ಪಂಜಾಬ್ನಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಪೌರತ್ವ ಸಾಬೀತುಪಡಿಸುವ ವಿಧಾನದ ಕುರಿತು ಮಾಜಿ ರಾಜತಾಂತ್ರಿಕ ನವದೀಪ್ ಸೂರಿ ಅವರು ಭಾನುವಾರ (ಆ.23) ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ನವದೀಪ್ ಸೂರಿ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಎಸ್ಐಆರ್ ಪ್ರಕ್ರಿಯೆಯ ತಮ್ಮ ಅನುಭವವನ್ನು ವಿವರವಾಗಿ ಹಂಚಿಕೊಂಡಿದ್ದಾರೆ. ಒಬ್ಬ ಮಾಜಿ ರಾಯಭಾರಿಗೇ ಈ ಪ್ರಕ್ರಿಯೆಯು ಕಷ್ಟಕರವೆನಿಸಿದರೆ, ಇನ್ನು ಸಾಮಾನ್ಯ ನಾಗರಿಕರ ಕಥೆಯೇನು ಎಂದು ಅವರು ಪ್ರಶ್ನಿಸಿದ್ದಾರೆ. 2003ರ ಮತದಾರರ ಪಟ್ಟಿಯಲ್ಲಿದ್ದ ತಮ್ಮ ವಿವರಗಳಲ್ಲಿ ವ್ಯತ್ಯಾಸಗಳು ಕಂಡುಬಂದ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗವು ತಮಗೆ ನೋಟಿಸ್ ಜಾರಿ ಮಾಡಿ ಅಗತ್ಯ ದಾಖಲೆಗಳನ್ನು ಒದಗಿಸುವಂತೆ ಕೇಳಿತ್ತು ಎಂದು ಅವರು ಬರೆದುಕೊಂಡಿದ್ದಾರೆ.
“ನನ್ನ ಹತ್ತಿರ ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಹೊರತುಪಡಿಸಿ ಇತರ ದಾಖಲೆಗಳಿವೆ. ಆದರೆ, ಈ ಪ್ರಶ್ನೆಯನ್ನು ಕೇಳದಿರಲು ಸಾಧ್ಯವಿಲ್ಲ: ಮೂರು ದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ನಂತರವೂ ನನ್ನ ಪೌರತ್ವವನ್ನು ಸಾಬೀತುಪಡಿಸಲು ನನಗೆ ತೊಂದರೆಯಾಗುತ್ತಿದ್ದರೆ, ಇನ್ನು ಸಾಮಾನ್ಯ ನಾಗರಿಕನ ಗತಿಯೇನು? ಇದೇ ಇರಬೇಕು ‘ಸುಲಭ ಜೀವನ ಮಟ್ಟ’ ಎಂದರೆ” ಎಂದು ಸೂರಿ ಹೇಳಿದ್ದಾರೆ.
ತಮ್ಮ ಸ್ಥಳೀಯ ಚುನಾವಣಾಧಿಕಾರಿಗಳೊಂದಿಗಿನ ಸಂಭಾಷಣೆಯ ವಿವರಗಳನ್ನು ಮುಂದುವರಿಸುತ್ತಾ ಸೂರಿ, “ನಾನು ಬಿಎಲ್ಒ ಜೊತೆ ಮಾತನಾಡಿದೆ. ಅವರು ನನಗೆ ಬಂದು ನೋಟಿಸ್ ಪಡೆದುಕೊಳ್ಳಲು ಹೇಳಿದರು. ನಂತರ ನಾನು ಭಾರತೀಯ ನಾಗರಿಕನೆಂದು ತೋರಿಸುವ, ನಿರ್ದಿಷ್ಟಪಡಿಸದ ಕೆಲ ದಾಖಲೆಗಳೊಂದಿಗೆ ಮತ್ತೆ ಬರಬೇಕೆಂದು ತಿಳಿಸಿದರು. ನಾನು 2003ರಲ್ಲಿ ಭಾರತದಲ್ಲಿ ಇರಲಿಲ್ಲ ಎಂದು ಉತ್ತರಿಸಿದೆ, ಹಾಗಾಗಿ ಅವರು ಸಾಕ್ಷಿಯಾಗಿ ಪಾಸ್ಪೋರ್ಟ್ ನೀಡುವಂತೆ ಕೇಳಿದ್ದಾರೆ. 2026ರಲ್ಲಿ ಅಪ್ಲೋಡ್ ಮಾಡಿದ ದಾಖಲೆಗಳು 2003ರ ನನ್ನ ವಿವರಗಳಿಗೆ ತಾಳೆಯಾಗುತ್ತಿಲ್ಲ. ಇದು ಅತ್ಯಂತ ವಿಚಿತ್ರವಾಗಿದೆ, ಏಕೆಂದರೆ 2003ರಲ್ಲಿ ನಾನು ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ನಲ್ಲಿದ್ದೆ ಮತ್ತು ಎಸ್ಐಆರ್ ಪ್ರಕ್ರಿಯೆಯಲ್ಲಿ ಭಾಗವಹಿಸಿರಲಿಲ್ಲ” ಎಂದು ತಿಳಿಸಿದ್ದಾರೆ.
