Homeಅಂಕಣಗಳುಅಭಯೋತ್ಪಾದಕ ಮಸೂತಿ, ದರ್ಗಾ ಮತ್ತು ಮೌಲ್ವಿಗಳು

ಅಭಯೋತ್ಪಾದಕ ಮಸೂತಿ, ದರ್ಗಾ ಮತ್ತು ಮೌಲ್ವಿಗಳು

ಎಲ್ಲಾ ಸಂಗತಿಗಳು ಭಯೋತ್ಪಾದನೆಗೆ ಸಂಬಂಧಿಸಿವೆ ಎಂದು ಕತೆಕಟ್ಟಿ ಜನರಲ್ಲಿ ಭಯವನ್ನು ಉತ್ಪಾದಿಸುವ ಮೂಲಭೂತವಾದಿಗಳೂ ಇದ್ದಾರೆ

- Advertisement -
- Advertisement -

| ಅರುಣ್ ಜೋಳದಕೂಡ್ಲಿಗಿ |

ಈಚೆಗೆ ಕೊಟ್ಟೂರಿನಲ್ಲಿ ನನ್ನ ಹೈಸ್ಕೂಲ್ ಮಿತ್ರನೊಬ್ಬ ಮಾತನಾಡುತ್ತಾ `ಗೆಳೆಯಾ ನಿನಗೆ ಗೊತ್ತಿಲ್ಲ ಈ ಮಸೂತಿ, ದರ್ಗಾ, ಮೌಲ್ವಿಗಳೆಲ್ಲಾ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿದ್ದಾರೆ’ ಎಂದ. ನಾನು ಅದು ಹೇಗೆ ಹೇಳ್ತೀಯ, ಬಾ ಕೊಟ್ಟೂರಲ್ಲಿರುವ ಎಲ್ಲಾ ಮಸೂತಿಗಳನ್ನು ಒಮ್ಮೆ ಸುತ್ತಾಕಿಕೊಂಡು ಬರೋಣ, ನಿನ್ನ ಮಾತಿಗೆ ಸಾಕ್ಷಿ ತೋರಿಸು ಅಂದೆ. ಆತ ತಡವರಿಸುತ್ತ `ಹಂಗಲ್ಲ ಕೆಲವು ಮಸೀತಿಗಳು ಹಂಗೆ ಇದಾವೆ ಅಂದ’ ಆಗ ನಾನು ಮತ್ತೆ `ಸರಿ ನೀನು ಹೇಳೋವಂತ ಮಸೀತಿಗಳನ್ನಾದರೂ ತೋರಿಸು’ ಅಂದೆ. ಕೊನೆಗೆ ಆತ ಮತ್ತಷ್ಟು ಗಲಿಬಿಲಿಗೊಂಡು `ನನಗೆ ಪಕ್ಕ ಗೊತ್ತಿಲ್ಲ, ಆದ್ರ ನಾನು ಹೇಳೋ ಮಾತಂತು ಸತ್ಯ’ ಅಂದ. ನಾನು `ಅರೆ ನಿನ್ನ ಮಾತಿಗೆ ಒಂದಾದ್ರೂ ಸಾಕ್ಷಿ ತೋರಿಸೋಕೆ ರೆಡಿ ಇಲ್ಲ, ಆದ್ರೆ `ನಾನೇಳೋ ಮಾತು ಮಾತ್ರ ಸತ್ಯ’ ಅಂದ್ರೆ ಹೇಗೆ ಅಂದೆ. ಗೆಳೆಯ ಸ್ವಲ್ಪ ವಿಚಲಿತನಾದಂತೆ `ಇಲ್ಲ ಇಲ್ಲ ನಮ್ಮ ಭಾಗದ ಮುಸ್ಲಿಮರು ಒಳ್ಳೇರಿದಾರ, ಆದರೆ ಬೇರೆ ಕಡೆ ಮುಸ್ಲೀಮರು ಹಾಗಲ್ಲ’ ಎಂದ. ನಾನು ಮತ್ತೆ `ಅಲ್ಲಪ್ಪ ಬೇರೆ ಭಾಗದವರು ಇದೇ ಮಾತು ಹೇಳ್ತಾರೆ ಅಂತಿಟ್ಕೋ, ಹಾಗಾದ್ರೆ ಯಾವ ಭಾಗದ ಮುಸ್ಲೀಮರು ಒಳ್ಳೇರಲ್ಲ ಹೇಳು’ ಅಂದೆ. ಆತ ತಡವರಿಸುತ್ತಾ ಮಾತು ಬದಲಿಸಿ ಬೇರೆ ಖಾಸಗಿ ಸಂಗತಿಗಳಿಗೆ ತಿರುಗಿದ.
