“ಈಗ ದೇಶಕ್ಕೆ ಬೇಕಾಗಿರುವುದು ಗಲಭೆಕೋರರಿಂದ ಸ್ವಾತಂತ್ರ್ಯ” ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮುಖಂಡ ಮತ್ತು ಮಾಜಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಹೇಳಿದ್ದಾರೆ.
ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಜನಗಣಮನ ಯಾತ್ರಾದ ಸಮಾರೋಪ ಸಭೆಯನ್ನುದ್ದೇಶಿಸಿ ಮಾತನಾಡಿದ ಕನ್ಹಯ್ಯ ಕುಮಾರ್ “ನಾನು ಯಾರಿಗಾದರೂ ಪೌರತ್ವ ನೀಡುವುದನ್ನು ವಿರೋಧಿಸುವುದಿಲ್ಲ, ಆದರೆ ಪೌರತ್ವ ನೀಡುವ ಹೆಸರಿನಲ್ಲಿ ದ್ವೇಷ ಹರಡುವುದರ ವಿರುದ್ಧವಾಗಿದ್ದೇನೆ” ಎಂದಿದ್ದಾರೆ.
ಸಿಎಎ, ಎನ್ನಾರ್ಸಿ ಮತ್ತು ಎನ್ಪಿಆರ್ ಬಗ್ಗೆ ಜಾಗೃತಿ ಮೂಡಿಸಲು ಬಿಹಾರದ 38 ಜಿಲ್ಲೆಗಳಲ್ಲಿ ಕನ್ಹಯ್ಯ ಕುಮಾರ್ ಅವರು ಒಂದು ತಿಂಗಳಿನಿಂದ ಜನಗಣಮನ ಯಾತ್ರೆಯಲ್ಲಿ 62 ಸಾರ್ವಜನಿಕ ಸಭೆಗಳಲ್ಲಿ ಮಾತನಾಡಿದ್ದಾರೆ. ಜನವರಿ 30 ರಂದು ಪಶ್ಚಿಮ ಚಂಪಾರನ್ ಜಿಲ್ಲೆಯ ಭಿತಿಹರ್ವಾ ಗಾಂಧಿ ಆಶ್ರಮದಿಂದ ಯಾತ್ರೆಯನ್ನು ಪ್ರಾರಂಭಿಸಿದ್ದರು.
ಸಮಾರೋಪ ಸಭೆಯನ್ನು ಉದ್ದೇಶಿಸಿ ಮಾತನಾಡುವ ಮೊದಲು, ಕಳೆದ ನಾಲ್ಕು ದಿನಗಳಲ್ಲಿ ಈಶಾನ್ಯ ದೆಹಲಿಯ ಗಲಭೆಯಲ್ಲಿ ಮೃತಪಟ್ಟವರನ್ನು ಸಂತಾಪ ಸೂಚಿಸಿ ಒಂದು ನಿಮಿಷದ ಮೌನವನ್ನು ಆಚರಿಸಿದರು.
“ಇಂದು ಈ ದೇಶದಲ್ಲಿ ಗಾಂಧಿ ಜಿಂದಾಬಾದ್ ಎನ್ನುವವರನ್ನು ಜೈಲಿಗೆ ಕಳುಹಿಸಲಾಗುತ್ತಿದೆ ಮತ್ತು ಗೂಡ್ಸೆ ಜಿಂದಾಬಾದ್ ಎಂದು ಹೇಳುವವರನ್ನು ಸಂಸತ್ತಿಗೆ ಕಳುಹಿಸಲಾಗಿದೆ … ಈ ದೇಶದ ಮುಸ್ಲಿಮರು ಗಾಂಧಿಯನ್ನು ಆರಿಸಿಕೊಂಡರೆ ಹೊರತು ಜಿನ್ನಾನನ್ನು ಅಲ್ಲ ಎಂಬುವುದನ್ನು ನಾವು ನೆನಪಿನಲ್ಲಿಡಬೇಕು” ಎಂದು ಕನ್ಹಯ್ಯ ಕುಮಾರ್ ಹೇಳಿದ್ದಾರೆ.
“ಸಿಎಎ ಈಗ ಕಾನೂನಾಗಿದೆ, ಅದರ ಪರವಾಗಿ ರ್ಯಾಲಿಯನ್ನು ಯಾಕೆ ಮಾಡುತ್ತಾರೆ? ಎಂದು ಆಶ್ಚರ್ಯ ವ್ಯಕ್ತಪಡಿಸಿದ ಕನ್ಹಯ್ಯ “ಸಿಎಎ ವಿರುದ್ಧ ಪ್ರತಿಭಟಿಸುವವರದ್ದಾದರೆ ಅರ್ಥವಿದೆ” ಎಂದರು. “ಬಿಜೆಪಿ ಸರ್ಕಾರ ಬ್ರಿಟಿಷರ ಒಡೆದು ಆಳುವ ನೀತಿಯನ್ನು ಅಳವಡಿಸಿಕೊಂಡಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.