Homeಅಂತರಾಷ್ಟ್ರೀಯಇಟಲಿಯ ಸಂಸತ್ತಿನ ವಿಸರ್ಜನೆಯ ಸುತ್ತ...

ಇಟಲಿಯ ಸಂಸತ್ತಿನ ವಿಸರ್ಜನೆಯ ಸುತ್ತ…

- Advertisement -
- Advertisement -

ಇಟಾಲಿಯನ್ನರ ಜೀವನೋಪಾಯದ ವೆಚ್ಚಕ್ಕೆ ಬೆಂಬಲಕ್ಕೆ ಸಂಬಂಧಿಸಿದಂತೆ ಇಟಲಿಯ ಅಧ್ಯಕ್ಷ ಮಾರಿಯೋ ದ್ರಾಗಿ ಒಂದು ಪ್ರಸ್ತಾಪ ಇಟ್ಟಿದ್ದರು, ಅದನ್ನು ಈ ವರ್ಷದ ಜೂನ್ 14 ರಂದು ಇಟಲಿಯ ಫೈವ್ ಸ್ಟಾರ್ ಮೂವಮೆಂಟ್ ಬೆಂಬಲಿಸಲು ನಿರಾಕರಿಸಿತು. ಇಟಲಿಯ ಎಲ್ಲಾ ಪ್ರಜೆಗಳಿಗೆ ಒಂದು ಏಕರೂಪದ ಮೂಲ
ಆದಾಯವನ್ನು ಪ್ರತಿಪಾದಿಸುವ ಈ ಫೈವ್ ಸ್ಟಾರ್ ಮೂವಮೆಂಟ್, ಅಧ್ಯಕ್ಷ ಮಾರಿಯೊ ದ್ರಾಗಿ ತಂದ ಮಸೂದೆ ಭವಿಷ್ಯವನ್ನು ಚಿಂತಿಸಿಲ್ಲ ಎಂದು ಪ್ರತಿಪಾದಿಸಿತು. ಇದು ಇಟಲಿಯ ಸಂಸತ್ತಿನ ವಿಸರ್ಜನೆಗೆ ಕಾರಣವಾಯಿತು ಹಾಗೂ ಮಾರಿಯೊ ದ್ರಾಗಿ ನೇತೃತ್ವದ ಸಮ್ಮಿಶ್ರ ಸರಕಾರವು ತನ್ನ ನಿರ್ಣಾಯಕ ಬೆಂಬಲವನ್ನು ಕಳೆದುಕೊಂಡು, ಹೊಸದಾಗಿ ಚುನಾವಣೆ ನಡೆಸುವ ಅಗತ್ಯಕ್ಕೆ ಈಡುಮಾಡಿದೆ. ದ್ರಾಗಿ ನೇತೃತ್ವದ ಈ ಸರಕಾರ ಒಂದು ಅಸ್ಥಿರ ಸಮ್ಮಿಶ್ರವಾಗಿತ್ತು, ಅದು ತದ್ವಿರುದ್ಧ ಸಿದ್ಧಾಂತಗಳನ್ನುಳ್ಳ ರಾಜಕೀಯ ಪಕ್ಷಗಳನ್ನು ಒಂದುಗೂಡಿಸುವ ಪ್ರಯತ್ನ ಮಾಡಿತ್ತು. ಉಕ್ರೇನ್ ಮೇಲೆ ರಷಿಯಾದ ಆಕ್ರಮಣದ ನಂತರ ಫೈವ್ ಸ್ಟಾರ್ ಕೂಡ ತನ್ನೊಳಗೆ ವಿಭಜನೆ ಕಂಡಿತು. ಈ ಪಕ್ಷದ ಕೆಲವು ಸದಸ್ಯರು ನ್ಯಾಟೊ ಅಥವಾ ಯುರೋಪಿಯನ್ ಯುನಿಯನ್‌ನ ಬಿಕ್ಕಟ್ಟುಗಳಲ್ಲಿ ಪಾಲ್ಗೊಳ್ಳಬಾರದು ಎಂಬ ಅಭಿಪ್ರಾಯ ಹೊಂದಿದ್ದರು ಹಾಗೂ ದ್ರಾಗಿ ರಷಿಯಾದ ಕ್ರಮಗಳಿಗೆ ವಿರೋಧ ವ್ಯಕ್ತಪಡಿಸಿದ ನಿಲುವನ್ನು ವಿರೋಧಿಸಿದರು.

