ನಟಿ ಸಂಜನಾ ಗರ್ಲಾನಿ ಅವರು ಖಾಸಗಿ ಸುದ್ದಿ ವಾಹಿನಿ ಸುವರ್ಣ ಚಾನೆಲ್ ಆಂಕರ್ ಅಜಿತ್ ಹನುಮಕ್ಕನವರ್ ಅವರಿಗೆ, ಅವರದೇ ವಾಹಿನಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವಾರು ಜನರು ನಟಿ ಸಂಜನಾ ಗಲ್ರಾನಿ ಅವರ ವಾದ ಸರಣಿಯನ್ನು ಅಭಿನಂದಿಸಿದ್ದಾರೆ.
ಸುವರ್ಣ ಚಾನೆಲ್ ಆಂಕರ್ ಅಜಿತ್ ಹನುಮಕ್ಕನವರ್ ಅವರು, ಕಾರು ಡ್ರೈವರ್ ಅವರೊಂದಿಗೆ ನಟಿ ಸಂಜನಾ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿ ಕಾರ್ಯಕ್ರಮವೊಂದನ್ನು ನಡೆಸಿದ್ದರು. ಈ ಬಗ್ಗೆ ಸ್ಪಷ್ಟನೆಗಾಗಿ ಸಂಜನಾ ಅವರಿಗೆ ಸುವರ್ಣ ವಾಹಿನಿ ಕರೆ ಮಾಡಿತ್ತು. ಅವರ ಕರೆ ಸ್ವೀಕರಿಸುತ್ತಲೆ ಸಂಜನಾ, “ನಿಮ್ಮ ಚಾನೆಲ್ ಅವರು ನನ್ನೊಂದಿಗೆ ಮಾತನಾಡಲು ವಿನಂತಿ ಮಾಡಿದ್ದರು. ಆದರೆ ನಾನು ಮಾತನಾಡುವುದಕ್ಕೆ ಮೊದಲೇ ನನ್ನ ಬಗ್ಗೆ ತೀರ್ಮಾನ ತೆಗೆದುಕೊಂಡು ಬಿಟ್ಟಿದ್ದೀರಾ” ಎಂದು ಕಾರ್ಯಕ್ರಮಕ್ಕೆ ನೀಡಿರುವ ಶೀರ್ಷಿಕೆಯನ್ನು ಉಲ್ಲೇಖಿಸಿ ಹೇಳಿದ್ದರು.
ಇದನ್ನೂ ಓದಿ: ‘ಸತೀಶ್ ಆಚಾರ್ಯ ಅವರೇ, ನೀವು ಆನೆಯಂತೆ ನಡೆಯಿರಿ’: ಬಿಜೆಪಿ ಐಟಿ ಸೆಲ್ ದಾಳಿ ವಿರುದ್ದ ಆಕ್ರೋಶ
ಕಾರ್ಯಕ್ರಮಕ್ಕೆ ‘ಕಿರಿಕ್ ಸಂಜನಾ’ ಎಂದು ಶೀರ್ಷಿಕೆ ನೀಡಲಾಗಿತ್ತು.
ಶೀರ್ಷಿಕೆಯ ಬಗ್ಗೆ ನಟಿ ಪ್ರಶ್ನಿಸಿದ್ದಕ್ಕೆ ಉದ್ದಟತನದಿಂದ ವರ್ತಿಸಿದ ಅಜಿತ್ ಅವರು, ಇನ್ನೇನು ಶೀರ್ಷಿಕೆ ನೀಡಬೇಕಿತ್ತು ಎಂದು ಪ್ರಶ್ನಿಸಿದ್ದಾರೆ. ಆದರೆ ಇದಕ್ಕೆ ಉತ್ತರಿಸಿದ ಸಂಜನಾ ಅವರು ತಮಗೆ ಆಗಿರುವ ಅನ್ಯಾಯದ ಬಗ್ಗೆ ಅಲ್ಲಿ ಹೇಳಿದ್ದಾರೆ. ಆದರೆ ಇಷ್ಟಕ್ಕೆ ಸುಮ್ಮನಾಗದ ಅಜಿತ್, ಸಂಜನಾರನ್ನು ಮಾತನಾಡಲು ಬಿಡದೆ, ಅವರ ಮಾತನ್ನು ತಿರುಚುವ ಪ್ರಯತ್ನ ಮಾಡಿದ್ದಾರೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಂಜನಾ, “ಮೊದಲನೆಯದಾಗಿ, ಮಾತನಾಡಲು ಒಂದು ರೀತಿಯಿರುತ್ತದೆ. ನೀವು ನಿಮ್ಮ ವಾದಕ್ಕೆ ಮಸಾಲೆ ಹಾಕಿಬಿಟ್ಟು ಈಗಾಗಲೆ ಒಂದು ತೀರ್ಮಾನಕ್ಕೆ ಬಂದುಬಿಟ್ಟಿದ್ದೀರಿ. ಇಷ್ಟೆಲ್ಲಾ ಆದ ನಂತರ ನನಗೆ ಯಾಕೆ ಫೋನ್ ಮಾಡಿ ಸ್ಪಷ್ಟನೆ ಕೇಳುತ್ತಿದ್ದೀರಾ?” ಎಂದು ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಉತ್ತರಿಸಿದ ಅಜಿತ್, ಅಲ್ಲಿ ಏನು ನಡೆದಿದೆ ಎಂದು ಗೊತ್ತಾಗಬೇಕಲ್ವಾ ಎಂದು ಹೇಳಿದ್ದಾರೆ.
ನಂತರ ತಮ್ಮ ಮಾತನ್ನು ಮುಂದುವರೆಸಿದ ಸಂಜನಾ, “ಮರ್ಯಾದೆ ಕೊಟ್ಟು ಮಾತನಾಡಲು ಆಗಿಲ್ಲ ಅಂದರೆ ಯಾಕೆ ನನಗೆ ಫೋನ್ ಮಾಡಿ, ಸಮಯ ಕೊಡಿ ಎಂದು ವಿನಂತಿಸುತ್ತೀರಾ?” ಎಂದು ಕೇಳಿದ್ದಾರೆ. ಇದಕ್ಕೆ ಅಜಿತ್, “ನಾವು ನಿಮ್ಮ ವರ್ಷನ್ ತಗೊಂಡಿಲ್ಲ ಎಂದು ಆರೋಪ ಬರಬಾರದು ಅಲ್ವಾ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ದೇಶದ ಪ್ರಧಾನಿ ರಾಹುಲ್ ಗಾಂಧಿಯೋ, ಮೋದಿಯೋ?: ಸುವರ್ಣ ನ್ಯೂಸ್, ಕನ್ನಡಪ್ರಭ ವಿರುದ್ಧ ಸ್ಪೋಟಗೊಂಡ ಆಕ್ರೋಶ
ಇದಕ್ಕೆ ಮತ್ತೇ ಆಕ್ರೋಶಗೊಂಡ ಸಂಜನಾ, “ನನ್ನ ವರ್ಷನ್ ತಗೋ ಬೇಡಿ. ಈ ರೀತಿ ಒರಟಾಗಿ ಯಾರಾದರೂ ಮಾತನಾಡುತ್ತಾರ? ಅದೂ ಕೂಡಾ ಲೈವ್ ಅಲ್ಲಿ, ಇಡೀ ಕರ್ನಾಟಕ ನೋಡ್ತಾ ಇದೆ. ಈ ತರ ಒರಟಾಗಿ ಮತ್ತು ಗಲೀಜಾಗಿ ಮಾತನಾಡುವುದು ಸರಿಯಾ?” ಎಂದು ಹೇಳಿದ್ದಾರೆ.
ಇದಕ್ಕೆ, “ಹೇಗೆ ನಡೆದುಕೊಳ್ಳಬೇಕು ಎಂದು ನನಗೆ ಪಾಠ ಮಾಡಲು ಬರಬೇಡಿ” ಎಂದು ಅಜಿತ್ ಅವರು ಮತ್ತೇ ಉದ್ಧಟತನದಿಂದ ಮಾತನಾಡಿದ್ದಾರೆ.
ಇದಕ್ಕೆ ಉತ್ತರಿಸಿದ ಸಂಜನಾ, “ನೀವು ಸಾರ್ವಜನಿಕವಾಗಿ ಹೇಗೆ ಬೇಕಾದರೂ ವರ್ತಿಸಿ. ಆದರೆ ನನ್ನೊಂದಿಗೆ ಹೀಗೆ ವರ್ತಿಸಬೇಡಿ. ಫೋನ್ ಮಾಡಿ, ‘ದಯವಿಟ್ಟು ಫೋನ್ ಅಲ್ಲಿ ಬನ್ನಿ ಮೇಡಂ’ ಅಂತ ಕೈಕಾಲ್ ಮುಗೀತೀರಾ. ಫೋನಲ್ಲಿ ಬಂದಾಗ ಕಿರಿಕ್ ಅಂತ ಹೇಳ್ತೀರಾ. ನಾಚಿಕೆ ಇಲ್ಲವೆ ನಿಮಗೆ? ಈ ಕರೆ ನನ್ನ ವಾದ ಏನೆಂದು ಕೇಳುವ ರೀತಿ ಇಲ್ಲ. ಮೊದಲಿಗೆ ಮರ್ಯಾದೆಯಾಗಿ ಮಾತನಾಡುವುದು ಕಲೀರಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೆ, ನಮಗೆ ಎರಡೂ ಕಡೆಯ ವಾದಗಳು ಬೇಕು ಎನ್ನುದಕ್ಕಾಗಿ ನಿಮಗೆ ಕರೆ ಮಾಡಿದ್ದೇವೆ ಎಂದು ಅಜಿತ್ ಮತ್ತೇ ಹೇಳುತ್ತಾರೆ.
