Homeಅಂಕಣಗಳುವಿಧಾನ ಪರಿಷತ್ತು ಪುಡಾರಿಗಳ ಪುನರ್ವಸತಿ ಕೇಂದ್ರವೇ?

ವಿಧಾನ ಪರಿಷತ್ತು ಪುಡಾರಿಗಳ ಪುನರ್ವಸತಿ ಕೇಂದ್ರವೇ?

- Advertisement -
- Advertisement -

ವಿಧಾನ ಪರಿಷತ್ತಿಗೆ ಹಾಲಿ ಇದ್ದ ಸದಸ್ಯರ ಅವಧಿ ಮುಗಿದಿದ್ದರಿಂದ ಅವರ ಸ್ಥಾನದಲ್ಲಿ ಹೊಸಬರನ್ನು ಚುನಾಯಿಸುವ ಸಂದರ್ಭ ಒದಗಿದೆ. ವಿಧಾನ ಪರಿಷತ್ತನ್ನು ಸಾಮಾನ್ಯವಾಗಿ ಮೇಲ್ಮನೆ ಎಂದು ಕರೆಯಲಾಗುತ್ತದೆ. ಮೇಲ್ಮನೆಯ ಕೆಲಸ ವಿಧಾನ ಸಭೆಯಲ್ಲಿ ಮಂಡಿಸಲಾಗುವ ಹಾಗೂ ಅಂಗೀಕಾರವಾಗುವ ಮಸೂದೆಗಳು ಜನಪರವಾಗಿವೆಯೇ ಇಲ್ಲವೇ ಎಂಬುದನ್ನು ಅಥವಾ ಏನಾದರೂ ದೋಷಗಳಿವೆಯೇ ಎಂಬುದನ್ನು ಪರಿಶೀಲಿಸುವುದು; ಒಂದುವೇಳೆ ಏನಾದರೂ ದೋಷಗಳು ಕಂಡುಬಂದಲ್ಲಿ ಸದರಿ ಮಸೂದೆಯನ್ನು ಪುನರ್‍ಪರಿಶೀಲನೆಗಾಗಿ ವಿಧಾನಸಭೆಗೆ ವಾಪಸ್ ಕಳಿಸಲಾಗುತ್ತದೆ. ಮೇಲ್ಮನೆಯಲ್ಲಿ ಎತ್ತಲಾದ ಎಲ್ಲಾ ಆಕ್ಷೇಪಣೆಗಳನ್ನು ಪುನಃ ಪರಿಶೀಲಿಸಿ ಮತ್ತೆ ವಿಧಾನಸಭೆಯ ಮುಂದೆ ಮಂಡಿಸಿ ಹೀಗೆ ತಿದ್ದುಪಡಿಯಾದ ಮಸೂದೆಯನ್ನು ಮತ್ತೆ ವಿಧಾನಪರಿಷತ್ತಿಗೆ ರವಾನಿಸಬೇಕು. ವಿಧಾನ ಪರಿಷತ್ತು ಈ ತಿದ್ದುಪಡಿಯಾದ ಮಸೂದೆಯನ್ನೂ ಕೂಲಂಕಷವಾಗಿ ಪರಿಶೀಲಿಸಿ ಅದಕ್ಕೆ ಒಪ್ಪಿಗೆ ಕೊಟ್ಟ ನಂತರ ಮತ್ತೆ ವಿಧಾನಸಭೆಗೆ ಕಳಿಸಲಾಗುವುದು. ಈ ಮಸೂದೆಯನ್ನು ವಿಧಾನಸಭೆ ಅಂಗೀಕರಿಸಿದ ಮೇಲೆಯೇ ಮಸೂದೆ ಶಾಸನವಾಗಿ ಪರಿವರ್ತನೆಯಾಗುವುದು. ಅದರಂತೆಯೇ, ಸರ್ಕಾರ ರೂಪಿಸುವ ಎಲ್ಲವನ್ನೂ ಪ್ರಶ್ನಿಸುವ ಅಧಿಕಾರ ಕೂಡ ಈ ಮೇಲ್ಮನೆಗೆ ಇದೆ.

