Homeಕರ್ನಾಟಕದೇವನೂರರನ್ನು ಕಂಡದ್ದು...

ದೇವನೂರರನ್ನು ಕಂಡದ್ದು…

- Advertisement -
- Advertisement -

“ದೇವನೂರು ಬರುತ್ತಾರಾ”? “ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಾಗಿದ್ದ ಎರಡು ಮೂರು ಪ್ರಮುಖ ಕಾರ್ಯಕ್ರಮಗಳಲ್ಲಿ ಅವರು ಕಾಣಿಸಿಕೊಂಡಿಲ್ಲ” ಎಂದೆ. “ಇಲ್ಲ ಈ ಸಭೆಗೆ ಬಂದೆ ಬರುತ್ತಾರೆ” ಎಂದರು ಸ್ನೇಹಿತರು .

“ದೇವನೂರು ಬಂದರು” ಎಂದು ಪಿಸುಗುಟ್ಟಿದರು ಪಕ್ಕದಲ್ಲಿದ್ದವರು. ಒಳಬರುತ್ತಲಿತ್ತು ಮೇರು ಪರ್ವತ. ಆರಡಿಗೆ ಒಂದೆರಡು ಇಂಚು ಕಡಿಮೆ ಇರುವ ದೇಹವದು. ಇಸ್ತ್ರಿ ಕಾಣದ ದೊಗಲೆ ಪ್ಯಾಂಟು, ಅದರ ಮೇಲೊಂದು ತುಂಬ ತೋಳಿನ ಹತ್ತಿಯ ನೂಲಿನ ಅಂಗಿ, ಅದರ ಮೇಲೊಂದು ಅರ್ಧತೋಳಿನ ಉಲನ್ ಸ್ವಿಟರ್, ಕೊರಳಲ್ಲಿ ಜೋತಾಡುತ್ತಿತ್ತೊಂದು ಟವೆಲ್. ಕಾಲಲ್ಲಿರುವ ಸಾದಾ ಚಪ್ಪಲಿಗಳನ್ನು ಬಾಗಿಲು ಬಳಿ ಬಿಟ್ಟು ಮುಗುಳುನಗುತ್ತ ಒಳಬಂದರು.

ದೇವನೂರ ಮಹಾದೇವರ ಬಗ್ಗೆ ಅನೇಕ ಬಾರಿ ಕೇಳಿದ್ದೆ ಅಂತೆಕಂತೆಗಳನ್ನು. ಅವರಿಗೆ ರಾಜಕಾರಣ ಆಸಕ್ತಿದಾಯಕ ವಿಷಯವಂತೆ; ಆದರೆ ರಾಜಕೀಯ ಮಾಡುವವರನ್ನು ಹತ್ತಿರಕ್ಕೆ ಸೇರಿಸೊಲ್ಲವಂತೆ; ವಿಧಾನಸಭೆಯ ಮೇಲ್ಮನೆಯ ಸದಸ್ಯತ್ವ ಮನೆ ಬಾಗಿಲಿಗೆ ಬಂದಾಗ ಬಾಗಿಲನ್ನು ತಗೆಯಲೇ ಇಲ್ಲವಂತೆ; ತಮ್ಮ ಮನೆ ಬಿಟ್ಟು ಯಾರ ಮನೆಗೂ ಹೋಗುವದಿಲ್ಲವಂತೆ; ಸಾಹಿತ್ಯ ಸಮ್ಮೇಳನದ ಅಧ್ಯಕ್ಷಗಿರಿಯನ್ನು ಗೌರವ ಪೂರ್ವಕವಾಗಿ ತಿರಸ್ಕರಿಸಿದರಂತೆ; ಇತ್ತೀಚೆಗೆ ಪ್ರಶಸ್ತಿಗಳನ್ನು ಸ್ವೀಕರಿಸುತ್ತಿಲ್ಲವಂತೆ; ಸಿಕ್ಕ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿದ್ದಾರಂತೆ; ಯಾರಿಗೂ ಅನವಶ್ಯಕ ಶಿಫಾರಸ್ಸು ಮಾಡುವದಿಲ್ಲವಂತೆ; ಯಾರ ಹಂಗಿಗೂ ಒಳಗಾಗುವದಿಲ್ಲವಂತೆ; ತುಂಬ ನಿಷ್ಠುರವಾದಿಯಂತೆ; ಬರೆಯುವದು ಕಡಿಮೆಯಂತೆ; ಬರೆದಿದ್ದೆಲ್ಲ ಅಪ್ಪಟ ಚಿನ್ನವಂತೆ; ಹತ್ತಾರು ಪುಟಗಳನ್ನು ಅವರು ಬರೆದರೆ ಅದಕ್ಕೆ ಸಾವಿರಾರು ಪುಟಗಳ ವಿಮರ್ಶೆ ಬರುತ್ತವೆಯಂತೆ; ಹೀಗೆ ಅಂಕೆಯಿಲ್ಲದ ಅಂತೆಕಂತೆಗಳು ನನ್ನ ಮನಃಪಟ ದಲ್ಲಿದ್ದವು.

