Homeಅಂಕಣಗಳುಫೇಕ್ ನ್ಯೂಸ್ ತಡೆಗಟ್ಟುವಿಕೆಗೆ ಕ್ರಮಗಳು ಅಗತ್ಯ- ಬೆಕ್ಕಿಗೆ ಗಂಟೆ ಕಟ್ಟುವವರ್‍ಯಾರು? ಹೇಗೆ?

ಫೇಕ್ ನ್ಯೂಸ್ ತಡೆಗಟ್ಟುವಿಕೆಗೆ ಕ್ರಮಗಳು ಅಗತ್ಯ- ಬೆಕ್ಕಿಗೆ ಗಂಟೆ ಕಟ್ಟುವವರ್‍ಯಾರು? ಹೇಗೆ?

- Advertisement -
- Advertisement -

ಫೇಕ್ ನ್ಯೂಸ್ ಅಥವಾ ನಕಲಿ-ಸುಳ್ಳು ಸುದ್ದಿ ಜಾಲ ಮತ್ತು ಹರಡುವಿಕೆ ಈಗ ಯಾವುದೇ ಜಾಗತಿಕ ಪಿಡುಗಿಗಿಂತಲೂ ಗಂಭೀರ ಸಮಸ್ಯೆಯಾಗಿ ಮಾರ್ಪಟ್ಟಿದೆ. ಜಗತ್ತಿನಾದ್ಯಂತ ಹಲವು ಸರ್ಕಾರಗಳು ಇದರ ತಡೆಗೆ ಗಂಭೀರ ಪ್ರಯತ್ನಗಳನ್ನು ಮಾಡುತ್ತಿವೆ. ಇನ್ನೂ ಕೆಲವು ದೇಶಗಳ ಪ್ರಭುತ್ವಗಳು ಈ ಫೇಕ್ ನ್ಯೂಸ್ ಎಕೋಸಿಸ್ಟಮ್‌ಅನ್ನು ತಮ್ಮ ಅವಕಾಶಕ್ಕೆ ಬಳಸಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂಸ್ಥೆಗಳನ್ನು ಇನ್ನಷ್ಟು ಅಪಾಯಕ್ಕೆ ತಳ್ಳುತ್ತಿವೆ. ಭಾರತವೂ ಕೂಡ ಇಂತಹುದೇ ಒಂದು ಅಪಾಯಕಾರಿ ಸಂದರ್ಭ-ಸನ್ನಿವೇಶದಲ್ಲಿದೆ. ಆಡಳಿತ ಒಕ್ಕೂಟ ಸರ್ಕಾರದ ಮುಂದಾಳತ್ವ ವಹಿಸಿರುವ ಬಿಜೆಪಿ ಪಕ್ಷ ಮತ್ತು ಅದರ ಸೈದ್ಧಾಂತಿಕ ಬೆಂಬಲಿಗೆ ಸಂಘ ಪರಿವಾರ ಇಂತಹ ಫೇಕ್ ನ್ಯೂಸ್ ಜಾಲದ ಭಾರಿ ಫಲಾನುಭವಿ ಆಗಿರುವುದು ಗುಟ್ಟಾಗೇನೂ ಉಳಿದಿಲ್ಲ. ಆದುದರಿಂದ ಒಕ್ಕೂಟ ಸರ್ಕಾರದಿಂದ ಏನಾದರೂ ಸಕಾರಾತ್ಮಕ ಕ್ರಮವನ್ನು ನಿರೀಕ್ಷಿಸುವುದು ವಿಫಲ ಆಶಾವಾದವಾದೀತು! ಅಲ್ಲದೆ, ಮಾಹಿತಿ ತಂತ್ರಜ್ಞಾನ (ಮಧ್ಯಂತರ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ನೀತಿಸಂಹಿತೆ) 2021ರ ಕೇಂದ್ರ ಸರ್ಕಾರದ ತಿದ್ದುಪಡಿ ಫೇಕ್ ಸುದ್ದಿಗಳನ್ನು ನಿಯಂತ್ರಿಸುವ ಉದ್ದೇಶದಲ್ಲಿ ಯಾವ ರೀತಿಯಲ್ಲೂ ಸ್ಪಷ್ಟತೆಯನ್ನು ತೋರಿಲ್ಲ. ಬದಲಿಗೆ ಪ್ರೆಸ್ ಇನ್‌ಫರ್ಮೇಷನ್ ಬ್ಯೂರೋಗೆ ಹೆಚ್ಚಿನ ಅಧಿಕಾರ ನೀಡಿ, ಒಕ್ಕೂಟ ಸರ್ಕಾರದ ಅಣತಿಯಂತೆ ಜಾಲತಾಣಗಳ ನಿರ್ಬಂಧಗಳಿಗೆ ಅವಕಾಶ ಮಾಡಿಕೊಟ್ಟಿದೆ. ಇದರಿಂದ ಅಸಲಿ ಫೇಕ್ ಸುದ್ದಿಗಳಿಗೆ ಕಡಿವಾಣ ಹಾಕುವುದಕ್ಕಿಂತಲೂ ಸರ್ಕಾರವನ್ನು ಪ್ರಶ್ನಿಸುವ ಮಾಧ್ಯಮ ಸಂಸ್ಥೆಗಳು ಕೆಂಗಣ್ಣಿಗೆ ಒಳಗಾಗುವ ಸಂಭವವೇ ಹೆಚ್ಚು ಎಂಬ ಆತಂಕ-ಆರೋಪಗಳನ್ನು ವ್ಯಕ್ತಪಡಿಸುವಂತೆ ಮಾಡಿದೆ.

