Homeಮುಖಪುಟಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್‌ ತೇಲಿಬಿಟ್ಟ ಜನಸಂಖ್ಯೆ ಹೆಚ್ಚಳ, ಮತಾಂತರ ಕತೆಯ ವಾಸ್ತವವೇನು?

ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್‌ ತೇಲಿಬಿಟ್ಟ ಜನಸಂಖ್ಯೆ ಹೆಚ್ಚಳ, ಮತಾಂತರ ಕತೆಯ ವಾಸ್ತವವೇನು?

- Advertisement -
- Advertisement -

ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ವಾರ್ಷಿಕ ದಸರಾ ಸಮಾರಂಭದಲ್ಲಿ ಮಾಡಿದ ಭಾಷಣದಲ್ಲಿ, ‘ಎಲ್ಲರಿಗೂ ಸಮಾನವಾಗಿ ಅನ್ವಯಿಸುವ ಜನಸಂಖ್ಯೆ ನಿಯಂತ್ರಣ ಕಾನೂನು’ ಬಗ್ಗೆ ಪ್ರಸ್ತಾಪಿಸಿದ್ದಾರೆ. “ಧರ್ಮ ಆಧಾರಿತ ಅಸಮತೋಲನ ಮತ್ತು ಬಲವಂತದ ಮತಾಂತರ ದೇಶವನ್ನು ಒಡೆಯುತ್ತಿದೆ” ಎಂದು ವಿಷಾದಿಸಿರುವುದಾಗಿ ‘ಎನ್‌ಡಿಟಿವಿ’ ವರದಿ ಮಾಡಿದೆ.

ಧಾರ್ಮಿಕ ಸಮುದಾಯ ಆಧಾರಿತ ಅಸಮತೋಲನದ ಕಾರಣದಿಂದ ಹೊಸದಾಗಿ ಹುಟ್ಟಿಕೊಂಡ ಪೂರ್ವ ಟಿಮೋರ್, ಕೊಸೊವೊ ಮತ್ತು ದಕ್ಷಿಣ ಸುಡಾನ್ ದೇಶಗಳ ಉದಾಹರಣೆಗಳನ್ನು ಭಾಗವತ್‌ ಉಲ್ಲೇಖಿಸಿದ್ದಾರೆ.

“ಜನಸಂಖ್ಯೆಯ ನಿಯಂತ್ರಣದ ಜೊತೆಗೆ, ಧಾರ್ಮಿಕ ಆಧಾರದ ಮೇಲೆ ಜನಸಂಖ್ಯೆಯ ಸಮತೋಲನವು ಸಹ ಪ್ರಮುಖ ವಿಷಯವಾಗಿದೆ. ಅದನ್ನು ನಿರ್ಲಕ್ಷಿಸಲಾಗುವುದಿಲ್ಲ” ಎಂದು ಅವರು ಹಿಂದಿಯಲ್ಲಿ ಭಾಷಣ ಮಾಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಜನಸಂಖ್ಯೆಗೆ ಸಂಪನ್ಮೂಲಗಳ ಅಗತ್ಯವಿದೆ ಅಥವಾ ಅದು ಹೊರೆಯಾಗುತ್ತದೆ. ಜನಸಂಖ್ಯೆಯು ಒಂದು ಆಸ್ತಿಯಾಗಿರಬಹುದು ಎಂಬ ದೃಷ್ಟಿಕೋನವಿದೆ. ಎರಡೂ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಾವು ನೀತಿಯನ್ನು ರೂಪಿಸಬೇಕಾಗಿದೆ” ಎಂದು ತಿಳಿಸಿದ್ದಾರೆ.

ಜನಸಂಖ್ಯೆಯಲ್ಲಿನ ‘ಧರ್ಮ-ಆಧಾರಿತ ಅಸಮತೋಲನ’ದ ಕುರಿತು ಪ್ರಸ್ತಾಪಿಸುತ್ತಾ, “ಜನನ ಪ್ರಮಾಣವೂ ಒಂದು ಕಾರಣವಾಗಿದೆ. ಬಲವಂತದಿಂದ ಆಮಿಷ ಅಥವಾ ದುರಾಶೆಯಿಂದ ಮತಾಂತರ ಆಗುವುದು, ನುಸುಳುಕೋರರು ಬರುವುದು ಇದಕ್ಕೆ ಕಾರಣವಾಗಿದೆ” ಎಂದಿದ್ದಾರೆ.