ನಾನು ಗೆಳೆಯನಿಗೆ ಮತ್ತೆ ಅದೆ ವಿಷಯ ಕೆದಕಿ `ಈಗ ಟೈಮಿದ್ರೆ ನೀನು ನನ್ನ ಜತೆ ಬಾ, ಇದೇ ಕೊಟ್ಟೂರ ಮಸೀದಿಯೊಂದರ ಹತ್ತಿರ ಕೂರೋಣ. ಹೆದರಿದ ಮಕ್ಕಳಿಗೆ ತಾಯತ ಕಟ್ಟಿಸಲಿಕ್ಕೋ, ಸಕ್ಕರೆ ಓದಿಸಲಿಕ್ಕೋ ಒಬ್ರು ಇಬ್ರಾದ್ರೂ ಬಂದೇ ಬರ್ತಾರೆ. ನೀನು ಹೇಳಿದ ಮಸೀದಿ ದರ್ಗಾಗಳೇ ಜನರಲ್ಲಿ ಹೇಗೆ ಭಯವನ್ನು ನಿವಾರಿಸುವ ನಂಬಿಕೆ ಹುಟ್ಟಿಸುತ್ತವೆಯೆಂದು ನೋಡೋಣ. ಇದನ್ನು ಇನ್ನಷ್ಟು ಖಚಿತಪಡಿಸಿಕೊಳ್ಳಲು ಮಸೂತಿಗೆ ಬಂದ ಜನರ ಬಳಿ ಮಾತಾಡೋಣ. ನೀನು ನನ್ನ ಜತೆ ಬರುವುದಾದರೆ ನನ್ನ ಮಾತಿಗೆ ಇಂತಹ ಸಾವಿರಾರು ದರ್ಗಾ ಮಸೂತಿಗಳನ್ನು ಸಾಕ್ಷಿಯಾಗಿ ತೋರಿಸಲು ಸಿದ್ಧನಿದ್ದೇನೆ’ ಎಂದೆ. ಗೆಳೆಯ `ಹೌದು ನೀನು ಹೇಳೋದ್ರಲ್ಲಿ ನಿಜವಿದೆ. ನನ್ನ ಮಗಳಿಗೂ ನಮ್ಮವ್ವ ನಮ್ಮೂರ ಮುಜಾವರನ ಬಳಿ ತಾಯಿತ ಕಟ್ಟಿಸಿದ್ಲು’ ಎಂದು ದಿಢೀರ್ ನನ್ನ ದಾರಿಗೆ ಬಂದು ನಿಂತ. ಗೆಳೆಯನ ಈ ಗೊಂದಲದ ಸ್ಥಿತಿ ನೋಡಿ ಏನು ಹೇಳುವುದೋ ತಿಳಿಯದಾಯಿತು. ಆದರೆ ಹಲವರು ಇಂತಹ ಗೊಂದಲದಲ್ಲಿದ್ದಾರೆ ಎನ್ನುವುದಕ್ಕೆ ಈತ ಸಂಕೇತದಂತಿದ್ದ.
ಕಳೆದ ವರ್ಷ ನಮ್ಮೂರಲ್ಲಿ ನಡೆದ ಒಂದು ಘಟನೆ. ಆ ರಾತ್ರಿ ನನ್ನ ಮಗ ವಿಪರೀತ ಅಳುವುದಕ್ಕೆ ಶುರು ಮಾಡಿದ, ನಾವು ಮಗನನ್ನು ಸಂತೈಸಲು ಪ್ರಯತ್ನಿಸುತ್ತಿದ್ದೆವು. ನನ್ನವ್ವ ಮೊಮ್ಮಗ ಹೆದರಿಕೊಂಡಂತಿದೆ ಎಂದರಿತು ನಮ್ಮೂರ ಅಲಾವಿ ದೇವರಿಗೆ ಬೆಲ್ಲದ ತೂಕದ ಹರಕೆ ಹೊತ್ತಳು. ಕಾಕತಾಳೀಯವೆಂಬಂತೆ ಮಗನ ಅಳು ನಿಂತಿತು. ಅವ್ವನ ಮುಖದಲ್ಲಿ ಸಂತಸ ಮೂಡಿ `ನೋಡು ದೇವ್ರಿಲ್ಲ ದೇವ್ರಿಲ್ಲ ಅಂತ ನೀನು ಮೊಂಡುವಾದ ಮಾಡ್ತಿ, ಅಲಾವಿ ದೇವ್ರು ಹುಸೇನಪ್ಪ ಹ್ಯಂಗ ಮಗೂನ ಹೆದ್ರಿಕಿನ ಹೋಗಿಸ್ತು’ ಎಂದು ನನ್ನನ್ನು ದುರುಗುಟ್ಟಿ ನೋಡಿದಳು. ನಾನೀಗ ಏನಾದರೂ ಮಾತನಾಡಿದರೆ, ಮನಸ್ಸಿಗೆ ನೋವಾಗುವುದೆಂದು ಭಾವಿಸಿ ಮೌನ ವಹಿಸಿದೆ. ಮಗ ಅಳುವುದನ್ನು ನಿಲ್ಲಿಸಿ ನಿದ್ದೆಗೆ ಜಾರಿದ್ದಕ್ಕೆ ನಿರಾಳವಾದೆವು. ಇದರ ತಾರ್ಕಿಕತೆಯ ಬಗ್ಗೆ ವಿಚಾರ ಮಾಡದೆ ನನ್ನವ್ವನ ನಂಬಿಕೆಯಲ್ಲಿ ಮಸೂತಿ, ಅಲಾವಿ ದೇವ್ರು ಭಯನಿವಾರಕ ಶಕ್ತಿಗಳಾಗಿ ಉಳಿದದ್ದು ನನ್ನ ಮನದಲ್ಲಿ ಉಳಿಯಿತು.
ಮೇಲಿನ ಎರಡೂ ಸಂಗತಿಗಳೂ ಒಂದಕ್ಕೊಂದು ವಿರುದ್ಧವಾಗಿವೆ. ಒಂದೆಡೆ ಭಾರತದಾದ್ಯಂತ ಗ್ರಾಮೀಣ ಭಾಗದಲ್ಲಿ ಮಸೂತಿ, ದರ್ಗಾ, ಮೌಲ್ವಿ ಎಂದರೆ ಭಯನಿವಾರಕ ಸ್ಥಳಗಳೆಂದು ಭಾವಿಸಿದ ದೊಡ್ಡ ಜನವರ್ಗವಿದೆ. ಮತ್ತೊಂದೆಡೆ ಭಯವನ್ನು ಉತ್ಪಾದಿಸುವ ನೆರೆಯ ಮುಸ್ಲಿಂ ದೇಶಗಳನ್ನು ಆಧರಿಸಿ ಇಡಿಯಾಗಿ ಮುಸ್ಲಿಮರ ಎಲ್ಲಾ ಸಂಗತಿಗಳು ಭಯೋತ್ಪಾದನೆಗೆ ಸಂಬಂಧಿಸಿವೆ ಎಂದು ಕತೆಕಟ್ಟಿ ಜನರಲ್ಲಿ ಭಯವನ್ನು ಉತ್ಪಾದಿಸುವ ಮೂಲಭೂತವಾದಿಗಳೂ ಇದ್ದಾರೆ. ಈ ಎರಡೂ ನೆಲೆಗಳ ಆಚೆ ವಾಸ್ತವ ಸಂಕೀರ್ಣವಾಗಿದೆ. ಬಹುಸಂಖ್ಯಾತ ಧರ್ಮಿಯರು ಅಹಮ್ಮಿನಿಂದ ಹುಟ್ಟಿಸುವ ಭಯದ ಕಾರಣಕ್ಕೆ ಮುಸ್ಲೀಮರಲ್ಲಿ ಅನಿವಾರ್ಯ ಆತಂಕದಿಂದ ಸ್ವರಕ್ಷಣೆಯ ಸಂಘಟಿತ ಚಟುವಟಿಕೆಗಳು ಕೆಲವೆಡೆ ನಡೆದಿರಬಹುದು. ಅದನ್ನು ಅಲ್ಲಗಳೆಯಲಾಗದು. ಆದರೆ ಬಹುಪಾಲು ಮಸೂತಿ, ದರ್ಗಾ, ಮೌಲ್ವಿಗಳು ಅಭಯೋತ್ಪಾದಕ ಅಥವಾ ಭಯಮುಕ್ತಗೊಳಿಸುವ ಚಟುವಟಿಕೆಗಳಲ್ಲಿ ಸಕ್ರಿಯವಾಗಿವೆ ಎನ್ನುವುದು ವಾಸ್ತವ. ಹೀಗೆ ಭಯಮುಕ್ತ ಕೇಂದ್ರಗಳಾಗಿರುವ ಮಸೂತಿ ಮತ್ತು ದರ್ಗಾಗಳು ಬಹುಪಾಲು ಸೂಫಿ ಸಂತರವು ಎನ್ನುವುದನ್ನೂ ಗಮನಿಸಬೇಕಿದೆ. ಹಾಗಾಗಿಯೇ ಸೂಫಿ ಸಂತರ ಬಗ್ಗೆ `ರೋಗನಿವಾರಕ’ ಪವಾಡ ಕತೆಗಳು ಹೆಚ್ಚಿವೆ.
