Homeಕರ್ನಾಟಕಸಂಘಪರಿವಾರದ ವಿರೋಧದ ನಡುವೆಯು ‘ಇಮ್ರಾನ್ ಖಾನ್ ಒಂದು ಜೀವಂತ ದಂತಕತೆ’ ಪುಸ್ತಕ ಬಿಡುಗಡೆ

ಸಂಘಪರಿವಾರದ ವಿರೋಧದ ನಡುವೆಯು ‘ಇಮ್ರಾನ್ ಖಾನ್ ಒಂದು ಜೀವಂತ ದಂತಕತೆ’ ಪುಸ್ತಕ ಬಿಡುಗಡೆ

- Advertisement -
- Advertisement -

ಮಾಜಿ ಕ್ರಿಕೆಟಿಗ, ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರ ಬಗ್ಗೆಗಿನ, “ಇಮ್ರಾನ್ ಖಾನ್-ಒಂದು ಜೀವಂತ ದಂತಕಥೆ” ಪುಸ್ತಕವನ್ನು ಗುರುವಾರ ಬೆಂಗಳೂರಿನ ನಾಗರಬಾವಿಯಲ್ಲಿ ಬಿಡುಗಡೆ ಮಾಡಲಾಯಿತು. ಪುಸ್ತಕದ ಲೇಖಕರಾದ ಸುಧಾಕರ್‌ ಎಸ್‌.ಬಿ. ಅವರ ನಿವಾಸದಲ್ಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌‌. ನಾಗಮೋಹನ ದಾಸ್‌ ಅವರು ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ.

ಪ್ರಥಮ ಪ್ರಕಾಶನ ಬೆಂಗಳೂರು ಪ್ರಕಟಿಸಿದ್ದ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ನಗರದ ಮಲ್ಲತಹಳ್ಳಿಯ ಕಲಾಗ್ರಾಮದಲ್ಲಿ ಯೋಜಿಸಲಾಗಿತ್ತು. ಆದರೆ ಸಂಘಪರಿವಾರದಿಂದ ವಿರೋಧ ವ್ಯಕ್ತವಾದ್ದರಿಂದ ನಿಗದಿಪಡಿಸಲಾಗಿದ್ದ ಸ್ಥಳ ಬದಲಾಯಿಸಿ, ಲೇಖಕರ ಮನೆಯಲ್ಲಿಯೇ ಗುರುವಾರ ಸಂಜೆ ಬಿಡುಗಡೆಗೊಳಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಐನಕೈ, ಮಾಜಿ ಸಚಿವರಾದ ಡಾ.ಲೀಲಾದೇವಿ ಆರ್ ಪ್ರಸಾದ್, ಪುಸ್ತಕದ ಲೇಖಕ ಸುಧಾಕರ್ ಎಸ್ ಬಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ. ಪ್ರಕಾಶ್ ಟಿ.ಎನ್. ಕಮ್ಮರಡಿ, ಪ್ರೊ. ರಾಜಪ್ಪ ದಳವಾಯಿ, ವಿ.ಎನ್. ವೀರನಾಗಪ್ಪ ಹಾಗೂ ಡಾ. ಕುಮಾರಸ್ವಾಮಿ ಬೆಜ್ಜಿಹಳ್ಳಿ ಅವರು ಉಪಸ್ಥಿತರಿದ್ದರು.

ಸಂಘಪರಿವಾದ ವಿರೋಧದ ಬಗ್ಗೆ ಮಾತನಾಡಿದ ಜಸ್ಟಿಸ್ ನಾಗಮೋಹನ್ ದಾಸ್ ಅವರು,“ಬಲಪಂಥೀಯರು ದೂರು ನೀಡಿದ್ದ ಹಿನ್ನಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಕಲಾಗ್ರಾಮಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ರದ್ದಾಗಿದೆ ಎಂದು ಬೋರ್ಡ್‌ ಹಾಕಿದ್ದರು. ಈ ನಂತರ ಆಯೋಜಕರು ಲೇಖಕರ ಮನೆಯ ಅಂಗಳಲ್ಲೇ ಪುಸ್ತಕ ಬಿಡುಗಡೆ ಮಾಡಲಾಗಿದೆ” ಎಂದು ಹೇಳಿದರು.

