Homeಅಂತರಾಷ್ಟ್ರೀಯಇಟಲಿಯ ಸಂಸತ್ತಿನ ವಿಸರ್ಜನೆಯ ಸುತ್ತ...

ಇಟಲಿಯ ಸಂಸತ್ತಿನ ವಿಸರ್ಜನೆಯ ಸುತ್ತ…

- Advertisement -
- Advertisement -

ಇಟಾಲಿಯನ್ನರ ಜೀವನೋಪಾಯದ ವೆಚ್ಚಕ್ಕೆ ಬೆಂಬಲಕ್ಕೆ ಸಂಬಂಧಿಸಿದಂತೆ ಇಟಲಿಯ ಅಧ್ಯಕ್ಷ ಮಾರಿಯೋ ದ್ರಾಗಿ ಒಂದು ಪ್ರಸ್ತಾಪ ಇಟ್ಟಿದ್ದರು, ಅದನ್ನು ಈ ವರ್ಷದ ಜೂನ್ 14 ರಂದು ಇಟಲಿಯ ಫೈವ್ ಸ್ಟಾರ್ ಮೂವಮೆಂಟ್ ಬೆಂಬಲಿಸಲು ನಿರಾಕರಿಸಿತು. ಇಟಲಿಯ ಎಲ್ಲಾ ಪ್ರಜೆಗಳಿಗೆ ಒಂದು ಏಕರೂಪದ ಮೂಲ
ಆದಾಯವನ್ನು ಪ್ರತಿಪಾದಿಸುವ ಈ ಫೈವ್ ಸ್ಟಾರ್ ಮೂವಮೆಂಟ್, ಅಧ್ಯಕ್ಷ ಮಾರಿಯೊ ದ್ರಾಗಿ ತಂದ ಮಸೂದೆ ಭವಿಷ್ಯವನ್ನು ಚಿಂತಿಸಿಲ್ಲ ಎಂದು ಪ್ರತಿಪಾದಿಸಿತು. ಇದು ಇಟಲಿಯ ಸಂಸತ್ತಿನ ವಿಸರ್ಜನೆಗೆ ಕಾರಣವಾಯಿತು ಹಾಗೂ ಮಾರಿಯೊ ದ್ರಾಗಿ ನೇತೃತ್ವದ ಸಮ್ಮಿಶ್ರ ಸರಕಾರವು ತನ್ನ ನಿರ್ಣಾಯಕ ಬೆಂಬಲವನ್ನು ಕಳೆದುಕೊಂಡು, ಹೊಸದಾಗಿ ಚುನಾವಣೆ ನಡೆಸುವ ಅಗತ್ಯಕ್ಕೆ ಈಡುಮಾಡಿದೆ. ದ್ರಾಗಿ ನೇತೃತ್ವದ ಈ ಸರಕಾರ ಒಂದು ಅಸ್ಥಿರ ಸಮ್ಮಿಶ್ರವಾಗಿತ್ತು, ಅದು ತದ್ವಿರುದ್ಧ ಸಿದ್ಧಾಂತಗಳನ್ನುಳ್ಳ ರಾಜಕೀಯ ಪಕ್ಷಗಳನ್ನು ಒಂದುಗೂಡಿಸುವ ಪ್ರಯತ್ನ ಮಾಡಿತ್ತು. ಉಕ್ರೇನ್ ಮೇಲೆ ರಷಿಯಾದ ಆಕ್ರಮಣದ ನಂತರ ಫೈವ್ ಸ್ಟಾರ್ ಕೂಡ ತನ್ನೊಳಗೆ ವಿಭಜನೆ ಕಂಡಿತು. ಈ ಪಕ್ಷದ ಕೆಲವು ಸದಸ್ಯರು ನ್ಯಾಟೊ ಅಥವಾ ಯುರೋಪಿಯನ್ ಯುನಿಯನ್‌ನ ಬಿಕ್ಕಟ್ಟುಗಳಲ್ಲಿ ಪಾಲ್ಗೊಳ್ಳಬಾರದು ಎಂಬ ಅಭಿಪ್ರಾಯ ಹೊಂದಿದ್ದರು ಹಾಗೂ ದ್ರಾಗಿ ರಷಿಯಾದ ಕ್ರಮಗಳಿಗೆ ವಿರೋಧ ವ್ಯಕ್ತಪಡಿಸಿದ ನಿಲುವನ್ನು ವಿರೋಧಿಸಿದರು.

