ಕಾಲೇಜಿಗೆ ಹಿಜಾಬ್ ತೆಗೆದು ಬರುವಂತೆ ಕಾಲೇಜು ಆಡಳಿತ ಮಂಡಳಿ ತಿಳಿಸಿದ್ದ ಕಾರಣಕ್ಕೆ ಇದು ನನ್ನ ಸ್ವಾಭಿಮಾನಕ್ಕೆ ಧಕ್ಕೆ ಎಂದಿರುವ ತುಮಕೂರಿನ ಜೈನ್ ಪಿಯು ಕಾಲೇಜಿನ ಇಂಗ್ಲಿಷ್ ಅತಿಥಿ ಉಪನ್ಯಾಸಕಿಯೊಬ್ಬರು ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.
ಉಪನ್ಯಾಸಕಿ ಚಾಂದಿನಿ ನಾಝ್ ಅವರು ಸುಮಾರು ಮೂರು ವರ್ಷಗಳಿಂದ ಜೈನ್ ಪಿಯು ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದು, ಮೊದಲ ಬಾರಿಗೆ ಹಿಜಾಬ್ ಅನ್ನು ತೆಗೆದುಹಾಕಲು ಹೇಳಲಾಗಿದೆ ಎಂದು ತಿಳಿಸಿದ್ದಾರೆ.
ಫೆಬ್ರವರಿ 16 ರಂದು ಜೈನ್ ಪಿಯು ಕಾಲೇಜಿನ ಪ್ರಿನ್ಸಿಪಾಲ್ಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ, “ನಿಮ್ಮ ಕಾಲೇಜಿನಲ್ಲಿ ಕಳೆದ ಮೂರು ವರ್ಷಗಳಿಂದ ಹಿಜಾಬ್ ಧರಿಸಿಯೇ ಬಂದಿದ್ದ ನನ್ನನ್ನು, ಹಿಜಾಬ್ ಅನ್ನು ತೆಗೆದುಹಾಕುವಂತೆ ನೀವು ಒತ್ತಾಯಿಸಿದ್ದರಿಂದ ನಾನು ಇಂಗ್ಲಿಷ್ ಉಪನ್ಯಾಸಕಿ ಕೆಲಸಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಧರ್ಮದ ಹಕ್ಕು ಸಾಂವಿಧಾನಿಕ ಹಕ್ಕು, ಅದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಧನ್ಯವಾದಗಳು. ನಿಮ್ಮ ಪ್ರಜಾಪ್ರಭುತ್ವ ವಿರೋಧಿ ಕೃತ್ಯವನ್ನು ನಾನು ಖಂಡಿಸುತ್ತೇನೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹಿಜಾಬ್ ಕುರಿತ ತಪ್ಪಾದ ವರದಿ ಬಗ್ಗೆ ಚರ್ಚೆಗೂ ತಯಾರಿಲ್ಲದ ಪಬ್ಲಿಕ್ ಟಿವಿ: ‘ಹೇಟ್ ಸ್ಪೀಚ್ ತಂಡದ ಆಕ್ರೋಶ
ಈ ಬಗ್ಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಚಾಂದಿನಿ ನಾಝ್, “ನಾನು ಕಳೆದ ಮೂರು ವರ್ಷಗಳಿಂದ ಜೈನ್ ಪಿಯು ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಈ ಮೂರು ವರ್ಷಗಳಲ್ಲಿ ನನಗೆ ಯಾವುದೇ ತೊಂದರೆಯಾಗಿದೆ. ಆದರೆ, ನಿನ್ನೆ ಪ್ರಾಂಶುಪಾಲರು ನನ್ನನ್ನು ಕರೆದು, ಹಿಜಾಬ್ ಅಥವಾ ಯಾವುದೇ ಧಾರ್ಮಿಕ ಚಿಹ್ನೆಗಳನ್ನು ವ್ಯಕ್ತಪಡಿಸದಂತೆ ಪಾಠ ಮಾಡಬೇಕು ಎಂದು ಹೇಳಿದರು. ಆದರೆ ನಾನು ಕಳೆದ ಮೂರು ವರ್ಷಗಳಿಂದ ಹಿಜಾಬ್ ಹಾಕಿಕೊಂಡೆ ಪಾಠ ಮಾಡಿದ್ದೇನೆ. ಈ ಹೊಸ ನಿರ್ಧಾರ ನನ್ನ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ. ಹೀಗಾಗಿ ರಾಜೀನಾಮೆ ನೀಡಿದ್ದೇನೆ. ಹಿಜಾಭ್ ಇಲ್ಲದೆ ನಾನು ಆ ಕಾಲೇಜಿನಲ್ಲಿ ಕೆಲಸ ಮಾಡಲಾರೆ” ಎಂದಿದ್ದಾರೆ.
