Homeಅಂಕಣಗಳುಗುಪ್ತಚರ ಮತ್ತು ಭದ್ರತಾ ವೈಫಲ್ಯ-ಕೊಲೆ-ನಿರ್ಲಕ್ಷ್ಯದ ಸಾವು- ಯಾವುದನ್ನೂ ಪ್ರಶ್ನಿಸದೆ ಮೈಮರೆತ ಮುಖ್ಯವಾಹಿನಿ ಮಾಧ್ಯಮಗಳು

ಗುಪ್ತಚರ ಮತ್ತು ಭದ್ರತಾ ವೈಫಲ್ಯ-ಕೊಲೆ-ನಿರ್ಲಕ್ಷ್ಯದ ಸಾವು- ಯಾವುದನ್ನೂ ಪ್ರಶ್ನಿಸದೆ ಮೈಮರೆತ ಮುಖ್ಯವಾಹಿನಿ ಮಾಧ್ಯಮಗಳು

- Advertisement -
- Advertisement -

ಇತ್ತೀಚಿಗೆ ನಡೆದ ಮೂರು ಘಟನೆಗಳಿಗೆ ಮುಖ್ಯವಾಹಿನಿ ಮಾಧ್ಯಮಗಳು ಸ್ಪಂದಿಸಿದ ರೀತಿ ಇಂದು ದೇಶ ಎದುರಿಸುತ್ತಿರುವ ಬಿಕ್ಕಟ್ಟಿಗೆ ಸ್ಪಷ್ಟ ಕಾರಣಗಳನ್ನು ತಿಳಿಸುವಂತಿದೆ.