ಈ ಸರಕಾರದ ಇತಿಹಾಸ

2018ರಲ್ಲಿ ಇಟಲಿಯಲ್ಲಿ ಕಳೆದ ಸಾರ್ವತ್ರಿಕ ಚುನಾವಣೆಗಳು ನಡೆದವು. ಸರಳ ಬಹುಮತ ಪಡೆಯಲು ಯಾವುದೇ ಪಕ್ಷಕ್ಕೆ ಸಾಧ್ಯವಾಗಲಿಲ್ಲ. ಫೈವ್ ಸ್ಟಾರ್ ಪಾರ್ಟಿ ಅತ್ಯಂತ ದೊಡ್ಡ ಪಾರ್ಟಿಯಾಗಿ ಹೊರಹೊಮ್ಮಿತು. ಫೈವ್ ಸ್ಟಾರ್ ಪಾರ್ಟಿಯನ್ನು 2009ರಲ್ಲಿ ಇಟಲಿಯ ಹಾಸ್ಯಗಾರ (ಕಮೇಡಿಯನ್) ಬೆಪ್ಪೆ ಗ್ರಿಲೋ ಸ್ಥಾಪಿಸಿದ್ದುದು. ಅವರು ತಮ್ಮ ಬ್ಲಾಗ್‌ನಲ್ಲಿ ಇಟಿಲಿಯ ರಾಜಕಾರಿಣಿಗಳ ವ್ಯಾಪಕ ಭ್ರಷ್ಟಾಚಾರದ ಬಗ್ಗೆ ಟೀಕೆ ಮಾಡಲು ಹಾಗೂ ವ್ಯಂಗ್ಯ ಮಾಡಲು ಪ್ರಾರಂಭಿಸಿದ್ದರು, ಅದುವೇ ಈ ವ್ಯವಸ್ಥೆಯನ್ನು ಬದಲಿಸಬಯಸುವ ಜನರ ಒಂದು ಚಳವಳಿಯಾಗಿ ರೂಪುಗೊಂಡಿತು. ಗ್ರಿಲೊ ಅವರ ಹಾಸ್ಯ ನಿಜಕ್ಕೂ ಕೀಳು ಮಟ್ಟದ, ಜನಾಂಗೀಯವಾದವುಳ್ಳ ಹಾಗೂ ಮಹಿಳಾದ್ವೇಷವನ್ನುಳ್ಳ ಹಾಸ್ಯವಾಗಿತ್ತು. ಆದರೆ ಅದು ಸಿದ್ಧಾಂತಗಳನ್ನು ಮೀರಿದ ಒಂದು ಭಾವವನ್ನು ಅದು ಜನರಿಗೆ ಮೂಡಿಸಿತು. ಅನೇಕ ಜನರಿಗೆ ಅವರು ಸತ್ಯವನ್ನು ನೇರಾನೇರವಾಗಿ ಹೇಳುತ್ತಿದ್ದಾನೆ ಅನಿಸಿತು. ಸಂಕೀರ್ಣ ಸಂಯೋಕ್ತಿಗಳನ್ನು ಹಾಗೂ ರಾಜಕೀಯ ಇಬ್ಬಂದಿತನದ ಮಾತುಗಳನ್ನು ಮೀರಿದ ಅವರ ಶೈಲಿಯನ್ನು ಗ್ರಿಲೊನ ಬೆಂಬಲಿಗರು ಇಷ್ಟಪಟ್ಟರು. ಅವರಿಗೆ ಯಾವುದೇ ಒಂದು ಸ್ಪಷ್ಟ ಸಿದ್ಧಾಂತವಿರಿಲಿಲ್ಲ.