“ಯಾರೂ ಪುಸ್ತಕ ಓದದೇ, ಅದರಲ್ಲಿನ ವಿಚಾರಗಳನ್ನು ತಿಳಿದುಕೊಳ್ಳದೆ, ಇಮ್ರಾನ್ ಖಾನ್ ಒಬ್ಬ ಮುಸ್ಲಿಂ ಮತ್ತು ಪಾಕಿಸ್ತಾನಿ ಎಂಬ ಕಾರಣಕ್ಕೆ ವಿರೋಧ ಮಾಡುವಂತದ್ದು ಸರಿಯಲ್ಲ. ಇದು ಮೂರ್ಖರು ಮಾಡುವ ಕೆಲಸ. ಪುಸ್ತಕದಲ್ಲಿ ರಾಜಕೀಯದ ಬಗ್ಗೆ, ಧರ್ಮದ ಬಗ್ಗೆ ಯಾವುದೇ ವಿಚಾರವಿಲ್ಲ. ಇಮ್ರಾನ್ ಖಾನ್ ಅವರ ತಾಯಿಗೆ ಕ್ಯಾನ್ಸರ್‌ ಬಂದು ತೀರಿಹೋಗುತ್ತಾರೆ. ಅವರ ಊರಿನಲ್ಲಿ ಕ್ಯಾನ್ಸರ್‌ ಆಸ್ಪತ್ರೆ ಇಲ್ಲದಿದ್ದಕ್ಕೆ ಅವರು ಜಗತ್ತಿನ ಇರುವ ತನ್ನ ಎಲ್ಲಾ ಸ್ನೇಹಿತರಿಂದ ಹಣವನ್ನು ದೇಣಿಗೆ ಪಡೆದು ಆಸ್ಪತ್ರೆ ಕಟ್ಟಿದ್ದಾರೆ. ಈ ಆಸ್ಪತ್ರೆ ಕಟ್ಟಲು ಭಾರತೀಯ ಕ್ರಿಕೆಟಿಗರು ಸಹಾಯ ಮಾಡಿದ್ದಾರೆ. ಚಿತ್ರ ನಟ ಅಮಿತಾಬ್ ಬಚ್ಚನ್ ಕೂಡಾ ಆ ಆಸ್ಪತ್ರೆಗೆ ದೇಣಿಗೆ ನೀಡಿದ್ದಾರೆ. ಈ ಕತೆಯನ್ನು ಪುಸ್ತಕ ಹೇಳಿದೆ”

ಇದನ್ನೂ ಓದಿ: ದಲಿತ ಹಕ್ಕುಗಳ ಹೋರಾಟಗಾರ್ತಿ, ಲೇಖಕಿ ಮೀನಾ ಕಂದಸಾಮಿ ಅವರಿಗೆ PEN ಜರ್ಮನಿ ಪ್ರಶಸ್ತಿ