ಇಂತಹ ಪರಿಸ್ಥಿತಿಯಲ್ಲಿ ಫೇಕ್ ನ್ಯೂಸ್ ಕಾರ್ಖಾನೆಗೆ ಹೆಚ್ಚು ಬಲಿಯಾಗುತ್ತಿರುವವರು ಬಿಜೆಪಿಯೇತರ ಪಕ್ಷಗಳು ಮುನ್ನಡೆಸುತ್ತಿರುವ ರಾಜ್ಯ ಸರ್ಕಾರಗಳು ಮತ್ತು ಸಂಘ ಪರಿವಾರದ ಒಡಕಿನ ಮತ್ತು ದ್ವೇಷದ ಸಿದ್ಧಾಂತದಲ್ಲಿ ನಂಬಿಕೆಯಿಲ್ಲದ ಹಾಗೂ ಅದನ್ನು ವಿರೋಧಿಸುವ ಜನಸಾಮಾನ್ಯರು. ಕೆಲವು ತಿಂಗಳುಗಳ ಹಿಂದೆ ತಮಿಳುನಾಡಿನ ಮುಖ್ಯಮಂತ್ರಿ ಡಿಎಂಕೆ ಪಕ್ಷದ ಸ್ಟಾಲಿನ್ ಅವರ ಹುಟ್ಟುಹಬ್ಬದ ದಿನ ಬಿಹಾರದ ಉಪಮುಖ್ಯಮಂತ್ರಿ-ಆರ್‌ಜೆಡಿ ಪಕ್ಷದ ಮುಖಂಡ ತಮಿಳುನಾಡಿಗೆ ಆಗಮಿಸಿ ಶುಭ ಕೋರಿದ್ದರು. ಇದೇ ಸಮಯಕ್ಕೆ ಕಾದಿದ್ದರೇನೋ ಎಂಬಂತೆ ಫೇಕ್ ನ್ಯೂಸ್ ಜಾಲ ಅಲರ್ಟ್ ಆಯಿತು; “ಮನೀಶ್ ಕಶ್ಯಪ್” Manish Kashyap Son of Bihar ಎಂಬ ಯುಟ್ಯೂಬ್ ವಾಹಿನಿ) ಎಂಬ ವ್ಯಕ್ತಿ ತನ್ನ ಯೂಟ್ಯೂಬ್ ಚಾನೆಲ್ ಮತ್ತು ಫೇಸ್ಬುಕ್ ಅಕೌಂಟ್‌ನಲ್ಲಿ, ’ತಮಿಳುನಾಡಿನಲ್ಲಿ ಬಿಹಾರಿ ಕಾರ್ಮಿಕರನ್ನು ಕಂಡಕಂಡಲ್ಲಿ ಮಚ್ಚಿನಿಂದ ಕೊಚ್ಚಿ ಕೊಲ್ಲಲಾಗುತ್ತಿದೆ’ ಎಂದು ಬಾಯಿಗೆ ಬಂದಂತೆ ಸುಳ್ಳನ್ನು ಬಡಬಡಿಸತೊಡಗಿದ. ಆತನ ವಿಡಿಯೋವನ್ನು 6 ಮಿಲಿಯನ್ ಜನ ವೀಕ್ಷಿಸಿದ್ದರು. ನೋಡನೋಡುತ್ತಿದ್ದಂತೆ ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಒಂದೇ ಏಟಿನಲ್ಲಿ ಡಿಎಂಕೆ ವಿರುದ್ಧ ಮತ್ತು ಬಿಹಾರದ ಜೆಡಿಯು-ಆರ್‌ಜೆಡಿ ಮೈತ್ರಿಯ ವಿರುದ್ಧ ದ್ವೇಷವನ್ನು ಹರಡುವುದಕ್ಕೆ ಈ ಫೇಕ್‌ನ್ಯೂಸ್‌ಗೆ ಸಾಧ್ಯವಾಗಿತ್ತು. ಈ ಫೇಕ್ ನ್ಯೂಸ್‌ಅನ್ನು ತಹಬದಿಗೆ ತಂದು ಕ್ರಮ ತೆಗೆದುಕೊಳ್ಳುವಷ್ಟರಲ್ಲಿ ಅದು ಸಾಕಷ್ಟು ಡ್ಯಾಮೇಜ್ ಮಾಡಿ ಮುಗಿಸಿತ್ತು. ಸಿಆರ್‌ಪಿಸಿಯ ಕೆಲವು ಸೆಕ್ಷನ್‌ಗಳನ್ನು ರಾಜ್ಯ ಸರ್ಕಾರಗಳು ಇಂತಹ ಪ್ರಕರಣದಲ್ಲಿ ಅನ್ವಯಿಸಬಹುದಾದರೂ, ನಕಲಿ ಸುದ್ದಿಗಳ ವಿಡಿಯೋ-ಪೋಸ್ಟ್‌ಗಳನ್ನು ತಕ್ಷಣವೇ ತೆಗೆದುಹಾಕುವಂತಹ, ಹಾಗೆ ಮಾಡಲು ಆಯಾ ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ನಿರ್ದೇಶಿಸುವಂತಹ ಅಥವಾ ನಿಯಂತ್ರಿಸುವಂತಹ ಕ್ರಮಗಳನ್ನು ತೆಗೆದುಕೊಳ್ಳಲು ಕಾನೂನುಗಳನ್ನು ರೂಪಿಸುವ ಅಧಿಕಾರ ಹೊಂದಿಲ್ಲ. ಇದೇ ರೀತಿ ಬಹಳ ಇತ್ತೀಚಿಗೆ ಉಡುಪಿಯ ಕಾಲೇಜೊಂದರ ಹಾಸ್ಟೆಲ್‌ನಲ್ಲಿ ನಡೆದ ಒಂದು ಅನಗತ್ಯ ತಮಾಷೆಯ ಪ್ರಕರಣಕ್ಕೆ ಕೋಮು ಆಯಾಮ ತಂದು ನಕಲಿ ವಿಡಿಯೋಗಳನ್ನು ಸೃಷ್ಟಿಸಿ, ಕೋಮು ದ್ವೇಷ ಸೃಷ್ಟಿಸಲು ಸಂಘ ಪರಿವಾರ ನಡೆಸುತ್ತಿರುವ ಸಂಚನ್ನು ಗಮನಿಸಬಹುದು. (ಇದರ ಬಗ್ಗೆ ಶುದ್ಧೋದನ ಅವರ ವರದಿ ಈ ಸಂಚಿಕೆಯಲ್ಲಿ ಪ್ರಕಟವಾಗಿದೆ.) ಕರ್ನಾಟಕ ಸರ್ಕಾರ ಮತ್ತು ಪೊಲೀಸರು ಎಷ್ಟೇ ಸ್ಪಷ್ಟೀಕರಣ ನೀಡಿದರೂ, ಹಲವು ಪ್ರಗತಿಪರ ಸುದ್ದಿ ಸಂಸ್ಥೆಗಳು ಎಷ್ಟೇ ಫ್ಯಾಕ್ಟ್ ಚೆಕ್ ಮಾಡಿದರೂ ಸುಳ್ಳಿನ ನಾಗಾಲೋಟಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಿಲ್ಲ. ಮತ್ಯಾವುದೋ ರೂಪದಲ್ಲಿ ಹೊಸದೊಂದು ಕಾನೂನನ್ನು ರೂಪಿಸಿದರೂ, ಅವುಗಳು ಅಷ್ಟು ಪರಿಣಾಮಕಾರಿಯಾಗಲು ಸಾಧ್ಯವಿಲ್ಲ ಎಂಬುದು ಇಲ್ಲಿಯವರೆಗಿನ ಉದಾಹರಣೆಗಳು ತೋರಿಸಿವೆ. ಅಲ್ಲದೆ ಇಂತಹ ನಿಯಂತ್ರಣಗಳನ್ನೇ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಬಗೆಯುವ ನಕಲಿ ನರೆಟಿವ್‌ಗಳು ಕೂಡ ಹೆಚ್ಚಾಗುವ ಸಾಧ್ಯತೆಯಿದೆ. ಈ ಎಲ್ಲಾ ಕಾರಣಗಳಿಂದ ಮಾಧ್ಯಮದ ಬಗ್ಗೆ ಹೆಚ್ಚು ಅರಿವನ್ನು ಉಂಟುಮಾಡುವ ಶೈಕ್ಷಣಿಕ ಹಾಗೂ ತಿಳಿವಳಿಕೆ ಮೂಡಿಸುವ ಕಾರ್ಯಕ್ರಮಗಳಷ್ಟೇ ಒಂದಷ್ಟು ಸುಧಾರಣೆಗಳಿಗೆ ಅನುವು ಮಾಡಿಕೊಡಲು ಸಾಧ್ಯವೇನೋ!

ಇಂತಹ ಒಂದು ಯೋಜನೆಯನ್ನು ಸರ್ಕಾರ ಕೈಗೊಳ್ಳುವುದಕ್ಕೆ ವಿಶಾಲವಾದ ಸಮಾಲೋಚನೆಗಳು ಅಗತ್ಯವಿದ್ದರೂ, ಕೆನಡಾ, ಡೆನ್ಮಾರ್ಕ್ ಅಮೆರಿಕದ ಕೆಲವು ರಾಜ್ಯಗಳು ಸೇರಿದಂತೆ ಹಲವು ಕಡೆ ಜಾರಿಯಾಗಿರುವ ಮೀಡಿಯಾ ಲಿಟರೆಸಿ ಯೋಜನೆಗಳಿಂದ ಕೆಲವು ಅಂಶಗಳನ್ನು ತೆಗೆದುಕೊಂದು ಕರ್ನಾಟಕ ತಮಿಳುನಾಡಿನಂತಹ ಮುಂತಾದ ರಾಜ್ಯ ಸರ್ಕಾರಗಳು ಕೆಲವು ಸಕಾರಾತ್ಮಕ ಕ್ರಮಗಳಿಗೆ ಮುಂದಾಗುವುದು ಅವಶ್ಯಕವಾಗಿದೆ. ಮೊದಲನೆಯದಾಗಿ, ಮಾಧ್ಯಮಿಕ ಶಾಲಾ ಹಂತದಿಂದ ಪಿಯುಸಿವರೆಗೂ (ಪದವಿ ಶಿಕ್ಷಣಕ್ಕೂ ಇನ್ನೂ ಗಂಭೀರ ರೀತಿಯಲ್ಲಿ ಇದನ್ನು ಕೊಂಡೊಯ್ಯಬೇಕಿರುವ ಬಗ್ಗೆ ಚಿಂತಿಸಬೇಕಿದೆ), ಮೊದಲ ಹಂತಗಳಲ್ಲಿ ನಕಲಿ ಸುದ್ದಿಗಳ-ನಕಲಿ ನರೆಟಿವ್‌ಗಳ ಸ್ವರೂಪದ ಬಗ್ಗೆ ಪಾಠಗಳನ್ನು ಸೇರಿಸುವುದು, ಮುಂದಿನ ಹಂತಗಳಲ್ಲಿ ನಕಲಿ ಸುದ್ದಿಗಳನ್ನು ಪತ್ತೆ ಹಚ್ಚುವುದನ್ನು ಶಿಕ್ಷಣದ ಭಾಗವಾಗಿಸುವುದು ಹಾಗೂ ನಿಜ ಸುದ್ದಿ ಮೂಲಗಳನ್ನು ಪತ್ತೆಹಚ್ಚುವ ಬಗೆಯನ್ನು ವಿದ್ಯಾರ್ಥಿಗಳಿಗೆ ತಿಳಿಸುವುದನ್ನು ಪಠ್ಯಕ್ರಮದ ಭಾಗವನ್ನಾಗಿಸಲೇಬೇಕಾಗಿದೆ. ಇದರ ಜೊತೆಗೆ ರಿಗರಸ್ ಆದ ಕಾರ್ಯಾಗಾರಗಳನ್ನು ಶಾಲೆಗಳಲ್ಲಿ ಮಾಡಬೇಕಿದೆ. ಮತ್ತು ಇದನ್ನು ಕಡ್ಡಾಯವಾಗಿಯೇ ಕಲಿಸಬೇಕಿದೆ. ಎರಡನೆಯದಾಗಿ, ವಯಸ್ಕರಿಗಾಗಿ ಮೀಡಿಯಾ ಲಿಟರೆಸಿ ಯೋಜನೆಗಳನ್ನು ವ್ಯಾಪಕವಾಗಿ ಹಮ್ಮಿಕೊಂಡು, ಕೋರ್ಸ್‌ಗಳನ್ನು (ಸುಲಭವಾದ ಪ್ರಾತ್ಯಕ್ಷಿತೆಗಳ ಮೂಲಕ) ವಿನ್ಯಾಸ ಮಾಡಬೇಕಿದೆ. ಶಾಲಾ ಶಿಕ್ಷಣವನ್ನು ಮುಗಿಸಿರುವವರು ಅಥವಾ ಶಿಕ್ಷಣದಿಂದ ಹೊರಗುಳಿದವರು ಈ ಕೋರ್ಸ್‌ಗಳನ್ನು ಸುಲಭವಾಗಿ (ಆನ್‌ಲೈನ್ ಅಥವಾ ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ) ಅಕ್ಸೆಸ್ ಮಾಡಿ ತೆಗೆದುಕೊಳ್ಳಲು ಉತ್ತೇಜಿಸಬೇಕಿದೆ. ಇದನ್ನು ಉತ್ತೇಜಿಸುವುದಕ್ಕಾಗಿಯೇ ಈ ತಿಳಿವಳಿಕೆಯ ಕಾರ್ಯಕ್ರಮದ ಜೊತೆಗೆ ಯಾವುದಾದರೂ ಕಲ್ಯಾಣ ಯೋಜನೆಯನ್ನು ಬೆಸೆಯುವುದೂ ಅವಶ್ಯಕವಾದೀತು. ಮೂರನೆಯದಾಗಿ, ಸರ್ಕಾರ ತಾನು ನೀಡಬಹುದಾದ ಜಾಹೀರಾತು ಸ್ಪೇಸ್‌ಗಳಲ್ಲಿ ಸಾಧ್ಯವಾದಷ್ಟು ನಕಲಿ ಸುದ್ದಿಗಳ ಬಗ್ಗೆ ಎಚ್ಚರ ನೀಡುವ ಕೆಲಸಗಳನ್ನು ಮಾಡಬೇಕಿದೆ. ತಾನು ನೀಡುವ ಅನ್ಯ ಯೋಜನೆಗಳ ಮಾಮೂಲಿ ಜಾಹೀರಾತುಗಳಲ್ಲಿಯೂ ಫೇಕ್ ಸುದ್ದಿಗಳ ಬಗ್ಗೆ ಅರಿವು ಮೂಡಿಸಲು ಒಂದಷ್ಟು ಜಾಗವನ್ನು ಬಳಸಿಕೊಳ್ಳಬೇಕಿದೆ. ಎಷ್ಟೋ ಬಾರಿ ಪ್ರಜಾಸತ್ತಾತ್ಮಕ ಮತ್ತು ಸಾಂವಿಧಾನಿಕ ಮಾರ್ಗದಲ್ಲಿ ನಂಬಿಕೆಯಿಟ್ಟ ಮಾಧ್ಯಮಗಳು ಸರ್ಕಾರದ ಜೊತೆಗೆ ಈ ಅಭಿಯಾನದಲ್ಲಿ ಕೈಜೋಡಿಸಲು ಉತ್ಸುಕವಾಗಿರುತ್ತವೆ. ಇನ್ನು ಕೊನೆಯದಾಗಿ, ಸುಳ್ಳು ಹರಡುವ ಮಾಧ್ಯಮಗಳನ್ನು ಎಚ್ಚರಿಸುವ ಮತ್ತು ಅವುಗಳನ್ನು ಸರಿದಾರಿಗೆ ತರಲು ಅವುಗಳ ಜೊತೆಗೆ ನಿರಂತರ ಸಮಾಲೋಚನೆ ನಡೆಸುವ ಔಟ್‌ರೀಚ್ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಳ್ಳಬೇಕಾಗುತ್ತದೆ.