“ನಿಮಗೆ ಬೇಕಾದ್ರೆ ಬೇಕಾಗಲಿ. ನನಗೆ ನಿಮ್ಮ ಬಳಿ ಸ್ಪಷ್ಟನೆ ಕೊಡುವ ಅವಶ್ಯಕತೆ ಇಲ್ಲ. ಕಾರ್ ಕಂಪೆನಿ ಅವರೇ ನನ್ನೊಂದಿಗೆ ಕ್ಷಮೆ ಕೇಳಿದ್ದಾರೆ. ಮಹಿಳೆಯರೊಂದಿಗೆ ಹೇಗೆ ಮಾತನಾಡಬೇಕು ಎಂದು ಮೊದಲು ಕಲಿತುಕೊಳ್ಳಿ. ನಿಮಗೆ ನನ್ನೊಂದಿಗೆ ಈ ರೀತಿ ಮಾತನಾಡುವ ಅಧಿಕಾರ ಇಲ್ಲ. ಅದಕ್ಕೂ ಮೊದಲು ಒಬ್ಬ ಸಭ್ಯ ನಿರೂಪಕನ ಕೈಯ್ಯಲ್ಲಿ ಫೋನ್ ಮಾಡಿಸಿ. ಸಭ್ಯ ನಿರೂಪಕ ಮರ್ಯಾದೆ ಕೊಟ್ಟು ಮಾತನಾಡಿದರೆ ನಾನು ಖಂಡಿತಾ ಮಾತನಾಡುತ್ತೇನೆ” ಎಂದು ಹೇಳಿದ್ದ ಸಂಜನಾ ಅವರು ಫೋನ್ ಕಟ್ ಮಾಡಿದ್ದಾರೆ.
ಸಂಜನಾ ಅವರ ವಾದ ಸರಣಿ ಮತ್ತು ಪ್ರಸ್ತುತ ಕಾರ್ಯಕ್ರಮದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ನಟಿಯ ಮಾತುಗಳನ್ನು ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಹಲವಾರು ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ದ್ವೇಷಬಿತ್ತುವ ಟಿವಿ ಚಾನೆಲ್ಗಳನ್ನು ಬಂದ್ ಮಾಡಿ: ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ
ಸಾಮಾಜಿಕ ಕಾರ್ಯಕರ್ತ ದಿನೇಶ್ ಕುಮಾರ ಅವರು, “ಟೀವಿ ಆಂಕರುಗಳು ಪ್ರತಿಕ್ರಿಯೆಗಳಿಗೆ ಫೋನ್ ಮಾಡಿದಾಗ ಕನಿಷ್ಠ ಸೌಜನ್ಯವನ್ನಾದರೂ ತೋರಿಸಬೇಕು. ಫೋನ್ ಕನೆಕ್ಟ್ ಮಾಡುವಾಗ ಅಂಗಲಾಚಿ ಬೇಡಿಕೊಳ್ಳೋದು, ಲೈವ್ ಟೆಲಿಕಾಸ್ಟ್ನಲ್ಲಿ ಬಾಯಿಗೆ ಬಂದಂತೆ ಮಾತಾಡೋದು ಮಾಡಿದರೆ ಯಾರಿಗಾದರೂ ಕೋಪ ಬರುತ್ತದೆ. ಇದೊಂಥರ ಉತ್ತರನ ಪೌರುಷ ಒಲೆ ಮುಂದೆ ಎಂಬಂತಾಗುತ್ತದೆ. ನಂಗೇನೋ ಸಂಜನಾ ಸರಿಯಾಗೇ ಮಾತಾಡಿದ್ದಾರೆ ಅನ್ನಿಸಿತು. ಟೀವಿ ಆಂಕರುಗಳು ತಾವೇ ಧರೆಗಿಳಿದ ದೇವರುಗಳು ಎಂಬ ಭ್ರಮೆಯಿಂದ ಹೊರಗೆ ಬರಬೇಕು. ಇಲ್ಲವಾದಲ್ಲಿ ಹೀಗೆ ಗಲೀಜಾಗಿ ಮಾತಾಡೋ ಡೀಸೆಂಟ್ ಅಲ್ಲದ ಆಂಕರ್ ಅನಿಸಿಕೊಳ್ಳಬೇಕಾಗುತ್ತದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪತ್ರಿಕಾ ಧರ್ಮ ಹಳ್ಳ ಹಿಡಿಸಿರುವ ಯುದ್ಧೋನ್ಮಾದಿ ಸಂಪಾದಕರು: ಮದ್ದೆರೆಯಬೇಕಾದ ಸಾಂಸ್ಕೃತಿಕ ಲೋಕ
ಈ ಅಜಿತ್ ಹನುಮಕ್ಕನವರಿಗೆ ಹೀರೋ ಆಗುವ ತವಕ. ಈ ಟೀವಿಯವರಿಗೆ ಈತ ಒಂದು ನ್ಯೂಸೆನ್ಸ್ ಅನ್ನೋದು ಯಾಕೆ ಇಲ್ಲೀವರೆಗೂ ಅರ್ಥ ಆಗಿಲ್ಲ?
Kirik Hanumakknavar