Homeಮುಖಪುಟಯುಪಿ: ಮುಸ್ಲಿಮರಲ್ಲಿ ಭಯ ಹರಡಿಸಲೆಂದೇ ದುಷ್ಕರ್ಮಿಗಳ ಗುಂಪು ಮುಸ್ಲಿಂ ವ್ಯಕ್ತಿಯನ್ನು ಕೊಂದಿತ್ತು: ‘ದಿ ವೈರ್‌’ ವರದಿ

ಯುಪಿ: ಮುಸ್ಲಿಮರಲ್ಲಿ ಭಯ ಹರಡಿಸಲೆಂದೇ ದುಷ್ಕರ್ಮಿಗಳ ಗುಂಪು ಮುಸ್ಲಿಂ ವ್ಯಕ್ತಿಯನ್ನು ಕೊಂದಿತ್ತು: ‘ದಿ ವೈರ್‌’ ವರದಿ

- Advertisement -
- Advertisement -

ಸೆಪ್ಟೆಂಬರ್ 2ರಂದು ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಯ ವಿನಯ್‌ಪುರದಲ್ಲಿ ದಾವೂದ್ ಅಲಿ ತ್ಯಾಗಿ ಎಂಬ 50 ವರ್ಷದ ಮುಸ್ಲಿಂ ವ್ಯಕ್ತಿಯ ಮೇಲೆ ಗುಂಪೊಂದು ದಾಳಿ ನಡೆಸಿತ್ತು. ಸುಮಾರು 20 ಮಂದಿ ತ್ಯಾಗಿಯವರ ಮೇಲೆ ತಡರಾತ್ರಿ ಕೋಲು ಮತ್ತು ಚೂಪಾದ ವಸ್ತುಗಳಿಂದ ಹಲ್ಲೆ ಮಾಡಿ ಮಾರಣಾಂತಿಕವಾಗಿ ಗಾಯಗೊಳಿಸಿದ್ದರು. ನಂತರ ಚಿಕಿತ್ಸೆ ಫಲಕಾರಿಯಾಗದೆ ತ್ಯಾಗಿ ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ನಾಲ್ವರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.

ತ್ಯಾಗಿ ಅವರ ಕುಟುಂಬವು, “ಇದು ಉದ್ದೇಶಪೂರ್ವಕ ಕೃತ್ಯ” ಎಂದಿದೆ. “ಈ ದಾಳಿಯು ಎಲ್ಲ ಪ್ರಕರಣಗಳಂತೆ ಒಂದಾದ ಪ್ರಕರಣವಲ್ಲ. ವಾಸ್ತವವಾಗಿ, ಮುಸ್ಲಿಮರಲ್ಲಿ ಭಯವನ್ನು ಹುಟ್ಟುಹಾಕುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಮಾಡಿದ ಕೃತ್ಯ ಇದಾಗಿದೆ” ಎಂದು ಕುಟುಂಬ ಹೇಳಿರುವುದಾಗಿ ‘ದಿ ವೈರ್‌’ ವರದಿ ಮಾಡಿದೆ. ಆದರೆ ಪೊಲೀಸರು ಬೇರೆ ಕಾರಣವನ್ನು ಹೇಳುತ್ತಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ತ್ಯಾಗಿ ರೈತರಾಗಿದ್ದು ತನ್ನ ಹೆಂಡತಿ ಮತ್ತು ಮಗಳೊಂದಿಗೆ ವಿನಯ್‌ಪುರದಲ್ಲಿ ವಾಸಿಸುತ್ತಿದ್ದರೆ, ಇವರ ಮೂವರು ಗಂಡು ಮಕ್ಕಳು ದೆಹಲಿಯಲ್ಲಿ ಓದುತ್ತಿದ್ದಾರೆ. ಅಂದು  ಏನಾಯಿತು ಎಂಬುದರ ಕುರಿತು ‘ದಿ ವೈರ್‌’ನೊಂದಿಗೆ ಮಾತನಾಡಿದ ತ್ಯಾಗಿ ಅವರ ಪುತ್ರ ಶಾರುಖ್, “ನನ್ನ ತಂದೆಯವರು ಮನೆಯ ವಾರಂಡದಲ್ಲಿ ನಮ್ಮ ಸಂಬಂಧಿಕರೊಂದಿಗೆ ಕುಶಲೋಪರಿಯಲ್ಲಿದ್ದರು. ರಾತ್ರಿ 10 ಗಂಟೆ ಸುಮಾರಿಗೆ ಏಳೆಂಟು ಬೈಕ್‌ಗಳಲ್ಲಿ 22 ಮಂದಿಯ ತಂಡ ಬಂದಿತು. ತಂದೆಯವರ ಮೇಲೆ ಹರಿತವಾದ ಆಯುಧಗಳಿಂದ ದಾಳಿ ಮಾಡಲಾಯಿತು” ಎಂದು ಶಾರುಖ್ ವಿವರಿಸಿದ್ದಾರೆ.