ಈ ಮೇಲಿನ ಸಲಹೆಗಳು ಸರ್ಕಾರ ಮಾಡಬೇಕಾದ ಎಷ್ಟೋ ಕೆಲಸಗಳಲ್ಲಿ ಕೆಲವೇ ಕೆಲವು. ಆದರೆ ಪ್ರಜಾಪ್ರಭುತ್ವದ ಉಳಿವಿಗೆ ಈ ಫೇಕ್ ನ್ಯೂಸ್ ಫ್ಯಾಕ್ಟರಿಗಳನ್ನು ನಿಯಂತ್ರಿಸಬೇಕಾದ ಸಮಯದಲ್ಲಿ ಈ ಕ್ರಮಗಳ ಬಗ್ಗೆ ಜವಾಬ್ದಾರಿಯುತ ಸರ್ಕಾರಗಳು ತಕ್ಷಣಕ್ಕೆ ಚಿಂತಿಸಬೇಕಿದೆ.


ಇದನ್ನೂ ಓದಿ: ಜಾತಿವಾದಿ, ಜನಾಂಗೀಯವಾದಿ ನಿಂದನೆ: ಆರಗ ಜ್ಞಾನೆಂದ್ರ ವಿರುದ್ಧ ಆಕ್ರೋಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾಕ್ರೋಚ್ ಪಾರ್ಟಿ ಧರಣಿ : ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಸೋನಮ್ ವಾಂಗ್‌ಚುಕ್

