ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣ ದಿನೇ ದಿನೇ ರಾಜಕೀಯ ಕೆಲಸರೆರಚಾಟಕ್ಕೆ ಕಾರಣವಾಗುತ್ತಿದ್ದು, ಕಾಂಗ್ರೆಸ್- ಬಿಜೆಪಿ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿಕೊಂಡಿದ್ದಾರೆ. ಇದೇ ವೇಳೆ ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ನಾಯಕರೇ ತಮಗೆ ಬಿಟ್-ಕಾಯಿನ್ ಹಗರಣದ ಮಾಹಿತಿ ನೀಡುತ್ತಿದ್ದಾರೆ ಎನ್ನುವ ಮೂಲಕ ಕಾಂಗ್ರೆಸ್ ಬಿಜೆಪಿಯಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
“ರಾಜ್ಯದಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲದಂತೆ ಜನಪರವಾದ ಆಡಳಿತವನ್ನು ನೀಡುತ್ತಾ, ಯಶಸ್ವಿಯಾಗಿ ಶತದಿನಗಳನ್ನು ಪೂರೈಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಳಿತದ ಕಾರ್ಯಸಾಧನೆಯನ್ನು ಕಂಡು ಹತಾಶರಾಗಿ ಕಾಂಗ್ರೆಸ್ ನಾಯಕರು ಬಿಟ್-ಕಾಯಿನ್ ಹೆಸರಿನಲ್ಲಿ ವಿನಾಕಾರಣ ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸಲು ಹವಣಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ’ಕುಟುಂಬ ರಾಜಕಾರಣದಲ್ಲಿ ಬಿಜೆಪಿ ಎಲ್ಲ ಪಕ್ಷಗಳ ದಾಖಲೆ ಮುರಿದಿದೆ’: ಪಟ್ಟಿ ನೀಡಿದ ಜೆಡಿಎಸ್
ಬಿಜೆಪಿ ನಾಯಕರೇ ತಮಗೆ ಬಿಟ್-ಕಾಯಿನ್ ಹಗರಣದ ಮಾಹಿತಿ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ಸಿನ ಮುಖಂಡರೊಬ್ಬರು ಹೇಳುವ ಮೂಲಕ ಈ ತನಿಖೆಯ ಹಾದಿ ತಪ್ಪಿಸಲು ಮತ್ತು ಬಿಜೆಪಿಯಲ್ಲಿ ಹುಳಿ ಹಿಂಡಿ ಒಡಕು ಸೃಷ್ಟಿಸಲು ಹವಣಿ ಸಿರುವುದು ಸ್ಪಷ್ಟವಾಗಿದೆ. ಆದರೆ ಇಂತಹ ಹುನ್ನಾರಗಳ ಆಟ ನಡೆಯುವುದಿಲ್ಲ. (3/5)
— C C Patil (@CCPatilBJP) November 14, 2021
“ಬಿಟ್-ಕಾಯಿನ್ ವಿಚಾರದಲ್ಲಿ ವಿವಾದ ಸೃಷ್ಟಿಸಿ ಅದರಿಂದ ರಾಜಕೀಯ ದುರ್ಲಾಭ ಪಡೆದುಕೊಳ್ಳಬಹುದು ಎಂಬ ಹಗಲುಗನಸು ಕಾಣುತ್ತಿರುವ ಕಾಂಗ್ರೆಸ್ ಮುಖಂಡರಿಗೆ, ಇದೇ ಬಿಟ್-ಕಾಯಿನ್ ತಿರುಗುಬಾಣವಾಗಿ ಮುಳುವಾಗಲಿದೆ ಎಂಬುದು ಮುಂದಿನ ದಿನಗಳಲ್ಲಿ ಸಾಬೀತಾಗುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
’ಬಿಜೆಪಿ ನಾಯಕರೇ ತಮಗೆ ಬಿಟ್-ಕಾಯಿನ್ ಹಗರಣದ ಮಾಹಿತಿ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ಸಿನ ಮುಖಂಡರೊಬ್ಬರು ಹೇಳುವ ಮೂಲಕ ಈ ತನಿಖೆಯ ಹಾದಿ ತಪ್ಪಿಸಲು ಮತ್ತು ಬಿಜೆಪಿಯಲ್ಲಿ ಹುಳಿ ಹಿಂಡಿ ಒಡಕು ಸೃಷ್ಟಿಸಲು ಹವಣಿ ಸಿರುವುದು ಸ್ಪಷ್ಟವಾಗಿದೆ. ಆದರೆ ಇಂತಹ ಹುನ್ನಾರಗಳ ಆಟ ನಡೆಯುವುದಿಲ್ಲ” ಎಂದು ಸಿ.ಸಿ.ಪಾಟೀಲ್ ಟ್ವೀಟ್ ಮಾಡಿದ್ದಾರೆ.
’ಕಾಂಗ್ರೆಸ್ಸಿನ ಹಾಗೆ “ಒಂದು ಮನೆ ಹಲವು ಬಾಗಿಲು” ಎಂಬಂಥ ಪರಿಸ್ಥಿತಿ ನಮ್ಮಲ್ಲಿಲ್ಲ. ಬಿಟ್ ಕಾಯಿನ್ ಹಗರಣ ಈಗಾಗಲೇ ಕೆಲವು ಕಾಂಗ್ರೆಸ್ ಮುಖಂಡರಿಗೆ ಸುತ್ತಿಕೊಂಡಿರುವುದು ಬಹಿರಂಗವಾಗಿದ್ದರೂ, ತಾವೇ ಸ್ವತಃ ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವ ದುಸ್ಸಾಹಸಕ್ಕೆ ಕಾಂಗ್ರೆಸ್ ಮುಖಂಡರು ಇಳಿಯುತ್ತಿರುವ ವರ್ತನೆ ನಿಜಕ್ಕೂ ವಿಚಿತ್ರವಾಗಿದೆ’ ಎಂದಿದ್ದಾರೆ.
’ಹಗರಣದ ಬಗ್ಗೆ ಸೂಕ್ತ ತನಿಖೆಗೆ ಇಡಿ, ಸಿಬಿಐಗೆ ಶಿಫಾರಸು ಮಾಡಿದ್ದೆ, ನಮ್ಮ ಸರ್ಕಾರ. ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸ್ವತಃ ಮುಖ್ಯಮಂತ್ರಿಯವರೇ ಸ್ಪಷ್ಟಪಡಿಸಿದ್ದಾರೆ.. ಅದರಂತೆ ಈಗ ತನಿಖೆ ಸರಿಯಾದ ದಿಕ್ಕಿನಲ್ಲಿಯೇ ನಡೆಯುತ್ತಿರುವುದರಿಂದ ಯಾರೂ ರಾಜಕೀಯ ಪ್ರೇರಿತ ಹೇಳಿಕೆ ನೀಡುವುದು ಸರಿಯಲ್ಲ’ ಎಂದು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಬಿಟ್ ಕಾಯಿನ್ ವರ್ಗಾವಣೆ, ಕ್ರಿಪ್ಟೋ ವೆಬ್ಸೈಟ್ ಹ್ಯಾಕಿಂಗ್: ಆರೋಪಗಳಿಗೆ ಪೊಲೀಸ್ ಇಲಾಖೆ ಸ್ಪಷ್ಟನೆ