ಮಧ್ಯಪ್ರದೇಶದಲ್ಲಿ ಸರ್ಕಾರಿ ಉದ್ಯೋಗಗಳನ್ನು ರಾಜ್ಯದ ಸ್ಥಳೀಯರಿಗೆ ಮೀಸಲಿಡಲಾಗುವುದು ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದಾರೆ. ಇದನ್ನು ಜಾರಿಗೆ ತರಲು ಶೀಘ್ರದಲ್ಲೇ ಕಾನೂನನ್ನು ಬದಲಾಯಿಸಲಾಗುವುದು ಎಂದು ಹೇಳಿದ್ದಾರೆ
“ಮಧ್ಯಪ್ರದೇಶ ಸರ್ಕಾರ ಇಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಮಧ್ಯಪ್ರದೇಶದಲ್ಲಿ ಸರ್ಕಾರಿ ಉದ್ಯೋಗಗಳನ್ನು ರಾಜ್ಯದ ಯುವಜನರಿಗೆ ಮಾತ್ರ ನೀಡಲು ನಾವು ಅಗತ್ಯ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಮಧ್ಯಪ್ರದೇಶದ ಸಂಪನ್ಮೂಲಗಳು ಮಧ್ಯಪ್ರದೇಶದ ಪ್ರಜೆಗಳಿಗೆ ಮಾತ್ರ” ಎಂದು ಶಿವರಾಜ್ ಸಿಂಗ್ ಚೌಹಾನ್ ಹೇಳಿದ್ದಾರೆ.
ಶೀಘ್ರದಲ್ಲಿಯೇ ನಡೆಯುವ 27 ವಿಧಾನಸಭೆ ಸ್ಥಾನಗಳಿಗೆ ಉಪಚುನಾವಣೆ ಹಿನ್ನೆಲೆಯಲ್ಲಿ ಈ ಪ್ರಕಟಣೆ ಬಂದಿದೆ ಎಂದು ಹೇಳಲಾಗುತ್ತಿದೆ. ಚುನಾವಣೆಯ ದಿನಾಂಕ ಇನ್ನೂ ನಿಗಧಿಯಾಗಿಲ್ಲ.
ಮಧ್ಯಪ್ರದೇಶದ ಯುವಜನರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಆದ್ಯತೆ ನೀಡಲಾಗುವುದು ಎಂದು ಚೌಹಾನ್ ಈ ಹಿಂದೆ ಹೇಳಿದ್ದರು. “ಮಧ್ಯಪ್ರದೇಶದ ಸ್ಥಳೀಯರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಆದ್ಯತೆ ನೀಡಲಾಗುವುದು. ಉದ್ಯೋಗಾವಕಾಶಗಳ ಕೊರತೆಯಿರುವ ಸಮಯದಲ್ಲಿ ನಮ್ಮ ರಾಜ್ಯದ ಯುವಕರ ಬಗ್ಗೆ ಕಾಳಜಿ ವಹಿಸುವುದು ನಮ್ಮ ಕರ್ತವ್ಯ” ಎಂದು ಅವರು ಸ್ವಾತಂತ್ರ್ಯ ದಿನಾಚರಣೆಯಂದು ರಾಜ್ಯವನ್ನು ಉದ್ದೇಶಿಸಿ ಹೇಳಿದ್ದರು.
“ಸ್ಥಳೀಯ ಯುವಕರಿಗೆ ಅವರ ಹನ್ನೆರಡನೆಯ ತರಗತಿಯ ಮಾರ್ಕ್ಶೀಟ್ಗಳ ಆಧಾರದ ಮೇಲೆ ಉದ್ಯೋಗವನ್ನು ಖಾತ್ರಿಪಡಿಸುವ ವ್ಯವಸ್ಥೆಯನ್ನು ನಾವು ಮಾಡುತ್ತೇವೆ” ಎಂದು ಅವರು ಹೇಳಿದರು.
ಉದ್ಯೋಗಗಳಲ್ಲಿ ಒಬಿಸಿ ಕೋಟಾವನ್ನು ರಾಜ್ಯದಲ್ಲಿ ಶೇಕಡಾ 14 ರಿಂದ 27 ಕ್ಕೆ ಹೆಚ್ಚಿಸಿದ್ದಕ್ಕಾಗಿ ನ್ಯಾಯಾಲಯದಲ್ಲಿ ಹೋರಾಡುವ ಬಗ್ಗೆಯೂ ಮುಖ್ಯಮಂತ್ರಿ ಮಾತನಾಡಿದ್ದರು.
ಹೊರ ರಾಜ್ಯದವರಿಗೆ ಅವಕಾಶಗಳನ್ನು ರಾಜ್ಯಗಳು ನಿರಾಕರಿಸುವುದು ಸರಿಯಲ್ಲ ಎಂದು ಹಲವರು ಈ ನಿರ್ಧಾರವನ್ನು ಟೀಕಿಸುತ್ತಿದ್ದಾರೆ ಎನ್ನಲಾಗಿದೆ.
ಕಳೆದ 10 ವರ್ಷಗಳಲ್ಲಿ ರಾಜ್ಯದ ಜನಸಂಖ್ಯೆಯು ಶೇಕಡಾ 10 ರಷ್ಟು ಏರಿಕೆಯಾಗಿದೆ ಆದರೆ ಸರ್ಕಾರಿ ಉದ್ಯೋಗಗಳು ಶೇಕಡಾ 2.5 ರಷ್ಟು ಕುಗ್ಗಿವೆ ಎಂದು ಮಧ್ಯಪ್ರದೇಶದ ಅಧಿಕಾರಿಗಳು ತಿಳಿಸಿದ್ದಾರೆ. ಹಾಗಾಗಿ ಸರ್ಕಾರಿ ಉದ್ಯೋಗಗಳೆ ಕಡಿಮೆ ಇರುವಾಗ ಇಂತಹ ಘೋಷಣೆಗಳಿಗೆ ಮಹತ್ವವಿಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
5.6 ಲಕ್ಷಕ್ಕೂ ಹೆಚ್ಚು ಸರ್ಕಾರಿ ಉದ್ಯೋಗಗಳಲ್ಲಿ, ಸುಮಾರು 93,500 ಖಾಲಿ ಇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಉದ್ಯೋಗದಲ್ಲಿ 75% ಸ್ಥಳೀಯರಿಗೆ ಆದ್ಯತೆ: ಹರಿಯಾಣ ಸರ್ಕಾರದ ನಿರ್ಧಾರಕ್ಕೆ ವಿರೋಧ..