ನೀಟ್ ಸೇರಿದಂತೆ ವಿವಿಧ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ, ಹಲವು ಅಕ್ರಮ, ಶೈಕ್ಷಣಿಕ ಅವ್ಯವಸ್ಥೆಗಳ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕಾಕ್ರೋಚ್ ಜನತಾ...

SIR ವೇಳೆ ಮತಪಟ್ಟಿಯಿಂದ ಹೆಸರು ಡಿಲೀಟ್: ‘ದಿ ಟೆಲಿಗ್ರಾಫ್’ ಮಾಜಿ ಸಂಪಾದಕ ರಾಜಗೋಪಾಲ್ ಪಾಸ್‌ಪೋರ್ಟ್ ನವೀಕರಣಕ್ಕೆ ತಡೆ

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ವೇಳೆ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಿದ ಕಾರಣ ಪಾಸ್‌ಪೋರ್ಟ್ ನವೀಕರಿಸಲು ಆಗುತ್ತಿಲ್ಲ ಎಂದು ದೇಶದ ಖ್ಯಾತ ಇಂಗ್ಲಿಷ್ ದಿನಪತ್ರಿಕೆ ‘ದಿ ಟೆಲಿಗ್ರಾಫ್’ನ ಮಾಜಿ ಸಂಪಾದಕ ಆರ್. ರಾಜಗೋಪಾಲ್...

‘ಈಗಲೂ ಮಮತಾ ಬ್ಯಾನರ್ಜಿಯೇ ನಮ್ಮ ನಾಯಕಿ’ : ಟಿಎಂಸಿ ಬಂಡಾಯ ಬಣದ ಅಧ್ಯಕ್ಷ ಅರೂಪ್ ರಾಯ್ ಹೇಳಿಕೆ

"ಮಮತಾ ಬ್ಯಾನರ್ಜಿ ಅವರೇ ಇಂದಿಗೂ ನಮ್ಮ ನಾಯಕಿ. ಅವರೇ ಈ ಪಕ್ಷವನ್ನು ಸ್ಥಾಪಿಸಿದವರು. ಅವರೇ ನಮ್ಮ ಪಕ್ಷದ ಕಾಂದಾರಿ (ಮಾರ್ಗದರ್ಶಕರು ಅಥವಾ ಪಕ್ಷವನ್ನು ಮುನ್ನಡೆಸುವವರು). ಮಮತಾ ಬ್ಯಾನರ್ಜಿ ಅವರಿಂದಾಗಿಯೇ ನಾವು ಈ ಪಕ್ಷವನ್ನು...

