ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಮಸೂದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿಯ ಗಡಿಗಳಲ್ಲಿ ಹೋರಾಡುತ್ತಿರುವ ರೈತರ ಪ್ರತಿಭಟನೆ 28 ನೇ ದಿನಕ್ಕೆ ಕಾಲಿಟ್ಟಿದೆ. ರೈತ ಹೋರಾಟವನ್ನು ಪ್ರಸಾರ ಮಾಡದ ಕೆಲವು ಚಾನೆಲ್ಗಳ ವಿರುದ್ಧ ಸಿಡಿದೆದ್ದ ಅನ್ನದಾತರು ತಾವೇ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದರು.
ಡಿಸೆಂಬರ್ 16 ರಂದು Kisan Ekta Morcha ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದ ರೈತರಿಗೆ ಭಾರಿ ಬೆಂಬಲ ವ್ಯಕ್ತವಾಗುತ್ತಿದ್ದು, ಕಳೆದ ಒಂದು ವಾರದಲ್ಲಿ 10 ಲಕ್ಷ ಚಂದಾದಾರರನ್ನು ಚಾನೆಲ್ ಪಡೆದಿದೆ. ರೈತರ ದಿಟ್ಟ ಹೋರಾಟವನ್ನು ತೋರಿಸದ ಮಾಧ್ಯಮಗಳನ್ನು ಗೋದಿ ಮೀಡಿಯಾ ಎಂದು ರೈತರು ಆರೋಪಿಸಿದ್ದಾರೆ.
Kisan Ekta Morcha ಹೆಸರಿನಲ್ಲಿ ಫೇಸ್ಬುಕ್, ಟ್ವಿಟ್ಟರ್ , ಇನ್ಟಾ ಅಕೌಂಟ್ಗಳನ್ನು ಸಹ ತೆರೆಯಲಾಗಿದೆ. ಫೇಸ್ಬುಕ್ನಲ್ಲಿ 2 ಲಕ್ಷಕ್ಕೂ ಅಧಿಕ ಫಾಲೋವರ್ಸ್, ಟ್ವಿಟರ್ನಲ್ಲಿ ಒಂದು ಲಕ್ಷ ಫಾಲೋವರ್ಸ್, ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದೂವರೆ ಲಕ್ಷ ಫಾಲೋವರ್ಸ್ಗಳನ್ನು ರೈತರು ಪಡೆದಿದ್ದಾರೆ.
ಇದನ್ನೂ ಓದಿ: ರೈತ ಹೋರಾಟಗಾರರು ಪ್ರಾರಂಭಿಸಿದ್ದ ಫೇಸ್ಬುಕ್, ಇನ್ಸ್ಟಾಗ್ರಾಮ್ ಖಾತೆಗಳ ಮೇಲಿನ ನಿಷೇಧ ವಾಪಾಸ್!
ಹೋರಾಟನಿರತ ರೈತರನ್ನು ಖಲಿಸ್ತಾನಿಗಳು, ಭಯೋತ್ಪಾದಕರೆಂಬಂತೆ ಕೆಲ ಮಾಧ್ಯಮಗಳು ಚಿತ್ರಿಸುತ್ತಿವೆ. ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ‘ಕೇವಲ 1 ಲಕ್ಷ ರೈತರಷ್ಟೇ ಹೋರಾಡುತ್ತಿದ್ದಾರೆ’ ಎಂದು ಹೇಳಿಕೆ ನೀಡಿದ್ದಾರೆ. ಅವುಗಳಿಗೆ ತಿರುಗೇಟು ನೀಡಲು ಮತ್ತು ಹೋರಾಟವನ್ನು ದೇಶಕ್ಕೆ ತಲುಪಿಸಲು ನಾವು ಈ ಚಾನೆಲ್ಗಳನ್ನು ಆರಂಭಿಸಿದ್ದೇವೆ. ಹಾಗಾಗಿ ಡಿಸೆಂಬರ್ 25 ರೊಳಗೆ ಒಂದು ಕೋಟಿ ಚಂದಾದಾರರಾಗುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ನಮ್ಮ ರೈತರ ಶಕ್ತಿ ಏನೆಂದು ತೋರಿಸಬೇಕು. ದಯವಿಟ್ಟು ಚಂದಾದಾರರಾಗಿ ಎಂದು ಹೋರಾಟ ನಿರತ ರೈತರು ಕರೆ ನೀಡಿದ್ದರು.
ರೈತರ ಹೋರಾಟಕ್ಕೆ ಸ್ಪಂದಿಸಿರುವ ಜನರು ಚಂದಾರಾರಾಗುತ್ತಿದ್ದಾರೆ. ಹೋರಾಟದ ಎಲ್ಲಾ ವಿವರಗಳನ್ನು ಈ ಚಾನೆಲ್ಗಳ ಮೂಲಕ ನೀಡಲಾಗುತ್ತಿದೆ. ಗಂಟೆ ಗಂಟೆಗೂ ಕಿಸಾನ್ ಏಕ್ತಾ ಮೋರ್ಚಾದ ಚಂದಾದಾರರ ಸಂಖ್ಯೆ ಅಧಿಕಗೊಳ್ಳುತ್ತಿದೆ. ಇನ್ನೂ ಪೋಸ್ಟ್ ಮಾಡಿರುವ ವಿಡಿಯೋಗಳನ್ನು ಸಾವಿರಾರು ಜನರು ನೋಡುತ್ತಿದ್ದಾರೆ. ಇದೇ ಹುಮ್ಮಸ್ಸಿನಲ್ಲಿ ಹೋರಾಟದ ಪ್ರತಿ ವಿಚಾರವನ್ನು ರೈತ ಮುಖಂಡರು ಈ ವೇದಿಕೆ ಮೂಲಕ ಹಂಚಿಕೊಳ್ಳುತ್ತಾ ಗೋದಿ ಮೀಡಿಯಾಗಳಿಗಡ ಸೆಡ್ಡು ಹೊಡೆದಿದ್ದಾರೆ.
’ಕಿಸಾನ್ ಏಕತಾ ಮೋರ್ಚಾ’ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ವರದಿಯಾಗಿತ್ತು. ದೇಶಾದ್ಯಂತ ಫೇಸ್ಬುಕ್ನ ಈ ಕೃತ್ಯಕ್ಕೆ ಆಕ್ರೋಶವೆದ್ದ ಕಾರಣ ಸ್ವಲ್ಪ ಸಮಯದ ನಂತರ ಖಾತೆಗಳ ಮೇಲಿನ ನಿಷೇಧ ವಾಪಾಸ್ ಪಡೆದುಕೊಳ್ಳಲಾಗಿತ್ತು.
ಇದನ್ನೂ ಓದಿ: ಗೋದಿ ಮೀಡಿಯಾಗಳಿಗೆ ಸೆಡ್ಡು: ಸ್ವಂತ ಚಾನೆಲ್ ಆರಂಭಿಸಿದ ದೆಹಲಿಯ ಹೋರಾಟನಿರತ ರೈತರು!