ಈ ಸರಕಾರದ ಇತಿಹಾಸ

2018ರಲ್ಲಿ ಇಟಲಿಯಲ್ಲಿ ಕಳೆದ ಸಾರ್ವತ್ರಿಕ ಚುನಾವಣೆಗಳು ನಡೆದವು. ಸರಳ ಬಹುಮತ ಪಡೆಯಲು ಯಾವುದೇ ಪಕ್ಷಕ್ಕೆ ಸಾಧ್ಯವಾಗಲಿಲ್ಲ. ಫೈವ್ ಸ್ಟಾರ್ ಪಾರ್ಟಿ ಅತ್ಯಂತ ದೊಡ್ಡ ಪಾರ್ಟಿಯಾಗಿ ಹೊರಹೊಮ್ಮಿತು. ಫೈವ್ ಸ್ಟಾರ್ ಪಾರ್ಟಿಯನ್ನು 2009ರಲ್ಲಿ ಇಟಲಿಯ ಹಾಸ್ಯಗಾರ (ಕಮೇಡಿಯನ್) ಬೆಪ್ಪೆ ಗ್ರಿಲೋ ಸ್ಥಾಪಿಸಿದ್ದುದು. ಅವರು ತಮ್ಮ ಬ್ಲಾಗ್‌ನಲ್ಲಿ ಇಟಿಲಿಯ ರಾಜಕಾರಿಣಿಗಳ ವ್ಯಾಪಕ ಭ್ರಷ್ಟಾಚಾರದ ಬಗ್ಗೆ ಟೀಕೆ ಮಾಡಲು ಹಾಗೂ ವ್ಯಂಗ್ಯ ಮಾಡಲು ಪ್ರಾರಂಭಿಸಿದ್ದರು, ಅದುವೇ ಈ ವ್ಯವಸ್ಥೆಯನ್ನು ಬದಲಿಸಬಯಸುವ ಜನರ ಒಂದು ಚಳವಳಿಯಾಗಿ ರೂಪುಗೊಂಡಿತು. ಗ್ರಿಲೊ ಅವರ ಹಾಸ್ಯ ನಿಜಕ್ಕೂ ಕೀಳು ಮಟ್ಟದ, ಜನಾಂಗೀಯವಾದವುಳ್ಳ ಹಾಗೂ ಮಹಿಳಾದ್ವೇಷವನ್ನುಳ್ಳ ಹಾಸ್ಯವಾಗಿತ್ತು. ಆದರೆ ಅದು ಸಿದ್ಧಾಂತಗಳನ್ನು ಮೀರಿದ ಒಂದು ಭಾವವನ್ನು ಅದು ಜನರಿಗೆ ಮೂಡಿಸಿತು. ಅನೇಕ ಜನರಿಗೆ ಅವರು ಸತ್ಯವನ್ನು ನೇರಾನೇರವಾಗಿ ಹೇಳುತ್ತಿದ್ದಾನೆ ಅನಿಸಿತು. ಸಂಕೀರ್ಣ ಸಂಯೋಕ್ತಿಗಳನ್ನು ಹಾಗೂ ರಾಜಕೀಯ ಇಬ್ಬಂದಿತನದ ಮಾತುಗಳನ್ನು ಮೀರಿದ ಅವರ ಶೈಲಿಯನ್ನು ಗ್ರಿಲೊನ ಬೆಂಬಲಿಗರು ಇಷ್ಟಪಟ್ಟರು. ಅವರಿಗೆ ಯಾವುದೇ ಒಂದು ಸ್ಪಷ್ಟ ಸಿದ್ಧಾಂತವಿರಿಲಿಲ್ಲ.