“ಇಮ್ರಾನ್ ಖಾನ್‌ ಅವರ ರಾಜಕೀಯ ವಿಚಾರಗಳು ಸೇರಿದಂತೆ ಅವರ ಹಲವಾರು ವಿಚಾರಗಳನ್ನು ನಾನು ಒಪ್ಪಲ್ಲ. ಅಷ್ಟಕ್ಕೆ ಅವರ ಮೇಲೆ ದ್ವೇಷ ಬೆಳೆಸಿಕೊಳ್ಳಬಹುದೆ? ನಮ್ಮ ದೇಶದಲ್ಲಿ ಧರ್ಮ, ಜಾತಿ, ಭಾಷೆ, ಆಹಾರ ಹೀಗೆ ಎಲ್ಲಾ ವಿಚಾರದಲ್ಲೂ ಅಸಹಿಷ್ಣುತೆ ಜಾಸ್ತಿಯಾಗುತ್ತಿದೆ. ಸಹಿಷ್ಣುತೆ ನಮ್ಮ ಸಂವಿಧಾನದ ಮೂಲ ಆಶಯವಾಗಿದೆ. ಸುಪ್ರಿಂಕೋರ್ಟ್‌‌ ನ್ಯಾಯಮೂರ್ತಿಗಳಾದ ಒ.ಚಿನ್ನಪ್ಪ ರೆಡ್ಡಿ 1993ರ ಒಂದು ತೀರ್ಪಿನಲ್ಲಿ, ‘ನಮ್ಮ ಸಂಪ್ರದಾಯ, ನಮ್ಮ ತತ್ವಗಳು, ನಮ್ಮ ಸಂವಿಧಾನ ಸಹಿಷ್ಣುತೆಯನ್ನು ಭೋಧಿಸುತ್ತದೆ ಮತ್ತು ಪಾಲಿಸುತ್ತದೆ, ಅದನ್ನು ದುರ್ಬಲಗೊಳಿಸಬಾರದು’ ಎಂದು ಬರೆಯುತ್ತಾರೆ”

“ಬೇಜವಾಬ್ದಾರಿ ಕೋಮುವಾದಿ, ಮೂಲಭೂತವಾದಿ ಶಕ್ತಿಗಳು, ‘ಅದು ಸರಿಯಿಲ್ಲ, ಇದು ಸರಿಯಿಲ್ಲ’ ಎಂದು ಹೇಳಿ, ಧಮ್ಕಿ ಹಾಕಿದ ಕೂಡಲೇ ಸರ್ಕಾರ ಅದಕ್ಕೆ ಬೆದರಿ ಕಾರ್ಯಕ್ರಮ ರದ್ದು ಮಾಡುವುದು ಅಂದರೆ ಏನರ್ಥ? ಸರ್ಕಾರ ಸಂವಿಧಾನದ ಪ್ರಕಾರ ನಡೆದುಕೊಳ್ಳಬೇಕೆ ಅಥವಾ ಇಂತಹ ಶಕ್ತಿಗಳಿಗೆ ಶರಣಾಗಬೇಕೆ? ಇದು ದುರದೃಷ್ಟಕರ ಘಟನೆ. ಇಂತಹ ಸರ್ಕಾರಗಳು ಅಧಿಕಾರದಲ್ಲಿ ಮುಂದುವರೆಯುವುದಕ್ಕೆ ಲಾಯಕ್ಕಿದೆಯೆ?”

“ನಾವು ಯಾವುದೇ ಕಾರಣಕ್ಕೂ ಇಂತಹ ಬೆದರಿಕೆಗೆ ಶರಣಾಗಬಾರದು. ಕೆಲವೇ ಜನರಿದ್ದರೂ ಸರಿ, ಇದರ ವಿರುದ್ಧ ನಾವು ಧ್ವನಿ ಎತ್ತಬೇಕು. ಇಂತಹದ್ದಕ್ಕೆಲ್ಲಾ ಶರಣಾಗುತ್ತಾ ಹೋದರೆ ನಮ್ಮ ಅಭಿವ್ಯಕ್ತಿ ಸ್ವಾತಂತ್ಯ್ರವನ್ನು ಕಳೆದುಕೊಳ್ಳುತ್ತೇವೆ. ಅಭಿವ್ಯಕ್ತಿ ಸ್ವಾತಂತ್ಯ್ರವನ್ನು ಕಳೆದುಕೊಂಡದರೆ ಪ್ರಜಾಪ್ರಭುತ್ವವನ್ನು ಕಳೆದುಕೊಳ್ಳುತ್ತೇವೆ. ಪ್ರಜಾಪ್ರಭುತ್ವ ಕಳೆದುಕೊಂಡರೆ ನಾವು ಸಂವಿಧಾನ ಕಳೆದುಕೊಳ್ಳುತ್ತೇವೆ. ಈ ಪರಿಸ್ಥಿತಿ ಬಂದರೆ ನಾವು ಎಲ್ಲರೂ ಬಾಯಿಗೆ ಬೀಗ ಹಾಕಿಕೊಂಡು ಗುಲಾಮರಂತೆ ಬದುಕಬೇಕಾಗುತ್ತದೆ”

