ಕಬ್ಬಿನ ಬೆಳೆಗೆ ಯೋಗ್ಯ ಬೆಂಬಲ ಬೆಲೆ ಒದಗಿಸಬೇಕು ಹಾಗೂ ಬಾಕಿ ಉಳಿಸಿಕೊಂಡಿರುವ ಕಬ್ಬಿನ ಹಣವನ್ನು ಕೂಡಲೇ ಪಾವತಿಸುವಂತೆ ಒತ್ತಾಯಿಸಿ ಪಂಜಾಬ್ ರೈತರು ರಾಜ್ಯಾದ್ಯಂತ ಅನಿರ್ಧಿಷ್ಟಾವಧಿ ಹೋರಾಟ ಕೈಗೊಂಡಿದ್ದಾರೆ.
ಪಂಜಾಬ್ ಸರ್ಕಾರದ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಕಬ್ಬು ಬೆಳೆಗಾರರ ಈ ಹೋರಾಟ 4ನೇ ದಿನಕ್ಕೆ ಕಾಲಟ್ಟಿದೆ. ದೆಹಲಿ – ಅಮೃತ್ಸರ್ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿರುವ ರೈತರು, ಹೆದ್ದಾರಿಯ ಪಕ್ಕದಲ್ಲಿರುವ ರೈಲ್ವೇ ಹಳಿಗಳ ಮೇಲೂ ಪ್ರತಿಭಟನೆ ಮುಂದುವರೆಸಿದ್ದಾರೆ.
ಕಳೆದ 4 ದಿನಗಳಿಂದ ರೈತರು ರೈಲ್ವೇ ಹಳಿಗಳ ಮೇಲೆ ಪ್ರತಿಭಟನೆ ನಡೆಸುತ್ತಿರುವ ಪರಿಣಾಮ ಲುಧಿಯಾನ – ಅಮೃತ್ಸರ್ ಹಾಗೂ ಲುಧಿಯಾನ – ಜಮ್ಮು ಮಾರ್ಗದ ಎಲ್ಲಾ ರೈಲು ಸಂಚಾರಗಳು ಸ್ಥಗಿತಗೊಂಡಿವೆ. ಜೊತೆಗೆ ದೆಹಲಿ ಮತ್ತು ಅಮೃತ್ಸರ್ ನಡುವಿನ ವಾಹನ ಸಂಚಾರ ಕೂಡ ಖಡಿತಗೊಂಡಿದೆ. ಆ. 20 ರಿಂದ ಈವರೆಗೆ ಲುಧಿಯಾನ ಮಾರ್ಗವಾಗಿ ಸಾಗಬೇಕಿದ್ದ 55ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ರದ್ಧುಗೊಳಿಸಲಾಗಿದೆ ಎಂದು ರೈಲ್ವೇ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕೆಲ ದಿನಗಳ ಹಿಂದಷ್ಟೇ ಪ್ರತಿ ಕ್ವಿಂಟಾಲ್ ಕಬ್ಬಿನ ಬೆಳೆಗೆ ಕೇವಲ 15 ರೂ.ಬೆಂಬಲ ಬೆಲೆ ಹೆಚ್ಚಿಸಿ ಪಂಜಾಬ್ ಸರ್ಕಾರ ಆದೇಶ ಹೊರಡಿಸಿತ್ತು. ಅಂದರೆ ಪ್ರತಿ ಕ್ವಿಂಟಾಲ್ ಗೆ 350 ರೂ. ನೂತನ ದರ ನಿಗದಿಗೊಳಿಸಿ ಸರ್ಕಾರ ಆದೇಶಿಸಿತ್ತು.
ಇದನ್ನೂ ಓದಿ: ರೈತ ಹೋರಾಟ: ಹೋರಾಟನಿರತ ರೈತರ ಬಗ್ಗೆ ಅಮೆರಿಕಾದ ರೈತರ ಮಾತುಗಳು
ಸರ್ಕಾರದ ಈ ನಿರ್ಧಾರವನ್ನು ಖಂಡಿಸಿ ಬೀದಿಗಿಳಿದ ಪಂಜಾಬ್ ರೈತರು, ರಸ್ತೆ ತಡೆ ರೈಲು ತಡೆ ಆರಂಭಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ. ಪ್ರತಿ ಕ್ವಿಂಟಾಲ್ ಕಬ್ಬಿಗೆ 400 ರೂ. ಗಳಷ್ಟು ನ್ಯಾಯಯುತ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿ ರಾಜ್ಯದ ವಿವಿದೆಡೆಗಳಲ್ಲಿ ಹೋರಾಟ ತೀವ್ರಗೊಳಿಸಿದ್ದಾರೆ.
ಇನ್ನು ರಾಜ್ಯದಲ್ಲಿ ರೈತರ ಪ್ರತಿಭಟನೆ ತೀವ್ರಗೊಳ್ಳುತ್ತಲೇ ಎಚ್ಚೆತ್ತುಕೊಂಡ ಪಂಜಾಬ್ ಸರ್ಕಾರದ ಸಹಕಾರ ಸಚಿವ ಸುಖ್ಜಿಂದರ್ ರಂಧಾವಾ, ರೈತರಿಗೆ ಪಾವತಿಸಬೇಕಿರುವ ಬಾಕಿ ಹಣದಲ್ಲಿ 45 ಕೋಟಿ ರೂಪಾಯಿಗಳನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದ್ದಾರೆ.
ಆದರೆ, ಪಂಜಾಬಿನ ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಶುಗರ್ ಫ್ಯಾಕ್ಟರಿಗಳು ಬಾಕಿ ಉಳಿಸಿಕೊಂಡಿರುವ ಕಬ್ಬಿನ ಬಿಲ್ ಮೊತ್ತ ಒಟ್ಟು 450 ಕೋಟಿ ರೂಪಾಯಿ ಎನ್ನಲಾಗುತ್ತಿದೆ.
ಸಚಿವರ ಜೊತೆಗಿನ ಚರ್ಚೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಗದ ಕಾರಣ ರೈತರು ತಮ್ಮ ಹೋರಾಟವನ್ನು ಮುಂದುವರೆಸಿದ್ದು, ಬೇಡಿಕೆ ಈಡೇರುವ ವರೆಗೆ ಅನಿರ್ಧಿಷ್ಟಾವಧಿ ಧರಣಿ ಕೂರುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ರೈತಾಂದೋಲನ ಮುಂದೇನು? – ನೂರ್ ಶ್ರೀಧರ್