ಅವರ ಬಹುತೇಕ ಬೆಂಬಲಿಗರು ಉನ್ನತ ವರ್ಗದ ವಿರುದ್ಧ ಬಂಡಾಯವೆದ್ದಿದ್ದರು. ಆದರೆ ಅವರಿಗೆ ಯಾವುದೇ ಗಟ್ಟಿಯಾದ ರಾಜಕೀಯ ಕಾರ್ಯಕ್ರಮಗಳು ಇರಲಿಲ್ಲ. ಅವರು ಕೇವಲ ಪ್ರತಿಕ್ರಿಯಾತ್ಮಕವಾಗಿಯೇ ಸೀಮಿತಗೊಂಡಿದ್ದರು. ಅವರಲ್ಲಿ ಬಹುತೇಕರು ಯುರೋಪಿಯನ್ ಯುನಿಯನ್ ಬಗ್ಗೆ ಸಂದೇಹ ಉಳ್ಳವರಾಗಿದ್ದರು. ಇಟಲಿಯ ಉನ್ನತ ವರ್ಗದ ರಾಜಕೀಯದ ಕಾರಣಕ್ಕಾಗಿ ಇದ್ದ ಅನೇಕ ಇಟಾಲಿಯನ್ನರ ಹತಾಶೆಯನ್ನು ಬಂಡವಾಳ ಮಾಡಿಕೊಂಡ ಪ್ರತಿಕ್ರಿಯಾತ್ಮಕ ಪಕ್ಷವಾಗಿತ್ತು ಫೈವ್ ಸ್ಟಾರ್ ಪಾರ್ಟಿ. ಇಟಲಿ ಹಲವಾರು ಹಗರಣಗಳಿಂದ ಪೀಡಿತವಾಗಿತ್ತು, ಆ ಹಗರಣಗಳು ಕೆಲವೊಮ್ಮೆ ಲೈಂಗಿಕ ಹಗರಣಗಳಾಗಿದ್ದರೆ, ಕೆಲವೊಮ್ಮೆ ರಾಜಕೀಯ ಮತ್ತು ಆರ್ಥಿಕ ಹಗರಣಗಳಾಗಿದ್ದವು. ಫೈವ್ ಸ್ಟಾರ್‌ಅನ್ನು ಎಡಪಂಥದ ಪಕ್ಷ ಅಥವಾ ಬಲಪಂಥದ ಪಕ್ಷ ಎಂದು ವರ್ಗೀಕರಿಸುವುದು ಕಷ್ಟ. ಅವರು ಕೆಲವು ಪರಿಸರವಾದಿ ನೀತಿಗಳನ್ನು ಬೆಂಬಲಿಸಿದರು. ಎಲ್ಲಾ ಇಟಾಲಿಯನ್ನರಿಗೆ ಯುನಿವರ್ಸಲ್ (ಸಾರ್ವತ್ರಿಕ) ಮೂಲ ಆದಾಯದ ನೀತಿಗೆ ಬೆಂಬಲ ನೀಡಿದರು. ಅವರು ವಲಸೆಯನ್ನು ವಿರೋಧಿಸಿದರು ಹಾಗೂ ಇಟಲಿಯಲ್ಲಿರುವ ವಲಸಿಗ ಜನಸಮೂಹದ ವಿರುದ್ಧ ಅನ್ಯದ್ವೇಷಕ್ಕೆ ಉತ್ತೇಜನ ನೀಡಿದರು.

