ಪ್ರಧಾನಿ ನರೇಂದ್ರ ಮೋದಿ ಬುಧವಾರದಂದು ಪ್ರತಿಭಟನೆಗಳ ಮಧ್ಯೆ ಪಂಜಾಬ್ ಚುನಾವಣಾ ರ್ಯಾಲಿಯನ್ನು ರದ್ದುಗೊಳಿಸಿ ವಾಪಾಸಾಗಿದ್ದಾರೆ. ಒಕ್ಕೂಟ ಸರ್ಕಾರದ ಗೃಹ ಸಚಿವಾಲಯ ಇದನ್ನು ‘ಭದ್ರತಾ ಲೋಪ’ ಎಂದು ಕರೆದಿದ್ದು, ಇದಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ದೂರಿದೆ. ಆದರೆ ಇದನ್ನು ನಿರಾಕರಿಸಿರುವ ಪಂಜಾಬ್ ಮುಖ್ಯಮಂತ್ರಿ, ತಮ್ಮ ಸರ್ಕಾರದ ಕಡೆಯಿಂದ ಯಾವುದೇ ಭದ್ರತಾ ಲೋಪ ಆಗಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಭದ್ರತಾ ಲೋಪದ ಬಗ್ಗೆ ಆರೋಪ ಪ್ರತ್ಯಾರೋಪಗಳು ನಡೆಯುತ್ತಿವೆ. ಒಕ್ಕೂಟ ಸರ್ಕಾರವು ಕಾಂಗ್ರೆಸ್ ಮೇಲೆ ಆರೋಪಿಸುತ್ತಿದ್ದರೆ, ಕಾಂಗ್ರೆಸ್ ತಮ್ಮ ಸರ್ಕಾರದ ಕಡೆಯಿಂದ ಯಾವುದೇ ಲೋಪ ಆಗಿಲ್ಲ ಎಂದು ಪ್ರತಿಪಾದಿಸುತ್ತಿದೆ.
ಇದನ್ನೂ ಓದಿ:Explained: ಹೋಮ್ ಐಸೋಲೇಶನ್ ರೋಗಿಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಸರ್ಕಾರ
ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದು ಹರಿದಾಡುತ್ತಿದ್ದು, ಅದರಲ್ಲಿ ಪ್ರಧಾನಿಯ ಕಾರು ತಡೆದಿದ್ದಾರೆ ಎನ್ನಲಾಗಿರುವ ಫ್ಲೈಓವರ್ನಲ್ಲಿ ಬಿಜೆಪಿ ಧ್ವಜ ಹಿಡಿದುಕೊಂಡು, ಪ್ರಧಾನಿಯ ಕಾರಿನ ತೀರಾ ಹತ್ತಿರ ಒಂದಷ್ಟು ಜನರು ಶ್ರೀ ನರೇಂದ್ರ ಮೋದಿ ಜಿಂದಾಬಾದ್ ಎಂದು ಘೋಷಣೆ ಕೂಗುವುದನ್ನು ಕಾಣಬಹುದು.
ಈ ಬಗ್ಗೆಗಿನ ಹಲವಾರು ಪ್ರಶ್ನೆಗಳನ್ನು ಪತ್ರಕರ್ತೆ ಮೀತೂ ಜೈನ್ ಪ್ರಶ್ನಿಸಿದ್ದಾರೆ.