“ಅವರು ನನ್ನ ತಂದೆಯ ತಲೆಯ ಮೇಲೆ ದಾಳಿ ಮಾಡಿದರು. ಅವರ ಕೈಗೆ ಮೂರು ಕಡೆ ಗಾಯಗಳಾದವು. ಅವರು ನನ್ನ ಸೋದರಸಂಬಂಧಿಗಳ ಮೇಲೂ ದಾಳಿ ನಡೆಸಿದರು. ಆದರೆ ನನ್ನ ಸೋದರರು ಚಿಕ್ಕವಯಸ್ಸಿನವರಾಗಿದ್ದು, ಹೇಗೋ ಓಡಿ ತಪ್ಪಿಸಿಕೊಂಡರು. ನನ್ನ ತಂದೆ ಮೇಲೆ ದಾಳಿ ಮಾಡುವಾಗ ‘ಜೈ ಶ್ರೀರಾಮ್’ ಘೋಷಣೆಯನ್ನು ಕೂಗುತ್ತಿದ್ದರು” ಎಂದು ಶಾರುಖ್ ದೂರಿದ್ದಾರೆ.

ಇದನ್ನೂ ಓದಿರಿ: ಶೂಟೌಟ್‌ ವೇಳೆ ಅವರು ಪಾನಮತ್ತರಾಗಿದ್ದರು’: ಯುಪಿ ಪೊಲೀಸರಿಂದ ಉತ್ತರಾಖಂಡ ಬಿಜೆಪಿ ನಾಯಕನ ಪತ್ನಿಯ ಹತ್ಯೆ

ದಾಳಿಯ ನಂತರ ತ್ಯಾಗಿಯವರನ್ನು ಚಿಕಿತ್ಸೆಗಾಗಿ ಮೀರತ್‌ನ ಕುಟುಂಬ ಆರೋಗ್ಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮುಂಜಾನೆ ವೇಳೆಗೆ ಸಾವನ್ನಪ್ಪಿದ್ದಾರೆ.

ಖೇಕ್ರಾ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ 3 ರಂದು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌  ದಾಖಲಿಸಲಾಯಿತು. ಭಾರತೀಯ ದಂಡ ಸಂಹಿತೆ ಸೆಕ್ಷನ್ 147 (ಗಲಭೆಗೆ ಶಿಕ್ಷೆ), 148 (ಗಲಭೆ, ಮಾರಣಾಂತಿಕ ಆಯುಧದಿಂದ ಶಸ್ತ್ರಸಜ್ಜಿತ); 149 (ಕಾನೂನುಬಾಹಿರ ಸಭೆಯ ತಪ್ಪಿತಸ್ಥರು); ಮತ್ತು 302 (ಕೊಲೆ) ಅಡಿ ಪ್ರಕರಣ ದಾಖಲಿಸಿದರು. ಆದರೆ ಶಾರುಖ್‌ ವಿವರಿಸಿದಂತೆ ಪ್ರಕರಣ ದಾಖಲಾಗಿಲ್ಲ. ‘ಜೈ ಶ್ರೀರಾಮ್’ ಎಂದದ್ದು ಎಫ್‌ಐಆರ್‌ನಲ್ಲಿ ಇಲ್ಲ ಎಂದು ‘ದಿ ವೈರ್‌’ ಗಮನ ಸೆಳೆದಿದೆ.