ಹೆಚ್ಚು ಕೇಳಿದಂತೆ ಅವರ ಬಗ್ಗೆ ಆಸಕ್ತಿ ಬೆಳೆಯಲಾರಂಭಿಸಿತು. ಮೊದಲ ಭಾರಿ ಝೂಮ್ ಮಿಟಿಂಗನಲ್ಲಿ ಅವರನ್ನೊಮ್ಮೆ ಭೇಟಿಯಾಗಿದ್ದೆ. ಅಂದು ಅವರು ಜಿ.ಬಿ. ಪಾಟೀಲರ್‍ಯಾರು ಅವರನ್ನು ತೋರಿಸಿ ಎಂದಾಗ ನಾನು ನವ ವಧುವಿನಂತೆ ನಾಚಿ ನೀರಾಗಿದ್ದೆ. ವೈಯಕ್ತಿಕವಾಗಿ ಕಾಣುವ ಬಯಕೆ ಅಂದು ಈಡೇರಿತು. ಆದರೆ ಖುದ್ದು ಮುಖತಃ ಭೇಟಿಯ ಆಸೆ ಹಾಗೆಯೇ ಉಳಿದಿತ್ತು.

ಇವರ ಬಗ್ಗೆ ತಲೆಯಲ್ಲಿ ಹುಳ ಬಿಟ್ಟುಕೊಂಡೆ. ಅವರ ಬರೆದ ಸಾಹಿತ್ಯವು ಕಣ್ಣು ಮಂದೆ ತೇಲುತ್ತ ಹೋದವು. ಬರೆದಿದ್ದು ಒಂದೇ ಒಂದು ಕಾದಂಬರಿ ’ಕುಸುಮ ಬಾಲೆ’, ಎರಡು ಕಥಾ ಸಂಕಲನಗಳು ’ದ್ಯಾವನೂರು’ ಮತ್ತು ’ಒಡಲಾಳ’ ಎಂದು. ಭಾರತದಾದ್ಯಂತ ಚರ್ಚೆಯಾದ ’ಎದೆಗೆ ಬಿದ್ದ ಅಕ್ಷರ’ ಅವರ ಬಿಡಿ ಬರಹಗಳ ಸಂಕಲನ. ಇತ್ತೀಚೆಗೆ ಅವರ ಎದೆಯಿಂದ ಹೊರಬಂದ ಆರ್.ಎಸ್.ಎಸ್. ಆಳ ಮತ್ತು ಅಗಲ ಎಂಬ ಚಿಕ್ಕ ಕೃತಿ ಕೂಡ ಸೇರಿಕೊಂಡಿದೆ. ’ನೋಡು ಮತ್ತು ಕೂಡು’ ಎಂಬ ಅನುವಾದ ಪುಸ್ತಕವನ್ನು ಪ್ರಕಟಿಸಿದ್ದಾರೆ. ಇದರ ಜೊತೆಗೆ ಪ್ರಕಟವಾಗದೆ ಉಳಿದಿರುವ ಇನ್ನಷ್ಟು ಬಿಡಿ ಬರಹಗಳು ಕೂಡ ಇವೆ.

