ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಕಲ್ಕುಳಿ ವಿಠಲ್ ಹೆಗ್ಡೆಯವರನ್ನು ಆಯ್ಕೆ ಮಾಡಿರುವ ವಿಚಾರಕ್ಕೆ ಬಲಪಂಥೀಯ ಸಂಘಟನೆಗಳು ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಅವರ ಆಯ್ಕೆಯನ್ನು ಸಮರ್ಥಿಸಿ ಹಲವಾರು ಸಾಹಿತಿ-ಪ್ರಗತಿಪರರು ಬಹಿರಂಗ ಪತ್ರ ಬರೆದಿದ್ದಾರೆ.
ಚಂದ್ರಶೇಖರ್ ಪಾಟೀಲ್ (ಚಂಪಾ), ಡಾ. ಕೆ. ಮರಳುಸಿದ್ದಪ್ಪ, ಜಿ.ರಾಜಶೇಖರ, ದಿನೇಶ್ ಅಮೀನ್ಮಟ್ಟು, ಬಿ.ಟಿ.ಲಲಿತಾ ನಾಯ್ಕ್, ಡಾ. ಕಾಳೇಗೌಡ ನಾಗವಾರ, ಜಗದೀಶ್ ಕೊಪ್ಪ, ಯೋಗೇಶ್ ಮಾಸ್ತರ್, ಪ್ರೊ.ಶ್ರೀಕಂಠ ಕೂಡಿಗೆ, ಬಂಜಗೆರೆ ಜಯಪ್ರಕಾಶ್, ಸುರೇಶ್ ಭಟ್ ಬಾಕ್ರಬೈಲ್, ಕಡಿದಾಳು ಶಾಮಣ್ಣ, ಡಾ.ವಿಜಯಮ್ಮ, ಪ್ರೊ. ಎಂ. ಚಂದ್ರಶೇಖರಯ್ಯ, ಡಾ. ರಹಮತ್ ತರೀಕೆರೆ, ಪ್ರೋ. ಕೆ ಫಣಿರಾಜ್ ಮತ್ತು ಡಾ. ಉಮಾಶಂಕರ್ ಸೇರಿದಂತೆ ಹಲವರು ಸಹಿ ಹಾಕಿರುವ ಪತ್ರದ ಪೂರ್ಣ ವಿವರ ಕೆಳಗಿನಂತಿದೆ.
ಮಲೆನಾಡಿನ ಖ್ಯಾತ ಪರಿಸರವಾದಿ ಮತ್ತು ಸಮಾಜಮುಖಿ ಚಿಂತಕರಾದ ಕಲ್ಕುಳಿ ವಿಠಲ್ ಹೆಗ್ಡೆಯವರನ್ನ ಚಿಕ್ಕಮಗಳೂರು ಜಿಲ್ಲಾ 10ನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ತೀರ್ಮಾನಿಸಿರುವುದನ್ನು ಕೇಳಿ ನಮ್ಮಗಳಿಗೆ ಅತೀವ ಸಂತೋಷವೆನಿಸಿತು. ಕಳೆದ ನಾಲ್ಕು ದಶಕಗಳಿಂದ ಪಶ್ಚಿಮಘಟ್ಟಗಳನ್ನು ಉಳಿಸಲು, ಅಲ್ಲಿನ ಜನರ ಬದುಕನ್ನು ಹಸನಾಗಿಸಲು ಹೋರಾಟ ಮಾಡುತ್ತಿರುವುದಲ್ಲದೇ, ಅವರಿಗಿರುವ ಪರಿಸರ ಸೂಕ್ಷ್ಮ ತಜ್ಞತೆಯನ್ನು ನಾವು ಗಮನಿಸಿದ್ದೇವೆ. ಮತ್ತು ಇಷ್ಟಲ್ಲದೆ ಕಲ್ಕುಳಿಗಿರುವ ಜನರ ಬದುಕು ಮತ್ತು ಪರಿಸರದೊಳಗಿನ ಸಂಬಂಧಗಳ ಒಳನೋಟಗಳನ್ನು ಕೇಳಿದ್ದೇವೆ. ಅದರ ಮುಂದುವರಿದ ಭಾಗವಾಗಿ ಮಂಗನ ಬ್ಯಾಟೆ ಎನ್ನುವ ವಿಶಿಷ್ಟ ಮತ್ತು ಅನನ್ಯವಾದ ಪುಸ್ತಕವನ್ನು ಹೊರತಂದಿದ್ದಾರೆ. ಇದನ್ನು ಗುರುತಿಸಿಯೇ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿದೆ.