ಮೊದಲನೆಯದು ಈಗ ನಡೆದದ್ದಲ್ಲದೇ ಇದ್ದರೂ, 2019ರ ಲೋಕಸಭಾ ಚುನಾವಣೆಗೂ ಮುನ್ನ ನಡೆದ ಪುಲ್ವಾಮಾ ಘಟನೆಯ ಬಗ್ಗೆ ಅಂದು ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿದ್ದ ಸತ್ಯಪಾಲ್ ಮಲಿಕ್ ಅವರು ’ದ ವೈರ್’ ಪತ್ರಿಕೆಗೆ ನೀಡಿದ ಸಂದರ್ಶನಕ್ಕೆ ಸಂಬಂಧಿಸಿದ್ದು. ಪತ್ರಕರ್ತ ಕರಣ್ ಥಾಪರ್ ಜೊತೆಗಿನ ಈ ಸಂದರ್ಶನವನ್ನು ಏಪ್ರಿಲ್ 14ರಂದು ಬಿತ್ತರಿಸಲಾಯಿತು. ಅಂದು ಪುಲಾಮಾ ಉಗ್ರರ ದಾಳಿಯಲ್ಲಿ 40 ಭಾರತೀಯ ಸಿಆರ್‌ಪಿಎಫ್ ಯೋಧರು ಮೃತರಾದದ್ದಕ್ಕೆ ಮೋದಿ ನೇತೃತ್ವದ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂಬುದರಿಂದ ಹಿಡಿದು, ಜಮ್ಮು ಕಾಶ್ಮೀರದಲ್ಲಿ ರಿಲಾಯನ್ಸ್ ವಿಮೆಯನ್ನು ಸರ್ಕಾರಿ ನೌಕರರಿಗೆ ಜಾರಿಮಾಡಲು ತಮ್ಮ ಮೇಲಿದ್ದ ಒತ್ತಡ, ತಾವು ಗೋವಾ ರಾಜ್ಯಪಾಲರಾಗಿದ್ದಾಗ ಭ್ರಷ್ಟಾಚಾರದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಅಲರ್ಟ್ ಮಾಡಿದಾಗ ಅವರು ತೋರಿದ ಉಪೇಕ್ಷೆ – ಹೀಗೆ ಹತ್ತು ಹಲವು ಸಂಗತಿಗಳನ್ನು ಬಹಿರಂಗಪಡಿಸಿದ್ದರು. ಮಲಿಕ್ ಅವರ ಹೇಳಿಕೆಗಳ ಹಿಂದೆ ಬಿದ್ದು ಅದರ ಸತ್ಯಾಸತ್ಯತೆಯನ್ನು ಕಂಡುಹಿಡಿಯುವ, ಆ ಆರೋಪಗಳಗೆ ಉತ್ತರಿಸಬೇಕಿದ್ದ ಸರ್ಕಾರದ ವಕ್ತಾರರು ಮತ್ತು ಸಚಿವರನ್ನು ಪ್ರಶ್ನಿಸುವ ಕೆಲಸಕ್ಕೆ ಮಾಧ್ಯಮಗಳು ಮುಂದಾಗಬೇಕಿತ್ತು. ಸಾಮಾನ್ಯ ಪರಿಸ್ಥಿತಿಯಲ್ಲಾದರೆ ಬಹುತೇಕ ಎಲ್ಲ ಸಚಿವರ ಮುಖಕ್ಕೆ ಮೈಕ್ ಹಿಡಿದು ಮಾಧ್ಯಮಗಳು ಮಲಿಕ್ ಆರೋಪಗಳಿಗೆ ಉತ್ತರಿಸಿ ಎಂದು ದುಂಬಾಲು ಬಿದ್ದಿರುತ್ತಿದ್ದವು. ಆದರೆ ಈ ಸಂದರ್ಭದಲ್ಲಿ, ಮುಖ್ಯವಾಹಿನಿಯ ಕೆಲವೇ ಕೆಲವು ದಿನಪತ್ರಿಕೆಗಳನ್ನು ಹೊರತುಪಡಿಸಿದರೆ ಬಹುತೇಕ ಮುದ್ರಣ ಮತ್ತು ಟಿವಿ ಮಾಧ್ಯಮಗಳು ಮೌನಕ್ಕೆ ಜಾರಿದ್ದವು. ದೇಶದ ರಕ್ಷಣೆಗೆ ಹಾಗೂ ಸೈನಿಕರ ಜೀವಕ್ಕೆ ಸಂಬಂಧಿಸಿದಂತೆ ಸರ್ಕಾರದ ಲೋಪದೋಷದ ಆರೋಪದ ಬಗ್ಗೆ ಮಾಧ್ಯಮಗಳು ಉಸಿರು ಬಿಚ್ಚದಿರುವುದಕ್ಕೆ ಯಾರು ಕಾರಣ ಎಂದು ಊಹಿಸುವುದು ಕಷ್ಟವೇನಲ್ಲ! ಪ್ರಭುತ್ವದಿಂದ ಮಾಧ್ಯಮಗಳಿಗೆ ಉಸಿರುಗಟ್ಟುವ ವಾತಾವರಣ ಸೃಷ್ಟಿಯಾಗಿರುವುದಕ್ಕೆ ಮಾಧ್ಯಮದವರು ಕೂಡ ಜವಾಬ್ದಾರರಲ್ಲವೇ!