ಅವರ ಬಹುತೇಕ ಬೆಂಬಲಿಗರು ಉನ್ನತ ವರ್ಗದ ವಿರುದ್ಧ ಬಂಡಾಯವೆದ್ದಿದ್ದರು. ಆದರೆ ಅವರಿಗೆ ಯಾವುದೇ ಗಟ್ಟಿಯಾದ ರಾಜಕೀಯ ಕಾರ್ಯಕ್ರಮಗಳು ಇರಲಿಲ್ಲ. ಅವರು ಕೇವಲ ಪ್ರತಿಕ್ರಿಯಾತ್ಮಕವಾಗಿಯೇ ಸೀಮಿತಗೊಂಡಿದ್ದರು. ಅವರಲ್ಲಿ ಬಹುತೇಕರು ಯುರೋಪಿಯನ್ ಯುನಿಯನ್ ಬಗ್ಗೆ ಸಂದೇಹ ಉಳ್ಳವರಾಗಿದ್ದರು. ಇಟಲಿಯ ಉನ್ನತ ವರ್ಗದ ರಾಜಕೀಯದ ಕಾರಣಕ್ಕಾಗಿ ಇದ್ದ ಅನೇಕ ಇಟಾಲಿಯನ್ನರ ಹತಾಶೆಯನ್ನು ಬಂಡವಾಳ ಮಾಡಿಕೊಂಡ ಪ್ರತಿಕ್ರಿಯಾತ್ಮಕ ಪಕ್ಷವಾಗಿತ್ತು ಫೈವ್ ಸ್ಟಾರ್ ಪಾರ್ಟಿ. ಇಟಲಿ ಹಲವಾರು ಹಗರಣಗಳಿಂದ ಪೀಡಿತವಾಗಿತ್ತು, ಆ ಹಗರಣಗಳು ಕೆಲವೊಮ್ಮೆ ಲೈಂಗಿಕ ಹಗರಣಗಳಾಗಿದ್ದರೆ, ಕೆಲವೊಮ್ಮೆ ರಾಜಕೀಯ ಮತ್ತು ಆರ್ಥಿಕ ಹಗರಣಗಳಾಗಿದ್ದವು. ಫೈವ್ ಸ್ಟಾರ್‌ಅನ್ನು ಎಡಪಂಥದ ಪಕ್ಷ ಅಥವಾ ಬಲಪಂಥದ ಪಕ್ಷ ಎಂದು ವರ್ಗೀಕರಿಸುವುದು ಕಷ್ಟ. ಅವರು ಕೆಲವು ಪರಿಸರವಾದಿ ನೀತಿಗಳನ್ನು ಬೆಂಬಲಿಸಿದರು. ಎಲ್ಲಾ ಇಟಾಲಿಯನ್ನರಿಗೆ ಯುನಿವರ್ಸಲ್ (ಸಾರ್ವತ್ರಿಕ) ಮೂಲ ಆದಾಯದ ನೀತಿಗೆ ಬೆಂಬಲ ನೀಡಿದರು. ಅವರು ವಲಸೆಯನ್ನು ವಿರೋಧಿಸಿದರು ಹಾಗೂ ಇಟಲಿಯಲ್ಲಿರುವ ವಲಸಿಗ ಜನಸಮೂಹದ ವಿರುದ್ಧ ಅನ್ಯದ್ವೇಷಕ್ಕೆ ಉತ್ತೇಜನ ನೀಡಿದರು.

