ಉತ್ತರ ಪ್ರದೇಶದ ಹತ್ರಾಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಎಸ್ಪಿ ಸೇರಿ 5 ಪೊಲೀಸರನ್ನು ಅಮಾನತುಗೊಳಿಸಲಾಗಿದ್ದು, ಅತ್ಯಾಚಾರ ಪ್ರಕರಣದಲ್ಲಿ ಆರಂಭಿಕ ವರದಿಯನ್ನು ಸರಿಯಾಗಿ ನಿರ್ವಹಿಸಿಲ್ಲ ಎಂಬ ಕಾರಣಕ್ಕೆ ಎಸ್ಪಿ ಮತ್ತು ಇತರೆ ಪೊಲೀಸರ ಮೇಲೆ ಕ್ರಮ ಕೈಗೊಳ್ಳುವಂತೆ ವಿಶೇಷ ತನಿಖಾ ತಂಡ (SIT) ಆದೇಶಸಿತ್ತು.
ಬಂಧಿತ ಆರೋಪಿಗಳು ಮತ್ತು ಸಂತ್ರಸ್ತೆಯ ಕುಟುಂಬ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಎರಲ್ಲರನ್ನೂ ಸುಳ್ಳು-ಪತ್ತೆಕಾರಕ ಪರೀಕ್ಷೆಗಳಿಗೆ ಒಳಪಡಿಸಿ ಎಂದು SIT ತನಿಖಾಧಿಕಾರಿಗಳು ಹೇಳಿದ್ದಾರೆ.
ಸೆಪ್ಟೆಂಬರ್ 14 ರಂದು ದೆಹಲಿಯಿಂದ 200 ಕಿ.ಮೀ ದೂರದಲ್ಲಿರುವ ಹತ್ರಾಸ್ ಎಂಬ ಹಳ್ಳಿಯಲ್ಲಿ ಈ ದುರ್ಘಟನೆ ಸಂಭವಿಸಿತ್ತು. ಯುವತಿ ತನ್ನ ಹೊಲದಲ್ಲಿ ಕುಟುಂಬದೊಂದಿಗೆ ಹುಲ್ಲು ಕತ್ತರಿಸುತ್ತಿದ್ದ ಸ್ಥಳದಿಂದ ಆಕೆಯ ಬಟ್ಟೆಯಿಂದಲೇ ಕಟ್ಟಿ ಪಕ್ಕದ ಹೊಲಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಲಾಗಿತ್ತು.
ಇದನ್ನೂ ಓದಿ:ದಲಿತ ಯುವತಿಯ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿಗಳ ಪರ ನಿಂತ ಸವರ್ಣ ಪರಿಷತ್!
ಎರಡು ವಾರಗಳ ನಂತರ ಯುವತಿ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ನಂತರ ಆಕೆಯ ದೇಹವನ್ನು ಪೊಲೀಸರು ಮಧ್ಯರಾತ್ರಿಯೇ ಯುವತಿಯ ಕುಟುಂಬವನ್ನೂ ಅನುಮತಿಸಿದೇ ಸುಟ್ಟುಹಾಕಿದ್ದರು. ಇದರ ವಿರುದ್ಧ ದೇಶದಾದ್ಯಂತ ಆಕ್ರೋಶ ಭುಗಿಲೆದ್ದಿದ್ದು ಇಂದಿನವರೆಗೂ ಪ್ರತಿಭಟನೆಗಳು ನಡೆಯುತ್ತಲೇ ಇವೆ.
ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯ ಮುಂದೆಯೇ ಪ್ರತಿಭಟನೆ ನಡೆಸಿ, ಇದನ್ನು 2012ರ ನಿರ್ಭಯಾ ಪ್ರಕರಣದೊಂದಿಗೆ ಸಮೀಕರಿಸಿ ತಮ್ಮ ಆಕ್ರೋಶವನ್ನು ಭೀಮ್ ಆರ್ಮಿಯ ಚಂದ್ರಶೇಖರ್ ಆಜಾದ್ ಹೊರಹಾಕಿದ್ದರು. ನಿನ್ನೆ ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ನಡೆದಿತ್ತು. ದೆಹಲಿಯ ಜಂತರ್ ಮಂತರ್ನಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಭೀಮ್ ಆರ್ಮಿಯ ಹೋರಾಟಗಾರರು ಸೇರಿದಂತೆ ನೂರಾರು ನಾಗರೀಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ:ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು: NCRB
ಪ್ರಸ್ತುತ ಉತ್ತರಪ್ರದೇಶದ ಸ್ಥಿತಿ ಪ್ರಕ್ಷುಬ್ದ ವಾತಾವರಣದಲ್ಲಿದ್ದು, ಮಾಧ್ಯಮ ಸೇರಿದಂತೆ ಯಾವುದೇ ರಾಜಕಾರಣಿಗಳನ್ನೂ ಸಂತ್ರಸ್ತೆಯ ಕುಟುಂಬದ ಭೇಟಿಗೆ ಅನುಮತಿಸುತ್ತಿಲ್ಲ. ಗುರುವಾರ ಅವರ ಭೇಟಿಗಾಗಿ ಹೊರಟಿದ್ದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರನ್ನು ತಡೆದು, ಅವರೊಟ್ಟಿಗೆ ಯುಪಿ ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದರು. ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.
