Homeಅಂಕಣಗಳುಪುಸ್ತಕ ಪರಿಚಯ; ಎಡಿತ್ ನೆಸ್ಬೂತರ ಕಾದಂಬರಿ: ‘ರೈಲ್ವೆಮಕ್ಕಳು’

ಪುಸ್ತಕ ಪರಿಚಯ; ಎಡಿತ್ ನೆಸ್ಬೂತರ ಕಾದಂಬರಿ: ‘ರೈಲ್ವೆಮಕ್ಕಳು’

- Advertisement -
- Advertisement -

ಕನ್ನಡದ ಮಕ್ಕಳ ಸಾಹಿತ್ಯ ಹೆಚ್ಚಾಗಿ ಪದ್ಯಕೇಂದ್ರಿತ. ಕಾದಂಬರಿ ಬರೆವ ಕಸುವಿದ್ದವರು ಮಕ್ಕಳಿಗಾಗಿ ಬರೆಯುವುದು ಕಡಿಮೆ. ದೊಡ್ಡ ಕಥನವೊಂದನ್ನು ಕಲ್ಪಿಸಿಕೊಳ್ಳಲು ಅಶಕ್ತರಾಗಿರುವವರು, ಮಕ್ಕಳ ಕಥನಗಳನ್ನು ಸರಳೀಕರಿಸಿ ಯಾಂತ್ರಿಕವಾಗಿ ಬರೆಯುವುದು ಹೆಚ್ಚು. ಈ ಹಿನ್ನೆಲೆಯಲ್ಲಿ ಶತಮಾನದ ಹಿಂದಿನ ಮಕ್ಕಳ ಕೃತಿಯೊಂದು ಕನ್ನಡಕ್ಕೆ ಬಂದಿದೆ. ಅದು ಬ್ರಿಟಿಷ್ ಲೇಖಕಿ ಎಡಿತ್ ನೆಸ್ಬೂತ್ ಅವರ ‘ದ ರೈಲ್ವೆ ಚಿಲ್ದ್ರನ್’ (1906). 19ನೇ ಶತಮಾನದಲ್ಲಿ ಸಮಾಜವಾದಿ ಚಳವಳಿಯಲ್ಲಿ ತೊಡಗಿಕೊಂಡಿದ್ದ ರಾಜಕೀಯ ಕಾರ್ಯಕರ್ತೆಯೂ ಆಗಿದ್ದ ಎಡಿತರ ಈ ಕಾದಂಬರಿ ಬಹಳ ಜನಪ್ರಿಯ. ಇದು ಸಿನಿಮಾ ಕೂಡ ಆಯಿತು. ಇದನ್ನು ವೃತ್ತಿಯಿಂದ ವೈದ್ಯರಾದ ಬಳ್ಳಾರಿ ಡಾ. ಅರವಿಂದ ಪಟೇಲರು ಕನ್ನಡಕ್ಕೆ ತಂದಿದ್ದಾರೆ.