ಇದಾದ ನಂತರ ಸೆಪ್ಟೆಂಬರ್ 5 ರಂದು, ಖೇಕ್ರಾ ಪೊಲೀಸರು ತ್ಯಾಗಿ ಅವರ ಹತ್ಯೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿರುವುದಾಗಿ ಹೇಳಿಕೆ ನೀಡಿದರು. ನಿಕ್ಕಿ ಅಲಿಯಾಸ್ ವಿಕ್ಕಿ, ಹರೀಶ್, ಮೋಹಿತ್ ಮತ್ತು ದಿಲೀಪ್- ಬಂಧಿತ ಆರೋಪಿಗಳು. ಇವರೆಲ್ಲರೂ ವಿನಯ್‌ಪುರದ ಸಮೀಪವಿರುವ ಭಗೋತ್‌ನ ನಿವಾಸಿಗಳಾಗಿದ್ದಾರೆ.

PC: The Wire

ಎರಡು ಮೋಟಾರು ಬೈಕ್‌ಗಳು ಮತ್ತು ಎರಡು ಸ್ಟಿಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಾಲ್ವರು ಆರೋಪಿಗಳನ್ನು ವಿಚಾರಣೆ ಮಾಡಿದ ನಂತರ ಪೊಲೀಸರು, “ಭಗೋತ್ ಮತ್ತು ವಿನಯ್‌ಪುರ ನಿವಾಸಿಗಳ ನಡುವೆ ಜಗಳವಾಗಿತ್ತು. ಬಂಧಿತ ನಾಲ್ವರು ವಿನಯ್‌ಪುರದಲ್ಲಿ ಯಾರ ಮೇಲಾದರೂ ದಾಳಿ ಮಾಡಲು ನಿರ್ಧರಿಸಿದ್ದರು” ಎಂದಿದ್ದಾರೆ.

‘ಹಳ್ಳ ಹಿಡಿಯುತ್ತಿರುವ ಪ್ರಕರಣ’

ತ್ಯಾಗಿ ಅವರ ಹತ್ಯೆಯಾಗಿ ಒಂದು ತಿಂಗಳು ಕಳೆದರೂ ತನಿಖೆಯು ಕೋಲ್ಡ್ ಸ್ಟೋರೇಜ್‌ನಲ್ಲಿದೆ. ಹೆಚ್ಚಿನ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಸಂತ್ರಸ್ತ ಕುಟುಂಬವು ದುರ್ಬಲವಾಗಿದ್ದು, ಭಯ ಮತ್ತು ಅಭದ್ರತೆಯಿಂದ ಬದುಕುತ್ತಿದೆ.

ಇದಲ್ಲದೆ ತ್ಯಾಗಿ ಅವರ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂಬ ಭರವಸೆ ಸಿಕ್ಕಿತ್ತು. ಅದು ಕೂಡ ಈಡೇರಿಲ್ಲ.

ಕುಟುಂಬ ಸದಸ್ಯರನ್ನು ಹೆದರಿಸುವ ಪ್ರಯತ್ನ ಇತ್ತೀಚೆಗೆ ನಡೆದಿದೆ. ಕುಟುಂಬದ ಭಯವನ್ನು ಹೆಚ್ಚಿಸಲಾಗಿದೆ ಎಂದು ಶಾರುಖ್ ಹೇಳಿಕೊಂಡಿದ್ದಾರೆ.

“ಮೂರು ದಿನಗಳ ಹಿಂದೆ, ನನ್ನ ಅಣ್ಣ ಮತ್ತು ನನ್ನ ಚಿಕ್ಕಪ್ಪ ಹೊಲಕ್ಕೆ ಹೋಗಿದ್ದರು – ಅಪರಾಧಿಗಳ ಹೊಲಗಳು ನಮ್ಮ ಪಕ್ಕದಲ್ಲಿವೆ. ಆ ದಿನ ನನ್ನ ಸಹೋದರನನ್ನು ಅವರು ಸುತ್ತುವರಿದಿದ್ದರು” ಎಂದು ಶಾರುಖ್ ದೂರಿದ್ದಾರೆ.