ಮೀತು ಜೈನ್ ಅವರ ಪ್ರಕಾರ, “ಪ್ರಧಾನ ಮಂತ್ರಿಯ ಯಾವುದೇ ಪ್ರಯಾಣದ ಯೋಜನೆಗಳನ್ನು ವಿಶೇಷ ರಕ್ಷಣಾ ಗುಂಪಿನ (SPG) ಬ್ಲೂಬುಕ್ ಪ್ರಕಾರ ನಡೆಯುತ್ತದೆ. ಆಕಸ್ಮಿಕವಾಗಿ ಬದಲಾಗುವ ಮಾರ್ಗ ಸೇರಿದಂತೆ ಪ್ರಧಾನಿ ಸುರಕ್ಷಿತವಾಗಿ ತಲುಪುವವರೆಗಿನ ಎಲ್ಲವನ್ನೂ SPG, ಗುಪ್ತಚರ ವಿಭಾಗ (IB) ಮತ್ತು ರಾಜ್ಯ ಪೊಲೀಸರನ್ನು ಒಳಗೊಂಡ ‘ಸುಧಾರಿತ ಭದ್ರತಾ ಸಂಪರ್ಕ’(ASL) ಚರ್ಚಿಸುತ್ತದೆ. ಒಂದು ವೇಳೆ ಪ್ರಧಾನಿಯನ್ನು ಒಂದು ಸ್ಥಳದಿಂದ ಸ್ಥಳಾಂತರಿಸಬೇಕಾದರೂ ಕೂಡಾ. ಇದರ ನಂತರ ASL ಕನಿಷ್ಠ 200 ಪುಟಗಳ ಕಿರುಪುಸ್ತಕವನ್ನು ಪ್ರಕಟಿಸುತ್ತದೆ”
“ಇದೀಗ ಪ್ರಧಾನ ಮಂತ್ರಿ ಕಚೇರಿ ಮತ್ತು SPG ಉತ್ತರಿಸಬೇಕಾದ ಪ್ರಶ್ನೆಗಳು ಹೀಗಿವೆ. ಹವಾಮಾನವು ಪ್ರತಿಕೂಲವಾಗಿರುತ್ತದೆ ಎಂದು ಮೊದಲೇ ತಿಳಿದಿರಲಿಲ್ಲವೆ?. ಬ್ಲೂಬುಕ್ ಪ್ರಕಾರ ಕನಿಷ್ಠ ಭೇಟಿಗೆ 48 ಗಂಟೆಗಳ ಮುಂಚಿತವಾಗಿ ಭೇಟಿಯ ಇಲಾಖೆಯಿಂದ ಯಾವುದೆ ಆಂತರಿಕ ಮಾಹಿತಿಯನ್ನು ತೆಗೆದುಕೊಳ್ಳಲಾಗಿಲ್ಲವೆ?” ಎಂದು ಮೀತೂ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ವೈರಲ್ ವಿಡಿಯೊ: ಘರ್ಜಿಸುತ್ತಿರುವ ಸಿಂಹವನ್ನು ಹೊತ್ತೊಯ್ದ ಮಹಿಳೆ!
“ಒಂದು ವೇಳೆ ಹವಾಮಾನವು ಪ್ರತಿಕೂಲವಾಗಿದ್ದರೆ ಮತ್ತು ಪ್ರಧಾನಿ ಭೇಟಿ ನೀಡುವ ಸ್ಥಳಕ್ಕೆ ಹೆಲಿಕಾಪ್ಟರ್ ತೆರಳಲು ಸಾಧ್ಯವಾಗದಿದ್ದರೆ, ASL ಪ್ರಕಾರ ಆಕಸ್ಮಿಕ ಮಾರ್ಗವನ್ನು ನಿರ್ಧರಿಸಲಾಗಲಿಲ್ಲವೇ? ಅಥವಾ ಎರಡು ಗಂಟೆಗಳ ಪ್ರಯಾಣವಿರುವ 111 ಕಿ.ಮೀ ದೂರದ ಈ ಆಕಸ್ಮಿಕ ಮಾರ್ಗವನ್ನು, ಪ್ರಧಾನಮಂತ್ರಿಯವರು ಆಯ್ದುಕೊಂಡರೇ?” ಎಂದು ಪ್ರಶ್ನಿಸಲಾಗಿದೆ.