ಸೂರಿ ಅವರು ಕೈರೋ, ಡಮಾಸ್ಕಸ್, ವಾಷಿಂಗ್ಟನ್, ದಾರ್ ಎ ಸಲಾಮ್ ಮತ್ತು ಲಂಡನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಜೋಹಾನ್ಸ್ಬರ್ಗ್ನಲ್ಲಿ ಭಾರತದ ಕಾನ್ಸುಲ್ ಜನರಲ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಆಸ್ಟ್ರೇಲಿಯಾಕ್ಕೆ ಭಾರತದ ಹೈಕಮಿಷನರ್ ಆಗಿ ಹಾಗೂ ಈಜಿಪ್ಟ್ ಮತ್ತು ಯುಎಇ ದೇಶಗಳಿಗೆ ಭಾರತದ ರಾಯಭಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರ ಈ ಅತ್ಯುತ್ತಮ ಸೇವೆಯನ್ನು ಗುರುತಿಸಿ, ಯುಎಇ ಅಧ್ಯಕ್ಷರು ಆ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಆರ್ಡರ್ ಆಫ್ ಝಾಯೆದ್ II’ ಗೌರವವನ್ನು ನೀಡಿ ಗೌರವಿಸಿದ್ದಾರೆ.
ಪಂಜಾಬ್ ಮುಖ್ಯ ಚುನಾವಣಾಧಿಕಾರಿ (ಸಿಇಒ) ಅನಿಂಧಿತಾ ಮಿತ್ರಾ ಅವರನ್ನು ಸಂಪರ್ಕಿಸಿದಾಗ, ನವದೀಪ್ ಸೂರಿ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಎಂದಿಗೂ ತೆಗೆದುಹಾಕಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ಮಾಜಿ ರಾಜತಾಂತ್ರಿಕ ನವದೀಪ್ ಸೂರಿ ಅವರ ಹೆಸರು ಆಗಸ್ಟ್ 13ರಂದು ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯ ಭಾಗವಾಗಿದೆ. ಅದನ್ನು ಎಂದಿಗೂ ತೆಗೆದುಹಾಕಿಲ್ಲ. ಅವರ ಮತವು ಅಮೃತಸರದಲ್ಲಿ ನೋಂದಣಿಯಾಗಿತ್ತು ಮತ್ತು ಅಲ್ಲೇ ಮುಂದುವರಿದಿದೆ. 2003ರ ಎಸ್ಐಆರ್ ಪಟ್ಟಿಯಲ್ಲಿ ಅವರ ವಿವರಗಳು ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿ ಅವರಿಗೆ ನೋಟಿಸ್ ನೀಡಲಾಗಿತ್ತು ಮತ್ತು ದಾಖಲೆಗಳನ್ನು ಸಲ್ಲಿಸಲು ಕೋರಲಾಗಿತ್ತು. ದಾಖಲೆಗಳನ್ನು ಪಡೆದ ನಂತರ, ಅವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಪ್ರಕಟಿಸಲಾಗಿದೆ” ಎಂದು ಮಿತ್ರಾ ತಿಳಿಸಿದ್ದಾರೆ ಎಂಬುವುದಾಗಿ indianexpress.com ವರದಿ ಮಾಡಿದೆ.


