ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅಸಹಜ ಸಾವಿನಲ್ಲಿ ಮಾದಕವಸ್ತು ಸಂಬಂಧಿತ ಪ್ರಕರಣದ ತನಿಖೆ ನಡೆಸುತ್ತಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ವಿಶೇಷ ಎನ್ಡಿಪಿಎಸ್ ನ್ಯಾಯಾಲಯದ ಮುಂದೆ ಶುಕ್ರವಾರ ಸುದೀರ್ಘ ಚಾರ್ಜ್ಶೀಟ್ ಸಲ್ಲಿಸಿದೆ.
ಚಾರ್ಜ್ಶೀಟ್ನಲ್ಲಿ ನಟಿ ರಿಯಾ ಚಕ್ರವರ್ತಿ ಮತ್ತು ಅವರ ಸಹೋದರ ಶೋಯಿಕ್ ಸೇರಿದಂತೆ 33 ಜನರನ್ನು ಹೆಸರಿದ್ದು, 200 ಸಾಕ್ಷಿಗಳ ಹೇಳಿಕೆಯನ್ನು ಒಳಗೊಂಡಿದೆ. ಸುಮಾರು 12,000 ಕ್ಕೂ ಹೆಚ್ಚು ಪುಟಗಳಿರುವ ಈ ಚಾರ್ಜ್ಶೀಟ್ ಡಿಜಿಟಲ್ ಸ್ವರೂಪವು ಸುಮಾರು 50,000 ಪುಟಗಳನ್ನು ಹೊಂದಿದೆ.
ಕಳೆದ ವರ್ಷದ ಜೂನ್ನಲ್ಲಿ 34 ವರ್ಷದ ನಟ ಸುಶಾಂತ್ ಸಿಂಗ್ ರಜಪೂತ್ ಅಸಹಜ ಸಾವಿನ ನಂತರ ಎನ್ಸಿಬಿ ತನಿಖೆ ಆರಂಭಿಸಿತ್ತು. ಇದರಲ್ಲಿ ನಟಿ ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ಶೋಯಿಕ್ ಇಬ್ಬರನ್ನೂ ಮಾದಕ ದ್ರವ್ಯ ಮತ್ತು ಸೈಕೋಟ್ರೋಪಿಕ್ ನ ವಿವಿಧ ವಿಭಾಗಗಳ ಅಡಿಯಲ್ಲಿ ಬಂಧಿಸಿ, ವಿಚಾರಣೆ ನಡೆಸಿತ್ತು. ನಂತರ ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಮಾಡಲಾಯಿತು. ಚಾರ್ಜ್ಶೀಟ್ನಲ್ಲಿರುವ 33 ಆರೋಪಿಗಳಲ್ಲಿ ಎಂಟು ಮಂದಿ ಇನ್ನೂ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇದನ್ನೂ ಓದಿ: ‘ಆತನ ಮುಖ ನೋಡಿದರೆ ಆತ ಮುಗ್ಧ ಅನಿಸುತ್ತದೆ’: ಸುಶಾಂತ್ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ಹೇಳಿಕೆ
ನಟಿ ರಿಯಾ ಚಕ್ರವರ್ತಿ, ಆಕೆಯ ಸಹೋದರ ಶೋಯಿಕ್ ಚಕ್ರವರ್ತಿ ಮತ್ತು ಸುಶಾಂತ್ ಸಿಂಗ್ ರಜಪೂತ್ ಅವರ ಕೆಲವು ಸಿಬ್ಬಂದಿಗಳ ನಡುವೆ ನಡೆಯಲಾಗಿದೆ ಎಂದು ಹೇಳಲಾದ ಖಾಸಗಿ ವಾಟ್ಸಾಪ್ ಚಾಟ್ಗಳನ್ನು ಜಾರಿ ನಿರ್ದೇಶನಾಲಯ ಹಂಚಿಕೊಂಡ ನಂತರ ಆಗಸ್ಟ್ನಲ್ಲಿ ಈ ಪ್ರಕರಣವನ್ನು ದಾಖಲಿಸಲಾಗಿದೆ. ಇವರೆಲ್ಲರೂ ನಟನಿಗೆ ಮಾದಕ ವಸ್ತುಗಳನ್ನು ಸಂಗ್ರಹಿಸಿ ಸರಬರಾಜು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಸುದೀರ್ಘ ಆರು ತಿಂಗಳ ತನಿಖೆಯಲ್ಲಿ, ಎನ್ಸಿಬಿ ಮಹಾರಾಷ್ಟ್ರದ ಹಲವಾರು ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಮುಂಬೈನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದ ಮತ್ತು ಬಾಲಿವುಡ್ನೊಳಗೆ ಇದ್ದ ಹಲವು ಮಾದಕ ವಸ್ತು ಜಾಲವನ್ನು ಭೇದಿಸಿದ್ದಾಗಿ ಸಂಸ್ಥೆ ಹೇಳಿಕೊಂಡಿದೆ.