“ನಾವು ಬೆದರಿಕೆಯನ್ನು ಅನುಭವಿಸಿದ್ದೇವೆ; ಮತ್ತೊಮ್ಮೆ, ಏನಾದರೂ ಸಂಭವಿಸಬಹುದು” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕುಟುಂಬಕ್ಕೆ ಎದುರಾಗಿರುವ ಬೆದರಿಕೆಯ ಕುರಿತು ‘ದಿ ವೈರ್‌’ನೊಂದಿಗೆ ಮಾತನಾಡಿದ ಬಾಗ್‌ಪತ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ), ನೀರಜ್ ಕುಮಾರ್ ಜಾದೌನ್, “ದಾಳಿಯ ಬಗ್ಗೆ ಕುಟುಂಬಕ್ಕೆ ಆತಂಕವಿತ್ತು. ಅದನ್ನು ಸರಿಪಡಿಸಲಾಗಿದೆ” ಎಂದಿದ್ದಾರೆ.

ಇದನ್ನೂ ಓದಿರಿ: ಪಂಜಾಬ್‌: ಪಾರ್ಕ್‌ನಲ್ಲಿ ಕುಳಿತ್ತಿದ್ದ ವಿದ್ಯಾರ್ಥಿನಿಯರಿಗೆ ಥಳಿಸಿದ ಮಹಿಳಾ ಪೊಲೀಸರು; ನೆಟ್ಟಿಗರ ಖಂಡನೆ

ಇದರ ನಡುವೆ ಶಾರುಖ್, “ನಾಲ್ಕು ಜನರನ್ನು ಬಂಧಿಸಲಾಗಿದೆ. ಆದರೆ ಒಂದು ತಿಂಗಳು ಕಳೆದಿದೆ ಮತ್ತು ಪ್ರಕರಣವು ಹಳ್ಳಹಿಡಿಯುತ್ತಿದೆ” ಎಂದು ಆರೋಪಿಸಿದ್ದಾರೆ.

“ಜನರು (ಸಾಕ್ಷಿಗಳು) ಮುಂದಿಟ್ಟಿರುವ (ಅಪರಾಧಿಗಳ) ಹೆಸರುಗಳು ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯರೊಂದಿಗೆ ಸಂಪರ್ಕ ಹೊಂದಿವೆ. ಒಂದಲ್ಲ ಎರಡೆರಡು ಬಾರಿ ಪೊಲೀಸರು ಅವರ ಮನೆಗೆ ಭೇಟಿ ನೀಡಿದರೂ ಹೆಚ್ಚಿನ ಬೆಳವಣಿಗೆಗಳು ಆಗಿಲ್ಲ” ಎಂದು ವಿಷಾದಿಸಿದ್ದಾರೆ.

‘ಯೋಜಿತ ದಾಳಿಗೆ ನಡೆದಿತ್ತು ಸಭೆ’

ತ್ಯಾಗಿ ಹತ್ಯೆಗೂ ಮುನ್ನ ಬಾಘೋಟ್‌ನಲ್ಲಿ ಸಭೆ ನಡೆದಿದ್ದು, ಮುಸ್ಲಿಮರನ್ನು ಹೆದರಿಸುವ ಯೋಜನೆ ರೂಪಿಸಲಾಗಿತ್ತು ಎಂದು ತ್ಯಾಗಿ ಅವರ ಕುಟುಂಬದ ಸದಸ್ಯರು ಹಾಗೂ ಹೋರಾಟಗಾರರು ಹೇಳಿದ್ದಾರೆ.