“ಭದ್ರತಾ ಅನುಮತಿಯಿಲ್ಲದೆ ಎರಡು ಗಂಟೆಗಳ ಕಾಲ ಝೀರೋ ಟ್ರಾಫಿಕ್ ಇಲ್ಲದ ಮಾರ್ಗದಲ್ಲಿ ಪ್ರಯಾಣಿಸಲು ಎಸ್ಪಿಜಿ ನಿಜವಾಗಿಯೂ ಪ್ರಧಾನಿಗೆ ಅವಕಾಶ ನೀಡಿದೆಯೇ? ಬ್ಲೂಬುಕ್ ನಿಯಮಗಳ ಪ್ರಕಾರ, ಸಂಪೂರ್ಣ ಮಾರ್ಗವನ್ನು ಕ್ಲಿಯರ್ ಮಾಡಲಾಗಿದೆ ಎಂದು ರಾಜ್ಯ ಪೊಲೀಸರು ಹೇಳುವವರೆಗೂ ಎಸ್ಪಿಜಿ ಪ್ರಧಾನಿಯನ್ನು ಕಡೆದುಕೊಂಡು ಹೋಗುವಂತಿಲ್ಲ. ಒಂದು ವೇಳೆ ಎಸ್ಪಿಜಿ ರಸ್ತೆ ಮೂಲಕ ಪ್ರಯಾಣಿಸಲು ನಿರ್ಧರಿಸಿದ್ದರೆ, ಅದು ಯೋಜನೆಯ ಪ್ರಕಾರವೇ ಆಗಿರಬೇಕು. ಒಂದು ವೇಳೆ ಯೋಜನೆ ಪ್ರಕಾರ ಎಸ್ಪಿಜಿ ನಡೆದಕೊಳ್ಳದೆ ಇದ್ದರೆ ಅದರ ಮುಖ್ಯಸ್ಥರನ್ನು ವಜಾಗೊಳಿಸಬೇಕಾಗುತ್ತದೆ. ಇಲ್ಲವೆಂದರೆ, ರಾಜ್ಯದ ಡಿಜಿಪಿ ಪ್ರಧಾನಿ ತೆರಳುವ ಮಾರ್ಗವನ್ನು ಕ್ಲಿಯರ್ ಮಾಡದೆ ಕ್ಲಿಯರೆನ್ಸ್ ಮಾಡಲಾಗಿದೆ ಎಂದು ಎಸ್ಪಿಜಿಗೆ ತಪ್ಪು ಮಾಹಿತಿ ನೀಡಿದರೆ, ಎಸ್ಪಿಜಿಯನ್ನು ಉದ್ದೇಶಪೂರ್ವಕವಾಗಿ ದಾರಿ ತಪ್ಪಿಸಿದ್ದಕ್ಕಾಗಿ ಅವರ ವಿರುದ್ದ ಕ್ರಮಕೈಗೊಳ್ಳಬೇಕಾಗಿದೆ” ಎಂದು ಅವರು ಹೇಳಿದ್ದಾರೆ.
“ಬಿಜೆಪಿ ಧ್ವಜಗಳನ್ನು ಬೀಸುತ್ತಾ, ಪ್ರಧಾನಿಯ ಕಾರಿನ ಹತ್ತಿರವೇ ಇದ್ದ ಗುಂಪು, ಪ್ರಧಾನಿಯ ಬೆಂಗಾವಲು ವಾಪಾಸು ಹೊರಟ ನಂತರ ಸ್ಥಳಕ್ಕೆ ಬಂದಿದೆ ಎಂದು ಎಂದು ಬಿಜೆಪಿ ಹೇಳುತ್ತದೆ. ಆದರೆ, ಕ್ಲಿಯರ್ ಮಾಡಿದ್ದ ಮಾರ್ಗದಲ್ಲಿ ನಾಗರಿಕರಿಗೆ ಹೇಗೆ ಅವಕಾಶ ನೀಡಲಾಯಿತು? ಅದೂ ಕೂಡಾ ಪ್ರಧಾನಿ ಕಣ್ಣಳತೆ ದೂರದಲ್ಲಿ ಟೆಂಪೋಗಳು ಮತ್ತು ಬಸ್ಗಳು ಕೂಡಾ ಗೋಚರಿಸುತ್ತಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ:ಓಮಿಕ್ರಾನ್ ಆತಂಕ: ಅಂತರರಾಜ್ಯ ಗಡಿ ಬಂದ್ ಇಲ್ಲ- ಸಚಿವ ಡಾ.ಅಶ್ವತ್ಥನಾರಾಯಣ
“ಅದಲ್ಲದೆ, ಪ್ರಧಾನಿಯ ಬೆಂಗಾವಲಿನಲ್ಲಿ ವಾರ್ನಿಂಗ್ ಕಾರು ಮತ್ತು ಮತ್ತು ಪೈಲಟ್ ಕಾರು ಒಳಗೊಂಡಿದೆ. ಇದು ಪ್ರಧಾನಿಗಿಂದ ಮೊದಲು ಚಲಿಸುತ್ತದೆ. ಈ ಕಾರು ಮಾರ್ಗದಲ್ಲಿ ಜನಸಂದಣಿಯನ್ನು ಗಮನಿಸಿ ಬೆಂಗಾವಲು ಪಡೆಯನ್ನು ಎಚ್ಚರಿಸಬಹುದಿತ್ತಲ್ಲವೇ?. ಹಾಗಾದರೆ 20 ಮೀಟರ್ ಅಂತರದಲ್ಲಿ ಪ್ರತಿಭಟನಾಕಾರರ ಹತ್ತಿರವೇ ಬೆಂಗಾವಲು ಹೇಗೆ ನಿಲ್ಲಲು ಸಾಧ್ಯ? ಎಸ್ಪಿಜಿ 20 ನಿಮಿಷ ಕಾಯುವ ಬದಲು ತಕ್ಷಣವೇ ವಾಪಸ್ ತೆರಳಬೇಕಿತ್ತಲ್ಲವೆ?” ಎಂದು ಅವರು ಪ್ರಶ್ನಿಸಿದ್ದಾರೆ.
