ಹೈದರಾಬಾದಿನ ಪಶುವೈದ್ಯಯ ಅತ್ಯಾಚಾರ-ಕೊಲೆ ಪ್ರಕರಣದ ಆರೋಪಿಗಳನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿರುವುದನ್ನು ಕೇರಳ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆಮಲ್ ಪಾಷಾ ಕಟು ಶಬ್ದಗಳಲ್ಲಿ ಖಂಡಿಸಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ನಾಲ್ವರು ಆರೋಪಿಗಳನ್ನು ಎನ್ ಕೌಂಟರ್ ನಲ್ಲಿ ಬಲಿಹಾಕಿರುವುದರಿಂದ ಈ ದೇಶದ ಸಾಮಾನ್ಯ ಜನತೆ ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿರುವುದಾಗಿ ವರದಿ ಮಾಡಿದೆ.
ಇದನ್ನು ಎನ್ ಕೌಂಟರ್ ಎಂದು ಕರೆಯಲು ಬರುವುದಿಲ್ಲ. ಇದೊಂದು ಶೀತಲ ಹತ್ಯೆಯಾಗಿದೆ. ಇದನ್ನು ಜನರ ಇಚ್ಚೆ ಎಂಬಂತೆ ಪೊಲೀಸರು ಬಿಂಬಿಸಲು ಯತ್ನಿಸುತ್ತಿದ್ದಾರೆ. ಇದು ಪೊಲೀಸ್ ಭಾಷೆಯಲ್ಲಿ ಸೊನ್ನೆ ಎಂದು ಕೆಮಲ್ ಪಾಷಾ ಹೇಳಿದ್ದಾರೆ.
ಜನರ ಗಲಭೆಯನ್ನು ನಿಯಂತ್ರಿಸಲು ಸಾಧ್ಯವಾಗದೆ ಪೊಲೀಸರು ತಮ್ಮನ್ನು ರಕ್ಷಿಸಿಕೊಳ್ಳಲು ಎನ್ ಕೌಂಟರ್ ಮಾಡಿದ್ದಾರೆ. ಪೊಲೀಸರು ಯಾಕೆ ಹತ್ಯೆ ಮಾಡಿದರು ಎಂದು ಪ್ರಶ್ನಿಸಿರುವ ನಿವೃತ್ತ ನ್ಯಾಯಮೂರ್ತಿಗಳು ಭಾರತೀಯ ದಂಡ ಸಂಹಿತೆಯ ವ್ಯವಸ್ಥೆಯಲ್ಲಿ ಈ ರೀತಿ ಎನ್ ಕೌಂಟರ್ ಮಾಡಲು ಅವಕಾಶವಿಲ್ಲ. ಆದರೆ ಇದೇ ಐಪಿಸಿ ಪ್ರಕಾರ ಆರೋಪಿಗಳಿಗೆ ಗರಿಷ್ಟ ಶಿಕ್ಷೆಯನ್ನು ಅಂದರೆ ಮರಣದಂಡನೆಯನ್ನು ಕೊಡಲು ಅವಕಾಶವಿದೆ ಎಂದು ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ತಿಳಿಸಿದೆ.
ಈಗ ನಡೆದಿರುವುದು ಸರಿಯಾದ ಮಾರ್ಗವಲ್ಲ. ಪೊಲೀಸರು ಮೊದಲು ತನಿಖೆ ಮಾಡಬೇಕಿತ್ತು. ಅದನ್ನು ಪರಿಶೀಲಿಸಬೇಕಿತ್ತು. ಇದ್ಯಾವುದನ್ನೂ ಮಾಡಿಲ್ಲ. ಜನರು ಪೊಲೀಸರನ್ನು ದೂರುವುದನ್ನು ತಪ್ಪಿಸಿಕೊಳ್ಳಲು ಎನ್ ಕೌಂಟರ್ ಮಾಡಲಾಗಿದೆ. ಇದು ಜನರ ಇಚ್ಚೆಯಂತೆ ಬಿಂಬಿಸಲಾಗುತ್ತಿದೆ. ಇದು ಪೊಲೀಸರು ತಮ್ಮನ್ನು ರಕ್ಷಿಸಿಕೊಳ್ಳಲು ಮಾಡಿದ ತಂತ್ರವಾಗಿದೆ ಎಂದು ತಿಳಿಸಿದ್ದಾರೆ.
ತೆಲಂಗಾಣ ಜನರ ಇಚ್ಚೆಯಂತೆ ಮಾಡಲಾಗಿದೆ ಎಂದು ಪೊಲೀಸರು ಭಾವಿಸಿರಬಹುದು. ಆದರೆ ಇದು ಅಪಾಯಕಾರಿ ಪರಿಸ್ಥಿತಿ ಎಂದು ಹೇಳಿದ್ದಾರೆ.