ತಾವು ವಾಸಿಸುತ್ತಿರುವ ಜಾಗವನ್ನು ಸ್ಲಂ ಎಂದು ಘೋಷಿಸಿ ಅಂತಿಮ ಡಿಕ್ಲರೇಷನ್ ಹೊರಡಿಸಬೇಕು, ಹಕ್ಕುಪತ್ರ ನೀಡಿ ಉಳಿಸಿಕೊಡಬೇಕು ಎಂದು ಒತ್ತಾಯಿಸಿ ಕಳೆದ 6 ದಿನಗಳಿಂದ ಹೋರಾಡುತ್ತಿದ್ದ ಮಂಡ್ಯದ ಶ್ರಮಿಕರಿಗೆ ಮೊದಲ ಹಂತದ ಜಯ ಸಿಕ್ಕಿದೆ.
ಮಂಡ್ಯ ಜಿಲ್ಲಾ ಶ್ರಮಿಕನಗರ ನಿವಾಸಿಗಳ ಒಕ್ಕೂಟ, ಕರ್ನಾಟಕ ಜನಶಕ್ತಿ ಹಾಗೂ ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ನೇತೃತ್ವದಲ್ಲಿ ತಮ್ಮ ಹಕ್ಕೊತ್ತಾಯಗಳ ಈಡೇರಿಕೆಗಾಗಿ ಕೆ.ಆರ್ ಪೇಟೆ ಕಡೆಗೆ ಪಾದಯಾತ್ರೆ ಹೊರಟಿದ್ದ ಪ್ರತಿಭಟನಾಕಾರನ್ನು ಪಾಂಡವಪುರದಲ್ಲಿ ಭೇಟಿ ಮಾಡಿ ಸಭೆ ನಡೆಸಿದ ಅಧಿಕಾರಿಗಳು 10 ದಿನಗಳ ಒಳಗೆ ಸ್ಲಂ ಎಂದು ಘೋಷಿಸಿ ಅಂತಿಮ ಡಿಕ್ಲರೇಷನ್ ಹೊರಡಿಸಲು ಪ್ರಕ್ರಿಯೆ ಆರಂಭಿಸುವುದಾಗಿ ತಿಳಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳ ಜೊತೆ ಜುಲೈ 26ರಂದು ಸಭೆ ನಡೆಸುವುದಾಗಿ ಭರವಸೆ ನೀಡಿದರು.
ಕೊಳಚೆ ಅಭಿವೃದ್ಧಿ ಮಂಡಳಿಯ ಯೋಜನಾ ನಿರ್ದೇಶಕರು, ಕಾರ್ಯಪಾಲಕ ಅಭಿಯಂತರರು ಮತ್ತು ಪುರಸಭೆ ಅಧಿಕಾರಿಗಳು ಬಂದು ಕಾಳಪ್ಪ ಬಡಾವಣೆಯ ಮತ್ತು ಇನ್ನಿತರ ಶ್ರಮಿಕನಗರಗಳ (ಸ್ಲಂಗಳ) ಎಲ್ಲ ಸಮಸ್ಯೆಗಳನ್ನೂ ಚರ್ಚಿಸಲು ಜಿಲ್ಲಾಧಿಕಾರಿ ಕಛೇರಿಯಿಂದ ಕರೆಯಲಾಗಿರುವ ಸಭೆಯ ತಿಳುವಳಿಕೆ ಪತ್ರವನ್ನು ನೀಡಿದರು. ಅದೇ ರೀತಿ ಅಂತಿಮ ಘೋಷಣೆ ಹೊರಡಿಸಲು ಮತ್ತು ಹಕ್ಕುಪತ್ರ ನೀಡಲು ಪ್ರಕ್ರಿಯೆಯನ್ನು ಈ ತಕ್ಷಣದಿಂದಲೇ ಆರಂಭಿಸುವುದಾಗಿಯೂ ಹತ್ತು ದಿನದ ಒಳಗಾಗಿ ಮುಗಿಸುವುದಾಗಿಯೂ ಲಿಖಿತ ಪತ್ರ ನೀಡಿದರು.