ಮೂರು ದಶಕಗಳ ಹಿಂದೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಅವರನ್ನು ಹುಡುಕಿಕೊಂಡು ಬಂದಿತ್ತು. ’ಕುಸುಮಬಾಲೆ’ ಮುಟ್ಟಿದ್ದಳು ಕೇಂದ್ರ ಸಾಹಿತ್ಯ ಅಕಾಡೆಮಿಯನ್ನು. ’ಎದೆಗೆ ಬಿದ್ದ ಅಕ್ಷರ’ಗಳು ತಟ್ಟಿದ್ದವು ಕೊಲ್ಕತ್ತಾದ ಭಾರತೀಯ ಭಾಷಾ ಪರಿಷತ್ತಿನ ಎದೆಯನ್ನು. ಅವರು ದೇವನೂರನ್ನು ಗೌರವಿಸಿದರು ಸೃಜನಶೀಲ ಕೃತಿಕಾರರೆಂದು. ನಾನೇಕೆ ಇವರನ್ನು ಗುರುತಿಸಿಲ್ಲವೆಂದಿತು ಒಕ್ಕೂಟದ ಕೇಂದ್ರ ಸರಕಾರ. ’ಪದ್ಮಶ್ರಿ’ ಪ್ರಶಸ್ತಿ ಕೊಟ್ಟು ಗೌರವಿಸಿದರು ಅವರನ್ನು. ಮೈಸೂರಿನ ವಿಶ್ವವಿದ್ಯಾನಿಲಯದವರು ತಮ್ಮ ಪಕ್ಕದ ಹೋಬಳಿ ನಂಜನಗೂಡಿನ ಮಹದೇವನಿಗೆ ಗೌರವಿಸಿದರು ಡಾಕ್ಟರ್ ಎಂದು. ಆದರೂ ಇವರೆಂದೂ ತಮ್ಮ ಹೆಸರಿನ ಮುಂದಾಗಲಿ ಅಥವಾ ಹಿಂದಾಗಲಿ ಗೌರವ ಸೂಚಕ ಪ್ರಶಸ್ತಿಗಳನ್ನು ಬಳಸಲೇ ಇಲ್ಲ. ಇವರು ಇಂದು ಮತ್ತು ಎಂದೆಂದಿಗೂ ’ದೇವನೂರ ಮಹಾದೇವ’ ಮಾತ್ರ.

ಅಂದಿನ ಸಭೆಯಲ್ಲಿ ಇವರು ನನ್ನ ಪಕ್ಕದಲ್ಲಿದ್ದರು. ಗಂಭೀರವಾಗಿ ನಡೆಯುತ್ತಿದ್ದ ಸಭೆಯಲ್ಲಿ ತಟ್ಟನೆ ಎದ್ದು ಹೊರನಡೆದರು. ಕುತೂಹಲದಿಂದ ನಾನೂ ಅವರನ್ನು ಹಿಂಬಾಲಿಸಿದ್ದೆ ವರಾಂಡಾಕ್ಕೆ. ’ಸೇದುತ್ತಿರಾ’ ಎಂದು ಸಿಗರೇಟು ನೀಡಲು ಮುಂದಾದರು. ಸೇದಲಾರದ ನಾನು ಅವರನ್ನು ಒಬ್ಬಂಟಿಯಾಗಿ ಯೋಚಿಸಲು ಬಿಟ್ಟು ಒಳಬಂದೆ.

ಸಭೆಯಲ್ಲಿ ನಾವೆಲ್ಲರೂ ಸಾಮಾನ್ಯವಾಗಿ ಯೋಚಿಸುತ್ತಿದ್ದಂತೆ ಅವರು ಯೋಚಿಸುತ್ತಿರಲಿಲ್ಲವೆಂದೆನಿಸಿತು ಅಂದು ನನಗೆ. ಮುಂದೆ ಬಾಧಿಸಬಹುದಾದ ವಿಷಯಗಳ ಬಗ್ಗೆ ಅವರಿಂದ ತಟ್ಟನೆ ಪ್ರಶ್ನೆಗಳು ಬರುತ್ತಿದ್ದವು. “ಸರ್ ಇದನ್ನು ಮುಗಿಸಿ ಅಲ್ಲಿಗೆ ಬರುವೆ” ಎಂದು ಒದ್ದಾಡುತ್ತಿದ್ದರು ತಜ್ಞ ಸಂಘಟಕರು. ಇವರ ಯೋಚನಾ ಲಹರಿಯ ಆಳ ಅಗಲಗಳನ್ನು ನಾನು ಅರಿಯದಾದೆ.