ಎಡಿತ್ ನೆಸ್ಬೂತ್

ಮೂರು ಮಕ್ಕಳು ಮುಖ್ಯ ಪಾತ್ರಗಳಲ್ಲಿ ನಿರೂಪಣೆಗೊಂಡಿರುವ ಈ ಕಾದಂಬರಿ, ಮಕ್ಕಳ ದೃಷ್ಟಿಯಿಂದ ರೋಚಕವೂ ರಾಜಕೀಯ ದೃಷ್ಟಿಯಿಂದ ಐತಿಹಾಸಿಕವೂ ಆದ ಆಯಾಮವುಳ್ಳದ್ದು. ಮೂರು ಮಕ್ಕಳು ನಾಟಕೀಯವಾದ ಸನ್ನಿವೇಶದಿಂದ ರೈಲಿಗೆ ತೆರೆದುಕೊಳ್ಳುವ ಮೂಲಕ ಕಥೆ ಶುರುವಾಗುತ್ತದೆ. ಈ ಮಕ್ಕಳ ತಂದೆಯನ್ನು ಶತ್ರುದೇಶಕ್ಕೆ ಗುಪ್ತಮಾಹಿತಿ ಒದಗಿಸುತ್ತಿದ್ದಾನೆಂದು ಆಪಾದಿಸಿ ಸರ್ಕಾರ, ಸೆರೆಮನೆಗೆ ಹಾಕಿದೆ. ಇದನ್ನು ಮಕ್ಕಳಿಗೆ ತಿಳಿಯದಂತೆ ಗುಟ್ಟಾಗಿಟ್ಟು, ಗಂಡ ಬರುವತನಕ ಕುಟುಂಬ ಸಂಭಾಳಿಸುವ ಹೊಣೆ, ಮಕ್ಕಳ ತಾಯ ಮೇಲೆ ಬೀಳುತ್ತದೆ. ಸನ್ನಿವೇಶ ಪಲ್ಲಟದಿಂದ ಬಡತನಕ್ಕಿಳಿದ ಕುಟುಂಬವು, ಲಂಡನ್ ತೊರೆದು ಹಳ್ಳಿಯೊಂದರಲ್ಲಿ ಬಿಡಾರ ಹೂಡುತ್ತದೆ. ಅದು ಹೊಲ ಕಾಡು ಹೊಳೆಗಳಿಂದ ಕೂಡಿದ ತಾಣ. ಈ ಹೊಸತಾಣದಲ್ಲಿ ಮಕ್ಕಳು ತಮ್ಮ ಸುತ್ತ ತೆರೆದುಬಿದ್ದಿರುವ ನಿಸರ್ಗ ಮತ್ತು ಮನುಷ್ಯ ಪರಿಸರಕ್ಕೆ ಮೆಲ್ಲಗೆ ಬಿಚ್ಚಿಕೊಳ್ಳುತ್ತವೆ. ಮನೆಯ ಬಳಿ ಹಾದುಹೋಗಿರುವ ರೈಲುಹಳಿ, ಓಡಾಡುವ ಬಂಡಿ ಮತ್ತು ರೈಲ್ವೆ ನಿಲ್ದಾಣ ಅವರನ್ನು ಸೆಳೆಯುತ್ತದೆ. ಸ್ಟೇಶನ್‌ಮಾಸ್ತರ್, ಸಿಗ್ನಲ್‌ಮನ್, ಪೋರ್ಟರು ಗೆಳೆಯರಾಗುತ್ತಾರೆ. ಈ ಹೊಸ ಪರಿಸರದಲ್ಲಿ ಮಕ್ಕಳು ಮಾಡುವ ಸಾಹಸ, ಪ್ರಕಟಿಸುವ ಜೀವಂತಿಕೆಗಳನ್ನು ಕಾದಂಬರಿ ಕಾಣಿಸುತ್ತ ಹೋಗುತ್ತದೆ. ಕೊನೆಗೊಂದು ದಿನ ಮಕ್ಕಳ ಅಪ್ಪ ನಿರ್ದೋಷಿಯೆಂದು ಸಾಬೀತಾಗಿ, ಸೆರೆಮನೆಯಿಂದ ಬಿಡುಗಡೆಗೊಂಡು ರೈಲಿನಿಂದ ಇಳಿವ ಮೂಲಕ ಕಾದಂಬರಿ ಮುಗಿಯುತ್ತದೆ.