ಇದನ್ನೂ ಓದಿ: ಅನುಪಮಾ ಪ್ರಸಾದ್ ಅವರ ಕಥೆ; ಮುಖವಿಲ್ಲದವರು

“ಇಮ್ರಾನ್ ಖಾನ್ ರಾಜಕೀಯ ನಿಲುವುಗಳ ಬಗ್ಗೆ ನನ್ನ ಗಟ್ಟಿ ವಿರೋಧವಿದೆ.  ಅಷ್ಟಕ್ಕೆ ಅವರ ವಿರುದ್ಧ ದ್ವೇಷ ಅಸೂಯೆ, ಅಸಹನೆಯನ್ನು ಬೆಳೆಸಿಕೊಳ್ಳಬೇಕೆ? ಇದು ಎಲ್ಲಿಗೆ ಕೊನೆಯಾಗುತ್ತದೆ?”

“ಅಮೆರಿಕಾದವರು ಪಾಕಿಸ್ತಾನಕ್ಕೆ ಆಹಾರ ಸರಬರಾಜು ಮಾಡುತ್ತದೆ. ಅಲ್ಲಿನ ಮಾಜಿ ಅಧ್ಯಕ್ಷ ಒಬಾಮ ಪುಸ್ತಕ ಭಾರತದಲ್ಲಿ ರಾರಾಜಿಸುತ್ತದೆ. ಟ್ರಂಪ್ ಬಗ್ಗೆಗಿನ ಪುಸ್ತಕಗಳು ಓಡಾಡುತ್ತಿದೆ. ಅವರಿಗೆ ಭಾರತದಲ್ಲಿ ದೇವಸ್ಥಾನವನ್ನೇ ಕಟ್ಟಿದ್ದಾರೆ. ಇವೆಲ್ಲಾ ಏನು? ಸಂಘಪರಿವಾರದ ಈ ನಡೆ ಸಪೂರ್ಣವಾಗಿ ಸರಿಯಲ್ಲ” ಎಂದು ಜಸ್ಟಿಸ್ ನಾಗಮೋಹನ್ ದಾಸ್ ಅವರು ತಿಳಿಸಿದರು.

ಘಟನೆ ಬಗ್ಗೆ ಚಿಂತಕ ವಡ್ಡಗೆರೆ ನಾಗರಾಜಯ್ಯ ಅವರು ಮಾತನಾಡಿ,“ಭಾರತ ಮತ್ತು ಪಾಕಿಸ್ತಾನ ಎರಡು ಕೂಡಾ ಘೋಷಿತ ಶತ್ರುಗಳು ಎಂಬಂತೆ ಬಿಂಬಿಸಲಾಗುತ್ತಿದೆ. ಅದರಲ್ಲೂ ಈ ಎರಡು ದೇಶಗಳನ್ನು ಧರ್ಮದ ನೆಲೆಯಲ್ಲಿ, ಮುಸ್ಲಿಮರು ಎ‌ನ್ನುವ ಕಾರಣಕ್ಕೆ ಘೋಷಿತ ಶತ್ರುಗಳು ಎಂಬಂತೆ ಬಿಂಬಿಸಲಾಗುತ್ತಿದೆ. ಹೀಗಾದರೆ ಉಳಿದ ಎಲ್ಲಾ ದೇಶಕ್ಕೂ ಈ ಧರ್ಮದ ನೆಲೆಯನ್ನೇ ಇವರು ಅನ್ವಯಿಸುತ್ತಾರೆ. ಹಿಂದೂ ಧರ್ಮವನ್ನು ಶ್ರೇಷ್ಠ ಎಂದು ನಂಬಿಸುತ್ತಾ, ಇಸ್ಲಾಂ ಧರ್ಮವನ್ನು ವೈರಿ ನೆಲೆಯಲ್ಲಿ ಕಂಡು ಬೇರೆ ರಾಷ್ಟ್ರಗಳನ್ನು ಕೂಡಾ ವೈರಿ ದೇಶಗಳಂತೆ ಕಾಣುತ್ತಾರೆ”

