Homeರಂಜನೆಕ್ರೀಡೆಮೊಹಮ್ಮದ್ ಶಮಿ ಪರ ನಿಂತ ರಾಹುಲ್ ಗಾಂಧಿ, ಸಚಿನ್ ತೆಂಡೂಲ್ಕರ್

ಮೊಹಮ್ಮದ್ ಶಮಿ ಪರ ನಿಂತ ರಾಹುಲ್ ಗಾಂಧಿ, ಸಚಿನ್ ತೆಂಡೂಲ್ಕರ್

'ಮೊಹಮ್ಮದ್ ಶಮಿ ಭಯ್ಯಾ, ನಿಮ್ಮ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ' ಎಂದು ಯಜುವೇಂದ್ರ ಚಹಲ್ ಟ್ವೀಟ್ ಮಾಡಿದರೆ 'ನಾವು ನಿಮ್ಮನ್ನು ಪ್ರೀತಿಸುತ್ತೇವೆ ಶಮಿ' ಎಂದು ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ. 

- Advertisement -
- Advertisement -

ಭಾರತ ತಂಡವು ಪಾಕಿಸ್ತಾನ ಎದುರು ಟಿಟ್ವೆಂಟಿ ಪಂದ್ಯ ಸೋತಿದ್ದಕ್ಕಾಗಿ ದುಷ್ಕರ್ಮಿಗಳಿಂದ ನಿಂದನೆಗೆ ಒಳಗಾಗಿದ್ದ ಖ್ಯಾತ ವೇಗದ ಬೌಲರ್ ಮೊಹಮ್ಮದ್ ಶಮಿ ಪರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಭಾರತ ತಂಡದ ಹಿರಿಯ ಆಟಗಾರ ಸಚಿನ್ ತೆಂಡೂಲ್ಕರ್ ದನಿಗೂಡಿಸಿದ್ದಾರೆ.

“ಮೊಹಮ್ಮದ್ ಶಮಿ ನಾವೆಲ್ಲರೂ ನಿನ್ನ ಜೊತೆಗಿದ್ದೇವೆ. ಈ ಜನರ ಮನಸ್ಸು ದ್ವೇಷದಿಂದ ತುಂಬಿಹೋಗಿದೆ, ಏಕೆಂದರೆ ಅವರಿಗೆ ಪ್ರೀತಿ ನೀಡುವವರೇ ಇಲ್ಲ. ಅವರನ್ನು ಕ್ಷಮಿಸಿಬಿಡು” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಅದೇ ರೀತಿಯಾಗಿ ಟ್ವೀಟ್ ಮಾಡಿರುವ ಸಚಿನ್ ತೆಂಡೂಲ್ಕರ್, “ನಾವು ಭಾರತ ತಂಡವನ್ನು ಬೆಂಬಲಿಸಿದಾಗ, ತಂಡವನ್ನು ಪ್ರತಿನಿಧಿಸುವ ಪ್ರತಿಯೊಬ್ಬ ವ್ಯಕ್ತಿಯನ್ನು ಬೆಂಬಲಿಸುತ್ತೇವೆ. ಮೊಹಮ್ಮದ್ ಶಮಿ ಬದ್ಧತೆಯ, ವಿಶ್ವ ದರ್ಜೆಯ ಬೌಲರ್. ಇತರ ಕ್ರೀಡಾಪಟುಗಳಂತೆ ಆ ದಿನ ಅವರದಾಗಿರಲಿಲ್ಲ. ನಾನು ಶಮಿ ಮತ್ತು ಟೀಮ್ ಇಂಡಿಯಾದ ಹಿಂದೆ ನಿಂತಿದ್ದೇನೆ” ಎಂದಿದ್ದಾರೆ.

‘ಮೊಹಮ್ಮದ್ ಶಮಿ ಭಯ್ಯಾ, ನಿಮ್ಮ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ’ ಎಂದು ಭಾರತದ ಖ್ಯಾತ ಬೌಲರ್ ಯಜುವೇಂದ್ರ ಚಹಲ್ ಟ್ವೀಟ್ ಮಾಡಿದರೆ ‘ನಾವು ನಿಮ್ಮನ್ನು ಪ್ರೀತಿಸುತ್ತೇವೆ ಶಮಿ’ ಎಂದು ಹಿರಿಯ ಆಟಗಾರ ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.

