ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯರನ್ನು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರೆ ನೀಡಿದ್ದಾರೆ.
ಟಾಟಾ ಸ್ಟೀಲ್ ಸಂಸ್ಥೆಯ ಮಾಜಿ ಉಪಾಧ್ಯಕ್ಷ ಹಾಗೂ ನಡ್ಜ್ ಪ್ರತಿಷ್ಠಾನದ ಸದಸ್ಯರಾದ ಬಿ.ಮುತ್ತುರಾಮನ್ ಅವರ ನೇತೃತ್ವದ ನಿಯೋಗದೊಂದಿಗೆ ಅವರು ಮಾತನಾಡಿದ್ದು, ಅತಿ ಹೆಚ್ಚು ತಲಾ ಆದಾಯ ಹೊಂದಿರುವ ಐದು ರಾಜ್ಯಗಳ ಪೈಕಿ ಕರ್ನಾಟಕವೂ ಒಂದು. ಇದಕ್ಕೆ ಕೊಡುಗೆ ನೀಡುವ ಶೇ.30ರಷ್ಟು ಮಹಿಳೆಯರು ಪರಿಶಿಷ್ಟ ಸಮುದಾಯದವರಾಗಿದ್ದು, ಕೌಶಲವನ್ನು ಹೊಂದಿದವರಾಗಿದ್ದಾರೆ. ರಾಜ್ಯದಲ್ಲಿರುವ 7,500 ಸ್ವಸಹಾಯ ಗುಂಪುಗಳನ್ನು ಆರ್ಥಿಕ ಚಟುವಟಿಕೆಗಲ್ಲಿ ತೊಡಗಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ನಡ್ಜ್ ಪ್ರತಿಷ್ಠಾನದ ಸಿ.ಇ.ಒ. ಅತುಲ್ ಸತೀಜಾ ಮಾತನಾಡಿ, ಬಡತನವನ್ನು ನಿವಾರಿಸುವ ಉದ್ದೇಶದಿಂದ ನಡ್ಜ್ ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು, ಕರ್ನಾಟಕವೂ ಸೇರಿದಂತೆ ಭಾರತದಾದ್ಯಂತ ಬಡತನ ನಿವಾರಣೆ ಮತ್ತು ಜೀವನೋಪಾಯದ ಮೂಲಕ ದೊಡ್ಡ ಪ್ರಮಾಣದ ಸಾಮಾಜಿಕ ಪರಿವರ್ತನೆ ತರಲಾಗುವುದು ಎಂದಿದ್ದಾರೆ.
ಇದನ್ನೂ ಓದಿ: ಸಾರಿಗೆ ನಿಗಮಗಳನ್ನು ಲಾಭದಾಯಕವಾಗಿಸಲು ಪರಿಣತರ ಸಮಿತಿ ರಚನೆ: ಬಸವರಾಜ ಬೊಮ್ಮಾಯಿ
ಕಳೆದ 6 ವರ್ಷಗಳಲ್ಲಿ, ಕೌಶಲ್ಯ ಅಭಿವೃದ್ಧಿ, ಸಾಮಾಜಿಕ ಉದ್ಯಮಶೀಲತೆ ಮತ್ತು ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಡ್ಜ್ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಲು ಉತ್ಸುಕರಾಗಿದ್ದೇವೆ ಎಂದು ತಿಳಿಸಿದ್ದಾರೆ.
ನಡ್ಜ್ ಪ್ರತಿಷ್ಠಾನದ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ವಿನೋದ್, ಸುಧಾ ಶ್ರೀನಿವಾಸನ್, ಯೋಜನಾ ಹಾಗೂ ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಉಪಸ್ಥಿತರಿದ್ದರು.