“ನರೇಂದ್ರ ಮೋದಿ ಅವರು ANI ಜೊತೆಗೆ ಮಾತನಾಡುತ್ತಾ, ಜೀವಂತವಾಗಿ ಹಿಂತಿರುಗಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ಒಂದು ವೇಳೆ ಪ್ರಧಾನಿಯ ಜೀವಕ್ಕೆ ಅಪಾಯವಿದ್ದರೆ, ಅದಕ್ಕೆ ಉತ್ತರಿಸಬೇಕಾದವರು, ಅವರಿಗೆ ಆಂತರಿಕ ರಕ್ಷಣೆಯನ್ನು ಒದಗಿಸುವ ಎಸ್ಪಿಜಿ” ಎಂದು ಪತ್ರಕರ್ತೆ ಮೀತೂ ಜೈನ್ ಹೇಳಿದ್ದಾರೆ.
ಈ ನಡುವೆ ಪಂಜಾನ್ ಮುಖ್ಯಮಂತ್ರಿ ಚರನ್ಜಿತ್ ಚನ್ನಿ ಅವರು ಪತ್ರಿಕಾಗೋಷ್ಠಿ ನಡೆಸಿ, ರಾಜ್ಯ ಸರ್ಕಾರದಿಂದ ಯಾವುದೆ ಲೋಪ ಆಗಿಲ್ಲ, ಪ್ರಧಾನಿಯ ಕಾರ್ಯಕ್ರಮದಲ್ಲಿ ರಸ್ತೆ ಮಾರ್ಗದಲ್ಲಿ ಭೇಟಿಮಾಡುವ ಉಲ್ಲೇಖ ಇರಲಿಲ್ಲ. ಸಧ್ಯದಲ್ಲೇ ಚುನಾವಣೆಯಿದೆ ಮತ್ತು ಜನರು ರಸ್ತೆಗಳನ್ನು ನಿರ್ಬಂಧಿಸುವುದು ಸಾಮಾನ್ಯವಾಗಿದೆ. ಇಲ್ಲಿ ಯಾವುದೇ ದಾಳಿಯೂ ನಡೆದಿಲ್ಲ, ಬೆದರಿಕೆಯೂ ಇಲ್ಲ. ಪ್ರಧಾನಿಗೆ ಅಪಾಯವಿದೆ ಎಂದು ಹೇಳುವುದು ತಪ್ಪು’’ ಎಂದು ಹೇಳಿದ್ದಾರೆ.
“ಅವರು ಅರ್ಧ ದಾರಿಯಲ್ಲೇ ಹೊರಡಬೇಕಾಯಿತು ಎಂಬುವುದಕ್ಕೆ ನಾವು ವಿಷಾದಿಸುತ್ತೇವೆ. ಅವರ ಜೀವಕ್ಕೆ ಬೆಲೆಕಟ್ಟಲಾವುದಿಲ್ಲ. ಪ್ರತಿಭಟನಾಕಾರರನ್ನು ರಸ್ತೆಯಿಂದ ತೆರವುಗೊಳಿಸುವ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡಾ ತಿಳಿಸಿದ್ದರು. ಹೀಗಾಗಿ, ಪ್ರತಿಭಟನಾಕಾರರನ್ನು ತೆರವುಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಬೆಳಿಗ್ಗೆ 3 ಗಂಟೆಯವರೆಗೆ ಕೆಲಸ ಮಾಡಿದ್ದೇವೆ” ಎಂದು ಚನ್ನಿ ಹೇಳಿದ್ದಾರೆ. ಏನೇ ಲೋಪ ನಡೆದಿದ್ದರೂ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಮೂರ್ತಿ ಭಂಜನೆ ಎಂಬ ರಾಜಕೀಯ ಇತಿಹಾಸದ ಪಳೆಯುಳಿಕೆ