ಹೋರಾಟಗಾರ ದೇವೇಂದ್ರ ಧಾಮಾ ‘ದಿ ವೈರ್‌’ಗೆ ಪ್ರತಿಕ್ರಿಯಿಸಿ, “ಕೆಲವು ಗಂಡಸರು ಅಗ್ಗದ ಜನಪ್ರಿಯತೆಯನ್ನು ಬಯಸಿದ್ದರು. ಇದಕ್ಕಾಗಿಯೇ ದಾಳಿ ನಡೆಸಲಾಗಿದೆ. ಘಟನೆಯ ಮೊದಲು ಬಾಘೋಟ್‌ನಲ್ಲಿ ಸಭೆ ನಡೆದಿತ್ತು. ಮತ್ತೊಂದು ಸಭೆ ನಡೆದಿದ್ದು 60-65 ಜನರು ಅದರಲ್ಲಿದ್ದರು. ಈ ಪ್ರದೇಶದ ಮುಸ್ಲಿಮರಲ್ಲಿ ಭಯವನ್ನು ಹುಟ್ಟುಹಾಕುವುದು ಅವರ ಉದ್ದೇಶವಾಗಿತ್ತು. ಕೊಲ್ಲುವುದು ಅಥವಾ ಲೂಟಿ ಮಾಡುವುದು ಅವರ ಗುರಿಯಾಗಿರಲಿಲ್ಲ. ಆದರೆ ಭಯವನ್ನು ಹರಡುವುದು ಮುಖ್ಯವಾಗಿತ್ತು” ಎಂದು ವಿವರಿಸಿದ್ದಾರೆ.

“ಅವರು ಗ್ರಾಮವನ್ನು ಪ್ರವೇಶಿಸಿ, ತ್ಯಾಗಿ ಮೇಲೆ ಹಲ್ಲೆ ನಡೆಸಿದರು. ನಂತರ ಚದುರಿಹೋದರು. ಇದಕ್ಕೂ ಮುನ್ನ ಗ್ರಾಮದ ಮಸೀದಿಯಲ್ಲಿ ನಮಾಜ್ ಓದುವ ಪ್ರಯತ್ನ ನಡೆಸಲಾಗಿತ್ತು” ಎಂದು ಧಾಮಾ ತಿಳಿಸಿದ್ದಾರೆ.

ಈ ಪ್ರದೇಶದಲ್ಲಿನ ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಆಧಾರಿಸಿ ಬಿಬಿಸಿ ಗ್ರೌಂಡ್ ರಿಪೋರ್ಟ್ ಮಾಡಿದೆ. ದಾಳಿಯಲ್ಲಿ ಭಾಗವಹಿಸಲು ಸಭೆ ನಡೆದಿತ್ತು. ದಾಳಿಯನ್ನು ಪ್ರಚೋದಿಸುವ ಗುರಿಯನ್ನು ಹೊಂದಿರುವ ಪೋಸ್ಟ್‌ಗಳನ್ನು ಬಂಧಿತ ನಾಲ್ವರು ಆರೋಪಿಗಳಲ್ಲಿ ಒಬ್ಬರಾದ ದಿಲೀಪ್‌ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಇದನ್ನೂ ಓದಿರಿ: ‘ಜಾಗತಿಕ ಹಸಿವು ಸೂಚ್ಯಂಕ-2022’: 107 ನೇ ಸ್ಥಾನಕ್ಕೆ ಕುಸಿದ ಭಾರತ

ದಿ ವೈರ್‌ನೊಂದಿಗೆ ಮಾತನಾಡುತ್ತಾ ರಾಜಕೀಯ ಸಂಬಂಧ ಸಭೆ ನಡೆದಿದೆ ಎಂಬ ಪ್ರತಿಪಾದನೆಗಳನ್ನು ಪೊಲೀಸರು ನಿರಾಕರಿಸಿದ್ದಾರೆ. ನಾಲ್ವರನ್ನು ಬಂಧಿಸಲಾಗಿದೆ ಎಂದು ಖೇಕ್ರಾ ಪೊಲೀಸ್ ಠಾಣೆಯ ವೃತ್ತಾಧಿಕಾರಿ ವಿಜಯ್ ಚೌಧರಿ ತಿಳಿಸಿದ್ದಾರೆ. ಉಳಿದ ವ್ಯಕ್ತಿಗಳಿಗಾಗಿ ನಾವು ಗಮನ ಹರಿಸಿದ್ದೇವೆ. “ಸಭೆ ನಡೆಸಿ ಪಿತೂರಿ ನಡೆದಿದೆ. ಆದರೆ, ಅದು ರಾಜಕೀಯವಾಗಿರಲಿಲ್ಲ. ಇದು ಹಳೆಯ ವಿಚಾರಕ್ಕೆ ಸಂಬಂಧಿಸಿದ ಪೋಸ್ಟ್ ಆಗಿದೆ” ಎಂದಿದ್ದಾರೆ.