ಪ್ರಾರಂಭದಲ್ಲಿ ಫೈವ್ ಸ್ಟಾರ್ ಪಕ್ಷವು ಲೀಗ್‌ನೊಂದಿಗೆ ಜೊತೆಗೂಡಿ ಸಮ್ಮಿಶ್ರ ಸರಕಾರ ರಚಿಸಲು ಪ್ರಯತ್ನಿಸಿತು; ಲೀಗ್ ಎಂದರೆ ಅದು ತೀವ್ರ ಬಲಪಂಥೀಯ ಪಕ್ಷ! ಒಂದು ವರ್ಷದ ನಂತರ, ಲೀಗ್ ಈ ಮೈತ್ರಿಯನ್ನು ಮುರಿದ ಕಾರಣದಿಂದ ಈ ಸಮ್ಮಿಶ್ರ ಸರಕಾರ ಕುಸಿಯಿತು. ಆಗ ಫೈವ್ ಸ್ಟಾರ್ ಪಕ್ಷವು ಎಡಪಂಥದ ಕಡೆಗೆ ವಾಲಿತು. ಮಧ್ಯಮ ಎಡಪಂಥೀಯ ಪಕ್ಷವಾದ ಡೆಮಾಕ್ರಟಿಕ್ ಪಾರ್ಟಿ ಮತ್ತು ಎಡಪಂಥೀಯ ಪಕ್ಷವಾದ ಫ್ರೀ ಆಂಡ್ ಈಕ್ವಲ್ ಪಾರ್ಟಿಯ ಜೊತೆಗೂಡಿ ಸಮ್ಮಿಶ್ರ ಸರಕಾರ ರಚಿಸಿತು. ಡೆಮಾಕ್ರಟಿಕ್ ಪಕ್ಷದ ಒಳಗೆ ನಡೆದ ಒಳಜಗಳಗಳ ಕಾರಣದಿಂದ ಆ ಸರಕಾರವೂ ಒಂದು ವರ್ಷದಲ್ಲಿ ಮುರಿದುಬಿದ್ದಿತು.

ಯುರೋಪಿಯನ್ ಯುನಿಯನ್ ತನ್ನ ಸದಸ್ಯ ರಾಷ್ಟ್ರಗಳಿಗೆ ಉತ್ತೇಜನ (ಸ್ಟಿಮ್ಯುಲಸ್) ಪ್ಯಾಕೇಜ್ ನೀಡಿದಾಗ ಈ ಬಿರುಕು ಕಾಣಿಸಿಕೊಂಡಿತು. ಡೆಮಾಕ್ರಟಿಕ್ ಪಕ್ಷದ ಒಳಗೇ ಎರಡು ಬಣಗಳಿದ್ದವು. ಒಂದು ಬಣ, ಈ ಪ್ಯಾಕೇಜ್‌ಅನ್ನು ಮೂಲಸೌಕರ್ಯಗಳ ಯೋಜನೆಗಳ ಮೇಲೆ ವ್ಯಯಿಸಬೇಕು ಎಂದು ಅಭಿಪ್ರಾಯಪಟ್ಟಿತು. ಇನ್ನೊಂದು ಬಣವು, ಇದನ್ನು ಒಂದು ತಜ್ಞರ ಸಮಿತಿಯ ನಿರ್ದೇಶನದ ಮೇರೆ ಬಳಸಬೇಕು ಎಂದಿತು. ಈ ಜಗಳವು ರಾಜಕೀಯ ಜಗಳಕ್ಕೆ ಮತ್ತು ಧ್ರುವೀಕರಣಕ್ಕೆ ಕಾರಣವಾಗಿ, ಸರಕಾರ ಬೀಳಲೂ ಕಾರಣವಾಯಿತು.

