ಮಹಾರಾಷ್ಟ್ರದಲ್ಲಿ ಮುಂದಿನ 25 ವರ್ಷಗಳವರೆಗೆ ಶಿವಸೇನೆ ನೇತೃತ್ವದ ಸರ್ಕಾರ ಆಡಳಿತ ನಡೆಸಲಿದೆ ಎಂದು ಪಕ್ಷದ ವಕ್ತಾರ ಸಂಜಯ್ ರಾವತ್ ವಿಶ್ವಾಸ ವ್ಯಕ್ತಪಡಿಸಿದರು.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹಾಗೂ ಎನ್ಸಿಪಿ ಜತೆಗೆ ಮೈತ್ರಿಗೆ ಮನವಿ ಮಾಡಿರುವ ಶಿವಸೇನೆ ಸ್ಥಿರ ಸರ್ಕಾರ ರಚನೆಗೆ ಕಸರತ್ತು ನಡೆಸಿದೆ. ಈ ಮಧ್ಯೆ ಮೂರು ಪಕ್ಷಗಳ ನಿರ್ಧಾರ ಅಂತಿಮ ಹಂತದಲ್ಲಿದ್ದು, ಮಹಾರಾಷ್ಟ್ರದಲ್ಲಿ ಮುಂದಿನ ದಿನಗಳಲ್ಲಿ ಶಿವಸೇನೆಯ ಆಡಳಿತ ನಡೆಯಲಿದೆ. ರಾಜ್ಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಉದ್ಧವ್ ಠಾಕ್ರೆ ತಿಳಿಸಿರುವುದಾಗಿ, ಸಂಜಯ್ ರಾವತ್ ಹೇಳಿದರು.
ರಾಜ್ಯದ ಹಿತದೃಷ್ಟಿಯನ್ನು ಮುಂದಿಟ್ಟುಕೊಂಡು ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ರೂಪಿಸಲಾಗಿದ್ದು, ಈ ಬಗ್ಗೆ ಕಾಂಗ್ರೆಸ್ ಮತ್ತು ಎನ್ಸಿಪಿಯೊಂದಿಗೆ ಮಾತುಕತೆ ನಡೆಯುತ್ತಿದೆ. ಇದು ಏಕ ಪಕ್ಷದ ಸರ್ಕಾರವೇ ಆಗಿರಲಿ ಅಥವಾ ಮೈತ್ರಿ ಮಾಡಿಕೊಳ್ಳಲಿ, ಇದರಲ್ಲಿ ಆಡಳಿತದ ಕಾರ್ಯಸೂಚಿಯ ಅವಶ್ಯಕತೆಯಿದೆ. ರಾಜ್ಯದ ಜನತೆಗೆ ಮೂಲ ಸೌಕರ್ಯ, ಬರ ನಿರ್ವಹಣೆ ಮತ್ತು ಅತಿವೃಷ್ಟಿಯಿಂದ ಆದ ಹಾನಿ, ತೊಂದರೆ ನಿಭಾಯಿಸಬೇಕಿದೆ. ನಮ್ಮೊಂದಿಗೆ ಬರುವವರು ಅನುಭವ ಉಳ್ಳವರು. ಅವರ ಅನುಭವದ ಪ್ರಯೋಜನವನ್ನು ನಾವು ಪಡೆಯಲಿದ್ದೇವೆ ಎಂದು ವಿಶ್ವಾಸದ ಮಾತುಗಳನ್ನಾಡಿದರು.
ಇದನ್ನೂ ಓದಿ: `ಮಹಾ’ ಸರ್ಕಾರ ರಚನೆ ಸರ್ಕಸ್: ಸಿಎಂ ಹುದ್ದೆ ಶಿವಸೇನೆಗೆ ಎಂದ ಎನ್ಸಿಪಿ..!
ಇಲ್ಲಿಯವರೆಗೆ ಸೇನಾದ ರಾಜಕೀಯ ಪ್ರತಿಸ್ಪರ್ಧಿ ಆಗಿದ್ದ ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಳ್ಳುವ ಪ್ರಸ್ತಾವ ಮುಂದಿರಿಸಿದ್ದೇವೆ. ದೇಶದ ಅತ್ಯಂತ ಹಳೆಯ ಪಕ್ಷದ ನಾಯಕರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಮಹಾರಾಷ್ಟ್ರದ ಅಭಿವೃದ್ಧಿಗೆ ಸಹಕರಿಸಿದ್ದಾರೆ ಎಂದು ಹೇಳಿದರು.
