಾಗಿದ್ದಾರೆ ಎಂದಿದೆ. ಜೊತೆಗೆ ಐಪಿಎಸ್ ಕೇಡರ್ ನಿಯಮಗಳ ಸೆಕ್ಷನ್ 6 (1) ಪ್ರಕಾರ – “ಯಾವುದೇ ಭಿನ್ನಾಭಿಪ್ರಾಯಗಳಿದ್ದಲ್ಲಿ , ಕೇಂದ್ರದ ನಿರ್ಧಾರವು ಮೇಲುಗೈ ಸಾಧಿಸುತ್ತದೆ” ಎಂಬ ಎಚ್ಚರಿಕೆ ನೀಡಿದೆ.
ಜೊತೆಗೆ ಐಪಿಎಸ್ ಅಧಿಕಾರಿಗಳನ್ನ ಕೇಂದ್ರ ಸರ್ಕಾರ ದೆಹಲಿಗೆ ವರ್ಗಾವಣೆ ಮಾಡಿದೆ. ರಾಜೀವ್ ಮಿಶ್ರಾ ಮತ್ತು ಪ್ರವೀಣ್ ತ್ರಿಪಾಠಿ ಎಂಬುವರಿಗೆ 5 ವರ್ಷಗಳ ಕಾಲಾವಧಿಗೆ, ಭೋಲನಾಥ್ ಪಾಂಡೆಯವರಿಗೆ 4 ವರ್ಷಗಳ ಕಾಲಾವಧಿಗೆ ವರ್ಗಾವಣೆ ಮಾಡಲಾಗಿದೆ.
ಇದನ್ನೂ ಓದಿ: ಜೆ.ಪಿ ನಡ್ಡಾ ಕಾರಿನ ಮೇಲೆ ದಾಳಿ: ವಿಚಾರಣೆಗೆ ಅಧಿಕಾರಿಗಳನ್ನು ದೆಹಲಿಗೆ ಕಳುಹಿಸುವುದಿಲ್ಲ ಎಂದ ಪಶ್ಚಿಮ ಬಂಗಾಳ
ಇದಕ್ಕೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇದು ಐಪಿಎಸ್ ಕೇಡರ್ ರೂಲ್ 1954 ರ ತುರ್ತು ನಿಬಂಧನೆಯ ದುರ್ಬಳಕೆಯಾಗಿದೆ ಎಂದಿದ್ದಾರೆ.
GoI’s order of central deputation for the 3 serving IPS officers of West Bengal despite the State’s objection is a colourable exercise of power and blatant misuse of emergency provision of IPS Cadre Rule 1954. (1/3)
— Mamata Banerjee (@MamataOfficial) December 17, 2020
ಸರಣಿ ಟ್ವೀಟ್ಗಳನ್ನು ಮಾಡಿರುವ ಮಮತಾ ಬ್ಯಾನರ್ಜಿ, “ರಾಜ್ಯದ ಆಕ್ಷೇಪಣೆಯ ಹೊರತಾಗಿಯೂ ಪಶ್ಚಿಮ ಬಂಗಾಳದಲ್ಲಿ 3 ಸೇವೆ ಸಲ್ಲಿಸುತ್ತಿರುವ ಐಪಿಎಸ್ ಅಧಿಕಾರಿಗಳಿಗೆ ಕೇಂದ್ರದ ಡೆಪ್ಯುಟೇಷನ್ನ ಆದೇಶವು ಅಧಿಕಾರ ಮತ್ತು ಐಪಿಎಸ್ ಕೇಡರ್ ರೂಲ್ 1954 ರ ತುರ್ತು ನಿಬಂಧನೆಯ ದುರುಪಯೋಗವಾಗಿದೆ.” ಎಂದು ಕಿಡಿಕಾರಿದ್ದಾರೆ.