“ಮೊಹಮ್ಮದ್ ಶಮಿ ಮೇಲಿನ ಆನ್‌ಲೈನ್ ದಾಳಿ ಆಘಾತಕಾರಿಯಾದುದ್ದು. ನಾವು ಶಮಿ ಪರವಾಗಿ ನಿಲ್ಲುತ್ತೇವೆ. ಅವರು ಚಾಂಪಿಯನ್ ಆಗಿದ್ದಾರೆ ಮತ್ತು ಭಾರತದ ಕ್ಯಾಪ್ ಧರಿಸುವ ಯಾರೇ ಆಗಲಿ ಅವರು ಈ ಆನ್‌ಲೈನ್ ದ್ವೇಷ ಕಾರುವವರಿಗಿಂತ ಹೆಚ್ಚಿನ ಮಟ್ಟದಲ್ಲಿ ಭಾರತವನ್ನು ತಮ್ಮ ಹೃದಯದಲ್ಲಿಟ್ಟುಕೊಂಡಿರುತ್ತಾರೆ. ನಿನ್ನೊಂದಿಗಿದ್ದೇನೆ ಶಮಿ, ಮುಂದಿನ ಪಂದ್ಯದಲ್ಲಿ ನಿಮ್ಮ ಪರಾಕ್ರಮ ತೋರಿಸಿ” ಎಂದು ಹಿರಿಯ ಆಟಗಾರ ವಿರೇಂದ್ರ ಸೆಹ್ವಾಗ್ ಬರೆದಿದ್ದಾರೆ.

ಮೊಹಮ್ಮದ್ ಶಮಿ ಭಾರತದ ಹೆಮ್ಮೆ ಎಂದು ಅಮನ್ ಶರ್ಮಾರವರು 2019ರ ವಿಶ್ವಕಪ್ ಪಂದ್ಯದ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಭಾರತ – ಆಫ್ಘಾನಿಸ್ಥಾನ ನಡುವೆ ನಡೆದ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ ಗೆಲ್ಲಲು ಆಫ್ಘಾನಿಸ್ಥಾನ 16 ರನ್ ಗಳಿಸಬೇಕಿತ್ತು. ಆಗ ಬೌಲ್ ಮಾಡಿದ ಶಮಿ ಕೇವಲ ನಾಲ್ಕು ರನ್ ನೀಡಿ ಸತತ ಮೂರು ವಿಕೆಟ್ (ಹ್ಯಾಟ್ರಿಕ್) ಗಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು. ಆಗ ಇಡೀ ದೇಶವೇ ಶಮಿಯವರನ್ನು ಕೊಂಡಾಡಿತ್ತು. ಈ ವಿಡಿಯೋವನ್ನು ಐಸಿಸಿ ಹಂಚಿಕೊಂಡಿದೆ.

ಭಾನುವಾರದ ಪಂದ್ಯದಲ್ಲಿ ಭಾರತ ಪಾಕ್ ಎದುರು 10 ವಿಕೆಟ್‌ಗಳ ಸೋಲೊಪ್ಪಿಕೊಂಡಿತ್ತು. ವಿರಾಟ್ ಕೊಹ್ಲಿ ಇಡೀ ತಂಡ ಚೆನ್ನಾಗಿ ಆಡಲಿಲ್ಲಿ ಎಂದು ವಿಮರ್ಶಿಸಿಕೊಂಡಿದ್ದರು. ಆದರೂ ಬಹಳಷ್ಟು ದುಷ್ಕರ್ಮಿಗಳು ಇನ್ಸ್ಟಾಗ್ರಾಮ್ ನಲ್ಲಿ ಮೊಹಮ್ಮದ್ ಶಮಿಯನ್ನು ಟ್ರೋಲ್ ಮಾಡಿ ನಿಂದಿಸಿದ್ದರು. ಅದಕ್ಕೆ ಮುಸ್ಲಿಂ ಧರ್ಮಿಯರಾಗಿದ್ದೇ ಏಕೈಕ ಕಾರಣವಾಗಿತ್ತು. 11 ಜನರ ತಂಡದಲ್ಲಿ ಶಮಿ ಒಬ್ಬರೆ ಮುಸ್ಲಿಂ ಆಗಿದ್ದರು. ಪಾಕಿಸ್ತಾನಕ್ಕೆ ಹೋಗು, ದೇಶದ್ರೋಹಿ ಎಂದು ಕೆಟ್ಟದಾಗಿ ದಾಳಿ ಮಾಡಿದ್ದರು. ಈ ದಾಳಿಯನ್ನು ಭಾರತದ ಹಲವಾರು ಕ್ರೀಡಾಪಟುಗಳು, ರಾಜಕಾರಣಿಗಳು ಖಂಡಿಸಿದ್ದರು.