ಕಾದಂಬರಿಯಲ್ಲಿ ರೈಲುಬಂಡಿಯು ಮಕ್ಕಳ ವಿಸ್ಮಯಕ್ಕೆ ಮಾತ್ರ ಇಂಬಾಗುವುದಿಲ್ಲ. ಅವರಲ್ಲಿ ನೋವಿಗೆ ಮಿಡಿವ ಮನುಷ್ಯತ್ವವನ್ನು ಉದ್ದೀಪಿಸುವ ಸಂಗಾತಿಯಾಗುತ್ತದೆ. ಬೆಟ್ಟ ನದಿ ಕಾಡು ಕಡಲು, ಅವರಲ್ಲಿ ಹುದುಗಿರುವ ಕ್ರಿಯಾಶೀಲತೆಯನ್ನು ಹೊಮ್ಮಿಸುತ್ತವೆ. ಗೋಪಾಲಕೃಷ್ಣ ಅಡಿಗರು ಅನುವಾದಿಸಿದ ಬನದ ಮಕ್ಕಳು ಕಾದಂಬರಿಯಲ್ಲಿ ಮಕ್ಕಳ ಸೃಜನಶೀಲತೆಯನ್ನು ಹೊಮ್ಮಿಸುತ್ತಿರುವುದು ಕಾಡಾದರೆ, ಇಲ್ಲಿ ಆಧುನಿಕ ಯಂತ್ರಜಗತ್ತಿಗೆ ಸಂಬಂಧಿಸಿದ ರೈಲುಗಾಡಿ ಅದಕ್ಕೆ ಅನುವಾಗುತ್ತದೆ. ಕೈಗಾರಿಕೀಕರಣಗೊಂಡ ದೇಶದ ಸಹಜ ಅಭಿವ್ಯಕ್ತಿಯಂತೆ ಈ ವಸ್ತುವಿದೆ. ವಿಶೇಷವೆಂದರೆ ಇಲ್ಲಿನ ರೈಲುಗಾಡಿ ಕೇವಲ ತಂತ್ರಜ್ಞಾನದ ಉತ್ಪನ್ನವಲ್ಲ. ಪರಿಸರದಲ್ಲಿರುವ ಹೊಳೆ ಕಣಿವೆ ಕಾಡು ಮನುಷ್ಯರ ಜತೆ ಬೆರೆತು ತಾನೂ ಒಂದು ಪಾತ್ರ. ಈ ಹಿನ್ನೆಲೆಯಲ್ಲಿ ‘ರೈಲ್ವೆಮಕ್ಕಳು’ ಎಂಬ ಕಾದಂಬರಿ ಶೀರ್ಷಿಕೆ ಅರ್ಥಪೂರ್ಣ. ತಂದೆಯಿಂದ ದೂರವಾಗಿರುವ ಮಕ್ಕಳ ಅನಾಥಪ್ರಜ್ಞೆಯನ್ನು ರೈಲು ನೀಗಿಸುತ್ತದೆ. ಈ ಕಾದಂಬರಿ ಇರಾನಿನ ಮಜೀದ್ ಮಜೀದಿಯವರು ಮಾಡಿರುವ ಮಕ್ಕಳ ಮೇಲಿನ ಸಿನಿಮಾಗಳನ್ನು ನೆನಪಿಸುತ್ತದೆ. ದೈವಿಕವಾದ ಚೆಲುವು ಮುಗ್ಧತೆ ಕರುಣೆ ಪ್ರೀತಿ ನೆಲದ ಮೇಲಿದ್ದರೆ ಅದು ಮಕ್ಕಳಲ್ಲಿದೆ ಎಂದು ಕಾಣಿಸುವ ಸಿನಿಮಾಗಳವು; ‘ನಿಮ್ಮ ಮಕ್ಕಳು ನಿಮ್ಮವು ಮಾತ್ರವಲ್ಲ, ಅವು ಜಗತ್ತಿಗೆ ಸೇರಿದವು’ ಎಂಬ ದಾರ್ಶನಿಕ ಲೇಖಕ ಖಲೀಲ್ ಗಿಬ್ರಾನನ ಹೇಳಿಕೆಗೆ ವ್ಯಾಖ್ಯೆ ಬರೆದಂತೆ ಅವಿವೆ. ಇಂಗ್ಲೆಂಡಿನಲ್ಲಿ ರೈಲ್ವೆಚಿಲ್ದ್ರನ್ ಸಿನಿಮಾ ಕೂಡ ಆಯಿತು.

ಕಾದಂಬರಿಯಲ್ಲಿ ಮಕ್ಕಳನ್ನು ಬಿಟ್ಟರೆ ಮುಖ್ಯ ಪಾತ್ರ ಮಕ್ಕಳ ತಾಯಿಯದು. ಈಕೆಯೊಬ್ಬ ಕರುಣೆ ಪ್ರೀತಿ ತುಂಬಿದ ಮಹಿಳೆ; ಕಂಡವರ ಮಕ್ಕಳನ್ನೂ ತನ್ನವರೆಂದು ವಾತ್ಸಲ್ಯ ತೋರಬಲ್ಲ ಉದಾರೆ; ಕತೆ ಕವಿತೆ ಬರೆದು, ಸಂಭಾವನೆಯಿಂದ ಮನೆ ಸಂಭಾಳಿಸುವ ದಿಟ್ಟೆ. ಮಕ್ಕಳ ವ್ಯಕ್ತಿತ್ವದ ಹಿಂದೆ ಇವಳ ಪ್ರಭಾವವಿದೆ. ಮಕ್ಕಳನ್ನು ಸಮಾಜಜೀವಿಗಳಾಗಿ ಬೆಳೆಸುವುದಕ್ಕೆ ಬೇಕಾದ ಜೀವನ ಮೌಲ್ಯಗಳನ್ನು ಈಕೆ ತುಂಬುತ್ತಾಳೆ. ಬವಣೆ ಕಡಿದುಕೊಂಡು ಮೈಮೇಲೆ ಬಿದ್ದಾಗ ಎದೆಗುಂದದೆ ಬದುಕಿನ ಬಂಡಿ ಎಳೆವ ಆಕೆಯ ಸಹನೆ ವಿವೇಕ ಅಪೂರ್ವ. ಗಾರ್ಕಿಯ ’ಮದರ್’ ತರಹ ಕೃತಿಯಾದ್ಯಂತ ಜೀವಶಕ್ತಿಯಾಗಿ ಹರಡಿಕೊಳ್ಳುವಳು ಈಕೆ.