ದ್ರಾಗಿಯ ಪ್ರವೇಶ

ಎಡಪಕ್ಷಗಳ ಜೊತೆಗಾಗಲಿ ಬಲಪಂಥೀಯ ಪಕ್ಷಗಳ ಜೊತೆಗಾಗಲೀ ಸ್ಥಿರವಾದ ಸರಕಾರ ನೀಡಲು ವಿಫಲವಾಗಿದ್ದರಿಂದ, ಇದರ ನಂತರ ಫೈವ್ ಸ್ಟಾರ್ ಪಕ್ಷಕ್ಕೆ ಇನ್ನೆಂದೂ ಸರಕಾರ ರಚಿಸಲು ಸಾಧ್ಯವಾಗುವುದಿಲ್ಲ ಎಂಬ ಅನಿಸಿಕೆ ವ್ಯಾಪಕವಾಯಿತು. ಆದರೆ ಕೋವಿಡ್ ಸಾಂಕ್ರಾಮಿಕ ಉಲ್ಬಣಗೊಂಡಿದ್ದ ಕಾರಣದಿಂದಾಗಿ ಚುನಾವಣೆ ನಡೆಸುವುದೂ ಕಷ್ಟವಾಗಿತ್ತು. ಬ್ಯಾಂಕ್ ಆಫ್ ಇಟಲಿಯ ಮಾಜಿ ಗವರ್ನರ್ ಮತ್ತು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್‌ನ ಅಧ್ಯಕ್ಷರಾಗಿದ್ದ ದ್ರಾಗಿ ಒಬ್ಬ ತಟಸ್ಥ ತಾಂತ್ರಿಕ ತಜ್ಞ ಅಧಿಕಾರಿಯಾಗಿ ಕಾಣಿಸಿಕೊಂಡರು. ಜನಪ್ರಿಯ ಭಾವನೆಗಳಿಗೆ ಸ್ಪಂದಿಸುವ ಹಾಗೂ ಅದರೊಂದಿಗೆ ಗುರಿರಹಿತವಾಗಿರುವ ಫೈವ್ ಸ್ಟಾರ್ ಪಕ್ಷದ ರೀತಿಯಲ್ಲಿ ಇರದೇ, ದ್ರಾಗಿ ತಜ್ಞರ ಅಭಿಪ್ರಾಯ ಕೇಳಿ, ಅದರನುಗುಣವಾಗಿ ಕೆಲಸ ಮಾಡುವುದರಲ್ಲಿ ನಂಬಿಕೆ ಇಟ್ಟಿದ್ದರು. ಅವರು ಒಬ್ಬ ಬ್ಯಾಂಕರ್ ಮತ್ತು ಆಡಳಿತಗಾರರಾಗಿ ಪ್ರಸಿದ್ಧರಾಗಿದ್ದರು. ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಇಟಲಿಯನ್ನು ನಿಭಾಯಿಸಲು ಇದನ್ನು ಒಂದು ಮಹತ್ವದ ಹೆಜ್ಜೆಯಾಗಿ ನೋಡಲಾಯಿತು. ಅತ್ಯಗತ್ಯ ಆದರೆ ಕಠಿಣ ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ ದ್ರಾಗಿ ಸಮರ್ಥರು ಹಾಗೂ ಅವರು ನೀತಿಗಳನ್ನು ಅನುಷ್ಠಾನಗೊಳಿಸುವುದರಲ್ಲಿ ದಕ್ಷ ಎಂಬ ಅಭಿಪ್ರಾಯವಿತ್ತು. ವಿಶ್ವದ ಇತರೆಡೆಯಲ್ಲಿ ಉಲ್ಬಣಗೊಳ್ಳುವುದಕ್ಕೆ ಒಂದು ವರ್ಷ ಮುನ್ನವೇ ಸಾಂಕ್ರಾಮಿಕವು ಇಟಲಿಯಲ್ಲಿ ತನ್ನ ಗಂಭೀರ ಪರಿಣಾಮಗಳನ್ನು ತೋರಿಸಿತ್ತು.