“ಹೆರಿಗೆ ಮತ್ತು ಜನಸಂಖ್ಯಾ ನಿಯಂತ್ರಣದ ಬಗ್ಗೆ ಆರೆಸ್ಸೆಸ್ ಪ್ರಸ್ತಾಪಿಸುವ ಯಾವುದೇ ನೀತಿಯಲ್ಲಿ ಮಹಿಳೆಯರ ಆರೋಗ್ಯವನ್ನು ಖಂಡಿತವಾಗಿ ನೆನಪಿನಲ್ಲಿಟ್ಟುಕೊಳ್ಳಲಾಗುತ್ತದೆ” ಎಂದು ಆರೆಸ್ಸೆಸ್ ಮುಖ್ಯಸ್ಥರು ಹೇಳಿದ್ದಾರೆ.

ಮೋಹನ್‌ ಭಾಗವತ್‌ ಮಾತಿನ ಹಿಂದಿನ ಮರ್ಮ ಹಾಗೂ ವಾಸ್ತವ

ಬಹುದೊಡ್ಡ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಮರ ಮೇಲೆ ಜನಸಂಖ್ಯಾ ಹೆಚ್ಚಳದ ಆರೋಪ ಹೊರಿಸುವ ಕೆಲಸವನ್ನು ಆರ್‌ಎಸ್‌ಎಸ್‌ ಮತ್ತು ಅದರ ರಾಜಕೀಯ ಮುಖವಾದ ಬಿಜೆಪಿ ಮೊದಲಿನಿಂದಲೂ ಮಾಡುತ್ತಿವೆ. ಅದರ ಮುಂದುವರಿದ ಭಾಗವಾಗಿ ಮೋಹನ್ ಭಾಗವತ್ ಹೇಳಿಕೆ ಹೊರಬಿದ್ದಿದೆ.

ಆದರೆ ವಾಸ್ತವಗಳು ಬೇರೆಯೇ ಕತೆಯನ್ನು ಹೇಳುತ್ತವೆ. ಅಪಾಯಕಾರಿ ಜನಸಂಖ್ಯೆಯ ಹೆಚ್ಚಳದ ಪ್ರತಿಪಾದನೆ ಮತ್ತು ಹಿಂದೂ-ಮುಸ್ಲಿಂ ಜನಸಂಖ್ಯೆಯ ಬೆಳವಣಿಗೆಯಲ್ಲಿ ಇರುವ ವಾಸ್ತವ ವ್ಯತ್ಯಾಸಗಳೇನು ಎಂಬುದನ್ನು ಸಾಕ್ಷಿಗಳು ಬಯಲಿಗೆಳೆದಿವೆ.

ಇದನ್ನೂ ಓದಿರಿ: ಕೋಲ್ಕತಾ: ದುರ್ಗಾಪೂಜೆಯಲ್ಲಿ ಮಹಾತ್ಮಾ ಗಾಂಧಿಯನ್ನು ರಾಕ್ಷಸನಂತೆ ಬಿಂಬಿಸಿದ ಹಿಂದೂ ಮಹಾಸಭಾ

ಈ ಕುರಿತು ‘ದಿ ವೈರ್‌’ ಹಿಂದೆಯೇ ವರದಿ ಮಾಡಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (2019-21) ಪ್ರಕಾರ ಹಿಂದೂ  ಮತ್ತು ಮುಸ್ಲಿಂ ಫಲವತ್ತತೆಯ ನಡುವಿನ ವ್ಯತ್ಯಾಸವು ಕೇವಲ 0.42ರಷ್ಟಿದೆ ಎಂದು ಹೇಳುತ್ತದೆ. ಪ್ರತಿ ಹಿಂದೂ ಮಹಿಳೆಗೆ 1.94 ಮಕ್ಕಳು, ಪ್ರತಿ ಮುಸ್ಲಿಂ ಮಹಿಳೆಗೆ 2.36 ಮಕ್ಕಳು ಇರುವುದಾಗಿ ಸಮೀಕ್ಷೆ ಉಲ್ಲೇಖಿಸಿದೆ.