ಕಾದಂಬರಿಯ ಇಷ್ಟವಾಗುವ ಮತ್ತೊಂದು ಪಾತ್ರ ರೈಲ್ವೆ ಪೋರ್ಟರನದು. ಅವನೊಬ್ಬ ಬಡವ. ಸ್ವಾಭಿಮಾನಿ. ತನಗೆ ನೆರವಾಗುವ ನೆಪದಲ್ಲಿ ಉಳ್ಳವರು ಸಹಾನುಭೂತಿಯನ್ನು ತೋರಿಸಿ ಆತ್ಮಗೌರವಕ್ಕೆ ಧಕ್ಕೆ ತರುವ ಬಗ್ಗೆ ಎಚ್ಚರವುಳ್ಳವನು. ಮಕ್ಕಳಾದರೂ ಅವನ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಪ್ರೀತಿ ತೋರುವರು. ಕರುಣೆ-ದಾನಗಳನ್ನು ಧಾರ್ಮಿಕ ಮೌಲ್ಯವಾಗಿಸಿಕೊಂಡ ಸಮಾಜಗಳಲ್ಲಿ, ಅವು ಉಳ್ಳವರ ಹೆಚ್ಚುಗಾರಿಕೆಯ ಪ್ರದರ್ಶನಗಳೂ ಆಗುತ್ತವೆ. ಅವಕ್ಕೆ ಬಡವರ ಕಷ್ಟ ಗೊತ್ತಾಗಬಹುದು. ಸ್ವಾಭಿಮಾನ ಅರ್ಥವಾಗುವುದಿಲ್ಲ. ಇಂತಹ ಸಮಾಜಗಳಲ್ಲಿ ಬಡವರ ದೈನ್ಯಕ್ಕಿಳಿದುಬಿಡುವರು. ಆದರೆ ಖಾಸಗಿತನವನ್ನು ಮೌಲ್ಯವಾಗಿಸಿಕೊಂಡು ಬದುಕುವ, ದುಃಖವನ್ನು ಸಾರ್ವಜನಿಕವಾಗಿಯೂ ಭಾವುಕವಾಗಿಯೂ ಪ್ರದರ್ಶಿಸದೆ ಒಳಗೇ ಅನುಭವಿಸುವ ಯೂರೋಪಿಯನ್ ಸಮಾಜದಲ್ಲಿ, ಸುತ್ತಮುತ್ತಲಿನವರ ಕಷ್ಟಸುಖದಲ್ಲಿ ಭಾಗಿಯಾಗದಿದ್ದರೆ ನಮ್ಮ ಬದುಕಿಗೆ ಅರ್ಥವಿಲ್ಲ ಎಂಬ ಆಶಯವನ್ನು ಕಾದಂಬರಿ ಹೊಮ್ಮಿಸುವುದು ಮಹತ್ವದ ಸಂಗತಿ.