ದೊಡ್ಡ ವ್ಯಾಪಾರಿಗಳು ದ್ರಾಗಿಯನ್ನು ಸ್ವಾಗತಿಸಿದರು, ಏಕೆಂದರೆ ಒಬ್ಬ ಬ್ಯಾಂಕರ್ ಆಗಿ ದ್ರಾಗಿ, ಅವರಿಗೆ ಹತ್ತಿರದಿಂದ ಬಲ್ಲವರಾಗಿದ್ದರು. ಸಾಂಕ್ರಾಮಿಕದ ಸಮಯದಲ್ಲಿ ಸಾರ್ವಜನಿಕ ಭಾವನೆಗಳು ಕಲ್ಯಾಣ ಕಾರ್ಯಕ್ರಮಗಳು ಮತ್ತು ಸಂಪತ್ತಿನ ಮರುಹಂಚಿಕೆಯ ಕಡೆಗೆ ತಿರುತ್ತಿದ್ದಾಗ ಈ ದೊಡ್ಡ ವ್ಯಾಪಾರಿಗಳು ದ್ರಾಗಿಯ ಜೊತೆ ನಿಕಟ ಸಂಬಂಧ ಇಟ್ಟುಕೊಂಡು, ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಂಡರು. ಫೈವ್ ಸ್ಟಾರ್‌ನ ಬೆಂಬಲಿಗರು ದ್ರಾಗಿಯನ್ನು ಯುರೋಪಿಯನ್ ಯೂನಿಯನ್‌ನ ಕೈಗೊಂಬೆಯಾಗಿ ಕಂಡರು. ದ್ರಾಗಿಯ ಒಬ್ಬ ಬ್ಯಾಂಕರ್ ಮತ್ತು ಬ್ಯೂರೊಕ್ರೆಟ್ ಎಂಬ ಅಸ್ಮಿತೆಯು ಅವರ ಅತಿದೊಡ್ಡ ಮಿತ್ರಪಕ್ಷದ ಬೆಂಬಲಿಗರ ಮಧ್ಯೆ ಅತ್ಯಂತ ಕುಪ್ರಸಿದ್ಧ ವ್ಯಕ್ತಿಯನ್ನಾಗಿಸಿತು.

ಫೈವ್ ಸ್ಟಾರ್ ಬೆಂಬಲಿಗರನ್ನು ಹೊರತುಪಡಿಸಿದರೆ ದ್ರಾಗಿಯನ್ನು ಸಾಮಾನ್ಯವಾಗಿ ಇತರ ಎಲ್ಲರೂ ಒಪ್ಪಿಕೊಂಡಿದ್ದರು. ಅನೇಕರು ಸಾಂಕ್ರಾಮಿಕ ಮುಂದುವರೆದಿದ್ದ ಸಮಯದಲ್ಲಿ ಇಟಲಿಯ ಸರಕಾರಕ್ಕೆ ಅವರು ನೀಡಿದ ನಿರ್ದೇಶನ ಮತ್ತು ಸ್ಥಿರತೆಯನ್ನು ಮೆಚ್ಚಿಕೊಂಡರು. ಅದರ ಪರಿಣಾಮವಾಗಿ, ಇತರ ಬಹುತೇಕ ಎಡಪಂಥೀಯ ಮತ್ತು ಬಲಪಂಥೀಯ ಪಕ್ಷಗಳು ದ್ರಾಗಿ ಸರಕಾರಕ್ಕೆ ಶರತ್ತುಬದ್ಧ ಬೆಂಬಲ ನೀಡಿದವು. ಇಟಲಿಯ ಎಲ್ಲಾ ರಾಜಕೀಯ ಪಕ್ಷಗಳು ತನಗೆ ಬೆಂಬಲ ನೀಡಿದ್ದರಿಂದ ಸಾಂಕ್ರಾಮಿಕದ ಸಮಯದಲ್ಲಿ ದ್ರಾಗಿ ಸರಕಾರವನ್ನು ಸ್ಥಿರವಾಗಿ ನಡೆಸಿಕೊಂಡು ಹೋದರು. ಆದರೆ, ಕೋವಿಡ್ ಬಿಕ್ಕಟ್ಟು ಕೊನೆಗೊಳ್ಳುತ್ತಿದ್ದಂತೆ ವಾತಾವರಣ ಬಿಗುವಾಯಿತು.