ಪ್ರಾರಂಭದಲ್ಲಿ ಫೈವ್ ಸ್ಟಾರ್ ಪಕ್ಷವು ಲೀಗ್‌ನೊಂದಿಗೆ ಜೊತೆಗೂಡಿ ಸಮ್ಮಿಶ್ರ ಸರಕಾರ ರಚಿಸಲು ಪ್ರಯತ್ನಿಸಿತು; ಲೀಗ್ ಎಂದರೆ ಅದು ತೀವ್ರ ಬಲಪಂಥೀಯ ಪಕ್ಷ! ಒಂದು ವರ್ಷದ ನಂತರ, ಲೀಗ್ ಈ ಮೈತ್ರಿಯನ್ನು ಮುರಿದ ಕಾರಣದಿಂದ ಈ ಸಮ್ಮಿಶ್ರ ಸರಕಾರ ಕುಸಿಯಿತು. ಆಗ ಫೈವ್ ಸ್ಟಾರ್ ಪಕ್ಷವು ಎಡಪಂಥದ ಕಡೆಗೆ ವಾಲಿತು. ಮಧ್ಯಮ ಎಡಪಂಥೀಯ ಪಕ್ಷವಾದ ಡೆಮಾಕ್ರಟಿಕ್ ಪಾರ್ಟಿ ಮತ್ತು ಎಡಪಂಥೀಯ ಪಕ್ಷವಾದ ಫ್ರೀ ಆಂಡ್ ಈಕ್ವಲ್ ಪಾರ್ಟಿಯ ಜೊತೆಗೂಡಿ ಸಮ್ಮಿಶ್ರ ಸರಕಾರ ರಚಿಸಿತು. ಡೆಮಾಕ್ರಟಿಕ್ ಪಕ್ಷದ ಒಳಗೆ ನಡೆದ ಒಳಜಗಳಗಳ ಕಾರಣದಿಂದ ಆ ಸರಕಾರವೂ ಒಂದು ವರ್ಷದಲ್ಲಿ ಮುರಿದುಬಿದ್ದಿತು.

ಯುರೋಪಿಯನ್ ಯುನಿಯನ್ ತನ್ನ ಸದಸ್ಯ ರಾಷ್ಟ್ರಗಳಿಗೆ ಉತ್ತೇಜನ (ಸ್ಟಿಮ್ಯುಲಸ್) ಪ್ಯಾಕೇಜ್ ನೀಡಿದಾಗ ಈ ಬಿರುಕು ಕಾಣಿಸಿಕೊಂಡಿತು. ಡೆಮಾಕ್ರಟಿಕ್ ಪಕ್ಷದ ಒಳಗೇ ಎರಡು ಬಣಗಳಿದ್ದವು. ಒಂದು ಬಣ, ಈ ಪ್ಯಾಕೇಜ್‌ಅನ್ನು ಮೂಲಸೌಕರ್ಯಗಳ ಯೋಜನೆಗಳ ಮೇಲೆ ವ್ಯಯಿಸಬೇಕು ಎಂದು ಅಭಿಪ್ರಾಯಪಟ್ಟಿತು. ಇನ್ನೊಂದು ಬಣವು, ಇದನ್ನು ಒಂದು ತಜ್ಞರ ಸಮಿತಿಯ ನಿರ್ದೇಶನದ ಮೇರೆ ಬಳಸಬೇಕು ಎಂದಿತು. ಈ ಜಗಳವು ರಾಜಕೀಯ ಜಗಳಕ್ಕೆ ಮತ್ತು ಧ್ರುವೀಕರಣಕ್ಕೆ ಕಾರಣವಾಗಿ, ಸರಕಾರ ಬೀಳಲೂ ಕಾರಣವಾಯಿತು.