ಎರಡನೆಯದ್ದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರ್ಕಾರದ ಪೊಲೀಸ್ ವ್ಯವಸ್ಥೆಯ ಅಡಿಯಲ್ಲಿ ಏಪ್ರಿಲ್ 15ರಂದು ನಡೆದ ಘಟನೆ. ರೌಡಿಸಂನಿಂದ ರಾಜಕಾರಣಿಯಾಗಿದ್ದ ಆತಿಕ್ ಅಹಮದ್ ಮತ್ತು ಅವರ ಸಹೋದರ ಆಶ್ರಫ್‌ರನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ಯುವಾಗ ಮೂರು ಜನ ಬಂದೂಕುಧಾರಿಗಳು ಕ್ಯಾಮರಾ ಮುಂದೆಯೇ ಗುಂಡಿನ ಸುರಿಮಳೆಗೈದು ಕೊಂದರು. ಮೃತರಾದ ಆರೋಪಿಗಳನ್ನು ವಿಚಾರಣೆ ನಡೆಸಿ, ತಪ್ಪಿತಸ್ಥರೆಂದು ಸಾಬೀತಾದರೆ ಶಿಕ್ಷೆ ನೀಡಲು ನ್ಯಾಯಾಲಯ ಇದೆ, ಕಾನೂನಿದೆ. ಆದರೆ, ಪೊಲೀಸರ ಸಮಕ್ಷಮದಲ್ಲಿ ನಡೆದ ಈ ಬೆಚ್ಚಿಬೀಳಿಸುವ ಶೂಟೌಟ್ ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಣೆಯಾಗಿರುವ ಕಥೆಯನ್ನು ಹೇಳುತ್ತಿತ್ತು. ಇದನ್ನು ಪ್ರಶ್ನಿಸಿ ಸರ್ಕಾರವನ್ನು ಕಟಕಟೆಗೆ ನಿಲ್ಲಿಸಬೇಕಿದ್ದ ಮಾಧ್ಯಮಗಳು ಎಂದಿನಂತೆ ಒಂದೋ ಮೌನವಾಗಿದ್ದವು, ಮತ್ತು ಕೆಲವು ಒಂದು ಹಂತ ಮುಂದಕ್ಕೆ ಹೋಗಿ ಈ ಕಾನೂನಿಬಾಹಿರ ಕೊಲೆಗಳನ್ನು ಸಂಭ್ರಮಿಸುತ್ತಿದ್ದವು. ಇದನ್ನು ಸಂಭ್ರಮಿಸಿದ ಮಾಧ್ಯಮಗಳು ಆ ಕೊಲೆಗಾರ ಶೂಟರ್‌ಗಳಿಗಿಂತಲೂ ಹೀನಾಯ ಮನಸ್ಥಿತಿಯವರು ಅನ್ನುವುದರಲ್ಲಿ ಎರಡು ಮಾತಿಲ್ಲ.

ಇದನ್ನೂ ಓದಿ: ಪುಲ್ವಾಮ ದಾಳಿ ಕುರಿತು ಸತ್ಯಪಾಲ್ ಮಲಿಕ್‌ರವರ 5 ಗಂಭೀರ ಆರೋಪಗಳು: ಪ್ರಧಾನಿಯನ್ನು ಪ್ರಶ್ನಿಸದವರು ಪಾಕಿಸ್ತಾನಕ್ಕೆ ಹೋಗಿ