ಇದನ್ನೂ ಓದಿ: ಪಂದ್ಯ ಸೋತರೂ ಕೋಟ್ಯಾಂತರ ಅಭಿಮಾನಿಗಳ ಮನಗೆದ್ದ ಕೊಹ್ಲಿ, ಧೋನಿ!


ಭಾರತದ ಹಿರಿಯ ಆಟಗಾರ ಇರ್ಫಾನ್ ಪಠಾಣ್ ಟ್ವೀಟ್ ಮಾಡಿ, “ನಾನು ಕೂಡ ಭಾರತವು  ಪಾಕಿಸ್ತಾನದ ಎದುರು ಸೋತ ಕೆಲ ಪಂದ್ಯಗಳ ಭಾಗವಾಗಿದ್ದೇನೆ. ಆದರೆ ಆಗ ನನಗೆ ಯಾರೂ ಪಾಕಿಸ್ತಾನಕ್ಕೆ ಹೋಗು ಎಂದು ಹೇಳಿರಲಿಲ್ಲ. ನಾನು ಕೆಲ ವರ್ಷಗಳ ಹಿಂದಿನ ಭಾರತದ ಬಗ್ಗೆ ಮಾತನಾಡುತ್ತಿದ್ದೇನೆ ಮತ್ತು ಈ ದುಷ್ಕರ್ಮಿಗಳನ್ನು ತಡೆಯಬೇಕಿದೆ” ಎಂದು ಒತ್ತಾಯಿಸಿದ್ದಾರೆ.

ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲ ಟ್ವೀಟ್ ಮಾಡಿ, “ನಿನ್ನೆ ರಾತ್ರಿ ಭಾರತ ಸೋತ ಪಂದ್ಯದಲ್ಲಿ 11 ಜನರ ತಂಡದಲ್ಲಿ ಮೊಹಮ್ಮದ್ ಶಮಿ ಒಬ್ಬರಾಗಿದ್ದರು. ಅವರೊಬ್ಬರೆ ಮೈದಾನದಲ್ಲಿರಲಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಕ್ರೂರವಾಗಿ ನಿಂದಿಸಲ್ಪಟ್ಟ ಮತ್ತು ಟ್ರೋಲ್‌ಗೆ ಒಳಗಾದ ನಿಮ್ಮ ತಂಡದ ಸಹ ಆಟಗಾರನ ಪರವಾಗಿ ನಿಲ್ಲಲು ನಿಮಗೆ ಸಾಧ್ಯವಾಗದಿದ್ದರೆ ಟೀಮ್ ಇಂಡಿಯಾ, ನೀವು ಬ್ಲಾಕ್ ಲೈವ್ಸ್ ಮ್ಯಾಟರ್‌ಗಾಗಿ ಮಂಡಿಯೂರಿದ್ದ ಯಾವುದೇ ಲೆಕ್ಕಕ್ಕೆ ಬರುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಬಿಜೆಪಿ ಸಂಸದ ಮತ್ತು ಮಾಜಿ ಆಟಗಾರ ಗೌತಮ್ ಗಂಭೀರ್ “ಪಾಕ್ ಗೆದ್ದಾಗ ಪಟಾಕಿ ಸಿಡಿಸಿದವರು ಭಾರತೀಯರಲ್ಲ. ನಾವು ನಮ್ಮ ಹುಡುಗರ ಜೊತೆ ನಿಲ್ಲುತ್ತೇವೆ. ನಾಚಿಕೆಗೇಡು” ಎಂದು ಟ್ವೀಟ್ ಮಾಡಿದ್ದಾರೆ. ಅವರು ಶಮಿ ಬಗ್ಗೆ ಉಲ್ಲೇಖ ಮಾಡಿಲ್ಲ.

ಅದಕ್ಕೆ ವಿನಯ್ ಕುಮಾರ್ ಎಂಬುವವರು ಬ್ಲಾಕ್ ಲೈವ್ಸ್ ಮ್ಯಾಟರ್ ಗೆ ಗೌರವ ಸಲ್ಲಿಸಲು ಮಂಡಿಯೂರಿದ ಎಷ್ಟು ಆಟಗಾರರು ಶಮಿ ಪರವಾಗಿ ನಿಂತರು ಎಂದು ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: ‘Black Lives Matters’ ಬೆಂಬಲಿಸಿ ಮಂಡಿಯೂರಿದ ಭಾರತೀಯ ಕ್ರಿಕೆಟಿಗರು: ಮಿಶ್ರ ಪ್ರತಿಕ್ರಿಯೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...