ಶಿಕ್ಷಕರ ನೇಮಕಾತಿಯ ಸಂದರ್ಭದಲ್ಲಿ ಭಾರೀ ಕಿಕ್ ಬ್ಯಾಕ್ ಪಡೆದು ಭ್ರಷ್ಟಾಚಾರವೆಸಗಿರುವ ಆರೋಪದಲ್ಲಿ ಬಂಧಿತನಾಗಿರುವ ಬಂಗಾಳದ ಸಚಿವ ಪಾರ್ಥ ಚಟರ್ಜಿಯ ಆಪ್ತ ಸಹಾಯಕಿಯ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಎರಡು ಮನೆಗಳಿಂದ ಒಟ್ಟು 50 ಕೋಟಿ ರೂ ಹಣ ಮತ್ತು 5 ಕೆಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಅವ್ಯವಹಾರದ ಮನಿ ಲಾಂಡರಿಂಗ್ ಕೇಸ್ ದಾಖಲಿಸಿರುವ ಇಡಿ ಸಚಿವನ ಸಹಾಯಕಿ ಅರ್ಪಿತ ಮುಖರ್ಜಿಯ ಕೋಲ್ಕತ್ತಾದ ಬೆಲ್ಘಾರಿಯಾ ಪ್ರದೇಶದಲ್ಲಿರುವ ಮನೆ ಮೇಲೆ ದಾಳಿ ಶೋಧ ನಡೆಸಿದೆ. ಈ ಸಂದರ್ಭದಲ್ಲಿ ಭಾರೀ ಹಣ ಪತ್ತೆಯಾಗಿದ್ದು ಮೂರು ನೋಟು ಎಣಿಸುವ ಮೆಷಿನ್ಗಳ ಸಹಾಯದಿಂದ 50 ರೂ ಹಣವನ್ನು ಎಣಿಸಿ 10 ಟ್ರಂಕ್ಗಳಲ್ಲಿ ಸಾಗಿಸಲಾಗಿದೆ.
ಶೋಧ ಸಂದರ್ಭದಲ್ಲಿ 40 ಪುಟಗಳ ಡೈರಿ ಮತ್ತು ಹಲವು ದಾಖಲೆಗಳು ಸಿಕ್ಕಿದ್ದು, ಮುಂದಿನ ತನಿಖೆಗೆ ಸಹಾಯಕವಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಪಾರ್ಥ ಚಟರ್ಜಿಯವರು ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಯವರ ಆಪ್ತರು ಮತ್ತು ಕ್ಯಾಬಿನೆಟ್ ಸಚಿವರಾಗಿದ್ದರು. ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆಸಿದ ಆರೋಪ ಎದುರಿಸುತ್ತಿರುವ ಅವರನ್ನು ಅವರ ಸಹಾಯಕಿ ಅರ್ಪಿತ ಮುಖರ್ಜಿಯೊಂದಿಗೆ ಬಂಧಿಸಲಾಗಿದೆ.
ಈ ಕುರಿತು ವಿರೋಧ ಪಕ್ಷಗಳ ಟೀಕೆಗಳಿಗೆ ಉತ್ತರಿಸಿರುವ ಸಿಎಂ ಮಮತಾ ಬ್ಯಾನರ್ಜಿ, “ನಾನು ಯಾವುದೇ ಕಾರಣಕ್ಕೂ ಭ್ರಷ್ಟಾಚಾರವನ್ನು ಬೆಂಬಲಿಸುವುದಿಲ್ಲ. ಸಚಿವ ತಪ್ಪಿತಸ್ಥ ಎಂದು ಕಂಡುಬಂದರೆ ಶಿಕ್ಷೆ ಅನುಭವಿಸುತ್ತಾರೆ. ಯಾರೇ ತಪ್ಪು ಮಾಡಿದರೂ ಅವರು ಶಿಕ್ಷೆ ಅನುಭವಿಸುತ್ತಾರೆ. ಆದರೆ ಈ ವಿಚಾರದ ಕುರಿತು ನನ್ನ ಮೇಲೆ ಕೆಟ್ಟ ದಾಳಿ ನಡೆಸುವುದು ಸರಿಯಲ್ಲ. ನಿಗಧಿತ ಸಮಯದಲ್ಲಿ ಸತ್ಯ ಹೊರಬೀಳಲಿದೆ” ಎಂದಿದ್ದಾರೆ.
ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಸಾಗರ: ಸಮಾಜವಾದಿ ನೆಲದಲ್ಲಿ ಸಂಚುಕೋರ ರಾಜಕಾರಣ ಮುನ್ನಲೆಗೆ?