ಇನ್ನೊಂದು ಸಣ್ಣ ವಿಷಯ ಹೇಳಿ ಮುಗಿಸುವೆ. ಹಿಂದೊಮ್ಮೆ ಇವರ ಶ್ರೀಮತಿಯವರು ಗಂಡನ ಅಂಗಿ, ಚೊಣ್ಣಗಳು ಮುದ್ದೆಯಾಗಿರುವದನ್ನು ಕಂಡು ಅವುಗಳಿಗೆ ಇಸ್ತ್ರಿಮಾಡಿಸಿ ಇಟ್ಟಿದ್ದರಂತೆ. ಗೂಟದಲ್ಲಿ ಕಾಣದ ಬಟ್ಟೆಗಳಿಗಾಗಿ ಹುಡುಕಿ ’ಎಲ್ಲಿವೆ ಅವು’ ಅಂದರಂತೆ. ಅವರು ಕಪಾಟು ಕಡೆ ಕೈ ತೋರಿಸಿದಾಗ ’ಅವ್ಯಾಕೆ ಹಿಂಗೆ’ ಎಂದು ಕಸಿವಿಸಿಗೊಂಡು ತಮ್ಮೆಲ್ಲ ಇಸ್ತ್ರಿ ಬಟ್ಟೆಗಳನ್ನು ನೀರಲ್ಲಿ ಅದ್ದಿ ಒಣಹಾಕಿಬಿಟ್ಟರಂತೆ. ಅಂದಿನಿಂದ ಇವರ ಬಟ್ಟೆಯ ಸಹವಾಸ ಬೇಡವೆಂದು ಅವರೂ ಕೈತೊಳೆದರಂತೆ.

ಯಾರಿಗೆ ಗೊತ್ತು ಮಹಾದೇವನ ಮಹಿಮೆ! ’ತನ್ನವರು ತೊಡುವ ಬಟ್ಟೆಗಳಿಗೆಲ್ಲಿವೆ ಇಸ್ತ್ರಿ?’ ಅಂದಿರಬೇಕು, ಈ ಅಕ್ಷರದ ಮಹದೇವ. ಅವರಿಗಿಲ್ಲದ ಇಸ್ತ್ರಿ ಬಟ್ಟೆಗಳು ತನಗೇಕೇ ಎಂದಿರಬೇಕು ದೇವನೂರಿನ ಫಕೀರ.

ಜಿ ಬಿ ಪಾಟೀಲ

ಜಿ ಬಿ ಪಾಟೀಲ
ಬಸವನಬಾಗೇವಾಡಿಯ ಜಿ.ಬಿ.ಪಾಟೀಲ್ ಅವರು ಬೆಂಗಳೂರಿನಲ್ಲಿ ಯಶಸ್ವಿ ಉದ್ಯಮಿಯಾಗಿದ್ದೂ, ಸಾಮಾಜಿಕ ಹಾಗೂ ರಾಜಕೀಯ ಸಂಗತಿಗಳಲ್ಲಿ ನಿರಂತರ ಆಸಕ್ತಿ ಹೊಂದಿದ್ದವರು. ಸದ್ಯ ಜಾಗತಿಕ ಲಿಂಗಾಯಿತ ಮಹಾಸಭಾದ ಪ್ರಧಾನ ಕಾರ್ಯದರ್ಶಿಯಾಗಿ ಸಕ್ರಿಯರಾಗಿದ್ದಾರೆ.


ಇದನ್ನೂ ಓದಿ: ದೇವನೂರ ಮಹದೇವ ಅವರ ಕಿರುಹೊತ್ತಿಗೆ ’ಆರ್‌ಎಸ್‌ಎಸ್- ಆಳ ಮತ್ತು ಅಗಲ’ದಿಂದ ಆಯ್ದ ಅಧ್ಯಾಯ; ಇಂದು, ವರ್ತಮಾನದಲ್ಲಿ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...