ನಾವು ಪಾಯಿಂಟ್ ಅಂದಾಜಿನ ಬದಲಿಗೆ ‘ಟ್ರೆಂಡ್’ ಅನ್ನು ಗಣನೆಗೆ ತೆಗೆದುಕೊಂಡಾಗ ನಿಜವಾದ ಚಿತ್ರಣ ಸಿಗುತ್ತದೆ. ಕಳೆದ ಎರಡು ದಶಕಗಳಲ್ಲಿ ಹಿಂದೂಗಳ ಫಲವತ್ತತೆ 30%, ಮುಸ್ಲಿಮರಲ್ಲಿ 35% ಕುಸಿದಿದೆ ಎಂದು ಕಂಡುಬಂದಿದೆ. ವಾಸ್ತವವಾಗಿ, ಕಳೆದ 20 ವರ್ಷಗಳಲ್ಲಿ ಮುಸ್ಲಿಮರಲ್ಲಿ ಜನಸಂಖ್ಯೆಯ ಬೆಳವಣಿಗೆಯಲ್ಲಿನ ಕುಸಿತದ ಪ್ರಮಾಣವು ಹಿಂದೂಗಳಿಗಿಂತ ಹೆಚ್ಚಾಗಿದೆ. 2030ರ ವೇಳೆಗೆ ಹಿಂದೂ-ಮುಸ್ಲಿಂ ಫಲವತ್ತತೆ ದರಗಳು ಸಂಪೂರ್ಣ ಒಮ್ಮುಖದ ಹಾದಿಯಲ್ಲಿರುತ್ತವೆ ಎಂಬುದನ್ನು ಸಮೀಕ್ಷೆಗಳು ಕಂಡುಕೊಂಡಿವೆ.

ಪ್ಯೂ ರಿಸರ್ಚ್ ಸೆಂಟರ್‌ನ 2021ರ ವರದಿಯು ಸಹ ಈ ಸಂಶೋಧನೆಗಳನ್ನು ಸಮರ್ಥಿಸುತ್ತದೆ. ಮುಸ್ಲಿಮರಲ್ಲಿ ಫಲವತ್ತತೆ ಪ್ರಮಾಣವು ಈಗ ಬಹುತೇಕ ಹಿಂದೂಗಳಿಗೆ ಸಮಾನವಾಗಿದೆ. 1992 ಮತ್ತು 2015ರ ನಡುವೆ, ಮುಸ್ಲಿಂ ಫಲವತ್ತತೆ ದರವು 4.4 ರಿಂದ 2.6ಕ್ಕೆ ಕುಸಿದಿದ್ದರೆ, ಹಿಂದೂಗಳಲ್ಲಿ 3.3ರಿಂದ 2.1ಕ್ಕೆ ಇಳಿದಿದೆ ಎಂದು ವರದಿ ಹೇಳಿದೆ.

ಈ ಹಿಂದೆ ‘ದಿ ವೈರ್’ ನಡೆಸಿದ ವೀಡಿಯೊ ಸಂದರ್ಶನದಲ್ಲಿ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೈಶಿ ಅವರು ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್ ಅವರನ್ನು ಭೇಟಿಯಾಗಿದ್ದನ್ನು ನೆನಪಿಸಿಕೊಂಡಿದ್ದರು. “ದಿ ಪಾಪ್ಯುಲೇಶನ್ ಮಿಥ್: ಇಸ್ಲಾಂ, ಫ್ಯಾಮಿಲಿ ಪ್ಲಾನಿಂಗ್ ಮತ್ತು ಪಾಲಿಟಿಕ್ಸ್ ಇನ್ ಇಂಡಿಯಾ” ಪುಸ್ತಕವನ್ನು ನೀಡಲು ಭೇಟಿಯಾಗಿದ್ದಾಗಿ ಖುರೈಶಿ ಹೇಳುತ್ತಾರೆ. “ಮುಸ್ಲಿಮರು ಹಿಂದೂಗಳನ್ನು ಸಂಖ್ಯಾಬಲದಲ್ಲಿ ಹಿಂದಿಕ್ಕುತ್ತಾರೆ ಎಂಬುದು ಹಿಂದುತ್ವ ಗುಂಪುಗಳ ಕಡೆಯಿಂದ ಬಂದ ಶುದ್ಧ ಪ್ರೊಪಗಾಂಡ ಎಂದು ನಾನು ಆರ್‌ಎಸ್‌ಎಸ್ ಮುಖ್ಯಸ್ಥರಿಗೆ ಹೇಳಿದೆ” ಎಂದು ಖುರೇಷಿ ಹೇಳಿಕೊಳ್ಳುತ್ತಾರೆ. (‘ದಿ ವೈರ್‌’ ನಡೆಸಿದ ವಿಡಿಯೊ ಸಂದರ್ಶನದಲ್ಲಿ 8 ನಿಮಿಷ 20 ಸೆಕೆಂಡ್‌ ವೇಳೆಗೆ ಈ ಚರ್ಚೆ ನಡೆಯುವುದನ್ನು ಗಮನಿಸಬಹುದು.)