ಶಾರುಖ್ ಮತ್ತು ಅವರ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡಿದ್ದರೂ, ಅವರು ಭಯದಿಂದ ಬದುಕುತ್ತಿದ್ದಾರೆ. ವಿನಯ್‌ಪುರದಲ್ಲಿ ಗುರ್ಜರ್‌ಗಳು ಮತ್ತು ಮುಸ್ಲಿಮರು ವಾಸವಿದ್ದಾರೆ. ಶಾರುಖ್ ಪ್ರಕಾರ, ಸುತ್ತಮುತ್ತಲಿನ ಹಳ್ಳಿಗಳು ಗುರ್ಜರ್ ಪ್ರಾಬಲ್ಯ ಹೊಂದಿವೆ.

“ಈ ಪ್ರದೇಶದಲ್ಲಿನ ಉದ್ವಿಗ್ನತೆಯಿಂದಾಗಿ ನಾವು ಗ್ರಾಮದಿಂದ ಹೊರಹೋಗಲು ಬಯಸುತ್ತಿದ್ದೇವೆ. ನಾವು ಆಡಳಿತದ ಮೇಲೆ ಕುರುಡು ನಂಬಿಕೆ ಇಟ್ಟಿದ್ದೆವು. ಸರ್ಕಾರಿ ನೌಕರಿಯೊಂದಿಗೆ ನಮಗೆ ಬೆಂಬಲ ನೀಡುವ ಭರವಸೆ ಇನ್ನೂ ಈಡೇರಿಲ್ಲ. ನಾವೆಲ್ಲರೂ ಇನ್ನೂ ಓದುತ್ತಿರುವುದರಿಂದ ನನ್ನ ತಂದೆಯ ಅಲ್ಪ ಆದಾಯವನ್ನೇ ಅವಲಂಬಿಸಿದ್ದೆವು” ಎಂದಿದ್ದಾರೆ ಶಾರುಖ್‌.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

90 ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ ಆದರೆ ಪ್ರಧಾನ್ ತಮ್ಮ ಕುರ್ಚಿಗೆ ಅಂಟಿಕೊಂಡಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ 'ನೀಟ್' (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ತಮ್ಮ ಆಕ್ರೋಶವನ್ನು ಮತ್ತಷ್ಟು ತೀವ್ರಗೊಳಿಸಿವೆ. ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ...

2023ರಿಂದ 20 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ತೀನ್ ಮಕ್ಕಳನ್ನು ಹತ್ಯೆಗೈದ ಇಸ್ರೇಲ್; ಉದ್ದೇಶಪೂರ್ವಕ ‘ನರಮೇಧ’ ಎಂದ ವರದಿ

ಪ್ಯಾಲೆಸ್ತೀನ್ ಮಕ್ಕಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಹತ್ಯೆ ಮಾಡುವ ಮೂಲಕ ಇಸ್ರೇಲ್‌ ಸೇನೆ ನರಮೇಧ ನಡೆಸಿದೆ ಎಂದು ವಿಶ್ವಸಂಸ್ಥೆಯ ಸ್ವತಂತ್ರ ಅಂತಾರಾಷ್ಟ್ರೀಯ ವಿಚಾರಣಾ ಆಯೋಗ ಮಂಗಳವಾರ (ಜೂ.23) ತಿಳಿಸಿದೆ. ಇಸ್ರೇಲ್ ಪಡೆಗಳು ಅಕ್ಟೋಬರ್ 2023ರಿಂದ ಈವರೆಗೆ...