ಇದಾದ ನಂತರ ಶ್ರಮಿಕ ನಿವಾಸಿಗಳು ತಮ್ಮ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, 10 ದಿನಗಳಲ್ಲಿ ಭರವಸೆಗಳು ಈಡೇರದಿದ್ದರೆ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಹಕ್ಕುಪತ್ರ ನೀಡಿ, ತುಂಡು ಭೂಮಿ ಉಳಿಸಿಕೊಡಿ: ಸಿಎಂಗೆ ಮನವಿ ಸಲ್ಲಿಸಲು ಪಾದಯಾತ್ರೆ ಹೊರಟ ಮಂಡ್ಯದ ಶ್ರಮಿಕರು
ಮಂಡ್ಯದ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಹಲವಾರು ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿದ ಶ್ರಮಿಕ ನಿವಾಸಿಗಳು ಅಲ್ಲೆ ಪಕ್ಕದಲ್ಲಿ, ಸುತ್ತಾ ಮುತ್ತಾ ನೂರಾರು ವರ್ಷಗಳಿಂದ ವಾಸವಾಗಿದ್ದಾರೆ. ಆರ್ಟಿಓ ಕಚೇರಿ ಎದುರು 80 ಕುಟುಂಬಗಳು ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಾ ಬಂದಿದ್ದಾರೆ. ಕಾಳಪ್ಪ ಬಡಾವಣೆ ಎಂದು ಹೆಸರು ಇಟ್ಟುಕೊಂಡಿರುವ ಇಲ್ಲಿನ ಶ್ರಮಿಕರು ಬಹುತೇಕ ಪೌರಕಾರ್ಮಿಕ ಕೆಲಸ ಮಾಡುತ್ತಾರೆ. ಅಲ್ಲದೆ ದಿನಗೂಲಿ ಕಾರ್ಮಿಕರಾಗಿ, ಮೂಟೆಹೊರುವ ಕಾರ್ಮಿಕರಾಗಿ, ಮನೆಕಟ್ಟುವವರಾಗಿ, ಮನೆಕೆಲಸಕ್ಕೆ ನೆರವಾಗುವವರಾಗಿ ಹತ್ತುಹಲವು ರೀತಿಗಳಲ್ಲಿ ಈ ನಗರವನ್ನು ಸ್ವಚ್ಛವಾಗಿಡುತ್ತಿದ್ದಾರೆ. ಅವರ ಹಕ್ಕೊತ್ತಾಯ ಒಂದೇ. ಅದು ಅವರು 50 ವರ್ಷಗಳಿಂದ ವಾಸಿಸುತ್ತಿರುವ ಜಾಗವನ್ನು ಸ್ಲಂ ಎಂದು ಘೋಷಿಸಿ ಅವರಿಗೆ ಹಕ್ಕುಪತ್ರ ನೀಡಬೇಕು. ಸರ್ಕಾರ ಮನೆಗಳನ್ನು ಕಟ್ಟಿಕೊಡಬೇಕು ಎಂಬುದಾಗಿದೆ.
ಈ ವಿಚಾರದಲ್ಲಿ ಹಲವಾರು ಹೋರಾಟಗಳು ನಡೆದು 2007ರಲ್ಲಿ ಈ ಪ್ರದೇಶವನ್ನು ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಸ್ಲಂ ಎಂದು ಘೋಷಣೆ ಮಾಡಲಾಗಿತ್ತು. ಸರ್ಕಾರ ವಾಂಬೆ ಯೋಜನೆಯಡಿಯಲ್ಲಿ 80 ಮನೆಗಳನ್ನು ನಿರ್ಮಾಣ ಮಾಡಿಕೊಡಲು ಕಾಮಗಾರಿ ಪ್ರಾರಂಭಿಸಿತ್ತು. ಆದರೆ, ಪಟ್ಟಭದ್ರ ಹಿತಾಸಕ್ತಿಗಳು ಆ ಜಾಗವನ್ನು ಲಪಟಾಯಿಸಲು ಹುನ್ನಾರ ಮಾಡಿ ಅಲ್ಲಿನ ಜನರಿಗೆ ಹಕ್ಕುಪತ್ರಗಳು ಸಿಗದ ಹಾಗೆ ನೋಡಿಕೊಂಡಿದ್ದಾರೆ. ಇದರಿಂದಾಗಿ ಅಲ್ಲಿಯ ನಿವಾಸಿಗಳಿಗೆ ಹಕ್ಕು ಪತ್ರಗಳು ಇಲ್ಲದೆ, ಯಾವ ಯೋಜನೆಯ ಅಡಿಯಲ್ಲೂ ವಸತಿಯನ್ನು ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮನೆಗಳೆ ಇಲ್ಲ ಎಂದ ಮೇಲೆ ಮೂಲಭೂತ ಸೌಲಭ್ಯಗಳು ದೂರದ ಮಾತು.