“ಇನ್ನು 1,000 ವರ್ಷಗಳಾದರೂ ಇದು (ಹಿಂದೂಗಳಿಗಿಂತ ಮುಸ್ಲಿಮರು ಹೆಚ್ಚಾಗುತ್ತಾರೆಂಬುದು) ಸಂಭವಿಸುವುದಿಲ್ಲ. ಬಹುಪತ್ನಿತ್ವದ ಪ್ರಶ್ನೆಯು (ಹಿಂದೂಗಳಿಗಿಂತ ಮುಸ್ಲಿಮರು ಹೆಚ್ಚಾಗುತ್ತಿದ್ದಾರೆ ಎಂದು ವಾದಿಸಲು ಬಳಸುವ ವಾದ) ಭಾರತದಲ್ಲಿ ಬರುವುದೇ ಇಲ್ಲ. ಭಾರತದಲ್ಲಿ ಲಿಂಗಾನುಪಾತವು 1,000 ಪುರುಷರಿಗೆ 940 ಮಹಿಳೆಯರು ಎಂಬ ಲೆಕ್ಕದಲ್ಲಿದೆ. ಸಾವಿರದಲ್ಲಿ 60 ಬ್ಯಾಚುಲರ್‌ಗಳು ತಮ್ಮ ಮೊದಲ ಮದುವೆಯಾಗಲೂ ಹೆಣಗಾಡುತ್ತಿದ್ದಾರೆ ಎಂದು ನಾನು ಅವರಿಗೆ ಹೇಳಿದೆ. ಬಹುಪತ್ನಿತ್ವದ ಪ್ರಶ್ನೆ ಎಲ್ಲಿದೆ ಎಂದು ನಾನು ಕೇಳಿದೆ. ಇದಕ್ಕೆ ಅವರು ಆತ್ಮೀಯ ನಗುವಿನೊಂದಿಗೆ ಪ್ರತಿಕ್ರಿಯಿಸಿದರು. ಅರ್ಥಾತ್, ನಾನು ಏನು ಹೇಳಿದರೂ ಅದನ್ನು ಅವರು ದಾಖಲು ಮಾಡಿಕೊಂಡರು” ಎಂದು ಸಂದರ್ಶನದಲ್ಲಿ ಖುರೇಷಿ ವಿವರಿಸಿದ್ದಾರೆ.

ಜನಸಂಖ್ಯೆ ಸ್ಫೋಟದ ಭೀತಿಯು ಕೂಡ ತಾರ್ಕಿಕವಾಗಿಲ್ಲ. ದತ್ತಾಂಶಗಳು ಬೇರೆಯ ಕತೆಯನ್ನು ಹೇಳುತ್ತವೆ. ಪ್ರಧಾನಿ ನರೇಂದ್ರ ಮೋದಿ ಅವರು 2019ರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಜನಸಂಖ್ಯಾ ಹೆಚ್ಚಳದ ಕುರಿತು ಮಾತನಾಡಿದ್ದರು. “ಜನಸಂಖ್ಯಾ ಸ್ಫೋಟದ ಬಗ್ಗೆ ನಾವು ಚಿಂತಿಸಬೇಕಾಗಿದೆ. ಇದು ಭಾರತದ ಅಭಿವೃದ್ಧಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ” ಎಂದು ಪ್ರಸ್ತಾಪಿಸಿದ್ದರು.

