ಮಂಡ್ಯದ ಬಿಜೆಪಿ ಮತ್ತು ಆರ್ಎಸ್ಎಸ್ ಮುಖಂಡ, ಶ್ರೀನಿಧಿ ಗೋಲ್ಡ್ ಮಾಲೀಕ ಜಗನ್ನಾಥ ಶೆಟ್ಟಿಯು ಹುಡುಗಿಯನ್ನು ಹೋಟೆಲ್ಗೆ ಬಾ ಎಂದು ಕರೆಯುವ ಆಡಿಯೋ ಮತ್ತು ಹೋಟೆಲ್ನಲ್ಲಿ ಹುಡುಗಿಯೊಂದಿಗೆ ಅರೆಬರೆ ಬಟ್ಟೆಯಲ್ಲಿ ಸಿಕ್ಕಿಬಿದ್ದಿರುವ ವಿಡಿಯೋವೊಂದು ವೈರಲ್ ಆಗಿದೆ. ಹಾಗಾಗಿ ಅವರು ಕಳೆದ 15 ದಿನಗಳ ಹಿಂದೆ ತನ್ನನ್ನು ಕಿಡ್ನಾಪ್ ಮಾಡಿ, ಹನಿಟ್ರ್ಯಾಪ್ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ನೀಡಿದ್ದ ದೂರಿನ ಪ್ರಕರಣಕ್ಕೆ ಮಹತ್ತರ ತಿರುವು ಸಿಕ್ಕಿದೆ.
ಮೂಲತಃ ಉಡುಪಿ ಮೂಲದ ಜಗನ್ನಾಥ ಶೆಟ್ಟಿಯೂ ತಾನು ಮಂಗಳೂರಿಗೆ ಹೋಗಲು ಮಂಡ್ಯದಲ್ಲಿ ಬಸ್ಗಾಗಿ ಕಾಯುತ್ತಿದ್ದೆ. ಆಗ ಡ್ರಾಪ್ ಕೊಡುವ ನೆಪದಲ್ಲಿ ನಾಲ್ವರು ತನ್ನನ್ನು ಮೈಸೂರಿಗೆ ಕರೆದೊಯ್ದರು. ಆನಂತರ ಗೋಲ್ಡ್ ಬಿಸ್ಕೆಟ್ ಪರೀಕ್ಷಿಸಲು ಬಾ ಎಂದು ಕಿಡ್ನಾಪ್ ಮಾಡಿ ಮೈಸೂರಿನ ದರ್ಶನ್ ಲಾಡ್ಜ್ಗೆ ಕರೆದೊಯ್ದು, ಅಲ್ಲಿದ್ದ ಹುಡುಗಿಯೊಂದಿಗೆ ವಿಡಿಯೊ ಮಾಡಿದರು. ವಿಡಿಯೋ ಹರಿಯಬಿಡುವುದಾಗಿ ಬೆದರಿಸಿ 50 ಲಕ್ಷ ಸುಲಿಗೆ ಮಾಡಿದ್ದಾರೆ ಎಂದು ಆಗಸ್ಟ್ 19 ರಂದು ಮಂಡ್ಯದ ಪಶ್ಚಿಮ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರ ಆಧಾರದಲ್ಲಿ ಹನಿಟ್ರ್ಯಾಪ್ ಪ್ರಕರಣ ದಾಖಲಿಸಿದ್ದ ಪೊಲೀಸರು ಸಲ್ಮಾಬಾನು, ಸೇರಿದಂತೆ ಹಲವರನ್ನು ಬಂಧಿಸಿ ಪೊಲೀಸ್ ಕಸ್ಟಡಿಗೆ ಪಡೆದಿದ್ದರು.
ಆದರೆ ಅದಾಗ 15 ದಿನಗಳ ನಂತರ ಜಗನ್ನಾಥ ಶೆಟ್ಟಿಯದು ಎಂದು ಹೇಳಲಾದ ಹುಡುಗಿಯೊಂದಿಗೆ ಮಾತನಾಡುವ 15 ನಿಮಿಷಗಳ ಆಡಿಯೋ ವೈರಲ್ ಆಗಿದೆ. ಅದರಲ್ಲಿ ತನ್ನನ್ನು ಹುಬ್ಬಳ್ಳಿ ಮೂಲಕ ಉಪನ್ಯಾಸಕ ಎಂದು ಹೇಳಿಕೊಳ್ಳುವ ಆತ ಮೈಸೂರಿನ ಲಾಡ್ಜ್ಗೆ ಎರಡು ದಿನಗಳ ಕಾಲ ಹೋಗೋಣ ಬಾ ಎಂದು ಸ್ವತಃ ಕರೆಯುತ್ತಾನೆ. ಒಳ್ಳೆಯ ಲಾಡ್ಜ್ಗಳಿವೆ, ಅಲ್ಲಿ ಎರಡು ದಿನ ಉಳಿಯೋಣ, ಎಂಜಾಯ್ ಮಾಡೋಣ, ಕಾರಿನಲ್ಲಿ ಹೋಗೋಣ, ಒಟ್ಟಿಗೆ ಊಟ ಮಾಡೋಣ ಎಂದು ಹೇಳಿದ್ದಾನೆ. ಅದಕ್ಕೆ ಹುಡುಗಿ ಸಹ ಒಪ್ಪಿ ಬರುತ್ತೇನೆ ಎಂದು ಹೇಳುವುದು ದಾಖಲಾಗಿದೆ. ಆನಂತರ ಮತ್ತೊಂದು ವಿಡಿಯೋ ವೈರಲ್ ಆಗಿದ್ದು ಅದರಲ್ಲಿ ಅದೇ ಹುಡುಗಿ ಜಗನ್ನಾಥ ಶೆಟ್ಟಿಯೊಂದಿಗೆ ಅದೇ ದರ್ಶನ್ ಲಾಡ್ಜ್ನಲ್ಲಿ ಸಿಕ್ಕಿಬಿದ್ದಿರುವುದು ಸೆರೆಯಾಗಿದೆ.