ದ್ರಾಗಿಯ ಪ್ರವೇಶ

ಎಡಪಕ್ಷಗಳ ಜೊತೆಗಾಗಲಿ ಬಲಪಂಥೀಯ ಪಕ್ಷಗಳ ಜೊತೆಗಾಗಲೀ ಸ್ಥಿರವಾದ ಸರಕಾರ ನೀಡಲು ವಿಫಲವಾಗಿದ್ದರಿಂದ, ಇದರ ನಂತರ ಫೈವ್ ಸ್ಟಾರ್ ಪಕ್ಷಕ್ಕೆ ಇನ್ನೆಂದೂ ಸರಕಾರ ರಚಿಸಲು ಸಾಧ್ಯವಾಗುವುದಿಲ್ಲ ಎಂಬ ಅನಿಸಿಕೆ ವ್ಯಾಪಕವಾಯಿತು. ಆದರೆ ಕೋವಿಡ್ ಸಾಂಕ್ರಾಮಿಕ ಉಲ್ಬಣಗೊಂಡಿದ್ದ ಕಾರಣದಿಂದಾಗಿ ಚುನಾವಣೆ ನಡೆಸುವುದೂ ಕಷ್ಟವಾಗಿತ್ತು. ಬ್ಯಾಂಕ್ ಆಫ್ ಇಟಲಿಯ ಮಾಜಿ ಗವರ್ನರ್ ಮತ್ತು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್‌ನ ಅಧ್ಯಕ್ಷರಾಗಿದ್ದ ದ್ರಾಗಿ ಒಬ್ಬ ತಟಸ್ಥ ತಾಂತ್ರಿಕ ತಜ್ಞ ಅಧಿಕಾರಿಯಾಗಿ ಕಾಣಿಸಿಕೊಂಡರು. ಜನಪ್ರಿಯ ಭಾವನೆಗಳಿಗೆ ಸ್ಪಂದಿಸುವ ಹಾಗೂ ಅದರೊಂದಿಗೆ ಗುರಿರಹಿತವಾಗಿರುವ ಫೈವ್ ಸ್ಟಾರ್ ಪಕ್ಷದ ರೀತಿಯಲ್ಲಿ ಇರದೇ, ದ್ರಾಗಿ ತಜ್ಞರ ಅಭಿಪ್ರಾಯ ಕೇಳಿ, ಅದರನುಗುಣವಾಗಿ ಕೆಲಸ ಮಾಡುವುದರಲ್ಲಿ ನಂಬಿಕೆ ಇಟ್ಟಿದ್ದರು. ಅವರು ಒಬ್ಬ ಬ್ಯಾಂಕರ್ ಮತ್ತು ಆಡಳಿತಗಾರರಾಗಿ ಪ್ರಸಿದ್ಧರಾಗಿದ್ದರು. ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಇಟಲಿಯನ್ನು ನಿಭಾಯಿಸಲು ಇದನ್ನು ಒಂದು ಮಹತ್ವದ ಹೆಜ್ಜೆಯಾಗಿ ನೋಡಲಾಯಿತು. ಅತ್ಯಗತ್ಯ ಆದರೆ ಕಠಿಣ ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ ದ್ರಾಗಿ ಸಮರ್ಥರು ಹಾಗೂ ಅವರು ನೀತಿಗಳನ್ನು ಅನುಷ್ಠಾನಗೊಳಿಸುವುದರಲ್ಲಿ ದಕ್ಷ ಎಂಬ ಅಭಿಪ್ರಾಯವಿತ್ತು. ವಿಶ್ವದ ಇತರೆಡೆಯಲ್ಲಿ ಉಲ್ಬಣಗೊಳ್ಳುವುದಕ್ಕೆ ಒಂದು ವರ್ಷ ಮುನ್ನವೇ ಸಾಂಕ್ರಾಮಿಕವು ಇಟಲಿಯಲ್ಲಿ ತನ್ನ ಗಂಭೀರ ಪರಿಣಾಮಗಳನ್ನು ತೋರಿಸಿತ್ತು.