ಕಾದಂಬರಿ ಇಂಗ್ಲೆಂಡಿನ ಹಳ್ಳಿಬಾಳಿನ ಸೂಕ್ಷ್ಮ ವಿವರಗಳ ಸಮೇತವಾದ ಜೀವಂತ ಚಿತ್ರವನ್ನು ಕಟ್ಟಿಕೊಡುತ್ತದೆ. ಕಥೆಯಲ್ಲಿ ಪತ್ತೇದಾರಿ ಗುಣವಿದ್ದು, ಕುತೂಹಲ ಹುಟ್ಟಿಸಿಕೊಂಡು ಹೋಗುತ್ತದೆ. ಬಹುಮಟ್ಟಿಗೆ ಕಥೆಯನ್ನು ಮಕ್ಕಳ ದೊಡ್ಡವರ ಸಂಭಾಷಣೆಯ ಮೂಲಕ ಕಟ್ಟಿರುವುದರಿಂದ ಓದಲು ಸರಾಗವಾಗಿದೆ. ಇಂಗ್ಲೆಂಡಿನ ಮಕ್ಕಳ ವರ್ತನೆ ಜಗಳ ಆಲೋಚನೆ ಪ್ರೀತಿಗಳನ್ನು ಕಾಣುವಾಗ, ನಮ್ಮ ಕುಟುಂಬಗಳಲ್ಲೂ ಹೀಗೆ ಅಲ್ಲವೇ ಎಂಬ ಆಪ್ತಭಾವ ಬರುತ್ತದೆ. ದೇಶ ಭಾಷೆ ಸಂಸ್ಕೃತಿಗಳು ಬೇರೆ; ಆದರೆ ಮಾನವ ಸ್ವಭಾವಗಳು ಬಹುತೇಕ ಒಂದೇ. ಕಾದಂಬರಿ, ಕೇವಲ ಮಕ್ಕಳ ಲೋಕದ ರೊಮ್ಯಾಂಟಿಕ್ ಜಗತ್ತನ್ನು ಒಳಗೊಂಡಿಲ್ಲ. ದುಷ್ಟ ಪ್ರಭುತ್ವದ ವಿರುದ್ಧ ನಾಗರಿಕ ಸಮಾಜದಲ್ಲಿರುವ ಪ್ರಜ್ಞಾವಂತರು ಪ್ರತಿರೋಧ ಮಾಡಿದಾಗ, ಅವರಿಗೆ ಅದು ಕೊಡುವ ಕಿರುಕುಳ, ಅವರು ಅದನ್ನು ಹಲ್ಲುಕಚ್ಚಿ ಎದುರಿಸುವ ಘಟನೆಗಳು ಇಲ್ಲಿವೆ. ರಷ್ಯಾ ದೇಶದಲ್ಲಿ ಝಾರ್ ದೊರೆಗಳನ್ನು ಟೀಕಿಸಿ ಬರೆದು ದೇಶಭ್ರಷ್ಟನಾದ ಲೇಖಕನೊಬ್ಬನ ಪಾತ್ರವೂ ಇದೆ. ಹೀಗಾಗಿ ಕಾದಂಬರಿಗೆ ರಾಜಕೀಯ ಆಯಾಮವೂ ಪ್ರಾಪ್ತವಾಗಿದೆ. ಆದರೆ ಈ ಕಾದಂಬರಿ ರಚಿತವಾದ ಕಾಲಕ್ಕೆ ಇಂಗ್ಲೆಂಡು ಜಗತ್ತಿನ ಹಲವಾರು ದೇಶಗಳನ್ನು ಆಕ್ರಮಿಸಿಕೊಂಡಿತ್ತು. ಅಲ್ಲಿ ಪ್ರತಿಭಟನೆ ಮಾಡುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರರನ್ನು ರಾಜದ್ರೋಹದ ಆಪಾದನೆ ಹೊರಿಸಿ ಜೈಲಿಗೆ ಅಟ್ಟುತ್ತಿತ್ತು. ಕೊಲ್ಲುತ್ತಿತ್ತು. ಇಂಗ್ಲಿಷ್ ಲೇಖಕರು ಈ ಬಗ್ಗೆ ಪರಿತಾಪ ಪ್ರಜ್ಞೆಯಿಲ್ಲದೆ ಲೇಖಕರ ಅಭಿವ್ಯಕ್ತಿ ಸ್ವಾತಂತ್ರ್ಯ, ನಾಗರಿಕ ಪ್ರತಿರೋಧ, ಸಮಾಜವಾದದಂತಹ ಮೌಲ್ಯಗಳ ಬಗ್ಗೆ ಬರೆಯುವುದು ಸೋಜಿಗ ಮತ್ತು ವೈರುಧ್ಯವೆನಿಸುತ್ತದೆ. ಇಂತಹುದೇ ವೈರುಧ್ಯ, ಭಾರತದಲ್ಲಿ ಪ್ರಭುತ್ವಗಳು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವಾಗ ನಿರ್ಲಿಪ್ತವಾಗಿದ್ದು, ಬೇರೆ ದೇಶಗಳ ಸರ್ವಾಧಿಕಾರಿ ಸರ್ಕಾರಗಳ ವಿರುದ್ಧ ತಮ್ಮ ಡೆಮಾಕ್ರಟಿಕ್ ಆಕ್ರೋಶ ಹರಿಸುತ್ತಿರುವ ನಮ್ಮ ಕೆಲವು ಲೇಖಕರ ವಿಷಯದಲ್ಲಿಯೂ ಕಾಣುವುದು. ಈ ಕಾರಣದಿಂದಲೂ ‘ರೈಲ್ವೆಮಕ್ಕಳು’ ಕಾದಂಬರಿಯ ಪ್ರಕಟಣೆಯು ಪ್ರಸ್ತುತವೆನಿಸುತ್ತದೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.


ಇದನ್ನೂ ಓದಿ: ’ನಾವೂ ಇತಿಹಾಸ ಕಟ್ಟಿದೆವು- ಅಂಬೇಡ್ಕರ್ ಚಳವಳಿಯಲ್ಲಿ ಮಹಿಳೆಯರು’ ಪುಸ್ತಕದಿಂದ ಆಯ್ದ ಭಾಗ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...