ಮೀಸಲಾತಿ ರದ್ದುಗೊಳಿಸಲು ಬಿಜೆಪಿ ಮೂರನೇ ಎರಡರಷ್ಟು ಬಹುಮತ ಬಯಸುತ್ತಿದೆ: ಜೈರಾಮ್‌ ರಮೇಶ್‌

ಲೋಕಸಭೆಯಲ್ಲಿ ಬಿಜೆಪಿ ಮೂರನೇ ಎರಡರಷ್ಟು ಬಹುಮತಕ್ಕಾಗಿ ಶ್ರಮಿಸುತ್ತಿದೆ. ಏಕೆಂದರೆ, ಮೀಸಲಾತಿಯನ್ನು ಕೊನೆಗೊಳಿಸಲು ಸಂವಿಧಾನವನ್ನು ತಿದ್ದುಪಡಿ ಮಾಡುವುದು ಅದರ ನಿಜವಾದ ಮತ್ತು ಅಂತಿಮ ಗುರಿಯಾಗಿದೆ ಎಂದು ಕಾಂಗ್ರೆಸ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್...

ತಿರುವನಂತಪುರಂ | 20 ಬಿಜೆಪಿ ಕೌನ್ಸಿಲರ್‌ಗಳ ಪ್ರಮಾಣವಚನ ಅಸಿಂಧು : ಹೈಕೋರ್ಟ್ ಮಹತ್ವದ ಆದೇಶ

ತಿರುವನಂತಪುರಂ ಮಹಾನಗರ ಪಾಲಿಕೆಯ 20 ಬಿಜೆಪಿ ಕೌನ್ಸಿಲರ್‌ಗಳಿಗೆ ನಾಲ್ಕು ವಾರಗಳ ಒಳಗೆ ಮತ್ತೊಮ್ಮೆ ಪ್ರಮಾಣವಚನ ಸ್ವೀಕರಿಸುವಂತೆ ಕೇರಳ ಹೈಕೋರ್ಟ್ ಬುಧವಾರ (ಜೂ.24) ಆದೇಶಿಸಿದೆ. ಜನವರಿ ತಿಂಗಳಲ್ಲಿ ಕೌನ್ಸಿಲರ್‌ಗಳ ಪ್ರಮಾಣವಚನ ನಡೆದಿತ್ತು. ಡೆಪ್ಯುಟಿ ಮೇಯರ್...

ಎಸ್‌ಐಆರ್‌ನಿಂದ ಹೊರಗಿಡಲಾದ ಜನರಿಗೆ ಪಡಿತರ ನಿರಾಕರಣೆ ಪ್ರಶ್ನಿಸಿದ ಅರ್ಜಿ ತಿರಸ್ಕರಿಸಿದ ಸುಪ್ರೀಂ; ಕಲ್ಕತ್ತಾ ಹೈಕೋರ್ಟ್‌ಗೆ ಹೋಗಲು ಸೂಚನೆ

ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾದ ವ್ಯಕ್ತಿಗಳಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಪಿಡಿಎಸ್) ಪಡಿತರ ಸೌಲಭ್ಯ ಸೇರಿದಂತೆ ಇತರೆ ಕಲ್ಯಾಣ ಯೋಜನೆಗಳನ್ನು ನಿರಾಕರಿಸುತ್ತಿರುವ ಪಶ್ಚಿಮ ಬಂಗಾಳ...

ಪಶ್ಚಿಮ ಬಂಗಾಳ: ಸರ್ಕಾರಿ ಶಾಲಾ ಬಿಸಿಯೂಟದ ಜವಾಬ್ದಾರಿ ಇಸ್ಕಾನ್‌ಗೆ, ಊಟದಿಂದ ‘ಮೊಟ್ಟೆ’ ಔಟ್

ಪಶ್ಚಿಮ ಬಂಗಾಳದ ಸರ್ಕಾರಿ ಶಾಲೆಗಳ ಬಿಸಿಯೂಟದ ಮೆನುವಿನಲ್ಲಿ ಇನ್ಮೇಲೆ ಮೊಟ್ಟೆಗಳು ಇರುವುದಿಲ್ಲ. ಅವುಗಳ ಬದಲಿಗೆ ಮಕ್ಕಳಿಗೆ ಪನೀರ್ ಮತ್ತು ರಾಜ್ಮಾವನ್ನು ನೀಡಲಾಗುತ್ತದೆ. ಕೋಲ್ಕತ್ತಾ ಮಹಾನಗರ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ...