ದೊಡ್ಡ ವ್ಯಾಪಾರಿಗಳು ದ್ರಾಗಿಯನ್ನು ಸ್ವಾಗತಿಸಿದರು, ಏಕೆಂದರೆ ಒಬ್ಬ ಬ್ಯಾಂಕರ್ ಆಗಿ ದ್ರಾಗಿ, ಅವರಿಗೆ ಹತ್ತಿರದಿಂದ ಬಲ್ಲವರಾಗಿದ್ದರು. ಸಾಂಕ್ರಾಮಿಕದ ಸಮಯದಲ್ಲಿ ಸಾರ್ವಜನಿಕ ಭಾವನೆಗಳು ಕಲ್ಯಾಣ ಕಾರ್ಯಕ್ರಮಗಳು ಮತ್ತು ಸಂಪತ್ತಿನ ಮರುಹಂಚಿಕೆಯ ಕಡೆಗೆ ತಿರುತ್ತಿದ್ದಾಗ ಈ ದೊಡ್ಡ ವ್ಯಾಪಾರಿಗಳು ದ್ರಾಗಿಯ ಜೊತೆ ನಿಕಟ ಸಂಬಂಧ ಇಟ್ಟುಕೊಂಡು, ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಂಡರು. ಫೈವ್ ಸ್ಟಾರ್‌ನ ಬೆಂಬಲಿಗರು ದ್ರಾಗಿಯನ್ನು ಯುರೋಪಿಯನ್ ಯೂನಿಯನ್‌ನ ಕೈಗೊಂಬೆಯಾಗಿ ಕಂಡರು. ದ್ರಾಗಿಯ ಒಬ್ಬ ಬ್ಯಾಂಕರ್ ಮತ್ತು ಬ್ಯೂರೊಕ್ರೆಟ್ ಎಂಬ ಅಸ್ಮಿತೆಯು ಅವರ ಅತಿದೊಡ್ಡ ಮಿತ್ರಪಕ್ಷದ ಬೆಂಬಲಿಗರ ಮಧ್ಯೆ ಅತ್ಯಂತ ಕುಪ್ರಸಿದ್ಧ ವ್ಯಕ್ತಿಯನ್ನಾಗಿಸಿತು.

ಫೈವ್ ಸ್ಟಾರ್ ಬೆಂಬಲಿಗರನ್ನು ಹೊರತುಪಡಿಸಿದರೆ ದ್ರಾಗಿಯನ್ನು ಸಾಮಾನ್ಯವಾಗಿ ಇತರ ಎಲ್ಲರೂ ಒಪ್ಪಿಕೊಂಡಿದ್ದರು. ಅನೇಕರು ಸಾಂಕ್ರಾಮಿಕ ಮುಂದುವರೆದಿದ್ದ ಸಮಯದಲ್ಲಿ ಇಟಲಿಯ ಸರಕಾರಕ್ಕೆ ಅವರು ನೀಡಿದ ನಿರ್ದೇಶನ ಮತ್ತು ಸ್ಥಿರತೆಯನ್ನು ಮೆಚ್ಚಿಕೊಂಡರು. ಅದರ ಪರಿಣಾಮವಾಗಿ, ಇತರ ಬಹುತೇಕ ಎಡಪಂಥೀಯ ಮತ್ತು ಬಲಪಂಥೀಯ ಪಕ್ಷಗಳು ದ್ರಾಗಿ ಸರಕಾರಕ್ಕೆ ಶರತ್ತುಬದ್ಧ ಬೆಂಬಲ ನೀಡಿದವು. ಇಟಲಿಯ ಎಲ್ಲಾ ರಾಜಕೀಯ ಪಕ್ಷಗಳು ತನಗೆ ಬೆಂಬಲ ನೀಡಿದ್ದರಿಂದ ಸಾಂಕ್ರಾಮಿಕದ ಸಮಯದಲ್ಲಿ ದ್ರಾಗಿ ಸರಕಾರವನ್ನು ಸ್ಥಿರವಾಗಿ ನಡೆಸಿಕೊಂಡು ಹೋದರು. ಆದರೆ, ಕೋವಿಡ್ ಬಿಕ್ಕಟ್ಟು ಕೊನೆಗೊಳ್ಳುತ್ತಿದ್ದಂತೆ ವಾತಾವರಣ ಬಿಗುವಾಯಿತು.