ಇದನ್ನೂ ಓದಿ: ಹಳತು-ವಿವೇಕ; ‘ಸಮನ್ವಯ ಮಾಡಿಕೊಳ್ಳದಿದ್ದರೆ ಕಾವ್ಯ ಹೇಗಾಗುತ್ತೆ?’ ಚೆನ್ನವೀರ ಕಣವಿ ಅವರ ಸಂದರ್ಶನ

“ವರ್ತಮಾನ ಭಾರತದ ಅಂತರಂಗದ ಒಳಗೆ ಕೂಡಾ ಹಿಂದೂ-ಮುಸ್ಲಿಂ ವೈರತ್ವ ಭಾರಿ ಜೋರಾಗಿ ಹೊಗೆಯಾಡುತ್ತಿದೆ. ಹೀಗಾಗಿ ಇದಕ್ಕೆ ಲಗಾಮು ಹಾಕುವುದು ತುಂಬಾ ಅಗತ್ಯವಿದೆ. ಈ ಹೊತ್ತು ಭಾರತ ಅಂತಾರಾಷ್ಟ್ರೀಯ ಸಂಬಂಧಗಳನ್ನು ಬೇರೆ ಬೇರೆ ದೇಶಗಳೊಂದಿಗೆ ದಕ್ಕಿಸಿಕೊಳ್ಳಬೇಕಾಗಿದೆ. ದೇಶದ ರಾಜತಾಂತ್ರಿಕದ ಮುಖ್ಯಗುರಿ ಈ ರೀತಿ ಅಂತಾರಾಷ್ಟ್ರೀಯ ಸಂಬಂಧಗಳನ್ನು ಬೆಸೆದುಕೊಳ್ಳುವುದು. ಭಾರತ-ಪಾಕಿಸ್ತಾನ ರಾಷ್ಟ್ರಗಳು ಬೇರೆ ಯಾವುದೆ ದೇಶಗಳಿಗಿಂತ ಹೆಚ್ಚಾಗಿ ಸೋದರ ಸಂಬಂಧವನ್ನು ಬೆಳೆಸಿಕೊಳ್ಳಬೇಕಿದೆ. ಯಾಕೆಂದರೆ ಈ ಎರಡು ದೇಶಗಳು ವಿಭಜನೆ ಪೂರ್ವದಲ್ಲಿ ಬ್ರಿಟೀಷರ ವಿರುದ್ಧ ಐಕ್ಯತೆಯಿಂದ ಹೋರಾಡಿ ದೇಶಗಳನ್ನು ಸ್ವಾತಂತ್ಯ್ರಗೊಳಿಸಿವೆ. ಆ ವೇಳೆ ಇದ್ದಂತಹ ಐಕ್ಯತೆ, ಆಗಿನ ಸೋದರ ಸಂಬಂಧಗಳನ್ನು ನೆನಪಿಸಿಕೊಂಡರೆ ಮುಸ್ಲಿಮರು ಮಾತ್ರವಲ್ಲ, ಪಾಕಿಸ್ತಾನದವರು ಕೂಡಾ ನಮ್ಮ ಸಹೋದರರೆ ಎಂಬ ಬಂಧುತ್ವ ಬಂದುಬಿಡುತ್ತದೆ”

