ಪಿಡಿಪಿ ಯುವ ವಿಭಾಗದ ಅಧ್ಯಕ್ಷ ಮತ್ತು ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿಯವರ ಆಪ್ತ ಸಹಾಯಕ ವಹೀದ್ ಪರ್ರಾ ಅವರನ್ನು ಭಯೋತ್ಪಾದಕ ಪ್ರಕರಣಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬುಧವಾರ ಬಂಧಿಸಿದೆ.
’ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಜೊತೆ ಸಂಬಂಧ ಹೊಂದಿದ್ದಾರೆ ಎಂದೂ ಮತ್ತು ಬಂಧನಕ್ಕೊಳಗಾಗಿರುವ ಹಿಜ್ಬುಲ್ ಕಮಾಂಡರ್ ನವೀನ್ ಬಾಬು ಅವರ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಎನ್ಐಎ ಹಿರಿಯ ಅಧಿಕಾರಿಯೊಬ್ಬರು ಎನ್ಡಿಟಿವಿಗೆ ತಿಳಿಸಿದ್ದಾರೆ.
ಅಧಿಕಾರಿಯ ಪ್ರಕಾರ, ಪರ್ರಾ ಅವರನ್ನು ದೆಹಲಿಯಲ್ಲಿ ಬಂಧಿಸಲಾಗಿದ್ದು, ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಗುಂಪಿನೊಂದಿಗೆ ಸಂಪರ್ಕವಿದೆ ಎನ್ನುವ ಆರೋಪದಡಿ ಸೋಮವಾರದಿಂದ ಎನ್ಐಎ ಕೇಂದ್ರ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುತ್ತಿತ್ತು. ಈಗ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪಾಕ್ ಕದನ ವಿರಾಮ ಉಲ್ಲಂಘನೆ: ಉಭಯ ದೇಶಗಳು ಸಂವಾದ ನಡೆಸಲಿ- ಮೆಹಬೂಬ ಮುಫ್ತಿ
“ಬಂಧಿತ ವಹೀದ್ ಪರ್ರಾ ಅವರ ವಿಚಾರಣೆಯ ಸಮಯದಲ್ಲಿ ನವೀದ್ ಬಾಬು ಅವರೊಂದಿಗೆ ಸಂಬಂಧ ಇರುವುದು ಖಚಿತವಾಗಿದೆ. ಅವರನ್ನು ದೆಹಲಿಯಲ್ಲಿ ವಿಚಾರಣೆಗೆ ಹಾಜರುಪಡಿಸಲಾಗುತ್ತದೆ. ನಂತರ ಜಮ್ಮುವಿಗೆ ಕರೆದೊಯ್ಯಲಾಗುತ್ತದೆ” ಎಂದು ಎನ್ಐಎ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ದಕ್ಷಿಣ ಕಾಶ್ಮೀರದಲ್ಲಿ ಪಿಡಿಪಿಯ ಸಂಘಟನೆಗೆ, ವಿಶೇಷವಾಗಿ ಉಗ್ರಗಾಮಿ-ಪೀಡಿತ ಪುಲ್ವಾಮಾದಲ್ಲಿ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಲ್ಲಿಂದ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಚುನಾವಣೆಯ ಮೊದಲ ಹಂತವು ನವೆಂಬರ್ 28 ರಂದು ನಡೆಯಲಿದೆ.
ಆಪ್ತ ಸಹಾಯಕ ವಹೀದ್ ಪರ್ರಾ ಬಂಧನವನ್ನು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ತೀಕ್ಷ್ಣವಾದ ಟೀಕೆಗಳ ಮೂಲಕ ಟೀಕಿಸಿದ್ದಾರೆ. ಮುಫ್ತಿ, ಗೃಹ ಸಚಿವ ರಾಜನಾಥ್ ಸಿಂಗ್ ಅವರ ವೀಡಿಯೊವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡು, “ಜೆ & ಕೆನಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸಿದ್ದಕ್ಕಾಗಿ ಬಂಧಿಸಿದ್ದಾರೆ” ಎಂದಿದ್ದಾರೆ.
PDP’s @parawahid applauded by then HM @rajnathsingh for strengthening democracy in J&K has been arrested on baseless charges by NIA today. No coincidence that he filed his nomination for DDC on 20th Nov & received NIA summons next day itself. pic.twitter.com/8aYhHBkKNl
— Mehbooba Mufti (@MehboobaMufti) November 25, 2020
“ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸಿದ್ದಕ್ಕಾಗಿ ಎನ್ಐಎ ಆಧಾರರಹಿತ ಆರೋಪದ ಮೇಲೆ ಇಂದು ವಹೀದ್ ಪರ್ರಾ ಅವರನ್ನು ಬಂಧಿಸಲಾಗಿದೆ. ವಹೀದ್ ಪರ್ರಾ ನವೆಂಬರ್ 20 ರಂದು ಡಿಡಿಸಿಗೆ ನಾಮಪತ್ರ ಸಲ್ಲಿಸಿದರು ಮತ್ತು ಮರುದಿನವೇ ಎನ್ಐಎ ಸಮನ್ಸ್ ಪಡೆದರು. ಇದು ಕಾಕತಾಳೀಯವಲ್ಲ” ಎಂದು ವ್ಯಂಗ್ಯವಾಡಿದ್ದಾರೆ.
“ವಹೀದ್ಗೆ ಈ ವ್ಯಕ್ತಿಯೊಂದಿಗೆ ಯಾವುದೇ ಸಂಬಂಧವಿಲ್ಲ ಮತ್ತು ಸುಳ್ಳು ಆರೋಪ ಹೊರಿಸಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ಮತ್ತು ಇತರ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳನ್ನು ಬ್ಲ್ಯಾಕ್ ಮೇಲ್ ಮಾಡಲು ಮತ್ತು ಬೆದರಿಸಲು ಇಂತಹ ಕೃತ್ಯ ಮಾಡಲಾಗುತ್ತಿದೆ”ಎಂದಿದ್ದಾರೆ.