ಮೇಲ್ಮನೆಯಲ್ಲಿ ಶಾಸನಸಭೆಯಿಂದ ಆರಿಸಿ ಹೋಗುವ 25 ಸದಸ್ಯರು, ಸ್ಥಳೀಯ ಸಂಸ್ಥೆಗಳಿಂದ 25, ಶಿಕ್ಷಕರ ಕ್ಷೇತ್ರದಿಂದ 7 ಮತ್ತು ಪದವೀಧರರ ಕ್ಷೇತ್ರದಿಂದ 7 ಸದಸ್ಯರು ಆಯ್ಕೆಯಾಗುತ್ತಾರೆ. ಇವರ ಜೊತೆಗೆ ಸರ್ಕಾರ (ರಾಜ್ಯಪಾಲರ ಮೂಲಕ) 11 ಮಂದಿ ಗಣ್ಯರನ್ನು ನಾಮಕರಣ ಸದಸ್ಯರನ್ನಾಗಿ ನೇಮಿಸಲಾಗುತ್ತದೆ. ಹೀಗೆ ನಮ್ಮ ವಿಧಾನ ಪರಿಷತ್ತಿನಲ್ಲಿ ಒಟ್ಟು 75 ಸದಸ್ಯ ಬಲವಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ 1/3 ಭಾಗದಷ್ಟು ಸದಸ್ಯರು ನಿವೃತ್ತಿಯಾಗಿ ಹೊಸಸದಸ್ಯರು ಆಯ್ಕೆಯಾಗಬೇಕಾಗುತ್ತದೆ. ಈಗಿನ ಚುನಾವಣೆ ಕೂಡ ಅಂಥ ಒಂದು ಪ್ರಕ್ರಿಯೆಯೇ.

ಒಟ್ಟಿನಲ್ಲಿ ಈ ಮೇಲ್ಮನೆ ವಿಧಾನಸಭೆಯ ಕಾವಲು ಸಮಿತಿಯಾಗಿ ಕೆಲಸ ಮಾಡಬೇಕು. ಈ ಕಾವಲು ಸಮಿತಿಯಲ್ಲಿ ಪಕ್ಷಾತೀತರೂ, ಗಣ್ಯರೂ, ಕಾನೂನು ಕಟ್ಟಲೆಗಳ ಜ್ಞಾನ ಇರುವವರೂ, ಶಾಸನ ಸಭೆಯ ಸದಸ್ಯರ ಮನ್ನಣೆಗೆ ಪಾತ್ರರಾದವರು ಮಾತ್ರ ಇರಬೇಕು. ಹಾಗಾದಾಗ ಮಾತ್ರ ಮೇಲ್ಮನೆಯ ಪರಿಕಲ್ಪನೆ ಸಾರ್ಥಕವಾಗುತ್ತದೆ. ರಾಜ್ಯದ ವಿಧಾನ ಪರಿಷತ್ತಿನ ರೀತಿಯಲ್ಲೇ ಕೇಂದ್ರದಲ್ಲಿ ರಾಜ್ಯಸಭೆ ಇದೆ. ಪ್ರತಿಭಾವಂತರು ಹಾಗೂ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಉತ್ತಮ ಕೊಡುಗೆ ನೀಡಬಲ್ಲವರನ್ನು ಇಂಥಾ ಸ್ಥಾನಕ್ಕೆ ಆಯ್ಕೆ ಮಾಡುತ್ತಿದ್ದರೆಂಬುದಕ್ಕೆ ಅಂಬೇಡ್ಕರ್ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿಸಿದ್ದು ಉತ್ತಮ ಉದಾಹರಣೆ. ಖ್ಯಾತ ವಿಜ್ಞಾನಿ ಡಾ.ರಾಜಾರಾಮಣ್ಣನಂಥವರೂ ಕೂಡ ರಾಜ್ಯಸಭೆ ಸದಸ್ಯರಾಗಿದ್ದರು. ಕರ್ನಾಟಕದ ಉದಾಹರಣೆ ನೋಡುವುದಾದರೂ ಕಾರ್ಮಿಕ ನಾಯಕ ಬಿವಿ ಕಕ್ಕಿಲ್ಲಾಯ, ಅಬ್ದುಲ್ ನಜೀರ್ ಸಾಬ್, ವೈಕುಂಠ ಬಾಳಿಗಾ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಬಸವರಾಜ ಕಟ್ಟೀಮನಿ ಮುಂತಾದ ಗಣ್ಯರು ಈ ಮೇಲ್ಮನೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದನ್ನು ನಾವು ಸ್ಮರಿಸಿಕೊಳ್ಳಬಹುದು. ಇದು ಇತಿಹಾಸದ ಮಾತು.
ಸ್ವಾತಂತ್ರ್ಯ ಬಂದ ಮೇಲೆ ಹತ್ತಾರು ವರ್ಷಗಳ ಕಾಲ ಇಂತಹ ಗಣ್ಯರನ್ನೇ ಆಡಳಿತ ನಡೆಸುವ ಸರ್ಕಾರಗಳು ಆಯ್ಕೆಮಾಡುತ್ತಿದ್ದವು. ನಂತರದ ದಿನಮಾನಗಳಲ್ಲಿ ಆರಂಭವಾಯಿತು ಅಧಃಪತನ. ಜಾತಿವಾರು ಆಯ್ಕೆ, ಸ್ವಜನ ಪಕ್ಷಪಾತ, ತಮ್ಮ ಪಕ್ಷದವರನ್ನೇ ಆಯ್ಕೆ ಮಾಡಿಕೊಳ್ಳುವುದು, ಚುನಾವಣೆಗಳಲ್ಲಿ ಸೋತ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮೇಲ್ಮನೆಯಲ್ಲಿ ‘ಪುನರ್‍ವಸತಿ ಕಲ್ಪಿಸುವುದು’ ಇಂದು ಎಲ್ಲ ಪಕ್ಷಗಳಲ್ಲೂ ವ್ಯಾಪಕವಾಗಿದೆ. ಕೆಲವು ಉದ್ಯಮಿಗಳ ಬಳಿ ಕೋಟ್ಯಾಂತರ ರೂಪಾಯಿ ಹಣ ಪಡೆದು ಮೇಲ್ಮನೆಯ ಸದಸ್ಯತ್ವವನ್ನು ಮಾರಾಟ ಮಾಡುವ ಅಧಮ ರಾಜಕೀಯ ನಾಯಕರು ಹುಟ್ಟಿಕೊಂಡಿದ್ದಾರೆ. ಈಗಿನ ಮೇಲ್ಮನೆಯಲ್ಲಿ 50 ವರ್ಷಗಳ ಹಿಂದಿನಂತೆ ಅರ್ಹತೆಯುಳ್ಳವರು, ವರ್ಚಸುಳ್ಳವರು, ಗಣ್ಯರು, ಪಾರ್ಲಮೆಂಟೇರಿಯನ್‍ಗಳು, ಜನರ ಗೌರವಕ್ಕೆ ಪಾತ್ರರಾದವರ ಸಂಖ್ಯೆ ವಿರಳವಾಗುತ್ತಿದೆ. ವಾಸ್ತವದಲ್ಲಿ, ಮೇಲ್ಮನೆ ಕೆಳಮನೆಯ ಮಟ್ಟಕ್ಕೇ ಇಳಿದುಬಿಟ್ಟಿದೆ.


ಮೇಲ್ಮನೆ ಈಗ ವಿಧಾನಸಭೆಯ ಕಾಲೆಳೆಯುವ, ಕುಹಕಿಗಳಿಂದ ಕೂಡಿದ ಕೂಟವಾಗಿದೆ. ಇದರ ಘನತೆ ಗೌರವಗಳು ಹಾರಿಹೋಗಿವೆ. ಮೇಲ್ಮನೆ ವಿಧಾನಸಭೆಯ ಹಿತೈಷಿಯಾಗಿದ್ದರ ಬದಲಾಗಿ, ವಿಧಾನಸಭೆಯ ಶತ್ರು ಎನಿಸಿದೆ. ವಿಧಾನಸಭೆಯ ಘನತೆಯನ್ನು ಹೆಚ್ಚಿಸುವ ಕೆಲಸ ವಿಧಾನಪರಿಷತ್ತು ಮಾಡಬೇಕು. ಕಾಲ ಕಾಲಕ್ಕೆ ರಚನಾತ್ಮಕ ಸಲಹೆಗಳನ್ನು ನೀಡಿ, ವಿಧಾನ ಸಭೆ ಸರಿಯಾದ ದಾರಿಯಲ್ಲಿ ಸಾಗಲು ನೆರವಾಗಬೇಕು.
ವಿಧಾನಸಭೆ ಜನಪರವಾಗಿ ಕೆಲಸಮಾಡಲಿಕ್ಕೂ, ಸಂವಿಧಾನದ ಆಶಯವಾದ ಬಡವ – ಬಲ್ಲಿದ ಅಂತರವನ್ನು ತಗ್ಗಿಸುವ ಸಾಧನವನ್ನಾಗಿ ಪರಿವರ್ತಿಸುವ ಕೆಲಸವನ್ನೂ ವಿಧಾನ ಪರಿಷತ್ತು ಮಾಡಬೇಕಿತ್ತು. ಸರ್ಕಾರ ನಡೆಸುವವರ ಓರೆಕೋರೆಗಳನ್ನು ತಿದ್ದಿ, ಕಾನೂನಿಗನುಸಾರ ಕೆಲಸ ಮಾಡಿಸುವ ಕಾವಲು ಸಮಿತಿಯ ಪಾತ್ರವನ್ನು ನಿರ್ವಹಿಸಬೇಕು.
ಈಗಿನ ದುರಂತವೆಂದರೆ, ಹಾಲಿ ವಿಧಾನ ಪರಿಷತ್ತಿನಲ್ಲಿ ಕ್ರಿಮಿನಲ್‍ಗಳು, ಭೂಗಳ್ಳರು, ರಿಯಲ್ ಎಸ್ಟೇಟ್ ಧಂಧೆಯವರು, ಪಕ್ಷದ ನಾಯಕರ ಆಸ್ತಿಗಳನ್ನು ಕಾಪಾಡುವ ಏಜೆಂಟರು… ಎಲ್ಲರೂ ಇದ್ದಾರೆ. ಇಂತಹ ವಿಧಾನಪರಿಷತ್ತಿನ ಅಗತ್ಯತೆ ಇದೆಯೇ?
ಕುಮಾರಸ್ವಾಮಿಯವರ ಸರ್ಕಾರದಲ್ಲಿಯಾದರೂ ಘನತೆವೆತ್ತ ಜನರನ್ನು ಪರಿಷತ್ತಿಗೆ ಆಯ್ಕೆ ಮಾಡುವ ಪರಿಪಾಠ ಆರಂಭವಾಗುತ್ತದೆಯೆಂಬ ನಿರೀಕ್ಷೆ ಹುಸಿಯಾಗಿದೆ. ವಿಧಾನ ಪರಿಷತ್ತನ್ನು ಯಾವ ಉದಾತ್ತ ದೃಷ್ಟಿಯಿಂದ ಆರಂಭಿಸಲಾಯಿತೋ ಆ ದಿನಗಳು ಮತ್ತೆ ಬರುತ್ತವೆಯೆ?
– ಎಚ್.ಎಸ್.ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...

ಕರ್ನಾಟಕದಲ್ಲಿ 2 ಗಂಟೆಗಳ ಬೃಹತ್ ಕಾರ್ಯಾಚರಣೆ: 800 ಬಾಲಕಾರ್ಮಿಕರ ರಕ್ಷಣೆ; ಬೆಂಗಳೂರಿನಲ್ಲೇ 503 ಮಕ್ಕಳು

ಬಾಲಕಾರ್ಮಿಕ ಪದ್ಧತಿಯ ವಿರುದ್ಧ ಕರ್ನಾಟಕ ಪೊಲೀಸರು ಹಾಗೂ ಕಾರ್ಮಿಕ ಇಲಾಖೆ ಶನಿವಾರ ರಾಜ್ಯಾದ್ಯಂತ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 800 ಮಕ್ಕಳನ್ನು ರಕ್ಷಿಸಲಾಗಿದೆ. ರಾಜ್ಯದ 962 ಪೊಲೀಸ್ ಠಾಣೆಗಳು ಹಾಗೂ ಘಟಕಗಳ ವ್ಯಾಪ್ತಿಯಲ್ಲಿ 16,951...

‘ದಿ ಹಿಂದೂ’, ‘ದೈನಿಕ್ ಭಾಸ್ಕರ್’ ಗಳಲ್ಲಿ ಅತ್ಯಾಚಾರ ಅಪರಾಧಿ ಗುರ್ಮೀತ್ ರಾಮ್ ರಹೀಮ್ ಸಮರ್ಥಿಸುವ ಜಾಹೀರಾತು: ಓದುಗರಲ್ಲಿ ಕ್ಷಮೆಯಾಚಿಸಿದ ‘ದಿ ಹಿಂದೂ’

ನವದೆಹಲಿ: ಇಬ್ಬರು ಮಹಿಳಾ ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರನ್ನು ಸಮರ್ಥಿಸುವ ರೀತಿಯಲ್ಲಿ ಪೂರ್ಣ ಪುಟದ ಮುಖಪುಟ ಜಾಹೀರಾತು...

ದ್ವಿ-ರಾಷ್ಟ್ರ ಪರಿಹಾರ : ಬ್ರಿಕ್ಸ್ ನಿಲುವು ಸ್ವಾಗತಿಸಿದ ಪ್ಯಾಲೆಸ್ತೀನ್

ಪ್ಯಾಲೆಸ್ತೀನ್-ಇಸ್ರೇಲ್ ವಿವಾದಕ್ಕೆ ದ್ವಿ-ರಾಷ್ಟ್ರ ಪರಿಹಾರವನ್ನು ಕಂಡುಕೊಳ್ಳುವಂತೆ ಕರೆ ನೀಡಿರುವ ಬ್ರಿಕ್ಸ್ (BRICS) ಜಂಟಿ ಘೋಷಣೆಯನ್ನು ಪ್ಯಾಲೆಸ್ತೀನ್ ವಿದೇಶಾಂಗ ಮತ್ತು ವಲಸಿಗರ ಸಚಿವಾಲಯವು ಮುಕ್ತಕಂಠದಿಂದ ಸ್ವಾಗತಿಸಿದೆ. ಬ್ರಿಕ್ಸ್‌ ಶೃಂಗಸಭೆ, ಜೆರುಸಲೆಮ್ ಸೇರಿದಂತೆ ಪ್ಯಾಲೆಸ್ತೀನಿಯರನ್ನು ಅವರದೇ ಭೂಮಿಯಿಂದ...