“ಎರಡು ದೇಶಗಳ ಸ್ಥಿತಿ ಈಗ ದಾಯಾದಿ ಮತ್ಸರದ ತರ ಆಗಿಹೋಗಿದೆ. ಆದರೆ ಈ ದಾಯಾದಿಗಳು ತಮ್ಮ ಮತ್ಸರ ಮರೆತು ಸೋದರ ಭಾವದಿಂದ ಇರಬಾರದು ಎಂದೇನು ಇಲ್ಲವಲ್ಲ? ಒಡೆದುಹೋದ ಸಂಬಂಧಕ್ಕೆ ಅಕ್ಷರದ ಮೂಲಕ ಔಷಧಿ ಹುಡುಕಬೇಕು. ಇಲ್ಲಿವರೆಗೆ ನಡೆದಿರುವ ಚಳವಳಿಗಳಾಗಲಿ, ಮಾನವೀಯ ಚಿಂತನೆಗಳಾಗಲಿ ಹೀಗೆ ನಮ್ಮನ್ನೆಲ್ಲಾ ಬೆಸೆದಿರುವುದು ಅಕ್ಷರ ಮತ್ತು ಪುಸ್ತಕಗಳ ಮೂಲಕವಾಗಿವೆ”

“ವಚನ ಸಾಹಿತ್ಯ, ಬುದ್ಧನ ಬೋಧನೆಗಳು, ಮಹಾವೀರನ ಬೋಧನೆಗಳನ್ನೇ ನೋಡಿ, ಈ ಎಲ್ಲವು ನಮಗೆ ಸಾಹಿತ್ಯದ ಮೂಲಕ ಸಿಕ್ಕವುಗಾಳಾಗಿವೆ. ಯಾವ ಚಳವಳಿ ಮಾಡದೆ ಇರುವ ಕೆಲಸವನ್ನು ಒಂದು ಸಾಹಿತ್ಯ ಮಾಡುತ್ತವೆ. ಹಾದಿ ಬೀದಿ ಹೋರಾಟಕ್ಕಿಂತಲೂ ದೊಡ್ಡದಾದ ಕೂಡಿಸುವಿಕೆ, ಬೆಸೆಯುವಿಕೆ ಒಂದು ಪುಸ್ತಕದಿಂದ ಸಾಧ್ಯವಿದೆ. ಅಂತಹ ಪುಸ್ತಕಗಳನ್ನು ನಾವು ಅನ್ಯ ದೇಶದವನು, ವೈರಿ ಎಂದು ಹೇಳಿ ನೋಡಿದರೆ ಹೇಗೆ?”

ಇದನ್ನೂ ಓದಿ: ಎಷ್ಟು ಬೆಂಕಿ ಹಚ್ಚಬಲ್ಲಿರಿ ನೀವು?

“ಇಮ್ರನ್ ಖಾನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದ ಕ್ರಿಕೆಟ್ ತಾರೆ. ನಮಗೆ ಅವರ ರಾಜಕೀಯ, ಧಾರ್ಮಿಕ ಚಿಂತನೆಗಳ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಅಂತಹ ಭಿನ್ನಮತಗಳನ್ನು ಇಟ್ಟುಕೊಂಡೆ ಒಬ್ಬ ವ್ಯಕ್ತಿಯ ಒಳಿತು, ವ್ಯಕ್ತಿತ್ವದ ಘನತೆ, ಅವರ ಸಾಧನೆಯನ್ನು ಗುರುತಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ‘ಇಮ್ರಾನ್ ಖಾನ್ ಒಂದು ಜೀವಂತ ದಂತಕತೆ’ ಪುಸ್ತಕ ತುಂಬಾ ಮುಖ್ಯವಾಗುತ್ತದೆ. ಎಲ್ಲಿಂದಲೇ ಆಗಲಿ, ನಮಗೆ ಹೊಸ ಬೆಳಕು, ನೀರು, ವಾತಾವರಣ, ಹೊಸತನ ಬೇಕಾಗಿದೆ. ಇವುಗಳನ್ನು ಸ್ವಾಗತಿಸೋಣ. ಮಾನವೀಯ ಆಲೋಚನೆಗಳು ಎಲ್ಲಿಂದ ಬಂದರೂ ಏನು ತಪ್ಪಿದೆ?”