ಇಂತಹ ಪ್ರತಿಭಾವಂತ ಹೋರಾಟಗಾರ ಮತ್ತು ಲೇಖಕನನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿರುವುದನ್ನು ಸರ್ವರೂ ಸ್ವಾಗತಿಸಬೇಕಾಗಿತ್ತು. ವಿಪರ್ಯಾಸವೆಂದರೆ ಬಲಪಂಥೀಯ ಪಟ್ಟಭದ್ರ ಹಿತಾಸಕ್ತಿಗಳು, ಕೆಲವು ಜಾತಿವಾದಿಗಳು, ನಕ್ಸಲೀಯ ಬೆಂಬಲಿಗ ಎಂಬಂತೆ ಚಿತ್ರಿಸಿ ಆಕ್ಷೇಪಗಳನ್ನ ಎತ್ತಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಕಲ್ಕುಳಿ ಹೆಗ್ಗಡೆ ಬದಲಾಯಿಸಿದರೆ ಧರಣಿ: ಜಗದೀಶ್ ಕೊಪ್ಪ ಎಚ್ಚರಿಕೆ
ವಿಠಲ್ ಹೆಗ್ಡೆಯವರು ನಕ್ಸಲ್ ಹಿಂಸಾಚಾರವನ್ನ ಮತ್ತು ಅವರ ಮಾರ್ಗವನ್ನ ಎಂದೂ ಒಪ್ಪಿದವರಲ್ಲ. ನಕ್ಸಲೀಯ ಹೋರಾಟ ಆರಂಭವಾದಾಗಿನಿಂದಲೂ ಅದರ ಬಗ್ಗೆ ತಕರಾರುಗಳನ್ನು ಮತ್ತು ಭಿನ್ನಾಭಿಪ್ರಾಯಗಳನ್ನು ಸಾರ್ವಜನಿಕವಾಗಿಯೇ ವ್ಯಕ್ತಪಡಿಸುತ್ತಾ ಬಂದಿದ್ದಾರೆ.
ಮಲೆನಾಡಿನಲ್ಲಿ ನಡೆಯುವ ಆದಿವಾಸಿ ದೌರ್ಜನ್ಯಗಳ ವಿರುದ್ಧ, ಎತ್ತಂಗಡಿಗಳ ವಿರುದ್ಧ, ಜಾತಿ ದೌರ್ಜನ್ಯಗಳ ವಿರುದ್ಧ ಅವರೆಂದೂ ರಾಜಿ ಮಾಡಿಕೊಂಡವರಲ್ಲ. ಇಂತಹ ಕಲ್ಕುಳಿಯವರನ್ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕೆಂಬ ಷಡ್ಯಂತ್ರವನ್ನು ನಾವು ಒಪ್ಪುವುದಿಲ್ಲ. ಇದು ಮಲೆನಾಡಿಗರಿಗೆ ಹೆಮ್ಮೆ ಎಂದು ಭಾವಿಸಿ ಮಾನ್ಯ ಮುಖ್ಯಮಂತ್ರಿಗಳು ಮತ್ತು ಗೃಹಮಂತ್ರಿಗಳು ಮಧ್ಯಪ್ರವೇಶಿಸಬೇಕು.
ಮಲೆನಾಡಿನ ಜ್ವಲಂತ ಸಮಸ್ಯೆಗಳು, ಪರಿಸರ ಬಿಕ್ಕಟ್ಟುಗಳ ಕುರಿತು ಸಾಹಿತ್ಯ ಸಮ್ಮೇಳನದಲ್ಲಿ ಆಳವಾದ ಚರ್ಚೆ ನಡೆದು ಸ್ವಸ್ಥ ಮತ್ತು ಸುಂದರ ಮಲೆನಾಡಿಗೆ ಈ ಸಾಹಿತ್ಯ ಸಮ್ಮೇಳನ ನಾಂದಿಯಾಗಲಿ ಎಂದು ಬಯಸುತ್ತೇವೆ.