2019-21ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) ಪ್ರಕಾರ, ಒಟ್ಟು ಫಲವತ್ತತೆ ದರ (ಟಿಎಫ್‌ಆರ್‌) 2016ರಲ್ಲಿ 2.2ರಿಂದ 2ಕ್ಕೆ ಇಳಿದಿದೆ. ಟಿಎಫ್‌ಆರ್‌ ಮತ್ತು ವಾರ್ಷಿಕ ಜನಸಂಖ್ಯೆಯ ಬೆಳವಣಿಗೆ ದರವನ್ನು ಜನಸಂಖ್ಯೆಯ ಬೆಳವಣಿಗೆಯನ್ನು ಪ್ರಮಾಣೀಕರಿಸಲು ವಿಶ್ವಾದ್ಯಂತ ಬಳಸಲಾಗುತ್ತದೆ. ಅಲ್ಲದೆ, ವಿಶ್ವಬ್ಯಾಂಕ್ ಅಂಕಿಅಂಶಗಳ ಪ್ರಕಾರ ಭಾರತದ ಜನಸಂಖ್ಯೆಯ ಬೆಳವಣಿಗೆ ದರವು 2001ರಲ್ಲಿ 1.73%ರಷ್ಟಿದ್ದು 2018ರಲ್ಲಿ 1.04%ಕ್ಕೆ ಕುಸಿದಿದೆ. 12 ರಾಜ್ಯಗಳಲ್ಲಿ ಜನಸಂಖ್ಯೆಯ ಬೆಳವಣಿಗೆ ದರವು 1%ಕ್ಕಿಂತ ಕಡಿಮೆಯಿತ್ತು. ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಹರಿಯಾಣದಂತಹ ರಾಜ್ಯಗಳು ಹೆಚ್ಚಿನ ಫಲವತ್ತತೆಯ ರಾಜ್ಯಗಳಾಗಿ ಹೊಮ್ಮಿವೆ. ಕಾಲಾನಂತರದಲ್ಲಿ ತಮ್ಮ ಬೆಳವಣಿಗೆಯ ದರದಲ್ಲಿ ಗಮನಾರ್ಹ ಕುಸಿತವನ್ನು ತೋರಿಸಿದೆ.

ಇದನ್ನೂ ಓದಿರಿ: ಮಹಿಳೆಯರಿಗೆ ಸ್ವಾತಂತ್ರ್ಯ, ಸಮಾನ ಅವಕಾಶ ನೀಡುವುದು ಅಗತ್ಯ: ಮೋಹನ್ ಭಾಗವತ್‌

ತಮ್ಮ ಭಾಷಣದಲ್ಲಿ ಭಾಗವತ್ ‘ಬಲದಿಂದ ಮತಾಂತರ’ ವಿಚಾರವನ್ನೂ ಉಲ್ಲೇಖಿಸಿದ್ದಾರೆ. ಹಿಂದುತ್ವ ಗುಂಪುಗಳು ‘ಬಲವಂತದ ಮತಾಂತರಗಳ ಹುನ್ನಾರ’ವನ್ನು ಪ್ರಸ್ತಾಪಿಸುತ್ತಿರುತ್ತವೆ. ವಿಶೇಷವಾಗಿ ಕ್ರಿಶ್ಚಿಯನ್ ಧರ್ಮವು ಹಿಂದೂಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಿದೆ ಎಂದು ವಾದಿಸುತ್ತಾರೆ. ಈ ಹಿಂದೆ ‘ದಿ ವೈರ್’ ನಡೆಸಿದ ವರದಿಯ ಪ್ರಕಾರ, “ಹಿಂದುತ್ವ ಗುಂಪುಗಳು ಈ ಪ್ರತಿಪಾದನೆಗೂ ಯಾವುದೇ ಪುರಾವೆ ಇಲ್ಲ.”