“ಇಂಗ್ಲೀಷರು ನಮ್ಮನ್ನು ಗುಲಾಮಗಿರಿಗೆ ತಳ್ಳಿ ನಮ್ಮನ್ನು ಆಳ್ವಿಕೆ ನಡೆಸಿದವರಾಗಿದ್ದಾರೆ. ಇಂಗ್ಲಿಷ್‌‌ನವರ ಕೃತಿಗಳನ್ನು ಇಲ್ಲಿ ಯಾಕೆ ಓದುತ್ತೀರಿ ಎಂದು ಕೇಳಿದರೆ ಸರಿಯಾಗುತ್ತದೆಯೆ. ಆದರೆ ಅಲ್ಲಿನ ಸಾಹಿತ್ಯವೂ ನಮಗೆ ಬೇಕು, ಹಾಗೆಯೆ ಇಲ್ಲಿನ ಸಾಹಿತ್ಯವನ್ನೂ ನಾವು ಅಲ್ಲಿಗೆ ಕಳುಹಿಸಬೇಕು. ಕಾರ್ಲ್ ಮಾರ್ಕ್ಸ್‌ ಅನ್ನು ನಾವು ಓದುತ್ತೇವೆ ಎಂದರೆ, ಇಲ್ಲಿನ ಬಸವ, ಬುದ್ಧನನ್ನು ಅವರು ಓದುವುದು ಬೇಡವೆ? ಚೀನಾದ ಕ್ರಾಂತಿಕಾರಿ ಮಾವೋತ್ಸೆ ತುಂಗನನ್ನು ನಾವು ಓದುತ್ತೇವೆ ಎಂದರೆ, ಇಲ್ಲಿನ ಭಗತ್‌ ಸಿಂಗ್‌ನನ್ನು ಅವರು ತಿಳಿಯುವುದು ಬೇಡವೆ? ಟಾಲ್ಸ್‌ಟಾಯ್ ಅವರನ್ನು ನಾವು ಓದುತ್ತೇವೆ, ಕುವೆಂಪು ಅವರನ್ನು ಅವರು ಓದುವುದು ಬೇಡವೆ?”

“ಹೀಗೆ ಇದೊಂದು ಸಾಂಸ್ಕೃತಿಕ ಕೊಡುಕೊಳ್ಳುವಿಕೆ ಹಾಗೂ ಅನುಸಂಧಾನವಾಗಿದೆ. ಈ ಅನುಸಂಧಾನ ನಡೆದಾಗಲೆ ವ್ಯಕ್ತಿತ್ವ ವಿಕಸನ ಆಗುವುದು. ವೈರಿ ಎಂದು ಹೇಳಿಕೊಂಡು ಅಲ್ಲಿನ ಎಲ್ಲರಲ್ಲೂ ವೈರತ್ವವಿದೆ, ವಿಷವಿದೆ ಎನ್ನುತ್ತಾ ಹೋದರೆ ನಮ್ಮೊಳಗೆಯೆ ವಿಷವಿದೆ ಎಂದರ್ಥ. ಕೆಟ್ಟವನು ಯಾರು ಎಂದು ಹುಡುಕಿಕೊಂಡು ಹೋಗುವ ಗುಣವೇ ನಮ್ಮೊಳಗಿನ ಕೆಟ್ಟತನ”.