ಸಮ್ಮಿಶ್ರ ಸರಕಾರದಲ್ಲಿ ಬಿರುಕುಗಳು

ರಷಿಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ, ಫೈವ್ ಸ್ಟಾರ್‌ನಲ್ಲಿ ಒಳಜಗಳಗಳು ಶುರುವಾದವು. ಅಲ್ಲಿ ಎರಡು ಬಣಗಳು ಕಾಣಿಸಿಕೊಂಡವು. ಒಂದು ಬಣ ರಷಿಯಾ ಪರವಾಗಿತ್ತು. ರಷಿಯಾ ಪರ ಬಣವು, ಪೂರ್ವ ದೇಶಗಳಲ್ಲಿ ನ್ಯಾಟೋ ಮಾಡಿದ ವಿಸ್ತರಣೆ ಹಾಗೂ ಅದರಿಂದ ಉಕ್ರೇನ್ ಬಿಕ್ಕಟ್ಟು ಸೃಷ್ಟಿಯಾದದ್ದಕ್ಕಾಗಿ ನ್ಯಾಟೊವನ್ನು ಕಟುವಾಗಿ ಟೀಕಿಸಿತು. ಅವರು ಒಂದು ರಾಜತಾಂತ್ರಿಕ ಪರಿಹಾರಕ್ಕೆ ಒತ್ತುನೀಡಿದರು ಹಾಗೂ ಉಕ್ರೇನ್‌ಗೆ ನೆರವು ನೀಡಲು ಹಿಂಜರಿಕೆ ತೋರಿದರು. ನೆರವು ನೀಡಿದರೆ, ಆ ಪ್ರದೇಶದಲ್ಲಿ ಶಸ್ತ್ರಾಸ್ತ್ರ ಸ್ಪರ್ಧೆಗೆ ಅನುವು ಮಾಡಿಕೊಟ್ಟಂತಾಗುತ್ತದೆ ಎಂಬ ಆತಂಕ ಹೊಂದಿದ್ದರು. ಇನ್ನೊಂದು ಬಣವು, ರಷಿಯಾ ಪರ ರಾಜಕಾರಣಿಗಳು ಯುರೊಪಿಯನ್ ಯೂನಿಯನ್‌ನಲ್ಲಿ ಇಟಲಿಯ ಸ್ಥಾನವನ್ನು ದುರ್ಬಲವಾಗಿ ಅಂದಾಜು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಅವರುಗಳು ಒಂದು ಹೊಸ ಪಕ್ಷ ಸ್ಥಾಪಿಸಿ, ಫೈವ್ ಸ್ಟಾರ್ ತೊರೆದರು.

ಇಟಾಲಿಯನ್ನರ ದೈನಂದಿನ ಜೀವನ ವೆಚ್ಚಕ್ಕೆ ದ್ರಾಗಿಯವರು ಮುಂದಿಟ್ಟ ಪ್ರಸ್ತಾಪವನ್ನು ಫೈವ್ ಸ್ಟಾರ್‌ನ ನಾಯಕ, ಅದು ಸಾಕಾಗುವುದಿಲ್ಲ ಎಂದು ಹೇಳಿ ವಿರೋಧಿಸಿದಾಗ, ಪರಿಸ್ಥಿತಿ ಬಿಗಡಾಯಿಸಿತು. ತನ್ನ ಪ್ರಸ್ತಾಪಕ್ಕೆ ಬಂದ ಈ ವಿರೋಧವನ್ನು ತನ್ನ ಸರಕಾರದ ಕೊನೆಗಾಲಕ್ಕೆ ಬಂದ ಲಕ್ಷಣ ಎಂದು ಪರಿಗಣಿಸಿ ದ್ರಾಗಿ ರಾಜೀನಾಮೆ ನೀಡಿದರು.