ಈಗ ಅದೇ ಜಾಗದಲ್ಲಿ ಹಲವು ನೌಕರರ ಸಂಘಟನೆಗಳು ತಮ್ಮ ಕಚೇರಿಗಳನ್ನು ಸ್ಥಾಪಿಸಿಕೊಳ್ಳಲು ಮುಂದಾಗಿವೆ. ಶ್ರಮಿಕನಿವಾಸಿಗಳು ಬಳಸುತ್ತಿದ್ದ ಶೌಚಾಲಯವನ್ನು ಕೆಡವಿಹಾಕಿವೆ. ಇದರಿಂದ ಆತಂಕಿತರಾಗಿರುವ ಅಲ್ಲಿನ ನಿವಾಸಿಗಳು ಮಂಡ್ಯದ ಇತರ ಶ್ರಮಿಕ ನಿವಾಸಿಗಳ ಜೊತೆಗೂಡಿ ಹೋರಾಟ ಆರಂಭಿಸಿದ್ದಾರೆ. ಕಾಳಪ್ಪ ಬಡಾವಣೆಯನ್ನು ಸ್ಲಂ ಎಂದು ಅಂತಿಮ ಡಿಕ್ಲೆರೇಶನ್ ಕೂಡಲೇ ಹೊರಡಿಸಬೇಕು ಮತ್ತು ಹಕ್ಕು ಪತ್ರ ಒದಗಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರೂ ಜಿಲ್ಲಾಧಿಕಾರಿಯಾಗಲಿ, ಇತರ ಅಧಿಕಾರಿಗಳಾಗಲಿ ಸ್ಪಂದಿಸಿಲ್ಲ. ಹಾಗಾಗಿ ಜುಲೈ 21 ರಂದು ಜಿಲ್ಲೆ ಕೆ.ಆರ್ ಪೇಟೆಯಲ್ಲಿ ಹೆಲಿಪ್ಯಾಡ್ ಉದ್ಘಾಟನೆ ಮಾಡಲು ಆಗಮಿಸುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆ ಹೇಳಿಕೊಳ್ಳಲು ಸ್ಲಂ ನಿವಾಸಿಗಳು ಮುಂದಾಗಿದ್ದಾರೆ. ಅದಕ್ಕಾಗಿ ಕೆ.ಆರ್ ಪೇಟೆ ಪಾದಯಾತ್ರೆ ಆರಂಭಿಸಿದ್ದರು.
ಹೋರಾಟದಲ್ಲಿ ಕಾಳಪ್ಪ ಬಡಾವಣೆಯ ಮುಖಂಡರಾದ ಆರ್ಮುಗಂ, ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಪೂರ್ಣಿಮ, ಜಿಲ್ಲಾ ಕಾರ್ಯದರ್ಶಿ ಸಿದ್ಧರಾಜು, ಕರ್ನಾಟಕ ಶ್ರಮಿಕ ಶಕ್ತಿಯ ನಾಯಕರಾದ ಸುಬ್ರಹ್ಮಣ್ಯ, ಶ್ರಮಿಕ ನಿವಾಸಿಗಳ ಒಕ್ಕೂಟದ ಪ್ರಕಾಶ್, ಕೃಷ್ಣಪ್ಪ, ರಾಜು, ನಿಂಗಮ್ಮ, ಮಹಿಳಾ ಮುನ್ನಡೆಯ ಕಮಲ, ಜ್ಯೋತಿ, ಶಿಲ್ಪ, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಅಂಜಲಿ, ಪುನೀತ್ ಮತ್ತಿತರರು ಭಾಗವಹಿಸಿದ್ದರು.
ಇದನ್ನೂ ಓದಿ: ಒರಿಸ್ಸಾ: ದೇವಾಲಯ ಸುಂದರೀಕರಣಕ್ಕಾಗಿ 400 ವರ್ಷದ ಹಳೆಯ ಸ್ಲಂ ತೆರವು- ಸಾವಿರಾರು ದಲಿತರ ಬದುಕು ಬೀದಿಗೆ