ಇದನ್ನೂ ಓದಿ: ತ್ಯಾಗ -ಸ್ಪೂರ್ತಿಯ ಸಂಕೇತ ಮಾತೆ ರಮಾಬಾಯಿ ಅಂಬೇಡ್ಕರ್

“ಬ್ರಿಟೀಷರ ವಿರುದ್ಧ ಹೋರಾಟ ಮಾಡುವಾಗ ನಾವು ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದವರಂತೆ ಬದುಕಿದ್ದವರು. ಹೀಗಿರುವಾಗ ಒಬ್ಬ ಕ್ರಿಕೆಟ್ ತಾರೆ, ಮಾಜಿ ಪ್ರಧಾನ ಮಂತ್ರಿಯ ಪುಸ್ತಕ ನಮ್ಮಲ್ಲಿ ಯಾಕೆ ಬಿಡುಗಡೆಯಾಗಬೇಕು ಎನ್ನುವುದು ಸರಿಯಲ್ಲ”

“ಪಾಕಿಸ್ತಾನ ಮತ್ತು ನಮ್ಮ ದೇಶದ ಶಿಕ್ಷಣ, ಬಡತನ, ಕೃಷಿ ಹೀಗೆ ಯಾವುದೇ ವಿಚಾವನ್ನು ತೆಗೆದುಕೊಳ್ಳಿ, ಹೆಚ್ಚು ಕಡಿಮೆ ನಾವು ಅವರು ಸಮಾನ ಮತ್ತು ಸಮಾನ ದುಃಖಿಗಳು. ಅವರ ಮತ್ತು ನಮ್ಮ ಬಾಳಾಟ, ಗೋಳಾಟ, ಜೀವನ ವಿಧಾನ, ಸಂಸ್ಕೃತಿ ವಿಧಾನ, ನೆಲೆ ಎಲ್ಲವೂ ಒಂದೆ ಆಗಿದೆ. ಹೀಗಿರುವಾಗ ಅವರ ಬಗ್ಗೆ ಓದಬಾರದು ಎಂದು ಹೇಗೆ ಹೇಳಲು ಸಾಧ್ಯ? ನಮ್ಮ ರಾಜಕೀಯ ಮತ್ತು ಧಾರ್ಮಿಕ ಭಿನ್ನಾಭಿಪ್ರಾಯಗಳು ಇರಲಿ, ಭಿನ್ನಮತಗಳು ಯಾವುತ್ತಿಗೂ ಸ್ವಾಗತಾರ್ಹ. ಆದರೆ ಸಂಪೂರ್ಣ ವೈರಿ ಎಂದು ಅವರನ್ನು ಆಚೆಕಡೆ ಎಸೆದುಬಿಟ್ಟ ನಾವು ಸಾಧಿಸುವುದು ಏನಿದೆ?”

“ಮುಂದಕ್ಕೂ ನಾವು ವೈರಿಗಳಾಗಿಯೆ ಬದುಕಬೇಕೆ? ಇನ್ನೆಷ್ಟು ಕಾಲ ವೈರಿಗಳಂತೆ ಬಾಳಿಕೊಂಡು ಹೋಗಬೇಕು? ಪುಲ್ವಾಮದಲ್ಲಿ ಭಾರತೀಯರನ್ನು ಕೊಂದಿದ್ದಕ್ಕೆ ಅವರು ಸಂಭ್ರಮಪಟ್ಟರು ಎಂಬುವುದು ಈಗ ವಿವಾದ. ಆದರೆ ಪಾಕಿಸ್ತಾನಿಗಳನ್ನು ಕೊಂದರೆ ನಮ್ಮ ದೇಶದಲ್ಲಿ ಸಂಭ್ರಮ ಪಡುವವರು ಇಲ್ಲವೆ?. ಅದಾಗ್ಯೂ ನಮ್ಮ ಧರ್ಮ, ನಮ್ಮ ಮೌಲ್ಯ, ಕೊಲ್ಲುವುದಲ್ಲ ಬದಲಾಗಿ ಅಹಿಂಸೆಯಾಗಿದೆ. ಮಾನವೀಯತೆ, ಪ್ರೀತಿಯಾಗಿದೆ ನಮ್ಮ ಮೌಲ್ಯ, ಧರ್ಮ” ಎಂದು ನಾಗರಾಜಯ್ಯ ಅವರು ಹೇಳಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...