ಇಟಲಿಯ ಭವಿಷ್ಯ

ಮತದಾರ ಸಮೀಕ್ಷೆಗಳಲ್ಲಿ ಮುಂದಿನ ಚುನಾವಣೆಗಳಲ್ಲಿ ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗುವ ಯಾವ ಮುನ್ಸೂಚನೆಯೂ ಸಿಕ್ಕಿಲ್ಲ. ಮುಂಬರುವ ಸರಕಾರವೂ ಸಮ್ಮಿಶ್ರ ಸರಕಾರವಾಗಲಿದೆ ಎನ್ನಬಹುದಾಗಿದೆ. ಫೈವ್ ಸ್ಟಾರ್ ತನ್ನ ಹೆಚ್ಚಿನ ಬೆಂಬಲವನ್ನು ಕಳೆದುಕೊಂಡಿದೆ ಹಾಗೂ ಅದರ ಮಿತ್ರಪಕ್ಷಗಳೂ ಪೈವ್ ಸ್ಟಾರ್‌ನ ಮೈತ್ರಿಯ ಭಾಗವಾಗಿ ಮಾಡಿದ ರಾಜಕೀಯ ಆಟಗಳ ಕಾರಣದಿಂದಾಗಿ ತಮ್ಮ ಬೆಂಬಲ ಕಳೆದುಕೊಂಡಿವೆ. ಮುಂದಿನ ಚುನಾವಣೆಯಲ್ಲಿ ಲಾಭವನ್ನು ಪಡೆದುಕೊಳ್ಳುವ ಅವಕಾಶ ಇರುವುದು ಬ್ರದರ್ಸ್ ಆಫ್ ಇಟಲಿಗೆ. ಬ್ರದರ್ಸ್ ಆಫ್ ಇಟಲಿಯು ಎಂದೂ ಫೈವ್ ಸ್ಟಾರ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲಿಲ್ಲ ಹಾಗೂ ಇತರ ಪಕ್ಷಗಳಂತೆ ರಾಜಕೀಯ ಕಳಂಕ ಹಚ್ಚಿಕೊಂಡಿಲ್ಲ. ಈ ಪಕ್ಷ ವಲಸೆಯ ವಿರುದ್ಧ ಫೈವ್ ಸ್ಟಾರ್ ಪಕ್ಷಕ್ಕಿಂತ ಕಟುವಾದ ನಿಲುವು ತೆಗೆದುಕೊಂಡಿದೆ. ಚುನಾವಣೆಯ ನಂತರ ಭವಿಷ್ಯದ ಸರಕಾರಕ್ಕೆ ಅನ್ಯದ್ವೇಷ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಏಕೆಂದರೆ ಬ್ರದರ್ಸ್ ಆಫ್ ಇಟಲಿಯು ಅಲ್ಲಿಯ ವಲಸಿಗರ ಜನಸಮೂಹದ ವಿರುದ್ಧ ತನ್ನ ದ್ವೇಷ ಕಾರ್ಯಸೂಚಿಯನ್ನು ಕಾರ್ಯರೂಪಕ್ಕೆ ತರಲಿದೆ ಹಾಗೂ ಇಟಲಿಯ ಅನೌಪಚಾರಿಕ ವಲಯದ ಆರ್ಥಿಕತೆಯ ಮೇಲಾಗುವ ಪರಿಣಾಮವನ್ನು ತನ್ನ ಆದ್ಯತೆಯ ವಿಷಯವನ್ನಾಗಿಸಿಕೊಳ್ಳುತ್ತದೆ.

(ಕನ್ನಡಕ್ಕೆ): ರಾಜಶೇಖರ ಅಕ್ಕಿ

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: “ಬಸವರಾಜ ಬೊಮ್ಮಾಯಿ ಎಂಬ ಹೆಸರಿನ ನಾನು…” ಸ್ವೀಕರಿಸಿದ ಪ್ರಮಾಣವಚನ ಮರೆತುಹೋಯಿತೇ ಮುಖ್ಯಮಂತ್ರಿಗಳಿಗೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...

ಕರೂರ್ ಕಾಲ್ತುಳಿತ ಮೃತರ ಕುಟುಂಬಸ್ಥರಿಗೆ ನೀಡಿದ್ದ ಸರ್ಕಾರಿ ಉದ್ಯೋಗವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ನೇಮಕಾತಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ...

ವಿದ್ಯಾರ್ಥಿಗಳ ಬಂಧನ: ಮತ್ತೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ‘ಕಾಕ್ರೋಚ್ ಜನತಾ ಪಾರ್ಟಿ’

ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೋಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಎಕ್ಸ್ (X) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ...

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...