ಸಮ್ಮಿಶ್ರ ಸರಕಾರದಲ್ಲಿ ಬಿರುಕುಗಳು

ರಷಿಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ, ಫೈವ್ ಸ್ಟಾರ್‌ನಲ್ಲಿ ಒಳಜಗಳಗಳು ಶುರುವಾದವು. ಅಲ್ಲಿ ಎರಡು ಬಣಗಳು ಕಾಣಿಸಿಕೊಂಡವು. ಒಂದು ಬಣ ರಷಿಯಾ ಪರವಾಗಿತ್ತು. ರಷಿಯಾ ಪರ ಬಣವು, ಪೂರ್ವ ದೇಶಗಳಲ್ಲಿ ನ್ಯಾಟೋ ಮಾಡಿದ ವಿಸ್ತರಣೆ ಹಾಗೂ ಅದರಿಂದ ಉಕ್ರೇನ್ ಬಿಕ್ಕಟ್ಟು ಸೃಷ್ಟಿಯಾದದ್ದಕ್ಕಾಗಿ ನ್ಯಾಟೊವನ್ನು ಕಟುವಾಗಿ ಟೀಕಿಸಿತು. ಅವರು ಒಂದು ರಾಜತಾಂತ್ರಿಕ ಪರಿಹಾರಕ್ಕೆ ಒತ್ತುನೀಡಿದರು ಹಾಗೂ ಉಕ್ರೇನ್‌ಗೆ ನೆರವು ನೀಡಲು ಹಿಂಜರಿಕೆ ತೋರಿದರು. ನೆರವು ನೀಡಿದರೆ, ಆ ಪ್ರದೇಶದಲ್ಲಿ ಶಸ್ತ್ರಾಸ್ತ್ರ ಸ್ಪರ್ಧೆಗೆ ಅನುವು ಮಾಡಿಕೊಟ್ಟಂತಾಗುತ್ತದೆ ಎಂಬ ಆತಂಕ ಹೊಂದಿದ್ದರು. ಇನ್ನೊಂದು ಬಣವು, ರಷಿಯಾ ಪರ ರಾಜಕಾರಣಿಗಳು ಯುರೊಪಿಯನ್ ಯೂನಿಯನ್‌ನಲ್ಲಿ ಇಟಲಿಯ ಸ್ಥಾನವನ್ನು ದುರ್ಬಲವಾಗಿ ಅಂದಾಜು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಅವರುಗಳು ಒಂದು ಹೊಸ ಪಕ್ಷ ಸ್ಥಾಪಿಸಿ, ಫೈವ್ ಸ್ಟಾರ್ ತೊರೆದರು.

ಇಟಾಲಿಯನ್ನರ ದೈನಂದಿನ ಜೀವನ ವೆಚ್ಚಕ್ಕೆ ದ್ರಾಗಿಯವರು ಮುಂದಿಟ್ಟ ಪ್ರಸ್ತಾಪವನ್ನು ಫೈವ್ ಸ್ಟಾರ್‌ನ ನಾಯಕ, ಅದು ಸಾಕಾಗುವುದಿಲ್ಲ ಎಂದು ಹೇಳಿ ವಿರೋಧಿಸಿದಾಗ, ಪರಿಸ್ಥಿತಿ ಬಿಗಡಾಯಿಸಿತು. ತನ್ನ ಪ್ರಸ್ತಾಪಕ್ಕೆ ಬಂದ ಈ ವಿರೋಧವನ್ನು ತನ್ನ ಸರಕಾರದ ಕೊನೆಗಾಲಕ್ಕೆ ಬಂದ ಲಕ್ಷಣ ಎಂದು ಪರಿಗಣಿಸಿ ದ್ರಾಗಿ ರಾಜೀನಾಮೆ ನೀಡಿದರು.

