ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ, ಅವುಗಳನ್ನು ರದ್ದುಗೊಳಿಸಬೇಕೆಂದು ಹೋರಾಟ ನಡೆಸುತ್ತಿರುವ ರೈತರು ಮಂಗಳವಾರ (ಡಿ.22) ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿಗೆ ಕಪ್ಪು ಬಾವುಟಗಳನ್ನು ತೋರಿಸುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
ಅಂಬಾಲಕ್ಕೆ ತೆರಳುತ್ತಿದ್ದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿಗೆ ಘೇರಾವ್ ಹಾಕಿದ ನೂರಾರು ರೈತರು ಕಪ್ಪು ಧ್ವಜಗಳನ್ನು ತೋರಿಸಿ, ಕೃಷಿ ಕಾನೂನುಗಳ ವಿರುದ್ಧ ಘೋಷಣೆ ಕೂಗಿದ್ದಾರೆ. ಬಿಜೆಪಿ ನೇತೃತ್ವ ಹರಿಯಾಣ ಸರ್ಕಾರವು ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳಬೇಕು ಎಂದಿದ್ದಾರೆ.
ಮುಖ್ಯಮಂತ್ರಿ ಖಟ್ಟರ್ ಅವರ ಬೆಂಗಾವಲು ಪಡೆ ರೈತರನ್ನು ತಡೆಯಲು ಪ್ರಯತ್ನ ಪಟ್ಟರು ಕೂಡ ನೂರಾರು ರೈತರನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ. ಪೊಲೀಸರು ರೈತರ ಮನವೊಲಿಸಿ ದಾರಿ ಬಿಡಿಸಲು ಸಫಲರಾಗಿದ್ದಾರೆ.
ಇದನ್ನೂ ಓದಿ: ರೈತರ ಸಮಸ್ಯೆ ಬಗೆಹರಿಯುವವರೆಗೂ ಇಂಗ್ಲೆಂಡ್ ಪ್ರಧಾನಿ ಭಾರತಕ್ಕೆ ಬರುವುದು ಬೇಡ: ರೈತ ಮುಖಂಡರ ಪತ್ರ
ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ರೈತರನ್ನು ಕಂಡ ಮುಖ್ಯಮಂತ್ರಿಗಳ ಬೆಂಗಾವಲು ಪಡೆ ಕೂಡ ತಮ್ಮ ವಾಹನದ ವೇಗವನ್ನು ಕಡಿಮೆ ಮಾಡಿಕೊಂಡಿತ್ತು. ಮುಖ್ಯಮಂತ್ರಿ ಖಟ್ಟರ್, ನಗರಸಭೆಗೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪ್ರಚಾರಕ್ಕಾಗಿ ಅಂಬಾಲಾಕ್ಕೆ ಹೋಗುತ್ತಿದ್ದರು.
ಕಳೆದ ಡಿಸೆಂಬರ್ 1 ರಂದು ಅಂಬಾಲಾದ ಹಳ್ಳಿಯೊಂದರಲ್ಲಿ ರೈತರ ಗುಂಪು ಕೇಂದ್ರ ಸಚಿವ ಮತ್ತು ಅಂಬಾಲದ ಸಂಸದ ರತ್ತನ್ ಲಾಲ್ ಕಟಾರಿಯಾ ಘೇರಾವ್ ಹಾಕಿ ಕಪ್ಪು ಬಾವುಟಗಳನ್ನು ಪ್ರದರ್ಶಿಸಿತ್ತು.
ಕಳೆದ 27 ದಿನಗಳಿಂದ ದೆಹಲಿಯ ಗಡಿಗಳಲ್ಲಿನ ಹೋರಾಟನಿರತ ರೈತ ಮುಖಂಡರು, ಭಾರತದಲ್ಲಿನ ರೈತರ ಸಮಸ್ಯೆ ಬಗೆಹರಿಯುವವರೆಗೂ ಇಂಗ್ಲೆಂಡ್ ಪ್ರಧಾನಿ ಭಾರತಕ್ಕೆ ಬರುವುದು ಬೇಡ ಎಂದು ಬ್ರಿಟನ್ ಸಂಸದರಿಗೆ ಪತ್ರ ಬರೆಯುವದಾಗಿ ತಿಳಿಸಿದ್ದಾರೆ.
ಜನವರಿ 26ರ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಬರಲಿದ್ದಾರೆ ಎಂದು ವರದಿಯಾಗಿದೆ. ಭಾರತ ಸರ್ಕಾರವು ರೈತರ ಹಕ್ಕೊತ್ತಾಯಗಳನ್ನು ಈಡೇರಿಸುವವರೆಗೂ ಇಂಗ್ಲೆಂಡ್ನ ಪ್ರಧಾನಿ ಭಾರತಕ್ಕೆ ಬರದಂತೆ ತಡೆಯಬೇಕೆಂದು ಅಲ್ಲಿನ ಸಂಸದರಿಗೆ ಪತ್ರ ಬರೆದು ಕೋರುತ್ತೇವೆ ಎಂದು ಪಂಜಾಬ್ನ ರೈತ ಮುಖಂಡ ಕುಲವಂತ್ ಸಿಂಗ್ ಸಂಧು ತಿಳಿಸಿದ್ದಾರೆ.
ಇದನ್ನೂ ಓದಿ: ವಿರೋಧದ ನಡುವೆಯೂ ಕೃಷಿ ಕಾಯ್ದೆಗಳ ಜಾರಿ ಕ್ರೌರ್ಯದ ಪರಮಾವಧಿ: ದೇವನೂರ ಮಹಾದೇವ