ವಿಡಿಯೋದಲ್ಲಿ ಸಲ್ಮಾ ಬಾನು ಕಡೆಯವರು ಆತನನ್ನು ಪ್ರಶ್ನಿಸುವ ಮತ್ತು ಹಲ್ಲೆ ಮಾಡುವುದು ಕಂಡುಬಂದಿದೆ. ಆ ಸಂದರ್ಭದಲ್ಲಿ ಜಗನ್ನಾಥ ಶೆಟ್ಟಿ ತಪ್ಪಾಯ್ತು ಬಿಟ್ಟು ಬಿಡಿ, ಇಲ್ಲದಿದ್ದರೆ ನಾನು ನೇಣು ಹಾಕಿಕೊಂಡು ಸತ್ತು ಹೋಗುತ್ತೇನೆ ಎಂದು ಪರಿ ಪರಿಯಾಗಿ ಕೇಳಿಕೊಳ್ಳುವುದು ದಾಖಲಾಗಿದೆ. ಅಲ್ಲಿ ಸಿಕ್ಕಿರುವ ಮುಜರಾಯಿ ಇಲಾಖೆಯ ಗುರುತಿನ ಚೀಟಿಯಲ್ಲಿ ಜಗನ್ನಾಥ ಶೆಟ್ಟಿಯನ್ನು ಧಾರ್ಮಿಕ ಪರಿಷತ್ ಸದಸ್ಯ ಎಂದು ಹೆಸರಿಸಲಾಗಿದೆ. ಅಲ್ಲಿ ಒಂದಷ್ಟು ಕಂತೆ ಹಣ, ಕೆಲವು ಮಾತ್ರೆಗಳು ಸಹ ಕಂಡುಬಂದಿವೆ.
ಅದೇ ಸಂದರ್ಭದಲ್ಲಿ ಅಲ್ಲಿದ್ದ ಹುಡುಗಿಯು ತಾನು ವಿದ್ಯಾರ್ಥಿನಿಯಾಗಿದ್ದು, ಟ್ಯೂಷನ್ ಹೇಳಿಸಿಕೊಳ್ಳಲು ಬಂದಿದ್ದೇನೆ. ದಯವಿಟ್ಟು ಅವರಿಗೆ ಹೊಡೆಯಬೇಡಿ ಬಿಟ್ಟು ಬಿಡಿ ಎಂದು ಮನವಿ ಮಾಡುವುದು ಸಹ ಸೆರೆಯಾಗಿದೆ.
ಒಟ್ಟಾರೆಯಾಗಿ ಇದು ಹನಿಟ್ರ್ಯಾಪ್ ಪ್ರಕರಣವೇ? ಅಲ್ಲವೇ ಎಂಬುದು ಪೊಲೀಸ್ ತನಿಖೆಯಿಂದ ಮಾತ್ರ ಹೊರಬರಬೇಕಿದೆ. ಅಲ್ಲದೆ ಜಗನ್ನಾಥ ಶೆಟ್ಟಿ ತಾನೇ ಖುದ್ದು ಹುಡುಗಿಯೊಂದಿಗೆ ಲಾಡ್ಜ್ಗೆ ಹೋಗಿದ್ದರೂ ಸಹ ತನ್ನನ್ನು ಕಿಡ್ನಾಪ್ ಮಾಡಿ ಕರೆದುಕೊಂಡು ಹೋದರು ಎಂದು ಸುಳ್ಳು ದೂರು ನೀಡಿದ್ದು ಏಕೆ? ಸಲ್ಮಾ ಬಾನು ಗ್ಯಾಂಗ್ ಲಾಡ್ಜ್ಗೆ ಏಕೆ ದಾಳಿ ನಡೆಸಿತು ಎಂಬುದು ಸಹ ಹೊರಬರಬೇಕಿದೆ.
ಇದನ್ನೂ ಓದಿ: ಬೆಂಗಳೂರು ವಿ.ವಿ ಕ್ಯಾಂಪಸ್ನೊಳಗೆ ದೇವಸ್ಥಾನ ನಿರ್ಮಾಣದ ವಿರುದ್ಧ ಭಾರಿ ಪ್ರತಿಭಟನೆ