ಉತ್ತರ ಪ್ರದೇಶದಲ್ಲಿ ಕೊರೊನಾ ಸಾವುಗಳ ಸಂಖ್ಯೆಯಲ್ಲಿ ಸರ್ಕಾರ ತಪ್ಪು ಮಾಹಿತಿ ನೀಡುತ್ತಿದೆ ಎಂಬ ವಿಚಾರ ಸಾಕಷ್ಟು ಚರ್ಚೆಗೆ ಈಡು ಮಾಡಿದೆ. ಇವುಗಳ ಮಧ್ಯೆಯೇ ಮೃತದೇಹಗಳಿಗೆ ಕನಿಷ್ಠ ಗೌರವ ಕೂಡ ದೊರಕುತ್ತಿಲ್ಲ ಎಂಬುದು ಹಲವು ವಿಡಿಯೊ ದೃಶ್ಯಗಳು ಸ್ಪಷ್ಟಪಡಿಸುತ್ತಿವೆ.
ಕಳೆದ ಎರಡು ದಿನಗಳ ಹಿಂದಷ್ಟೇ ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ದೇಹವನ್ನು ಇಬ್ಬರು ಯುವಕರು ನದಿಗೆ ಎಸೆಯುತ್ತಿರುವ ವಿಡಿಯೋ ಒಂದು ಮೇ 30 ರ ಮಧ್ಯಾಹ್ನದ ಹೊತ್ತಿಗೆ ಇಂಟರ್ನೆಟ್ ನಲ್ಲಿ ಹರಿದಾಡಲು ಆರಂಭವಾಗಿತ್ತು. ಈಗ ಮೃತದೇಹವನ್ನು ಕನಿಷ್ಠ ಗೌರವ ನೀಡದೇ ಕಸದ ವಾಹನಕ್ಕೆ ಎಸೆಯುತ್ತಿರುವ ವಿಡಿಯೊ ವೈರಲ್ ಆಗಿದೆ.
ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ವಿಡಿಯೊ ದೃಶ್ಯ ಇದಾಗಿದೆ. ಇದರಲ್ಲಿ ಇಬ್ಬರು ಸ್ಥಳೀಯ ಪೊಲೀಸ್ ಘಟಕದ ಸದಸ್ಯರು, 50 ವರ್ಷದ ವ್ಯಕ್ತಿಯ ಮೃತದೇಹದ ಅಂತ್ಯಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ರವಾನಿಸಬೇಕಾದರೆ, ಶವವನ್ನು ಕಸದ ಟ್ರಕ್ಗೆ ಎಸೆಯುತ್ತಿರುವ ದೃಶ್ಯಗಳಿವೆ.
ಲಕ್ನೋದಿಂದ 250 ಕಿ.ಮೀ ದೂರದಲ್ಲಿರುವ ಮಹೋಬಾದ ಜಿಲ್ಲಾ ಆಸ್ಪತ್ರೆಯಲ್ಲಿ ಶನಿವಾರ ಈ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಘಟನೆ ಕುರಿತು ಆಕ್ರೋಶ ವ್ಯಕ್ತವಾದ ನಂತರ, ತನಿಖೆಗೆ ಆದೇಶಿಸಲಾಗಿದೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಕೋವಿಡ್ ಮೃತದೇಹಗಳನ್ನು ನದಿಗೆ ಎಸೆಯುತ್ತಿರುವ ಯುವಕರು: ಅಮಾನವೀಯ ಘಟನೆ ವೈರಲ್
महोबा पुलिस एक किसान के शव को कूड़ा गाड़ी में डाल के ले गयी।
वीडियो में देखिए पहले उसके शव को उछाल कर कूड़ा गाड़ी में फेंक रहे थे..फिर किसी ने रोका।इलाके के सीओ को जांच दी गयी है। pic.twitter.com/VoSyZVE269— Kamal khan (@kamalkhan_NDTV) May 30, 2021
ಮಹೋಬಾದ ಹಿರಿಯ ಪೊಲೀಸ್ ಅಧಿಕಾರಿ ಆರ್.ಕೆ.ಗೌತಮ್ ತನಿಖೆಗೆ ಆದೇಶಿಸಿದ್ದು, 24 ಗಂಟೆಗಳ ಒಳಗೆ ಪ್ರಕರಣದ ತನಿಖೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗೆ ಸೂಚನೆ ನೀಡಿದ್ದಾರೆ.