ನಿನ್ನೆ ಸಂತ್ರಸ್ತೆಯ ಸಹೋದರನೊಬ್ಬ ಯುಪಿ ಪೊಲೀಸರ ಗೃಹಬಂಧನದಿಂದ ತಪ್ಪಿಸಿಕೊಂಡು ಬಂದು, ಜಿಲ್ಲಾಡಳಿತ ಮತ್ತು ಪೊಲೀಸರು ತಮಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಮಾಧ್ಯಮಗಳ ಮುಂದೆ ಆರೋಪಿಸಿದ್ದ. ಇನ್ನು ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಲು ಹೊರಟಿದ್ದ ವಕೀಲೆ ಸೀಮಾ ಅವರನ್ನೂ ಪೊಲೀಸರು ತಡೆದಿದ್ದಾರೆ.
ಇದನ್ನೂ ಓದಿ:ದಲಿತ ಹೆಣ್ಣುಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ಅತ್ಯಾಚಾರದ ಈ ಅಂಕಿ-ಅಂಶಗಳನ್ನು ನೋಡಿ: ನೀವೇ ಪ್ರಶ್ನಿಸಿಕೊಳ್ಳಿ
ಈ ವಿಷಯವನ್ನು ಸ್ವಯಂ ಕೈಗೆತ್ತಿಕೊಂಡ ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶದ ಉನ್ನತ ಅಧಿಕಾರಿಗಳಿಗೆ ಸಮನ್ಸ್ ಕಳುಹಿಸಿದೆ.
ಕ್ರೂರವಾದ ಲೈಂಗಿಕ ದೌರ್ಜನ್ಯದಿಂದ ಯುವತಿ ಸಾವನ್ನಪ್ಪಿದ್ದಾಳೆ ಎಂದು ಕುಟುಂಬ ಹೇಳಿದೆ. ಆದರೆ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿ ಪ್ರಶಾಂತ್ ಕುಮಾರ್, “ಯುವತಿಯ ಕುತ್ತಿಗೆಗೆ ಪೆಟ್ಟಾಗಿದ್ದರಿಂದ ಆಕೆ ಸಾವನ್ನಪ್ಪಿದ್ದಾಳೆ. ವಿಧಿವಿಜ್ಞಾನದ ವರದಿಗಳಲ್ಲಿ ಯಾವುದೇ ವೀರ್ಯದ ಸಾಕ್ಷ್ಯ ಕಂಡುಬಂದಿಲ್ಲ” ಎಂದು ಹೇಳಿದ್ದಾರೆ.
ಇದರ ನಡುವೆ ನಿನ್ನೆ, ಆದಿತ್ಯನಾಥ್, “ತಮ್ಮ ಸರ್ಕಾರ ಮಹಿಳೆಯರ ಸ್ವಾಭಿಮಾನವನ್ನು ಕಾಪಾಡಲು ಬದ್ಧ” ಎಂದು ಹೇಳಿಕೆ ನೀಡಿದ್ದಾರೆ.
ಆದರೆ ಹತ್ರಾಸ್ ಜಿಲ್ಲೆಯಾದ್ಯಂತ ಒಂದು ತಿಂಗಳವರೆಗೆ ನಿಷೇದಾಜ್ಞೆಯನ್ನು ಹೇರಲಾಗಿದ್ದು, ವಿರೋಧ ಪಕ್ಷ ಸೇರಿದಂತೆ ದೇಶದ ಮಾಧ್ಯಮಗಳು ಮತ್ತು ಹಲವು ಜನರು ಇದನ್ನು ವ್ಯಾಪಕವಾಗಿ ಖಂಡಿಸಿದ್ದಾರೆ.
ಇದನ್ನೂ ಓದಿ: ಗುಜರಾತ್ ದಲಿತ ಬಾಲಕಿಯ ಸಾಮೂಹಿಕ ಅತ್ಯಾಚಾರ & ಕೊಲೆ… ಪೊಲೀಸ್ ನಿರ್ಲಕ್ಷ್ಯವೇ ಕಾರಣ.. ಭುಗಿಲೆದ್ದ ಆಕ್ರೋಶ