ಕರ್ನಾಟಕದಾದ್ಯಂತ ಇರುವ ಮೊಹರಂ ಮಸೀತಿಗಳು ಮತ್ತು ಸೂಫಿ ಸಂತರ ದರ್ಗಾಗಳು ಈಗಲೂ ಭಯ ನಿವಾರಕ ಕೇಂದ್ರಗಳಂತೆ ಕೆಲಸ ಮಾಡುತ್ತವೆ. ಬೆಂಗಳೂರಿನ ತವಕ್ಕಲ್ ಮಸ್ತಾನ್ ಸಾಹೇಬನು ಎಳೆಮಕ್ಕಳನ್ನು ರಕ್ಷಿಸುವ ದೈವವಾಗಿದೆ. ನವಲಗುಂದದ ಯಮನೂರಪ್ಪನ ಉರುಸನ್ನು ಜನರು `ಜಡ್ಡಿನ ಜಾತ್ರೆ’ ಎಂದು ಕರೆಯುವ ವಾಡಿಕೆಯಿದೆ. ಕಾಯಿಲೆಗೆ ಬಿದ್ದ ಗಂಡನನ್ನು ಉಳಿಸಿಕೊಂಡು ಭಯ ನಿವಾರಿಸಿಕೊಳ್ಳಲು ಸವಣೂರಿನ ಬ್ರಹ್ಮಚಾರಿ ಸಂತ ಕಮಲ್ ಭಾಷಾನ ದರ್ಗಾದಲ್ಲಿ ಮಹಿಳೆಯರ ರಾಶಿಗಟ್ಟಲೆ ಹರಕೆಯ ಬಳೆಗಳಿವೆ. ದನಗಳಿಗೆ ರೋಗ ಬಂದಾಗ, ಅವು ಕಳೆದು ಹೋದಾಗ ಉಳಿಸುವ ಮತ್ತು ಹುಡುಕಿಕೊಡುವ ಕೆಲಸವನ್ನು ಬೈದೊಡ್ಡಿಯ ಹುಜೂರಸಾಬ, ಕುಸುನೂರಿನ ಗೋಕುರಸಾಬ, ಅಂಬತ್ತಿಯ ಶೇಕಮಾರ ಮುಂತಾದವರಿಗೆ ವಹಿಸಿ ಭಯಮುಕ್ತರಾಗುವುದಿದೆ. ಮೈನರೆದ ಹುಡುಗಿ ನೀರುಹಾಕಿಕೊಂಡ ಮೇಲೆ, ಮದುಮಕ್ಕಳು ಪ್ರಸ್ತಕ್ಕೆ ಮೊದಲು ‘ಓದಿಕೆ’ ಮಾಡಿಸುವುದು, ಮಕ್ಕಳಿಲ್ಲದವರು ಹರಸಿಕೊಳ್ಳುವುದು, ಸರಾಗವಾಗಿ ಹೆರಿಗೆಯಾಗಲೆಂದು ಗಬಿರ್sಣಿಯ ಕೈಗೆ ಗೋರಿ ಮೇಲಿನ ಬಟ್ಟೆತುಂಡು ಕಟ್ಟುವುದು, ಹುಟ್ಟಿದ ಕೂಸನ್ನು ಅಥವಾ ಕರುವನ್ನು ತಂದು ದರ್ಗಾಕ್ಕೆ ‘ಸಣ’ ಮಾಡಿಸುವುದು, ಫಸಲಿನ ಮೊದಲ ಕಟಾವನ್ನು ತಂದೊಪ್ಪಿಸುವುದು-ಇವೇ ಮುಂತಾದ ಫಲವಂತಿಕೆಗೆ ಸಂಬಂದಿsಸಿದ ಆಚರಣೆಗಳು ದರ್ಗಾ ಸಂಸ್ಕøತಿಯ ಭಾಗವಾಗಿ ಬೆಳೆದುಬಿಟ್ಟಿವೆ. ರಹಮತ್ ತರೀಕೆರೆಯವರು `ಕರ್ನಾಟಕದ ಸೂಫಿಗಳು’ ಕೃತಿಯಲ್ಲಿ ಇಂತಹ ದರ್ಗಾ ಮಸೂತಿಗಳ ಬಗೆಗೆ ವಿಶ್ಲೇಷಿಸಿದ್ದಾರೆ.