’ಪ್ರಾಕ್ಸಿ ಮೂಲಕ ರಾಜ್ಯ ಆಡಳಿತಯಂತ್ರ ನಿಯಂತ್ರಿಸಲು ಕೇಂದ್ರದ ಈ ಲಜ್ಜೆಗೆಟ್ಟ ಪ್ರಯತ್ನವನ್ನು ನಾವು ಅನುಮತಿಸುವುದಿಲ್ಲ ಎಂದಿದ್ದಾರೆ. ಪಶ್ಚಿಮ ಬಂಗಾಳವು ವಿಸ್ತರಣಾವಾದಿ ಮತ್ತು ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳ ಮುಂದೆ ಎಂದಿಗೂ ತಲೆ ಬಾಗುವುದಿಲ್ಲ’ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ‘PM-CARES’ ಖಾಸಗಿ ನಿಧಿ- ದಾಖಲೆಗಳು ಬಿಚ್ಚಿಟ್ಟ ವೈರುಧ್ಯ!, ದೇಶಕ್ಕೆ ಇಷ್ಟು ದೊಡ್ಡ ಸುಳ್ಳು ಹೇಳಿದರೇ…
We wouldn’t allow this brazen attempt by the Centre to control the State machinery by proxy! West Bengal is not going to cow-down in front of expansionist & undemocratic forces. (3/3)
— Mamata Banerjee (@MamataOfficial) December 17, 2020
ಈಗಾಗಲೇ 3 ಐಪಿಎಸ್ ಅಧಿಕಾರಿಗಳಿಗೆ, ಬಿಪಿಆರ್ಡಿ ಎಸ್ಪಿ ಆಗಿ ಭೋಲನಾಥ್ ಪಾಂಡೆ, ಎಸ್ಎಸ್ಬಿ ಡಿಐಜಿಯಾಗಿ ಪ್ರವೀಣ್ ತ್ರಿಪಾಠಿ, ಐಟಿಬಿಪಿ ಐಜಿಯಾಗಿ ರಾಜೀವ್ ಮಿಶ್ರಾ ಅವರಿಗೆ ವರ್ಗಾವಣೆ ಮಾಡಿ ಜವಾಬ್ದಾರಿ ವಹಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಈಗಾಗಲೇ ಘಟನೆ ಸಂಬಂಧ ಕೇಂದ್ರಕ್ಕೆ ವರದಿ ಸಲ್ಲಿಸಿರುವ ಬಂಗಾಳ ಸರ್ಕಾರ, ’ಜೆ.ಪಿ ನಡ್ಡಾ ಅವರಿಗೆ ಝಡ್ ಕ್ಯಾಟಗರಿ ಭದ್ರತೆ, ಬುಲೆಟ್ಫ್ರೂಫ್ ಕಾರ್, ಬೆಂಗಾವಲು ಮತ್ತು ಭದ್ರತಾ ಅಧಿಕಾರಿಗಳನ್ನೂ ನೇಮಕ ಮಾಡಲಾಗಿತ್ತು. ಅವರು ಚಲಿಸುವ ಮಾರ್ಗದಲ್ಲಿ 4 ಎಸ್ಪಿಗಳು, 8 ಡೆಪ್ಯೂಟಿ ಎಸ್ಪಿಗಳು, 14 ಇನ್ಸ್ಪೆಕ್ಟರ್ಗಳು, 70 ಸಬ್ಇನ್ಸ್ಪೆಕ್ಟರ್ಗಳು, 40 ಆರ್ಎಎಫ್ ಸಿಬ್ಬಂದಿ, 259 ಕಾನ್ಸ್ಟೆಬಲ್ಗಳು ಮತ್ತು 350 ಇತರೆ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿತ್ತು. ಭದ್ರತೆಯ ಮೇಲ್ವಿಚಾರಣೆಗೆ ಡಿಐಜಿಯನ್ನು ನಿಯೋಜಿಸಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಜೆ.ಪಿ ನಡ್ಡಾ ವಾಹನಗಳ ಜೊತೆಗೆ ಇತರೆ ವಾಹನಗಳನ್ನೂ ನಿಯೋಜಿಸಿದ ಕಾರಣ ಪರಿಸ್ಥಿತಿ ಬಿಗಡಾಯಿಸಿತು’ ಎಂದು ತಿಳಿಸಿದೆ.
ಇದನ್ನೂ ಓದಿ: ಬಿಜೆಪಿ ಕಳ್ಳರ ಪಕ್ಷ, ಅವರಿಗಿಂತ ದೊಡ್ಡ ಕಳ್ಳರು ಎಲ್ಲೂ ಇಲ್ಲ- ಮಮತಾ ಬ್ಯಾನರ್ಜಿ ವಾಗ್ದಾಳಿ