ಹಿಜಾಬ್ ಧರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತುಮಕೂರು ಕಾಲೇಜು ಇಂಗ್ಲಿಷ್ ಉಪನ್ಯಾಸಕಿ ರಾಜೀನಾಮೆ#KarnatakaHijabControversy #Naanugauri #Tumkuru pic.twitter.com/yo8b1kyUSj
— Naanu Gauri (@naanugauri) February 18, 2022
ಇನ್ನು ಜೈನ್ ಪಿಯು ಕಾಲೇಜಿನ ಪ್ರಾಂಶುಪಾಲ ಮಂಜುನಾಥ್ ಅವರನ್ನು ಉಲ್ಲೇಖಿಸಿರುವ ದಿ ಪ್ರಿಂಟ್, “ಅವರು ಅರೆಕಾಲಿಕ ಉಪನ್ಯಾಸಕಿ, ಹಿಜಾಬ್ ಧರಿಸಿ ತರಗತಿಗೆ ಬರುತ್ತಿದ್ದರು. ಕರ್ನಾಟಕ ಹೈಕೋರ್ಟ್ನ ಮಧ್ಯಂತರ ಆದೇಶದ ನಂತರ, ನಾವು ಆಕೆಗೆ ಸ್ಟಾಫ್ ರೂಮ್ನಲ್ಲಿ ಹಿಜಾಬ್ ತೆಗೆದು ತರಗತಿಗೆ ಹೋಗುವಂತೆ ತಿಳಿಸಿದೆವು. ಆದರೆ ಅವರು ಅದಕ್ಕೆ ಒಪ್ಪಲಿಲ್ಲ. ಆದ್ದರಿಂದ ರಾಜೀನಾಮೆ ನೀಡಿದ್ದಾರೆ. ನಮ್ಮದು ಖಾಸಗಿ ಕಾಲೇಜು. ಆಡಳಿತ ಮಂಡಳಿಯವರು ಏನೇ ಹೇಳಿದರೂ ನಾವು ಪಾಲಿಸಲೇಬೇಕು. ಶಿಕ್ಷಕರಿಗೆ ಹಿಜಾಬ್ ಧರಿಸಲು ಅವಕಾಶ ನೀಡಿದರೆ ಮುಸ್ಲಿಂ ವಿದ್ಯಾರ್ಥಿಗಳು ಅದನ್ನು ಅನುಸರಿಸಬಹುದು ಎಂಬುದು ನಮ್ಮ ಆತಂಕ” ಎಂದಿದ್ದಾರೆ.
ಆದರೆ, ಹೈಕೋರ್ಟ್ನ ಮಧ್ಯಂತರ ಆದೇಶವು ಕಾಲೇಜು ಅಭಿವೃದ್ಧಿ ಸಮಿತಿಗಳು ವಿದ್ಯಾರ್ಥಿಗಳ ಡ್ರೆಸ್ ಕೋಡ್ ಅಥವಾ ಸಮವಸ್ತ್ರವನ್ನು ಸೂಚಿಸಿರುವ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಸ್ಪಷ್ಟವಾಗಿ ಹೇಳುತ್ತದೆ. ನಿಗದಿತ ಸಮವಸ್ತ್ರವನ್ನು ಹೊಂದಿರದ ಕಾಲೇಜುಗಳ ಶಿಕ್ಷಕರು ಅಥವಾ ವಿದ್ಯಾರ್ಥಿಗಳಿಗೆ ಅನ್ವಯಿಸುವುದಿಲ್ಲ. ಆದರೂ, ಈ ಆದೇಶವನ್ನು ರಾಜ್ಯದಾದ್ಯಂತ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಲ್ಲಿಯೂ ಹಿಜಾಬ್ ಅನ್ನು ಖಡಾಖಂಡಿತವಾಗಿ ನಿರ್ಬಂಧಿಸಲಾಗಿರುವುದಾಗಿ ಬಿಂಬಿಸಲಾಗುತ್ತಿದ್ದು ಗೊಂದಲ ಸೃಷ್ಟಿಸಲಾಗುತ್ತಿದೆ. ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಹಾಗೂ ಕಾಲೇಜುಗಳಲ್ಲಿಯೂ ಹಿಜಾಬ್ ಅನ್ನು ನಿರ್ಬಂಧಿಸಿರುವುದಾಗಿ ಜಿಲ್ಲಾಡಳಿತಗಳು ಮೌಖಿಕ ಸೂಚನೆಯನ್ನು ನೀಡಿರುವುದಾಗಿ ತಿಳಿದು ಬಂದಿದೆ. ಹಾಗಾಗಿ ಹಲವು ಶಾಲಾ-ಕಾಲೇಜುಗಳಲ್ಲಿ ಅಲ್ಲಿನ ಆಡಳಿತ ಮಂಡಳಿ ಸಮವಸ್ತ್ರ ನಿಗಧಿಪಡಿಸದಿದ್ದರೂ ಸಹ ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ. ಇದಕ್ಕೆ ತೀವ್ರ ಖಂಡನೆ ಸಹ ವ್ಯಕ್ತವಾಗಿದೆ.
ಇದನ್ನೂ ಓದಿ: ಒಟ್ಟಿಗೆ ಕೈ ಕೈ ಹಿಡಿದು ಕಾಲೇಜಿಗೆ ಬಂದು ಸೌಹಾರ್ದತೆ ಸಾರಿದ ಉಡುಪಿ ವಿದ್ಯಾರ್ಥಿನಿಯರು: ಫೋಟೊ, ವಿಡಿಯೋ ವೈರಲ್
ಹೈಕೋರ್ಟ್ ಆದೇಶವನ್ನು ತಿರುಚಿ, ಮನುವಾದಿಗಳು ಮುಸ್ಲಿಂ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರಿಗೆ ಕಿರುಕುಳ ಕೊಡುತ್ತಿರುವುದು ಕಂಡನಾರ್ಹ.