ಜನರು ದೆವ್ವ ಬಂದಿದೆ ಎಂದು ನಂಬುವ `ಗಾಳಿ’ ಬಿಡಿಸುವ ದರ್ಗಾಗಳಾದ ಲಕ್ಷ್ಮೇಶ್ವರದ ದೂದಪೀರಾ, ಕರೋಶಿಯ ಶಾನೂರುಬಾಬಾ, ಬಿಜಾಪುರದ ಅಬ್ದುಲ್ ರಜಾಕ್ ಖಾದ್ರಿ, ಮುರುಗಾಮಲೈನ ಅಮ್ಮಾಜಾನ್ ಬಾವಾಜಾನ್ ಹಾಗೂ ಎಳ್ಳಾರತಿಯ ಶೇಕ್ ಶಾವಲಿ ಮುಂತಾದವುಗಳನ್ನು ನೋಡಬಹುದು. ಇವೂ ಕೂಡ ದೆವ್ವವೆಂಬ ಭಯವನ್ನು ಸಮುದಾಯದ ಮನಸ್ಸಿನಿಂದ ಹೋಗಲಾಡಿಸಿ ಭಯಮುಕ್ತಗೊಳಿಸುವ ಕೆಲಸವೇ ಆಗಿದೆ. ಹೀಗೆ ಮೂಢನಂಬಿಕೆಯ ಕಾರಣಕ್ಕೋ, ಅರಿವಿನ ಕೊರತೆಯ ಕಾರಣಕ್ಕೋ, ಅಸಹಾಯಕತೆಯ ಕಾರಣಕ್ಕೋ ಜನರನ್ನು ಆವರಿಸಿರುವ ಹಲವು ಬಗೆಯ `ಭಯ’ಗಳನ್ನು ಹೋಗಲಾಡಿಸಿ `ಅಭಯೋತ್ಪಾದಕ’ ಕೇಂದ್ರಗಳಾದ ಮಸೂತಿ, ದರ್ಗಾ, ಮುಜಾವರ ಮುಂತಾದ ಸಂಗತಿಗಳನ್ನು ಭಯೋತ್ಪಾದಕ ಚಟುವಟಿಕೆಗಳ ಜತೆ ಹೆಣೆಯುವು ಎಷ್ಟು ಅಮಾನವೀಯ ಎನ್ನುವುದನ್ನು ಅರಿಯಬೇಕಿದೆ. ಜನಸಾಮಾನ್ಯರಿಗೆ ಅವರದೇ ಆದ `ಜನತೆಯ ಧರ್ಮವಿದೆ’ ಆ ಜನತೆಯ ಧರ್ಮದಲ್ಲಿ ಹಿಂದು ಮುಸ್ಲಿಂ ಜೈನ ಬೌದ್ಧ ಮತಗಳೆಲ್ಲಾ ಬೆರೆತು ಹೊಸ ಆಕಾರವನ್ನು ಪಡೆಯುತ್ತವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನಿಜ ಅರುಣ್… ಜನತೆಯ ಧರ್ಮವೇ ಬೇರೆ.. ಅದಕ್ಕೆ ಮುಕ್ತ ಪ್ರಜ್ಞೆ ಇದೆ… ಹೀಗಾಗಿ ದೂರದಲ್ಲಿ ನಿಂತು ಕನ್ನಡಕಗಳನ್ನು ಹಾಕಿ ನೋಡುವವರ ಗರ ಬಿಡಿಸಲಾಗದು…. ಹತ್ತಿರ ಹೋಗಿ ಸಣ ಮಾಡಿದರೆ ಸಾಕು… ಈಗಲೂ ಎಷ್ಟೋ ಮಠಗಳು ಅಂತ್ರ ತಾಯಿತ ಕಟ್ಟುತ್ತಿವೆ… ಬೂದಿ ಹಚ್ಚಿ ದೆವ್ವ ಬಿಡಿಸುತ್ತಿವೆ….

LEAVE A REPLY

Please enter your comment!
Please enter your name here

- Advertisment -

ಬಿರ್ಸಾ ಮುಂಡಾ 150ನೇ ಜಯಂತಿ ಹೆಸರಿನಲ್ಲಿ ಆದಿವಾಸಿ ಹಕ್ಕುಗಳ ಮೇಲೆ ಸಂಘ ಪರಿವಾರದ ಕಣ್ಣು?

ಮೇ 24 ರಂದು ನವದೆಹಲಿಯ ಕೆಂಪುಕೋಟೆಯಲ್ಲಿ (Red Fort) ಭಾರತದಾದ್ಯಂತದ ಲಕ್ಷಾಂತರ ಪರಿಶಿಷ್ಟ ಪಂಗಡದ (ST) ಸಮುದಾಯಗಳ ಜನರು ಒಟ್ಟಿಗೆ ಸೇರಿದ್ದರು. ‘ಜಂಜಾತಿ ಸುರಕ್ಷಾ ಮಂಚ್’ (ಬುಡಕಟ್ಟು ರಕ್ಷಣಾ ವೇದಿಕೆ) ಆಯೋಜಿಸಿದ್ದ ಈ...

ಆಪರೇಷನ್ ಕಮಲ ಭೀತಿ: ರಾಜ್ಯಸಭಾ ಚುನಾವಣೆಗೂ ಮುನ್ನ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರು ಕರ್ನಾಟಕಕ್ಕೆ ಶಿಫ್ಟ್‌?

ಜೂನ್ 18 ರ ರಾಜ್ಯಸಭಾ ಚುನಾವಣೆಗೆ ಮುನ್ನ ಬಿಜೆಪಿಯಿಂದ ಅಕ್ರಮವಾಗಿ ಹಣ ವರ್ಗಾವಣೆ ಪ್ರಯತ್ನಗಳು ನಡೆಯುತ್ತಿವೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಅಡ್ಡ ಮತದಾನ ತಡೆಗಟ್ಟುವ ಜೊತೆಗೆ ತನ್ನ ಶಿಬಿರದ ಒಗ್ಗಟ್ಟು...

ವೀರಪ್ಪನ್ ಹೇಳಿದ ಕಥೆಗೆ 30 ವರ್ಷಗಳ ಬಳಿಕ ಕ್ಲೈಮ್ಯಾಕ್ಸ್ : ಸನ್ ಟಿವಿ ವಿರುದ್ಧ ಕಾನೂನು ಸಮರದಲ್ಲಿ ಗೆದ್ದ ನಟಿ ಸುಕನ್ಯಾ​

ತೊಂಬತ್ತರ ದಶಕದಲ್ಲಿ ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಪ್ರಮುಖ ನಟರೊಂದಿಗೆ ನಟಿಸಿ, ಅಪಾರ ಜನಪ್ರಿಯತೆ ಗಳಿಸಿದ್ದ ನಟಿ ಸುಕನ್ಯಾ ರಮೇಶ್, ಪ್ರಸ್ತುತ ಕೆಲವು ಅಪರೂಪದ ಪಾತ್ರಗಳನ್ನು ಹೊರತುಪಡಿಸಿದರೆ ಚಿತ್ರರಂಗದಲ್ಲಿ ಅಷ್ಟಾಗಿ ಸಕ್ರಿಯರಾಗಿಲ್ಲ. ಈ ನಡುವೆ 2024ರಲ್ಲಿ...

“ರಾಜೀನಾಮೆ ನೀಡಿ, ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ”: ಟಿಎಂಸಿ ಬಂಡುಕೋರರಿಗೆ ಮಹುವಾ ಮೊಯಿತ್ರಾ ನೇರ ಸವಾಲು

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (TMC) ಪಕ್ಷದೊಳಗೆ ತೀವ್ರ ಭಿನ್ನಾಭಿಪ್ರಾಯ ಸ್ಫೋಟಗೊಂಡಿದೆ. ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟಕ್ಕೆ ಬೆಂಬಲ ನೀಡಲು ಮುಂದಾಗಿರುವ ಸ್ವಪಕ್ಷದ ಬಂಡಾಯ ಸಂಸದರ ವಿರುದ್ಧ ಟಿಎಂಸಿ ಸಂಸದೆ...

ಪಶ್ಚಿಮ ಬಂಗಾಳದ ಸೋಲಿನ ಬಳಿಕ ‘ಇಂಡಿಯಾದ ಆಸರೆ’ ಬಯಸಿದ ಮಮತಾ

2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸೋಲಿನ ನಂತರ ಮಮತಾ ಬ್ಯಾನರ್ಜಿ ಅವರು ಇದ್ದಕ್ಕಿದ್ದಂತೆ ‘ಇಂಡಿಯಾ’ (INDIA) ಒಕ್ಕೂಟ ಮತ್ತು ರಾಷ್ಟ್ರೀಯ ಮಟ್ಟದ ವಿರೋಧ ಪಕ್ಷಗಳ ಒಗ್ಗಟ್ಟಿಗೆ ಇಷ್ಟೊಂದು ಪ್ರಾಮುಖ್ಯತೆ ನೀಡುತ್ತಿರುವುದು ಏಕೆ? ದೀರ್ಘಕಾಲದವರೆಗೆ...

ಪಶ್ಚಿಮ ಬಂಗಾಳ| ಮತದಾರರ ಪಟ್ಟಿಯಿಂದ ಡಿಲೀಟ್‌ ಆದವರಿಗೆ ಪಡಿತರ ಪ್ರಯೋಜನಗಳಿಲ್ಲ

ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಯಿಂದಾಗಿ ಪಶ್ಚಿಮ ಬಂಗಾಳದ ಚುನಾವಣಾ ಪ್ರಕ್ರಿಯೆಯಿಂದ ಹೊರಗುಳಿದವರಿಗೆ ಈಗ ಎರಡು ಹೊಡೆತ ಎದುರಾಗಿದೆ. ರಾಜ್ಯ ಸರ್ಕಾರವು ಈಗ ಅವರ ಪಡಿತರ ಚೀಟಿಗಳನ್ನು ಸಹ ನಿಷ್ಕ್ರಿಯಗೊಳಿಸಲು...

ಇಂಡಿಯಾ ಮೈತ್ರಿಕೂಟದ ಸಭೆ: ಎಸ್‌ಐಆರ್, ಬೆಲೆ ಏರಿಕೆ, ನಿರುದ್ಯೋಗದ ಕುರಿತು ಖರ್ಗೆ ಕಳವಳ; ಒಗ್ಗಟ್ಟಿನ ಹೋರಾಟಕ್ಕೆ ಕರೆ

ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ವಿದೇಶಾಂಗ ನೀತಿ ರಂಗಗಳಲ್ಲಿ ಮೋದಿ ಸರ್ಕಾರದ ವೈಫಲ್ಯಗಳನ್ನು ಎದುರಿಸಲು ತನ್ನ ಒಗ್ಗಟ್ಟನ್ನು ಬಲಪಡಿಸಿಕೊಳ್ಳುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ (ಜೂ.8) ಇಂಡಿಯಾ ಮೈತ್ರಿಕೂಟಕ್ಕೆ ಕರೆ...

ಟೆಹ್ರಾನ್ ಮೇಲಿನ ದಾಳಿಗೆ ಪ್ರತೀಕಾರ: ಇಸ್ರೇಲ್ ಮೇಲೆ ಕ್ಷಿಪಣಿ ಹಾರಿಸಿದ ಇರಾನ್

ಟೆಹ್ರಾನ್, ತಬ್ರಿಜ್ ಮತ್ತು ಇಸ್ಫಹಾನ್‌ ಮೇಲಿನ ದಾಲಿಗಳಿಗೆ ಪ್ರತೀಕಾರವಾಗಿ, ಇರಾನ್ ಸೇನೆಯು ಇಸ್ರೇಲ್‌ ಮೇಲೆ ಎರಡನೇ ತರಂಗದ ಕ್ಷಿಪಣಿಗಳನ್ನು ಹಾರಿಸಿದೆ. ದೇಶಾದ್ಯಂತ ಸೈರನ್‌ಗಳು ಮೊಳಗುತ್ತಿವೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ ಎಂದು ಅಂತರಾಷ್ಟ್ರೀಯ...

ಭಾರತದಲ್ಲಿ ಬೆಂಕಿ ದುರಂತ ‘ದಿನವೊಂದಕ್ಕೆ ಬಲಿಯಾಗುತ್ತಿವೆ 16 ಜೀವಗಳು’ NCRB ವರದಿ

ಇತ್ತೀಚೆಗೆ ದೆಹಲಿಯ ಮಾಳವೀಯ ನಗರದ ಹೋಟೆಲ್‌ ಒಂದರಲ್ಲಿ ನಡೆದ ಭೀಕರ ಬೆಂಕಿ ದುರಂತ (ಇದರಲ್ಲಿ 22 ಜನರು ಸಜೀವ ದಹನವಾಗಿದ್ದರು) ಇಡೀ ದೇಶವನ್ನೇ ನಡುಗಿಸಿದೆ. ಈ ದುರಂತದ ಬೆನ್ನಲ್ಲೇ ಕರ್ನಾಟಕದಲ್ಲೂ ವಾಣಿಜ್ಯ ಮತ್ತು...

ಈದ್ ಹಬ್ಬದ ವೇಳೆ ಮುಸ್ಲೀಮರನ್ನು ಗುರಿಯಾಗಿಸಿ 46 ದ್ವೇಷ ಅಪರಾಧಗಳು, ಮೂವರ ಹತ್ಯೆ: APCR ಆತಂಕಕಾರಿ ವರದಿ

ಇತ್ತೀಚಿನ ಬಕ್ರೀದ್ (ಈದ್ ಉಲ್-ಅಧಾ) ಹಬ್ಬದ ಆಚರಣೆಯ ಸಂದರ್ಭದಲ್ಲಿ ದೇಶದ ವಿವಿಧೆಡೆ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆದ ಕೋಮು ಕಿರುಕುಳ, ದ್ವೇಷ ಭಾಷಣ ಹಾಗೂ ಹಿಂಸಾಚಾರದ ಘಟನೆಗಳ ಕುರಿತು 'ನಾಗರಿಕ ಹಕ್ಕುಗಳ ರಕ್ಷಣಾ ಸಂಘ'...