ಜನಗಣತಿಯಿಂದ ಲಭ್ಯವಿರುವ ಮಾಹಿತಿಯನ್ನು ಅವಲೋಕಿಸಿದರೆ ದೇಶದ ಜನಸಂಖ್ಯೆಯಲ್ಲಿ ಕ್ರಿಶ್ಚಿಯನ್ ಸಮುದಾಯದ ಪ್ರಮಾಣ ಸ್ಥಿರವಾಗಿದೆ ಅಥವಾ 1971ರಿಂದ ಇಳಿಮುಖವಾಗಿದೆ. 1971ರ ಜನಗಣತಿಯು ಭಾರತದ ಜನಸಂಖ್ಯೆಯಲ್ಲಿ 2.6%ರಷ್ಟು ಕ್ರಿಶ್ಚಿಯನ್ನರಿದ್ದಾರೆಂದು ಅಂದಾಜಿಸಿದೆ. 2001ರ ಹೊತ್ತಿಗೆ, ಈ ಅಂಕಿ ಅಂಶವು 2.3% ಕ್ಕೆ ಇಳಿಯಿತು. 2011ರ ಜನಗಣತಿಯ ಅಂಕಿಅಂಶಗಳ ಧಾರ್ಮಿಕ ಸಂಗತಿಗಳು ಎಂದಿಗೂ ಬಿಡುಗಡೆಯಾಗಿಲ್ಲ. ಸೋರಿಕೆಯಾದ ಮಾಹಿತಿಯ ಪ್ರಕಾರ ಸಮುದಾಯದ ಪ್ರಮಾಣದಲ್ಲಿ ಮತ್ತಷ್ಟು ಕುಸಿತ ಕಂಡುಬಂದಿದೆ.

ಧಾರ್ಮಿಕ ಮತಾಂತರದ ವಿವಾದಾತ್ಮಕ ವಿಷಯದ ಕುರಿತು ಜೂನ್ 2021ರಲ್ಲಿ ಪ್ಯೂ ಸಂಶೋಧನಾ ವರದಿಯು ಮತ್ತಷ್ಟು ಬೆಳಕು ಚೆಲ್ಲಿತ್ತು. ಭಾರತದಲ್ಲಿ ಯಾರಾದರೂ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಬದಲಾಯಿಸುವುದು ‘ಅಪರೂಪ’ ಎಂದು ವರದಿ ಗಮನ ಸೆಳೆದಿತ್ತು.

ಕೃಪೆ: ದಿ ವೈರ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...

ದಾವಣಗೆರೆ ಉಪ ಚುನಾವಣೆ ಅಡ್ಡ ಪರಿಣಾಮ: ಮುಸ್ಲಿಮ್ ಮುಖಂಡರ ಮೇಲೆ ಖರ್ಗೆ-ಡಿಕೆಶಿ ಶಿಸ್ತು ಪ್ರಹಾರ ಕಾಂಗ್ರೆಸ್‌ನ ಆತ್ಮಹತ್ಯಾತ್ಮಕ ರಾಜಕಾರಣ!!

ದಾವಣಗೆರೆ ದಕ್ಷಿಣ ಉಪ ಚುನಾವಣೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನ ಗದ್ದುಗೆ ಗುದ್ದಾಟಕ್ಕೆ ರೋಚಕ ಆಯಾಮ ನೀಡಿಬಿಟ್ಟಿದೆ. ಅಹಿಂದ ಸಮುದಾಯವೇ ಬಹುಜನರಾಗಿರುವ ದಾವಣಗೆರೆ ದಕ್ಷಿಣ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ್ಯಾಯವಾಗಿ ಆ ವರ್ಗದ ಅರ್ಹರೊಬ್ಬರಿಗೆ...

ನೀಟ್ ವಿವಾದ: ಪ್ರಶ್ನೆ ಪತ್ರಿಕೆ ಸೋರಿಕೆ ಜೊತೆಗೆ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ

ರಾಜಸ್ಥಾನದಲ್ಲಿ ನಡೆದ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (ಸಿಬಿಐ) ತನಿಖೆ ವೇಗ ಪಡೆದುಕೊಂಡಿದೆ. ದೇಶದಾದ್ಯಂತ ಹಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ...

ಎಸ್‌ಐಆರ್‌ನಲ್ಲಿ ಮತದಾನದ ಹಕ್ಕು ಹೋಯ್ತು..ಈಗ ಸರ್ಕಾರಿ ಸೌಲಭ್ಯದ ಸರದಿ..ಮುಂದೆ ನಾಗರಿಕತ್ವ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುವುದು ಚುನಾವಣಾ ಆಯೋಗ ಭಾರತದ ಕೋಟ್ಯಾಂತರ ನಾಗರಿಕ ಅಮೂಲ್ಯವಾದ ಮತದಾನದ ಹಕ್ಕನ್ನು ಕಿತ್ತುಕೊಂಡ ಒಂದು ವ್ಯವಸ್ಥಿತ ಸಂಚು ಎನ್ನಬಹುದು. ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು,...

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...