ಶ್ರೀನಗರದ ತನ್ನ ನಿವಾಸದೊಳಗೆ ಅಧಿಕಾರಿಗಳು ಮತ್ತೊಮ್ಮೆ ನನ್ನನ್ನು ಬಂಧನದಲ್ಲಿರಿಸಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ. ಕಳೆದ ಅಕ್ಟೋಬರ್ 13 ರಂದು 14 ತಿಂಗಳುಗಳಿಂದ ಗೃಹ ಬಂಧನದಲ್ಲಿ ಇದ್ದ ಮುಫ್ತಿ ಬಿಡುಗಡೆಯಾಗಿದ್ದರು.
ತಮ್ಮನ್ನು ಬಂಧನದಲ್ಲಿಡಲಾಗಿದೆ ಎಂದಿರುವ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ತಮ್ಮ ಟ್ವಿಟರ್ ಖಾತೆಯಲ್ಲಿ ವೀಡಿಯೊಗಳನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಅವರ ಮನೆಯ ಆವರಣದ ಗೇಟ್ಗಳನ್ನು ತೆರೆಯಬೇಕೆಂದು ಒತ್ತಾಯಿಸಿದ್ದಾರೆ.
“ಯಾವುದೇ ರೀತಿಯ ವಿರೋಧವನ್ನು ದಮನ ಮಾಡಲು ಭಾರತ ಸರ್ಕಾರಕ್ಕೆ ಅಕ್ರಮ ಬಂಧನವು ನೆಚ್ಚಿನ ವಿಧಾನವಾಗಿ ಮಾರ್ಪಟ್ಟಿದೆ. ನೂರಾರು ಕುಟುಂಬಗಳನ್ನು ತಮ್ಮ ಮನೆಗಳಿಂದ ಹೊರಹಾಕಿರುವ ಬುದ್ಗಾಂಗೆ ಭೇಟಿ ನೀಡಲು ನಾನು ಬಯಸಿದ್ದರಿಂದ ನನ್ನನ್ನು ಮತ್ತೊಮ್ಮೆ ಬಂಧಿಸಲಾಗಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ದೇಶ ನಡೆಯುತ್ತಿರುವುದು ಸಂವಿಧಾನದ ಮೇಲೆ; ಬಿಜೆಪಿ ಪ್ರಣಾಳಿಕೆಯ ಮೇಲಲ್ಲ: ಮೆಹಬೂಬಾ ಮುಫ್ತಿ
GOI wants to continue inflicting oppression & zulm on the people of J&K without any questions asked. pic.twitter.com/pVXIdwcRB9
— Mehbooba Mufti (@MehboobaMufti) December 8, 2020
ಅರಣ್ಯ ಪ್ರದೇಶಗಳಿಂದ ಗುಜ್ಜರ್ ಸಮುದಾಯದ ಕೆಲವು ಕುಟುಂಬಗಳನ್ನು ಅಧಿಕಾರಿಗಳು ಒಕ್ಕಲೆಬ್ಬಿಸಿದ ಬಗ್ಗೆ ಕುಟುಂಬದವರಲ್ಲಿ ಮಾತುಕತೆ ನಡೆಸಲು ಮೆಹಬೂಬಾ ಮುಫ್ತಿ ಬುದ್ಗಾಂಗೆ ಹೊರಟಿದ್ದರು. ಆದರೆ ಪೊಲೀಸರು ಮತ್ತು ಅರೆಸೇನಾ ಪಡೆಗಳು ಮನೆಯ ಮುಖ್ಯ ಪ್ರವೇಶ ದ್ವಾರವನ್ನು ಬಂದ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಪಾಕ್ ಕದನ ವಿರಾಮ ಉಲ್ಲಂಘನೆ: ಉಭಯ ದೇಶಗಳು ಸಂವಾದ ನಡೆಸಲಿ- ಮೆಹಬೂಬ ಮುಫ್ತಿ
ಮಾಜಿ ಮುಖ್ಯಮಂತ್ರಿ ಮುಫ್ತಿ ಟ್ವೀಟ್ ಮಾಡಿರುವ ವೀಡಿಯೊಗಳಲ್ಲಿ, ಒಳಗಿನಿಂದ ಗೇಟ್ ಲಾಕ್ ಆಗಿರುವುದನ್ನು ನೋಡಬಹುದು. ಎಂ.ಎಸ್. ಮುಫ್ತಿ ಅವರು ಕಾಂಪೌಂಡ್ನೊಳಗಿನ ಇರುವ ಬೆರಳೆಣಿಕೆಯಷ್ಟು ಇತರ ಸಹಾಯಕರು ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ಮಾತನಾಡುತ್ತಲೇ ಅವರು ಗೇಟ್ ತೆರೆಯಲು ಇನ್ನೊಂದು ಬದಿಯಲ್ಲಿರುವವರನ್ನು ಕರೆಯುತ್ತಾರೆ.
ಗೇಟ್ ಬಡಿಯುತ್ತಾ ಮುಫ್ತಿಯವರು, “ಬಾಗಿಲು ತೆರೆಯಿರಿ, ನಾನು ಹೊರಗೆ ಹೋಗಬೇಕು. ದಯವಿಟ್ಟು ಪೇಪರ್ಸ್ ತೋರಿಸಿ. ಯಾವ ಕಾನೂನಿನಡಿಯಲ್ಲಿ ನೀವು ನನ್ನನ್ನು ಬಂಧಿಸಿದ್ದೀರಿ?” ಎಂಬ ಪ್ರಶ್ನೆಗಳನ್ನು ಕೇಳುತ್ತಾರೆ. ಆದರೆ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರುವುದಿಲ್ಲ.
ಅಕ್ಟೋಬರ್ 13 ರಂದು, ಜಮ್ಮು ಮತ್ತು ಕಾಶ್ಮೀರ ಆಡಳಿತವು ಮಾಜಿ ಮುಖ್ಯಮಂತ್ರಿಯನ್ನು 14 ತಿಂಗಳ ಬಂಧನದಿಂದ ಬಿಡುಗಡೆಗೊಳಿಸಿತ್ತು. ಮೆಹಬೂಬ ಮುಫ್ತಿಯವರನ್ನು ಕೇಂದ್ರ ಸರ್ಕಾರವು ಆಗಸ್ಟ್ 5, 2019 ರಂದು ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಹಿನ್ನೆಲೆ ಬಂಧಿಸಿತ್ತು.
ಬಿಡುಗಡೆಯ ನಂತರ, ಮುಫ್ತಿಯವರು ರಾಜ್ಯವು ಕಳೆದುಕೊಂಡ ವಿಶೇಷ ಸ್ಥಾನಮಾನವನ್ನು ಮತ್ತೆ ಪಡೆಯಬೇಕು ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಬಲವಾದ ಮೈತ್ರಿ ಮಾಡಿಕೊಳ್ಳಲು ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ ಡಿಕ್ಲರೇಶನ್ ಮತ್ತು ಕಾಂಗ್ರೆಸ್ ಸೇರಿದಂತೆ ಕಾಶ್ಮೀರದ ಇತರ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿತು.