ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದಾರೆ ಎನ್ನುವ ಪತ್ರಿಕಾ ಪ್ರಕಟನೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಜೆಡಿಎಸ್-ಬಿಜೆಪಿ ಮೈತ್ರಿಗೆ ಜೆಡಿಎಸ್ನ ಕೆಲ ಮುಖಂಡರು ಅಸಮಾಧಾನಗೊಂಡಿದ್ದು ಸೋಮವಾರ ಬೆಂಗಳೂರಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಚಿಂತನ ಮಂಥನ ಸಭೆ ನಡೆಸುತ್ತಿದ್ದರು. ಈ ವೇಳೆ ಹೆಚ್ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರನ್ನ ಉಚ್ಚಾಟನೆ ಮಾಡಿ ಎಂಬ ಕೂಗು ಕೇಳಿ ಬಂದಿದೆ ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ಇದೀಗ ಉಚ್ಛಾಟನೆಯ ಪತ್ರವೊಂದು ವೈರಲ್ ಆಗಿದ್ದು, ಗೊಂದಲ ಸೃಷ್ಟಿಸಿದೆ.
ಈ ಬಗ್ಗೆ ನಾನುಗೌರಿ.ಕಾಂಗೆ ಸ್ಪಷ್ಟನೆ ನೀಡಿದ ಜೆಡಿಎಸ್ ವಕ್ತಾರೆ ನಜ್ಮಾ ನಜ್ಹೀರ್ ಚಿಕ್ಕನೇರಳೆ ಅವರು, ”ಇದು ನಕಲಿ ಪತ್ರವಾಗಿದೆ. ನಮ್ಮ ಪಕ್ಷದ ಅಧ್ಯಕ್ಷರು ಈ ರೀತಿಯ ಯಾವುದೇ ಉಚ್ಛಾಟನೆಯ ಪತ್ರ ಹೊರಡಿಸಿಲ್ಲ” ಎಂದು ತಿಳಿಸಿದ್ದಾರೆ.
ಪತ್ರದಲ್ಲಿ ಏನಿದೆ?:
ಜೆಡಿಎಸ್ ಪಕ್ಷವು ದಶಕಗಳಿಂದ ಜಾತ್ಯಾತೀತ ಸಿದ್ದಾಂತವನ್ನು ಪಾಲಿಸುತ್ತಾ ಬಂದಿದ್ದು ನಮ್ಮ ಪಕ್ಷದಲ್ಲಿಎಲ್ಲ ಜಾತಿ ಧರ್ಮಗಳ ನಾಯಕರು ಕಾರ್ಯಕರ್ತರು ಪಕ್ಷಕ್ಕಾಗಿ ದುಡಿದಿದ್ದು ಇತ್ತೀಚೆಗೆ ಜೆಡಿಎಸ್ ಪಕ್ಷದ ಶಾಸಕಾಂಗ ನಾಯಕ ಎಚ್ ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಕೋಮುವಾದಿ ಬಿಜೆಪಿ ಪಕ್ಷದೊಂದಿಗೆ ಮೈತ್ರಿಯಾಗಿರುವುದು ಕಂಡು ಬಂದಿದ್ದು ಈ ತತ್ ಕ್ಷಣದಿಂದ ಹೆಚ್.ಡಿ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರನ್ನು ಈ ಕೂಡಲೇ ಪಕ್ಷದಿಂದ ಉಚ್ಚಾಟಿಸಲು ಪಕ್ಷ ತೀರ್ಮಾನಿಸಿದೆ.