ಕಿರಣ್ ರಿಜಿಜು ‘ಸೇಫ್‌’ವಾದ ಅಲ್ಲಗಳೆದ ಸರಣಿ ಮುಸ್ಲಿಂ ವಿರೋಧಿ ಹಿಂಸಾಚಾರಾಗಳು

ಜೂನ್ 15, 2026ರಂದು ಪ್ರಕಟಗೊಂಡ ಇಂಡಿಯನ್ ಎಕ್ಸ್‌ಪ್ರೆಸ್‌ನ 'ಐಡಿಯಾ ಎಕ್ಸ್‌ಚೇಂಜ್' ಕಾರ್ಯಕ್ರಮದ ಸಂದರ್ಶನವೊಂದರಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, “ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿಲ್ಲ ಎಂದು ಹೇಳುವ ಮೂಲಕ ನೀವು ದೇಶದ ಚಾರಿತ್ರ್ಯಕ್ಕೆ...

ರಾಮ ಮಂದಿರ ದೇಣಿಗೆ ದುರುಪಯೋಗ ವಿವಾದ; ಪ್ರಾಥಮಿಕ ವರದಿ ಸಲ್ಲಿಸಿದ ಎಸ್‌ಐಟಿ

ಅಯೋಧ್ಯೆಯ ರಾಮ ಮಂದಿರದಲ್ಲಿ ಸ್ವೀಕರಿಸಿದ ದೇಣಿಗೆಯ ದುರುಪಯೋಗದ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಜೂನ್ 23 ಮಂಗಳವಾರ ಉತ್ತರ ಪ್ರದೇಶ ಸರ್ಕಾರಕ್ಕೆ ತನ್ನ ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಸಿದೆ...

ಮುಖ್ಯಮಂತ್ರಿ ಸುವೇಂದು ಅಧಿಕಾರಿಗೆ ನೋಟಿಸ್ ಜಾರಿ ಮಾಡಿದ ಕಲ್ಕತ್ತಾ ಹೈಕೋರ್ಟ್

ಭವಾನಿಪುರ ವಿಧಾನಸಭಾ ಕ್ಷೇತ್ರದ ಇತ್ತೀಚಿನ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಅವರ ಆಯ್ಕೆಯನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಹಾಗೂ ಟಿಎಂಸಿ (TMC) ನಾಯಕಿ ಮಮತಾ ಬ್ಯಾನರ್ಜಿ ಸಲ್ಲಿಕೆ ಮಾಡಿರುವ ಚುನಾವಣಾ ಅರ್ಜಿಗೆ ಸಂಬಂಧಿಸಿದಂತೆ ಕಲ್ಕತ್ತಾ...

TMC ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿಯನ್ನು ಉಚ್ಚಾಟಿಸಿದ ತೃಣಮೂಲ ಬಂಡಾಯ ಶಾಸಕರು

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಸೋಲಿನ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಪಕ್ಷವು ಇತಿಹಾಸದಲ್ಲೇ ಕಾಣದ ಅತ್ಯಂತ ದೊಡ್ಡ ಬಂಡಾಯಕ್ಕೆ ಸಾಕ್ಷಿಯಾಗಿದೆ. ಬಂಡಾಯ ಶಾಸಕರ ನೇತೃತ್ವ ವಹಿಸಿರುವ ಋತಬ್ರತಾ ಬ್ಯಾನರ್ಜಿ ಸೋಮವಾರ ಮಮತಾ ಬ್ಯಾನರ್ಜಿ...