ಇಟಲಿಯ ಭವಿಷ್ಯ

ಮತದಾರ ಸಮೀಕ್ಷೆಗಳಲ್ಲಿ ಮುಂದಿನ ಚುನಾವಣೆಗಳಲ್ಲಿ ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗುವ ಯಾವ ಮುನ್ಸೂಚನೆಯೂ ಸಿಕ್ಕಿಲ್ಲ. ಮುಂಬರುವ ಸರಕಾರವೂ ಸಮ್ಮಿಶ್ರ ಸರಕಾರವಾಗಲಿದೆ ಎನ್ನಬಹುದಾಗಿದೆ. ಫೈವ್ ಸ್ಟಾರ್ ತನ್ನ ಹೆಚ್ಚಿನ ಬೆಂಬಲವನ್ನು ಕಳೆದುಕೊಂಡಿದೆ ಹಾಗೂ ಅದರ ಮಿತ್ರಪಕ್ಷಗಳೂ ಪೈವ್ ಸ್ಟಾರ್‌ನ ಮೈತ್ರಿಯ ಭಾಗವಾಗಿ ಮಾಡಿದ ರಾಜಕೀಯ ಆಟಗಳ ಕಾರಣದಿಂದಾಗಿ ತಮ್ಮ ಬೆಂಬಲ ಕಳೆದುಕೊಂಡಿವೆ. ಮುಂದಿನ ಚುನಾವಣೆಯಲ್ಲಿ ಲಾಭವನ್ನು ಪಡೆದುಕೊಳ್ಳುವ ಅವಕಾಶ ಇರುವುದು ಬ್ರದರ್ಸ್ ಆಫ್ ಇಟಲಿಗೆ. ಬ್ರದರ್ಸ್ ಆಫ್ ಇಟಲಿಯು ಎಂದೂ ಫೈವ್ ಸ್ಟಾರ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲಿಲ್ಲ ಹಾಗೂ ಇತರ ಪಕ್ಷಗಳಂತೆ ರಾಜಕೀಯ ಕಳಂಕ ಹಚ್ಚಿಕೊಂಡಿಲ್ಲ. ಈ ಪಕ್ಷ ವಲಸೆಯ ವಿರುದ್ಧ ಫೈವ್ ಸ್ಟಾರ್ ಪಕ್ಷಕ್ಕಿಂತ ಕಟುವಾದ ನಿಲುವು ತೆಗೆದುಕೊಂಡಿದೆ. ಚುನಾವಣೆಯ ನಂತರ ಭವಿಷ್ಯದ ಸರಕಾರಕ್ಕೆ ಅನ್ಯದ್ವೇಷ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಏಕೆಂದರೆ ಬ್ರದರ್ಸ್ ಆಫ್ ಇಟಲಿಯು ಅಲ್ಲಿಯ ವಲಸಿಗರ ಜನಸಮೂಹದ ವಿರುದ್ಧ ತನ್ನ ದ್ವೇಷ ಕಾರ್ಯಸೂಚಿಯನ್ನು ಕಾರ್ಯರೂಪಕ್ಕೆ ತರಲಿದೆ ಹಾಗೂ ಇಟಲಿಯ ಅನೌಪಚಾರಿಕ ವಲಯದ ಆರ್ಥಿಕತೆಯ ಮೇಲಾಗುವ ಪರಿಣಾಮವನ್ನು ತನ್ನ ಆದ್ಯತೆಯ ವಿಷಯವನ್ನಾಗಿಸಿಕೊಳ್ಳುತ್ತದೆ.

(ಕನ್ನಡಕ್ಕೆ): ರಾಜಶೇಖರ ಅಕ್ಕಿ

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: “ಬಸವರಾಜ ಬೊಮ್ಮಾಯಿ ಎಂಬ ಹೆಸರಿನ ನಾನು…” ಸ್ವೀಕರಿಸಿದ ಪ್ರಮಾಣವಚನ ಮರೆತುಹೋಯಿತೇ ಮುಖ್ಯಮಂತ್ರಿಗಳಿಗೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...