ಪಶ್ಚಿಮ ಬಂಗಾಳದ ಆಹಾರ ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂಬ ಬಿಜೆಪಿಯ ಚುನಾವಣಾ ಭರವಸೆಗೆ ಈಗ ‘ಮೊಟ್ಟೆ’ ಮೊದಲ ಬಲಿ

ಚುನಾವಣಾ ಸಮಯದಲ್ಲಿ, ಬಿಜೆಪಿ ಪರಿಸ್ಥಿತಿಯನ್ನು ಮತ್ತು ಮೀನಿನ ಮಾರುಕಟ್ಟೆಯ ನಾಡಿಮಿಡಿತವನ್ನು ಸರಿಯಾಗಿಯೇ ಅರ್ಥಮಾಡಿಕೊಂಡಿತ್ತು. ಅವರ ನಾಯಕರು ಟಿವಿ ಕ್ಯಾಮೆರಾಗಳ ಮುಂದೆ ಮೀನುಗಳನ್ನು ಪ್ರದರ್ಶಿಸಿದರು ಮತ್ತು ಕುರಿ ಮಾಂಸದೂಟವನ್ನು ಸವಿದಿದ್ದರು. ಬಂಗಾಳಿಗಳ ತಟ್ಟೆಗೆ (ಆಹಾರಕ್ಕೆ)...

24 ಗಂಟೆಗೂ ಮೊದಲೇ ಮಹಾರಾಷ್ಟ್ರದಲ್ಲಿ TET ಪ್ರಶ್ನೆ ಪತ್ರಿಕೆ ಸೋರಿಕೆ: ರದ್ದಾದ ಪರೀಕ್ಷೆ

ಮಹಾರಾಷ್ಟ್ರದಲ್ಲಿ ಮತ್ತೊಂದು ಪರೀಕ್ಷಾ ಅಕ್ರಮದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜೂನ್ 28ರ ಭಾನುವಾರ ನಡೆಯಬೇಕಿದ್ದ ‘ಶಿಕ್ಷಕರ ಅರ್ಹತಾ ಪರೀಕ್ಷೆ’ (TET) ಆರಂಭಕ್ಕೆ ಕೇವಲ 24 ಗಂಟೆಗಳ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾದ...

ಸೌತೆಕಾಯಿ ಕೃಷಿಗೆ ತನ್ನ ಸಚಿವಾಲಯದಿಂದಲೇ ₹99 ಲಕ್ಷ ಸಬ್ಸಿಡಿ ಪಡೆದ ಕೇಂದ್ರ BJP ಸಚಿವ ಭಾಗೀರಥ್ ಚೌಧರಿ

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಭಾಗೀರಥ್ ಚೌಧರಿ ಅವರು ತಮ್ಮದೇ ಸಚಿವಾಲಯದ ವ್ಯಾಪ್ತಿಗೆ ಒರುವ ಯೋಜನೆಯಡಿ, ವಾಣಿಜ್ಯ ಸೌತೆಕಾಯಿ ಕೃಷಿ ಯೋಜನೆಗಾಗಿ 99.03 ಲಕ್ಷ ರೂ. ಸಬ್ಸಿಡಿ (ಸಹಾಯಧನ) ಪಡೆದಿರುವುದು ತನಿಖಾ...

‘ಆರ್‌ಎಸ್‌ಎಸ್‌ ನೋಂದಣಿಯಾದರೆ ಒಳ್ಳೆಯದು’: ರಾಮಮಂದಿರ ಹಗರಣ ವಿಚಾರದಲ್ಲಿ ‘ಸತ್ಯ ಹೊರಬರಬೇಕು’: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

‘ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್‌) ನೋಂದಣಿ ಮಾಡಿಸಿದರೆ ಯಾರಿಗೂ ಆರೋಪ ಮಾಡಲು ಅವಕಾಶ ಇರುವುದಿಲ್ಲ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶುಕ್ರವಾರ ಹೇಳಿದ್ದಾರೆ. ಆರ್‌ಎಸ್‌ಎಸ್ ನೋಂದಣಿ ಕುರಿತು ಕರ್ನಾಟಕದ ಗೃಹ ಸಚಿವ...

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...