ಆಸ್ಪತ್ರೆಯ ಶವಾಗಾರದ ಬಳಿ ಪೊಲೀಸರು ಆ ವ್ಯಕ್ತಿಯ ದೇಹವನ್ನು ಕಪ್ಪು ಬಣ್ಣದ ಕವರ್ನಲ್ಲಿ ಸುತ್ತಿದ್ದ ಮೃತದೇಹವನ್ನು, ಹಿರಿಯ ಪೋಲೀಸ್ ಅಧಿಕಾರಿಯ ಮೇಲ್ವಿಚಾರಣೆಯಲ್ಲಿ ಕಸದ ವಾಹನಕ್ಕೆ ಎಸೆಯುತ್ತಾರೆ. ಈ ದೃಶ್ಯಗಳನ್ನು ಮೊಬೈಲ್ ಫೋನ್ನಲ್ಲಿ ಚಿತ್ರಿಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ.
ಮೃತ 50 ವರ್ಷದ ವ್ಯಕ್ತಿ ದೆಹಲಿಯಲ್ಲಿ ಕಾರ್ಮಿಕನಾಗಿದ್ದು, ಕೆಲವು ದಿನಗಳ ಹಿಂದೆ ತನ್ನ ಗ್ರಾಮಕ್ಕೆ ಮರಳಿದ್ದರು. ’ಹಲವು ರೋಗಲಕ್ಷಣಗಳಿದ್ದ ಅವರನ್ನು ಆಸ್ಪತ್ರೆಗೂ ಸೇರಿಸಲು ಕರೆ ತಂದಿದ್ದರು. ಆದರೆ, ಚಿಕಿತ್ಸೆ ಪಡೆಯುವ ಮೊದಲೇ ಅವರು ನಿಧನರಾದರು’ ಎಂದು ಆ ಮೃತರ ಮಗ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇತ್ತ, ಸ್ಥಳೀಯ ಆಡಳಿತದ ಮೂಲಗಳು ಮೃತ ವ್ಯಕ್ತಿಯ ಕುಟುಂಬವನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಿವೆ. ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ತೆಗೆದುಕೊಳ್ಳಲು ಕುಟುಂಬ ನಿರಾಕರಿಸಿತ್ತು. ನಂತರ ಮೃತನ ಮಗನೇ ಕಸದ ವಾಹನಕ್ಕೆ ಮೃತದೇಹವನ್ನು ಸಾಗಿಸಲು ವ್ಯವಸ್ಥೆ ಮಾಡಿದ್ದಾನೆ ತಿಳಿಸಿವೆ.
ಮೇ ತಿಂಗಳ ಮಧ್ಯದಲ್ಲಿ ಉತ್ತರ ಪ್ರದೇಶದ ಗಂಗಾ ಸೇರಿದಂತೆ ಇತರ ನದಿಗಳಲ್ಲಿ ಮೃತ ದೇಹಗಳು ತೇಲಿ ಬರುತ್ತಿರುವ ಘಟನೆಗಳು ನಡೆಯುತ್ತಿವೆ. ಮೃತದೇಹಗಳಿಗೆ ಸರಿಯಾದ ಗೌರವ ಕೂಡ ದೊರಕುತ್ತಿಲ್ಲ. ಆದರೆ, ಸರ್ಕಾರ ಮಾತ್ರ ರಾಜ್ಯದಲ್ಲಿಯ ಕೊರೊನಾ ಪ್ರಕರಣ ಮತ್ತು ಸಾವುಗಳ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಹಲವು ವರದಿಗಳು ತಿಳಿಸಿವೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಕೊರೊನಾಗೆ ಬಲಿಯಾಗುತ್ತಿರುವವರ ನಿಜವಾದ ಪ್ರಮಾಣವೆಷ್ಟು? ಭಾರತವನ್ನೇ ಬೆಚ್ಚಿ ಬೀಳಿಸುವಂತಿದೆ ಈ ವರದಿ