ಮಹಾತ್ಮಾ ಗಾಂಧಿ ಮತ್ತು ಸ್ವಾತಂತ್ರ್ಯ ಚಳವಳಿಯ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ನಟಿ ಕಂಗನಾ ರಾಣಾವತ್ ವಿರುದ್ಧ ಅಸ್ಸಾಂನ ಕಾಂಗ್ರೆಸ್ ಗುರುವಾರ ಪೊಲೀಸ್ ದೂರು ದಾಖಲಿಸಿದೆ.
ಗುವಾಹಟಿಯ ದಿಸ್ಪುರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನಲ್ಲಿ, 1947 ರಲ್ಲಿ ಭಾರತಕ್ಕೆ ದೊರೆತ ಸ್ವಾತಂತ್ರ್ಯವನ್ನು ಕಂಗನಾ ಅವಮಾನಿಸಿದ್ದಾರೆ ಎಂದು ಆರೋಪಿಸಿ ದೇಶದ್ರೋಹಕ್ಕೆ ಸಂಬಂಧಿಸಿದ ಸೆಕ್ಷನ್ಗಳ ಅಡಿಯಲ್ಲಿ ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪೊಲೀಸರನ್ನು ಒತ್ತಾಯಿಸಲಾಗಿದೆ.
ಕಂಗನಾ ಅವರಿಗೆ ಇತ್ತೀಚೆಗಷ್ಟೇ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು. ದೂರು ದಾಖಲಾಗದರೂ ಪೊಲೀಸರು ಅವರ ವಿರುದ್ಧ ಇನ್ನೂ ಎಫ್ಐಆರ್ ದಾಖಲಿಸಿಲ್ಲ.
ಇದನ್ನೂ ಓದಿ: ಕಂಗನಾಗೆ ನೀಡಿರುವ ಪದ್ಮಶ್ರೀ ವಾಪಸ್ ಪಡೆದು ಚಿಕಿತ್ಸೆ ಕೊಡಿಸಿ: ರಾಷ್ಟ್ರಪತಿಗೆ ಪತ್ರ ಬರೆದ DCW ಅಧ್ಯಕ್ಷೆ
ಅವರು ‘1947 ರಲ್ಲಿ ಭಾರತಕ್ಕೆ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ ಭಿಕ್ಷೆಯಾಗಿದೆ’ ಎಂಬ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಮತ್ತೇ ಪ್ರತಿಕ್ರಿಯೆ ನೀಡಿದ್ದ ಕಂಗನಾ, ‘ಸುಭಾಸ್ ಚಂದ್ರ ಬೋಸ್ ಮತ್ತು ಭಗತ್ ಸಿಂಗ್ ಅವರಿಗೆ ಮಹಾತ್ಮ ಗಾಂಧಿಯವರಿಂದ ಯಾವುದೇ ಬೆಂಬಲವಿರಲಿಲ್ಲ’ ಎಂದು ಹೇಳಿದ್ದರು. ಜೊತೆಗೆ ಮಹಾತ್ಮಾ ಗಾಂಧಿಯ ‘ಅಹಿಂಸಾ’ ತತ್ವವನ್ನು ಅಪಹಾಸ್ಯ ಮಾಡಿದ್ದರು. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯನ್ನು ನೀಡುವುದರಿಂದ ಭಿಕ್ಷೆ ಸಿಗುತ್ತದೆಯೆ ಹೊರತು ಸ್ವಾತಂತ್ರ್ಯವಲ್ಲ ಎಂದು ಹೇಳಿದ್ದರು.
ಇದು ಹುತಾತ್ಮರಿಗೆ ಮಾಡಿದ ಘೋರ ಅವಮಾನ ಮತ್ತು ದೇಶದ್ರೋಹದ ಹೇಳಿಕೆಯಾಗಿದೆ ಎಂದು ಕಾಂಗ್ರೆಸ್ ತನ್ನ ದೂರಿನಲ್ಲಿ ಹೇಳಿಕೊಂಡಿದೆ. ಸ್ವಾತಂತ್ರ್ಯವು ಪ್ರತಿಯೊಬ್ಬ ಭಾರತೀಯನ ಜನ್ಮಸಿದ್ಧ ಹಕ್ಕು ಮತ್ತು ಇದು ಮಹಾತ್ಮ ಗಾಂಧಿ ಸೇರಿದಂತೆ ಸಾವಿರಾರು ಹುತಾತ್ಮರ ತ್ಯಾಗದಿಂದ ಸಾಧ್ಯವಾಗಿದೆ ಎಂದು ಪಕ್ಷವು ಪ್ರತಿಪಾದಿಸಿದೆ.
ಕಂಗನಾ ಅವರ ಹೇಳಿಕೆಗಳು ಭಾರತೀಯರಿಗೆ ನೋವುಂಟು ಮಾಡಿದ್ದು, ಅಸ್ಸಾಂ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನ ಮಾಡಿದೆ ಎಂದು ಪಕ್ಷ ಆರೋಪಿಸಿದೆ.
ಕಂಗನಾ ತನ್ನ ಮೊದಲ ಹೇಳಿಕೆಯಲ್ಲಿ, ‘2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ಸ್ವಾತಂತ್ರ್ಯ ಸಿಕ್ಕಿದೆ’ ಎಂದು ಹೇಳಿದ್ದರು.
ಇದನ್ನೂ ಓದಿ: ನನ್ನ ಹೇಳಿಕೆ ತಪ್ಪೆಂದು ಸಾಬೀತುಪಡಿಸಿದರೆ ಪದ್ಮಶ್ರೀ ವಾಪಸ್ ಮಾಡುತ್ತೇನೆ: ಕಂಗನಾ ರಣಾವತ್