ನಟಿ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ರಕುಲ್ ಪ್ರೀತ್, ಶ್ರದ್ಧಾ ಕಪೂರ್, ಅರ್ಜುನ್ ರಾಂಪಾಲ್ ಮುಂತಾದವರ ಹೇಳಿಕೆಗಳನ್ನು ಎನ್ಸಿಬಿ ದಾಖಲಿಸಿದೆ.
ಇದನ್ನೂ ಓದಿ: ಸುಶಾಂತ್ ಪ್ರಕರಣ: ರಿಪಬ್ಲಿಕ್ ಟಿವಿಯನ್ನು ತರಾಟೆಗೆ ತೆಗೆದುಕೊಂಡ ಬಾಂಬೆ ಹೈಕೋರ್ಟ್!
ಈ ಪ್ರಕರಣದಲ್ಲಿ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರ ಅಳಿಯ ಸಮೀರ್ ಖಾನ್ರನ್ನು ಜನವರಿಯಲ್ಲಿ ಬಂಧಿಸಲಾಗಿತ್ತು. ಫೆಬ್ರವರಿಯಲ್ಲಿ, ಸುಶಾಂತ್ ಸಿಂಗ್ ರಜಪೂತ್ ಅವರ ಸ್ನೇಹಿತರಾಗಿದ್ದ ಚಲನಚಿತ್ರ ನಿರ್ದೇಶಕ ರಿಷಿಕೇಶ್ ಪವಾರ್ ಅವರನ್ನು ಎನ್ಸಿಬಿ ಬಂಧಿಸಿತ್ತು. ಈ ಹಿಂದೆ ಧರ್ಮ ಪ್ರೊಡಕ್ಷನ್ನ ಡಿಜಿಟಲ್ ಆರ್ಮ್ನೊಂದಿಗೆ ಸಂಬಂಧ ಹೊಂದಿದ್ದ ಕ್ಷಿತಿಜ್ ರವಿ ಪ್ರಸಾದ್ ಕೂಡ ಈ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿದ್ದಾರೆ.
ಡಿಜಿಟಲ್ ಸಾಕ್ಷ್ಯಗಳು, ಕರೆ ದಾಖಲೆಗಳು, ವಾಟ್ಸಾಪ್ ಚಾಟ್ಗಳು, ಸ್ಥಳಗಳ ಟ್ಯಾಗ್ಗಳು, ವಿಡಿಯೋ ಮತ್ತು ಧ್ವನಿ ರೆಕಾರ್ಡಿಂಗ್ಗಳು ಮತ್ತು ಇತರ ಹಲವಾರು ದಾಖಲೆಗಳನ್ನು ಒಳಗೊಂಡ ಸಾಕ್ಷ್ಯಗಳನ್ನು ದೋಷಾರೋಪಣೆ ಮಾಡಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಸದ್ಯ ಏಜೆನ್ಸಿಯು ಈ ಎಲ್ಲಾ ಹೇಳಿಕೆಗಳು ಮತ್ತು ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಅದನ್ನು ಪರಿಶೀಲಿಸಿದ ನಂತರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಲಾಗುತ್ತದೆ.
ಇದನ್ನೂ ಓದಿ: ಸುಶಾಂತ್ ಸಿಂಗ್ ಕುರಿತು ವರದಿ: ರಿಪಬ್ಲಿಕ್ ಮತ್ತು ಟೈಮ್ಸ್ ನೌಗೆ ಛೀಮಾರಿ ಹಾಕಿದ ಬಾಂಬೆ ಹೈಕೋರ್ಟ್