ಸಿಎಂ ಹುದ್ದೆಯನ್ನು ಕಾಂಗ್ರೆಸ್ ಮತ್ತು ಎನ್ಸಿಪಿ ಜತೆಗೆ ಹಂಚಿಕೊಳ್ಳುತ್ತೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾವತ್, ’ಮುಂದಿನ 25 ವರ್ಷಗಳವರೆಗೆ ನಾವು ಮುಖ್ಯಮಂತ್ರಿ ಹುದ್ದೆ ಹೊಂದಲು ಬಯಸುತ್ತೇವೆ. ಶಿವಸೇನೆ ರಾಜ್ಯಕ್ಕೆ ನಾಯಕತ್ವವನ್ನು ಒದಗಿಸಲಿದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮಹಾರಾಷ್ಟ್ರದ ಜತೆಗೆ ತಮ್ಮ ಪಕ್ಷದ ಸಂಬಂಧ ಶಾಶ್ವತ. ಇದು ತಾತ್ಕಾಲಿಕವಲ್ಲ. 50 ವರ್ಷಗಳವರೆಗೆ ರಾಜ್ಯ ರಾಜಕೀಯದಲ್ಲಿ ಸಕ್ರಿಯವಾಗಿದೆ. ಶಿವಸೇನೆ ಪಕ್ಷವನ್ನು 1966 ರಲ್ಲಿ ಬಾಳಾ ಠಾಕ್ರೆ ಸ್ಥಾಪಿಸಿದ್ದರು ಎಂದು ರಾವತ್ ಹೇಳಿದರು.
ಇನ್ನು ಕಾಂಗ್ರೆಸ್-ಎನ್ಸಿಪಿ ಜತೆಗಿನ ಒಪ್ಪಂದದ ನಂತರ ವೀರ್ ಸಾವರ್ಕರ್ಗೆ ಭಾರತ ರತ್ನ ಕೊಡುವುದನ್ನು ವಿರೋಧಿಸುವುದು, ಮುಸ್ಲಿಂರಿಗೆ ಮೀಸಲಾತಿ ಒದಗಿಸಲು ನೀವು ಒಪ್ಪಿಕೊಳ್ಳುತ್ತೀರಾ ಎಂದು ಕೇಳಿ ಬಂದ ಪ್ರಶ್ನೆಗೆ ರಾವತ್ ನೇರವಾಗಿ ಉತ್ತರಿಸಲಿಲ್ಲ. ಈ ಪ್ರಶ್ನೆಯ ಮೂಲ ಮಾಹಿತಿ ಎಲ್ಲಿಯದು ಎಂದು ತಮಗೆ ತಿಳಿದಿದೆ ಎಂದು ಹಾರಿಕೆಯ ಉತ್ತರ ನೀಡಿದರು.
ಇದನ್ನೂ ಓದಿ: ಗಾಂಧಿ ಸಾವು ಆಕಸ್ಮಿಕ ಎನ್ನುತ್ತಿವೆ ಒಡಿಶಾದ ಪುಸ್ತಕಗಳು: ಹಲವರಿಂದ ತೀವ್ರ ಖಂಡನೆ
ಕಾಂಗ್ರೆಸ್, ಎನ್ಸಿಪಿ ಮತ್ತು ಶಿವಸೇನೆ ನಡುವೆ ಅಧಿಕಾರ ಹಂಚಿಕೆಯಲ್ಲಿ ಕಾಂಗ್ರೆಸ್ ಸೂತ್ರಗಳೇ ಹೆಚ್ಚಿವೆ ಎಂಬ ಪ್ರಶ್ನೆಗೆ ಸೇನಾ ಪತ್ರಿಕೆ ಸಾಮ್ನಾದ ಪ್ರಮುಖ ಉತ್ತರಿಸಿ, ನೀವು ಇದಕ್ಕೆಲ್ಲಾ ಆಲೋಚನೆ ಮಾಡಬೇಕಾಗಿಲ್ಲ. ಯಾಕೆಂದರೆ ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ನಿರ್ಧಾರ ತೆಗೆದುಕೊಳ್ಳುವಲ್ಲಿ ನಿಸ್ಸೀಮರು ಎಂದು ಹೇಳಿದರು.
ಇನ್ನು ಹಿಂದುತ್ವ ರಾಜಕೀಯ, ಕಾಂಗ್ರೆಸ್ ವಿರೋಧಿ ಅಜೆಂಡಾ ಹಾಗೂ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಬಗ್ಗೆ ಕೇಳಿದ ಪ್ರಶ್ನೆಗೆ, ಯಾವುದು ಸಿದ್ಧಾಂತ..? ನಾವು ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಮೂಲಕ ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡುತ್ತೇವೆ ಎಂದು ಹೇಳಿದರು.