ಮೂರನೆಯದ್ದು ಏಪ್ರಿಲ್, 15 ಭಾನುವಾರದಂದು ನಡೆದ ಘಟನೆ. ಮಹಾರಾಷ್ಟ್ರದ ನವಿ ಮುಂಬೈನ ತೆರೆದ ಮೈದಾನವೊಂದರಲ್ಲಿ ’ಮಹಾರಾಷ್ಟ್ರ ಭೂಷಣ’ ಪ್ರಶಸ್ತಿ ಪ್ರದಾನ ಮಾಡಲು ಆಯೋಜಿಸಿದ್ದ ಬೃಹತ್ ವೇದಿಕೆಯ ಮೇಲೆ ನೆರಳಿನಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ, ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಸೇರಿದಂತೆ ಮತ್ತಿತರ ’ವಿಐಪಿ’ಗಳು ಸುಖವಾಗಿ ಆಸೀನರಾಗಿದ್ದರು. ಸುಡು ಬಿಸಿಲಿನಲ್ಲಿ ಯಾವುದೇ ಛಾವಣಿಯಿಲ್ಲದೆ, ನೆರಳಿಲ್ಲದೆ ಲಕ್ಷಾಂತರ ಜನ (ಆಯೋಜಕರು ಹೇಳಿಕೊಳ್ಳುವಂತೆ 20 ಲಕ್ಷ!) ಗಂಟೆಗಟ್ಟಲೆ ಈ ’ವಿಐಪಿ’ಗಳ ಭಾಷಣಗಳನ್ನು ಕೇಳುತ್ತಾ ಕೂತಿದ್ದರು. ನೆರೆದ ಜನರು ಬಿಸಿಲಿನಲ್ಲಿ ಕೂತು ಕೇಳಿಸಿಕೊಳ್ಳುತ್ತಿರುವ ಬಗ್ಗೆ ಅಮಿತ್ ಶಾ ಭಾಷಣ ಹೊಡೆಯುತ್ತಿದ್ದರೆ, ಅಲ್ಲಿ ನೆರೆದಿದ್ದ ನೂರಾರು ಜನರಿಗೆ ’ಹೀಟ್‌ಸ್ಟ್ರೋಕ್’ ಸಮಸ್ಯೆಯುಂಟಾಗಿ ಆಸ್ಪತ್ರೆಗೆ ದಾಖಲಾಗುವಂತಹ ಪರಿಸ್ಥಿತಿ ಉಂಟಾಯಿತು. ಈಗ ಕನಿಷ್ಟ 13 ಜನ ಮೃತಪಟ್ಟ ವರದಿಯಾಗಿದೆ. ಒಂದು ವಾರದ ಹಿಂದೆಯೇ ಸುಡುಬಿಸಿಲು ಮತ್ತು ಉಷ್ಣ ವಾಯುವಿನ ಸಲುವಾಗಿ ಮಹಾರಾಷ್ಟ್ರದ ಜನ ಹೀಟ್‌ಸ್ಟ್ರೋಕ್ ಸಮಸ್ಯೆಗೆ ಗುರಿಯಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವ ಹಲವು ವರದಿಗಳು ಪತ್ರಿಕೆಗಳಲ್ಲಿ ಬಂದಿದ್ದವು. ಹೀಗಿದ್ದೂ, ಅಂದು ನೆರೆದ ಜನರಿಗೆ ಸಮರ್ಪಕವಾದ ಛಾವಣಿ ಮತ್ತು ನೆರಳು, ಅಗತ್ಯವಿದ್ದಷ್ಟು ಕುಡಿಯುವ ನೀರಿನ ವ್ಯವಸ್ಥೆ ಒದಗಿಸದೆ ಹತ್ತಾರು ಜನರ ಸಾವಿಗೆ ಕಾರಣವಾದ ಸರ್ಕಾರದ್ದು ’ಕ್ರಿಮಿನಲ್ ನೆಗ್ಲಿಜೆನ್ಸ್’ ಅಲ್ಲದೇ ಮತ್ತೇನು? ಹೀಗಿದ್ದೂ ಕೂಡ ಮುಖ್ಯವಾಹಿನಿ ಮಾಧ್ಯಮಗಳು ಈ ಸಾವುಗಳಿಗೆ ಯಾರು ಹೊಣೆ ಎಂದು ಮುಖ್ಯಮಂತ್ರಿಯವರನ್ನು ದಬಾಯಿಸಲಿಲ್ಲ! ಮುಖಕ್ಕೆ ಮೈಕ್ ಹಿಡಿದು, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ಎಂದು ಆಗ್ರಹಿಸಲಿಲ್ಲ. ಮಾತು ಸೋತ ಮಾಧ್ಯಮಗಳು ತಣ್ಣಗಾಗಿ ಹೋಗಿದ್ದವು!

ದೇಶಕ್ಕೆ ಕರಾಳ ದಿನಗಳು ಬಂದೆರಗುವುದಕ್ಕೆ ಸರ್ವಾಧಿಕಾರಿ ಧೋರಣೆಯ ಪ್ರಭುತ್ವದಷ್ಟೇ ಇಂತಹ ಮಾರಿಕೊಂಡ ಮಾಧ್ಯಮಗಳದ್ದೂ ಪಾತ್ರವಿದೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...